Advertisement

ಆನುವಂಶಿಕ ಆಡಳಿತದ ಚಾಳಿ-ಇದು ಯಾವ ಪಕ್ಷದ ಬಳುವಳಿ?

12:32 PM Sep 20, 2017 | |

ಕಾಂಗ್ರೆಸ್‌ ಉಪಾಧ್ಯಕ್ಷ ರಾಹುಲ್‌ ಗಾಂಧಿ ಭಾರತದಲ್ಲಿ ವಂಶಾಡಳಿತ ರಾಜಕೀಯ ನಡೆದಿರುವುದನ್ನು ತಮ್ಮದೇ ರೀತಿ ಯಲ್ಲಿ ಸಮರ್ಥಿಸಿಕೊಂಡಿದ್ದಾರೆ. ನೆಹರೂ-ಇಂದಿರಾ ವಂಶ “ದೈವದತ್ತ ಹಕ್ಕಿ’ನ ಸಿದ್ಧಾಂತದಲ್ಲಿ ನಂಬಿಕೆಯಿರಿಸಿಕೊಂಡಿದ್ದು, ಈ ಹಿನ್ನೆಲೆಯಲ್ಲಿ ರಾಹುಲ್‌ ಅವರ ಸಮರ್ಥನೆ ಅಚ್ಚರಿಯನ್ನೇನೂ ಮೂಡಿಸುವುದಿಲ್ಲ! ಈ ಮಾತಿನ ಜತೆಗೇ, ಅಲ್ಲ ವಾದರೂ ಕನಿಷ್ಠ ಪಕ್ಷ ರಾಜ್ಯಗಳಲ್ಲಿ, ನಮಗೆ ಮಹಾರಾಜರ‌ ಆಳ್ವಿಕೆಯಿದ್ದಿದ್ದರೇ ಚೆನ್ನಾಗಿರುತ್ತಿತ್ತಲ್ಲವೇ ಎಂಬ ಇನ್ನೊಂದು ಮಾತನ್ನು ಸೇರಿಕೊಳ್ಳಬಹುದೆನಿಸುತ್ತದೆ! ಹೀಗೆ ದೊರೆಗಳ ಆಳ್ವಿಕೆ ಯೆನ್ನುವುದು ಇದ್ದಿದ್ದರೆ ಪ್ರಜಾಪ್ರಭುತ್ವದ ಕಗ್ಗೊಲೆಯಾಗುವು ದನ್ನು ಖಂಡಿತ ತಪ್ಪಿಸಬಹುದಿತ್ತು! 

Advertisement

1859ರಲ್ಲಿ ಮೊಘಲ್‌ ಸಾಮ್ರಾಜ್ಯ ಅಂತ್ಯಗೊಂಡ ಬಳಿಕ, ರಾಷ್ಟ್ರವ್ಯಾಪಿ ನಿಯಂತ್ರಣ ಸಾಧಿಸಿದ ಅಥವಾ ಮಾನ್ಯತೆ ಪಡೆದ ರಾಜ ವಂಶಾಡಳಿತ ದೇಶಕ್ಕೆ ಒದಗಲಿಲ್ಲ. ಮೊಘಲರ ಆಳ್ವಿಕೆ ಉತ್ತುಂಗ ಸ್ಥಿತಿಯನ್ನು ತಲುಪಿದ್ದ ಕಾಲದಲ್ಲೂ ಅವರಿಗೆ ಇಡೀ ರಾಷ್ಟ್ರವನ್ನು ತಮ್ಮ ಆಡಳಿತದ ವ್ಯಾಪ್ತಿಯೊಳಗೆ ತರಲು ಸಾಧ್ಯವಾಗಿರಲಿಲ್ಲ. ದಕ್ಷಿಣಭಾರತದಲ್ಲಿ ಮೊಘಲ ಆಡಳಿತವೆಂಬುದು ಇರಲಿಲ್ಲ. ಔರಂಗಜೇಬ ದಕ್ಷಿಣ ಪ್ರದೇಶವನ್ನು – ಆ ದಿನಗಳಲ್ಲಿ ಯಾವುದನ್ನು ಮರಾಠವಾಡಾ ಪ್ರದೇಶವೆಂದು ಹೇಳಲಾಗುತ್ತಿತ್ತೋ, ಅದನ್ನು – ತನ್ನ ಆಡಳಿತ ವ್ಯಾಪ್ತಿಯೊಳಗೆ ತಂದುಕೊಳ್ಳುವುದಕ್ಕೆ ಎಲ್ಲಿಲ್ಲದ ಪ್ರಯತ್ನವನ್ನೇನೋ ಮಾಡಿದ್ದ. ಇಂದಿಗೂ ಔರಂಗಾಬಾದ್‌, ಅವನ ಹೆಸರನ್ನೇ ಹೊತ್ತುಕೊಂಡಿದೆ.

