Advertisement

ವೇತನ ಪರಿಷ್ಕರಿಸಲು ಜೆಸ್ಕಾಂ ಗುತ್ತಿಗೆ ಕಾರ್ಮಿಕರ ಆಗ್ರಹ

04:05 PM Dec 05, 2017 | |

ರಾಯಚೂರು: ಜಿಲ್ಲೆಯ ವಿವಿಧ ವಿದ್ಯುತ್‌ ವಿತರಣಾ ಕೇಂದ್ರಗಳಲ್ಲಿ ಕೆಲಸ ಮಾಡುತ್ತಿರುವ ಗುತ್ತಿಗೆ ಕಾರ್ಮಿಕರ
ವೇತನ ಪರಿಷ್ಕರಣೆ ಸೇರಿ ವಿವಿಧ ಬೇಡಿಕೆ ಈಡೇರಿಸಲು ಆಗ್ರಹಿಸಿ ಸಿಐಟಿಯು ನೇತೃತ್ವದಲ್ಲಿ ಜೆಸ್ಕಾಂ ವಿದ್ಯುತ್‌ ಗುತ್ತಿಗೆ
ಕಾರ್ಮಿಕರ ಸಂಘ ಹಾಗೂ ವಿದ್ಯುತ್‌ ನೌಕರರ ಫೆಡರೇಶನ್‌ ಸದಸ್ಯರು ಸೋಮವಾರ ಜಿಲ್ಲಾಧಿಕಾರಿಗೆ ಮನವಿ ಸಲ್ಲಿಸಿದರು.

Advertisement

ಕರ್ನಾಟಕ ವಿದ್ಯುತ್‌ ಪ್ರಸರಣ ನಿಗಮ ಹಾಗೂ ಗುಲ್ಬರ್ಗ ವಿದ್ಯುತ್‌ ಸರಬರಾಜು ಕಂಪನಿ ಅಧೀನದ ಜಿಲ್ಲೆಯ ವಿವಿಧ
ವಿದ್ಯುತ್‌ ವಿತರಣಾ ಕೇಂದ್ರಗಳಲ್ಲಿ ಕಾರ್ಮಿಕರು ಗುತ್ತಿಗೆ ಆಧಾರದಡಿ ದುಡಿಯುತ್ತಿದ್ದಾರೆ. ಆದರೆ, 2013ರಿಂದ
ಈವರೆಗೆ ಟೆಂಡರ್‌ ಕರೆಯದೆ ಹಳೇ ಪದ್ಧತಿಯಲ್ಲೇ ವೇತನ ನೀಡಲಾಗುತ್ತಿದೆ. ಸುಮಾರು 15ರಿಂದ 18 ವರ್ಷಗಳಿಂದ
ಹೀಗೆ ಕೆಲಸ ಮಾಡಲಾಗುತ್ತಿದೆ. ಉಪ ಕೇಂದ್ರಗಳಲ್ಲಿ ಬೇರೆ ಬೇರೆ ಗುತ್ತಿಗೆದಾರರಡಿ ಕೆಲಸ ಮಾಡುತ್ತಿದ್ದು, 3-4 ತಿಂಗಳಿಗೊಮ್ಮೆ ವೇತನ ಪಾವತಿಸಲಾಗುತ್ತಿದೆ ಎಂದು ದೂರಿದರು.

ನೌಕರರಿಗೆ ಭವಿಷ್ಯನಿಧಿ, ಇಎಸ್‌ಐ ಸೌಲಭ್ಯ ನೀಡದೆ ವಂಚಿಸಲಾಗುತ್ತಿದೆ. ಈ ಬಗ್ಗೆ ಹೋರಾಟ ನಡೆಸಿದರೂ
ಸಂಬಂಧಿಸಿದ ಅಧಿಕಾರಿಗಳು ಮಾತ್ರ ಕ್ಯಾರೇ ಎನ್ನುತ್ತಿಲ್ಲ. ಈ ಕೂಡಲೇ ಹೊಸ ಟೆಂಡರ್‌ ಕರೆದು ಕನಿಷ್ಠ ವೇತನ
ಕಾಯ್ದೆಯಡಿ ವೇತನ ನಿಗದಿ ಮಾಡಬೇಕು, ಉಪ ಕೇಂದ್ರ ನಿರ್ವಹಣಾ ಗುತ್ತಿಗೆದಾರರಿಂದ ವೇತನ ಕೊಡಿಸಲು ತಕ್ಷಣ
ಕ್ರಮ ಕೈಗೊಳ್ಳಬೇಕು, 22 ಕೆವಿ, 110 ಕೆವಿ, 66 ಕೆವಿ, 33 ಕೆವಿ ಉಪ ಕೇಂದ್ರದಲ್ಲಿ ಸಾಮಾನ್ಯ ವಿದ್ಯುತ್‌ ಅವಘಡಗಳು
ತಪ್ಪಿಸುವ ದಿನಬಳಕೆ ಉಪಕರಣಗಳನ್ನು ಕಂಪನಿ ಅಥವಾ ಗುತ್ತಿಗೆದಾರರಿಂದ ಕೊಡಿಸಬೇಕು. ನೌಕರರ ಜೀವನಕ್ಕೆ
ತೊಂದರೆಯಾದಲ್ಲಿ ಗುತ್ತಿಗೆದಾರರೇ ಪರಿಹಾರ ನೀಡಬೇಕು.

ಇಎಸ್‌ಐ, ಪಿಎಫ್‌ ಸೌಲಭ್ಯ ಕಲ್ಪಿಸದ ಅಧಿಕಾರಿಗಳ ವಿರುದ್ಧ ಕ್ರಮ ಜರುಗಿಸಬೇಕು. ಶೀಘ್ರದಲ್ಲೇ ವೇತನ ಪರಿಷ್ಕರಣೆ
ಟೆಂಡರ್‌ ಕರೆಯಬೇಕು. ನಮ್ಮ ಬೇಡಿಕೆಗೆ ಸ್ಪಂದಿಸದಿದ್ದಲ್ಲಿ ಡಿ.11ರಿಂದ ಜಿಲ್ಲಾ ಧಿಕಾರಿ ಕಚೇರಿ ಎದುರು ಅನಿರ್ದಿಷ್ಟಾವಧಿ ಧರಣಿ ನಡೆಸಲಾಗುವುದು ಎಂದು ಎಚ್ಚರಿಸಿದರು. ಸಂಘದ ಗೌರವಾಧ್ಯಕ್ಷ ಕೆ.ಜಿ.ವೀರೇಶ, ಜಿಲ್ಲಾಧ್ಯಕ್ಷ ಮುದ್ದುರಂಗಪ್ಪ ಜಾಲಹಳ್ಳಿ, ಸಾಯಿನಾಥ್‌, ಮಹೇಶ ಈರಣ್ಣ, ಶ್ರೀಧರ್‌, ಅಮರೇಶ ಸೇರಿ ಇತರರು ಉಪಸ್ಥಿತರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next