ಈ ನಡುವೆ ಗಮನಿಸಬೇಕಾದ ಅಂಶವೆಂದರೆ ನಮ್ಮ ಗಡಿಯಲ್ಲಿನ ಬಹಳಷ್ಟು ಭೂಪಟ್ಟಿಗಳ ಮೇಲೆ ಮೊಘಲರ ಆಡಳಿತದ ಹಿಡಿತವಿತ್ತು. ಎಲ್ಲ ಪ್ರಮುಖ ಮೊಘಲ ಆಡಳಿತ ಗಾರರೂ ವಿವಿಧ ಪ್ರದೇಶಗಳಲ್ಲಿ ಊಳಿಗಮಾನ್ಯ ಪದ್ಧತಿಯ ಹಿಡುವಳಿಗಾರರನ್ನು ಅಥವಾ ಆಶ್ರಿತರನ್ನು ಹೊಂದಿದ್ದರು. ಬ್ರಿಟಿಶರು ಕೂಡ ದೇಶವನ್ನು ಸಮಗ್ರವಾಗಿ ಆಳಲಿಲ್ಲ. ದೇಶದಲ್ಲಿ ಬ್ರಿಟಿಶರ ಪಾರಮ್ಯವನ್ನು ಒಪ್ಪಿಕೊಂಡಿದ್ದ ಸುಮಾರು 500ರಷ್ಟು ರಾಜಪ್ರಭುತ್ವದ ರಾಜ್ಯಗಳಿದ್ದವು. ನಾನು ಈ ಮಾತನ್ನು ಯಾಕೆ ಹೇಳುತ್ತಿದ್ದೇನೆಂದರೆ, ದೇಶದಲ್ಲಿ ರಾಜಧನ ರದ್ಧತಿ, ದೊರೆತನದ ಅಮಾನೀಕರಣ, ಅವರ ಸವಲತ್ತುಗಳ ನಿಲುಗಡೆ – ಇಂಥ ಕ್ರಮಗಳನ್ನೆಲ್ಲ ಜಾರಿಗೊಳಿಸಿದ್ದು ಕಾಂಗ್ರೆಸ್‌ ಪಕ್ಷವೇ. ಆದರೆ ಕೆಲ ಜಾಣ ಯುವರಾಜರುಗಳು (ಮಾಧವ ರಾವ್‌ ಸಿಂಧಿಯಾ ಅಥವಾ ಅರ್ಜುನ್‌ ಸಿಂಗ್‌ ಮತ್ತು ಈಗಿನ ಪಂಜಾಬಿನ ಮುಖ್ಯಮಂತ್ರಿ ಅಮರೀಂದರ್‌ ಸಿಂಗ್‌ರಂಥವರು) ಇಂದಿರಾ ಗಾಂಧಿಯವರು ತಮ್ಮ ಮೇಲೆ ತೋರಿದ್ದ ಕಡುದ್ವೇಷವನ್ನು ಮರೆತು ಕಾಂಗ್ರೆಸ್‌ಗೆ ಸೇರ್ಪಡೆಗೊಂಡರು. ಇಂಥ ಅವಕಾಶವಾದಿ ಮಹಾರಾಜರುಗಳು ಸರಕಾರದಲ್ಲಿ ಉನ್ನತ ಸ್ಥಾನಗಳನ್ನು ಪಡೆದರು. ಸ್ವಾರಸ್ಯವೆಂದರೆ ರಾಜಧನ ರದ್ಧತಿಯನ್ನು ಸುಪ್ರೀಂ ಕೋರ್ಟಿನಲ್ಲಿ ಪ್ರಶ್ನಿಸಿ, ಈ ಕೇಸಿನಲ್ಲಿ ಯಶಸ್ಸು ಪಡೆದವರು ಮಾಧವರಾವ್‌ ಸಿಂಧಿಯಾ.

ವಂಶಾಡಳಿತದ ರಾಜಕಾರಣವನ್ನು ಸಮರ್ಥಿಸಿಕೊಂಡ ರಾಹುಲ್‌ ಗಾಂಧಿಯವರನ್ನು ಕೇಂದ್ರದ ಸುದ್ದಿ ಹಾಗೂ ಪ್ರಚಾರ ಸಚಿವೆ ಸ್ಮತಿ ಇರಾನಿ ಸರಿಯಾಗಿಯೇ ಝಾಡಿಸಿದ್ದಾರೆ. ರಾಹುಲ್‌ ಒಬ್ಬ ವಿಫ‌ಲ ವಂಶಾಡಳಿತದ ಕುಡಿ ಎಂದಾಕೆ ಬಣ್ಣಿಸಿದರು. ವಂಶೀಯ ಆಡಳಿತದ ರಾಜಕೀಯವನ್ನು ಬಿತ್ತಿ ಬೆಳೆದುದು ಬೇರೆ ಯಾರೂ ಅಲ್ಲ. ನೆಹರೂ-ಇಂದಿರಾ ವಂಶದವರೇ. ಈಗಾಗಲೇ ಈ ಅಂಕಣದಲ್ಲಿ ಹೇಳಲಾಗಿರುವಂತೆ, ಈ ಪದ್ಧತಿಯ “ಉದ್ಘಾಟಕರು’ ಮೋತಿಲಾಲ್‌ ನೆಹರೂ. ಕಾಂಗ್ರೆಸ್‌ ಅಧ್ಯಕ್ಷರಾಗಿದ್ದ ಅವರು 1929ರಲ್ಲಿ ತನ್ನ ಪುತ್ರನೇ ತನ್ನ ಉತ್ತರಾಧಿಕಾರಿಯಾಗಬೇಕೆಂದು ಪಟ್ಟು ಹಿಡಿದರು. ಮೋತಿಲಾಲ್‌ 1929ರಲ್ಲಿ ನಡೆದ ಕಾಂಗ್ರೆಸ್‌ನ ಕಲ್ಕತ್ತಾ ಅಧಿವೇಶನದ ಅಧ್ಯಕ್ಷರಾಗಿದ್ದರು. ಮುಂದಿನ ವರ್ಷ ನಡೆದ ಲಾಹೋರ್‌ ಅಧಿವೇಶನದಲ್ಲಿ ಅವರ ಪುತ್ರ ಅಧ್ಯಕ್ಷರಾದರು. ಮೋತಿಲಾಲ್‌ ಅವರು ಈ ಪದ್ಧತಿಯನ್ನು ಎರಡು ಬಾರಿ ಅನುಭವಿಸಿದ್ದರು. 1919ರ ಅಮೃತಸರ ಅಧಿವೇಶನದಲ್ಲಿ ಅಧ್ಯಕ್ಷರಾಗಿದ್ದವರು ಅವರೇ. ಮಾಜಿ ಪ್ರಧಾನಮಂತ್ರಿ ನೆಹರೂ 1936ರಲ್ಲಿ ಬರೆದ ಆತ್ಮಚರಿತ್ರೆಯಲ್ಲಿ, ಮಹಾತ್ಮಾ ಗಾಂಧೀಜಿಯನ್ನು 1929ರಲ್ಲಿ ಎರಡನೆಯ ಬಾರಿಗೆ ಅಧ್ಯಕ್ಷ ಗಾದಿಯಲ್ಲಿ ಕೂರಿಸಬೇಕೆಂಬ ಪ್ರಯತ್ನ ಕಾಂಗ್ರೆಸ್‌ ಪಕ್ಷದೊಳಗೆ ನಡೆದಿತ್ತು ಎಂಬುದನ್ನು ಒಪ್ಪಿಕೊಂಡಿದ್ದಾರೆ. ಆದರೆ ಗಾಂಧೀಜಿ, ಎರಡನೆಯ ಬಾರಿಗೆ ಅಧ್ಯಕ್ಷ ಪಟ್ಟವೇರಬೇಕೆಂಬ ಪ್ರಸ್ತಾವವನ್ನು ತಿರಸ್ಕರಿಸಿದರು.

ಮೋತಿಲಾಲ್‌ ತನ್ನ ಮಗನೇ ಅಧ್ಯಕ್ಷನಾಗಲಿ ಎಂದು ಆಗ್ರಹಿಸಿದರು. ಆಗ ನೆಹರೂಗೆ 40ರ ಹರೆಯವಷ್ಟೆ. ಅಪ್ಪನ ಹೆಜ್ಜೆಯನ್ನೇ ಅನುಸರಿಸಿದ ನೆಹರೂ ಯು.ಎನ್‌. ಧೇಬರ್‌ ಅವರನ್ನು ಕಾಂಗ್ರೆಸ್‌ ಅಧ್ಯಕ್ಷ ಪದವಿಯ ಗಾದಿಯಿಂದ ಕಿತ್ತುಹಾಕಿ ತನ್ನ ಪುತ್ರಿ ಇಂದಿರಾ ಪ್ರಿಯದರ್ಶಿನಿ ಗಾಂಧಿಯನ್ನು ಅಧ್ಯಕ್ಷ ಗಾದಿಗೆ ಏರಿಸಿದರು. ಇದರ ಪರಿಣಾಮವೇನೆಂಬುದನ್ನು ಉಲ್ಲೇಖೀಸಲು ತೀರಾ ಕಷ್ಟವೆನಿಸುತ್ತದೆ. ನೆಹರೂ ಅವರ ನಡೆಗೆ ತೀರಾ ವ್ಯತಿರಿಕ್ತ ಎಂಬಂತೆ ಮಹಾತ್ಮಾ ಗಾಂಧಿ ತಮ್ಮ ನಾಲ್ವರು ಪುತ್ರರ ಪೈಕಿ ಯಾರೊಬ್ಬರನ್ನೂ ರಾಜಕಾರಣಕ್ಕಾಗಲಿ, ಸಾರ್ವಜನಿಕ ಜೀವನಕ್ಕಾಗಲಿ ಪ್ರವೇಶಿಸಲು ಯಾವುದೇ ತೆರನ ಉತ್ತೇಜನವನ್ನೂ ನೀಡಲಿಲ್ಲ. ಅವರ ಹಿರಿಯ ಪುತ್ರ, ಔಪಚಾರಿಕ ಶಿಕ್ಷಣ ಕೊಡಿಸಲಿಲ್ಲವೆಂಬ ಕೋಪದಿಂದ ತಂದೆಯ ವಿರುದ್ಧ ಬಂಡೆದ್ದರು. ಗಾಂಧೀಜಿಯವರ ಎರಡನೆಯ ಮಗ ಮಣಿಲಾಲ್‌, ಆ ದಿನಗಳಲ್ಲಿ ಶ್ವೇತವರ್ಣೀಯರ ಪಾರಮ್ಯ ಅನುಭವಿಸುತ್ತಿದ್ದ ದಕ್ಷಿಣಾಫ್ರಿಕದಲ್ಲಿದ್ದುಕೊಂಡು ಅಲ್ಲಿನ ಸಾರ್ವಜನಿಕ ವಲಯದಲ್ಲಿ ಹೆಸರು ಗಳಿಸಿದರು.

Advertisement

ಗಾಂಧೀಜಿಯವರ ಮೂರನೆಯ ಪುತ್ರ ರಾಮಲಾಲ್‌ ರಚನಾತ್ಮಕ ಚಟುವಟಿಕೆಗಳಲ್ಲಿ ತಮ್ಮನ್ನು ತೊಡಗಿ ಸಿಕೊಂಡರು. ಗಾಂಧೀಜಿಯ ನಾಲ್ಕನೆಯ ಪುತ್ರ ದೇವದಾಸ್‌ ವೃತ್ತಪತ್ರಿಕೆಯೊಂದರ ಸಂಪಾದಕರಾದರು. ತಮ್ಮ ಮಕ್ಕಳನ್ನು ರಾಜಕೀಯ ಕಕ್ಷೆಯೊಳಗೆ ಸೇರುವಂತೆ ಉತ್ತೇಜಿಸುವ ಇಂದಿನ ಸಾಮಾನ್ಯ ಮಟ್ಟದ ರಾಜಕೀಯ ನಾಯಕರಂತೆ ವರ್ತಿಸಲಿಲ್ಲ ವೆಂದೇ ಮೋಹನದಾಸ ಕರಮಚಂದ್‌ ಗಾಂಧಿಯವರು ಮಹಾತ್ಮಾ ಎಂದು ಕರೆಸಿಕೊಂಡರು. ಅವರ ಸಾಹಚರ್ಯದಲ್ಲಿದ್ದ ಇತರ ಕಾಂಗ್ರೆಸ್‌ ನಾಯಕರು ಕೂಡ ತಮ್ಮ ಮಕ್ಕಳು ರಾಜಕೀಯ ಪ್ರವೇಶಿಸುವ ಬಗ್ಗೆ ಒಲವನ್ನು ತೋರದೆ ಘನತೆ ಮೆರೆದರು. ಸಿ.ರಾಜಗೋಪಾಲಾಚಾರಿಯವರ ಪುತ್ರ ಸಿ.ಆರ್‌. ನರಸಿಂಹನ್‌ ಅವರು ತಮ್ಮದೇ ಯೋಗ್ಯತೆಯಿಂದ ಲೋಕಸಭೆಗೆ ಆಯ್ಕೆ ಯಾದರೇ ಹೊರತು, ತಮ್ಮ ತಂದೆಯ ಕೃಪೆಯಿಂದಲ್ಲ. ಸರದಾರ್‌ ಪಟೇಲರ ಪುತ್ರ ದಯಾಭಾಯ್‌ ಪುತ್ರಿ ಮಣಿಬೇನ್‌ ಹಾಗೂ ರಾಜೇಂದ್ರಪ್ರಸಾದರ ಪುತ್ರ ಮೃತ್ಯುಂಜಯ ಪ್ರಸಾದ್‌ ಅವರು ಕೂಡ ಹೀಗೆಯೇ ತಮ್ಮ ಯೋಗ್ಯತೆಯಿಂದಲೇ ಗೆದ್ದವರು.

ಸಿದ್ಧಾರ್ಥ ಶಂಕರರಾಯ್‌ ಅವರು ಪಶ್ಚಿಮಬಂಗಾಲದ ಮುಖ್ಯ ಮಂತ್ರಿಯಾದುದು, ತನ್ನ ಅಜ್ಜ ದೇಶಬಂಧು ಚಿತ್ತರಂಜನದಾಸ್‌ ಅವರು ಕಾಲವಾಗಿ ಹಲವು ದಶಕಗಳ ಬಳಿಕ. ರಾಜಾಜಿ ಅಥವಾ ಸರದಾರ್‌ ಪಟೇಲ್‌ ಅವರ ಜಾಗದಲ್ಲಿಂದು ಮುಲಾಯಂ, ಲಾಲೂ, ಎಂ. ಕರುಣಾನಿಧಿ, ನಮ್ಮವರೇ ಆದ ದೇವೇಗೌಡರಂಥವರಿದ್ದಾರೆ. ಬಾಳ್‌ ಠಾಕ್ರೆಯವರ ಹೆಸರನ್ನೂ ಇಲ್ಲಿ ಉಲ್ಲೇಖೀಸಬಹುದು. ಸ್ವಜನಪಕ್ಷಪಾತದ ರೋಗ ಬಿಜೆಪಿಗೂ ಅಂಟಿಕೊಂಡಿದೆ. ಯಡಿಯೂರಪ್ಪ ಅವರ ಪುತ್ರ ರಾಘವೇಂದ್ರ ಈಗ ಶಿವಮೊಗ್ಗದ ಸಂಸದ. ಭಾರತದಲ್ಲಿನ ಹೆಚ್ಚಿನ ರಾಜಕೀಯ ಪಕ್ಷಗಳು ವಂಶಾಡಳಿತದ ಸಮಸ್ಯೆಯಿಂದ ಬಳಲುತ್ತಿವೆ ಎಂದು ರಾಹುಲ್‌ ಗಾಂಧಿ ಹೇಳಿರುವುದಾಗಿ ವರದಿಗಳು ಹೇಳುತ್ತಿವೆ. “ಭಾರತ ಈಗ ಸಾಗುತ್ತಿರುವ ದಾರಿ ಇದು’ ಎಂದೂ ಅವರು ಉದ್ಗರಿಸಿರುವುದಾಗಿ ವರದಿಯಾಗಿದೆ. ಇಂಥದೇ ಪ್ರವೃತ್ತಿ ಭಾರತದ ಕೈಗಾರಿಕೋದ್ಯಮದಲ್ಲೂ ಇದೆ ಎಂದವರು ಬೆಟ್ಟು ಮಾಡಿದ್ದಾರೆ. ಆದರೆ ಅವರು ಹೇಳದೆ ಉಳಿದ ಅಂಶವೊಂದಿದೆ. ಅದೆಂದರೆ, ವ್ಯಾಪಾರ ಉದ್ಯಮದಲ್ಲಾಗಲಿ, ಕೈಗಾರಿಕೆಯಲ್ಲಾಗಲಿ ಪೂರ್ವಜರ ಹಕ್ಕು ಉತ್ತರಾಧಿಕಾರಿಗೆ ದೊರೆಯುವುದು ಕಾನೂನುಬದ್ಧವಾಗಿ. ರಾಜಕೀಯದ ಅಧಿಕಾರ ಅಥವಾ ಹುದ್ದೆ ಹೀಗೆ ಕಾನೂನುಬದ್ಧವಾಗಿ ದೊರೆಯುವಂಥದ್ದಲ್ಲ. ಆದರೆ ಒಂದು ವಿಷಯದಲ್ಲಿ ರಾಹುಲ್‌ ಅವರನ್ನು ಒಪ್ಪಬಹುದು. ರಾಜಕೀಯ ಹಕ್ಕುದಾರಿಕೆ ದೊರೆಯಬೇಕಾದುದು ಆಯಾ ವ್ಯಕ್ತಿಯ ಸಾಮರ್ಥ್ಯ ಹಾಗೂ ಸೂಕ್ಷ್ಮಸಂವೇದನೆಯ ಗುಣದಿಂದ ಎಂಬುದನ್ನವರು ಒಪ್ಪಿಕೊಂಡಿದ್ದಾರೆ.

ಇಂದಿನ ದಿನಗಳ ರಾಜಕೀಯ ಹಿಂದಿನಂತಲ್ಲ. ಅದೀಗ ದುಡ್ಡಿನ ವ್ಯವಹಾರವನ್ನು ಒಳಗೊಂಡಿದೆ. ಅದರಲ್ಲಿರುವ ಸಂಪತ್ತಿನ ಸಂಗ್ರಹಣೆಯ ಅವಕಾಶ, ಆಶ್ರಯದಾತರೆನ್ನಿಸಿಕೊಳ್ಳುವ ಹಾಗೂ ಅಧಿಕಾರ ದಕ್ಕಿಸಿಕೊಳ್ಳುವ ಅವಕಾಶ-ಇವೇ ನಮ್ಮ ರಾಜಕಾರಣಿಗಳನ್ನು ತಮ್ಮ ಬಂಧುಗಳ ರಾಜಕೀಯ ಪ್ರವೇಶಕ್ಕೆ ಉತ್ತೇಜನ ನೀಡುತ್ತಿರುವುದು! ದೇಶದಲ್ಲಿ ಕೆಲ ಆನುವಂಶಿಕ ನ್ಯಾಯಾಧೀಶರೂ ಇದ್ದಾರಲ್ಲವೇ ಎಂದು ವಾದಿಸುವವರು ಇದ್ದಾರಾದರೂ, ಸ್ವಲ್ಪ ಮಟ್ಟಿನ ಯೋಗ್ಯತೆಯೆಂಬುದು ಇಲ್ಲದಿದ್ದರೆ ಒಬ್ಬ ವ್ಯಕ್ತಿ ನ್ಯಾಯವಾದಿಯಾಗಿ, ನ್ಯಾಯಾಧೀಶನಾಗಿ ಗುರುತಿಸಿಕೊಳ್ಳುವುದು ಕಷ್ಟಸಾಧ್ಯ. 

ನಮ್ಮ ರಾಜಕೀಯ ಕ್ಷೇತ್ರದಲ್ಲಿ ಇನ್ನೊಂದು ಮುಖ್ಯ ಲಕ್ಷಣವೆಂದರೆ ವ್ಯಕ್ತಿ ಪೂಜೆ; ಹೀಗೆ ನಾಯಕಮಣಿಗಳ ಸುತ್ತ ನೇತಾಡುತ್ತಿರುವ ಮಂದಿ ತಮಗೆ ಬೇಕಿರುವ ಸ್ಥಾನಮಾನಗಳನ್ನು ದಕ್ಕಿಸಿಕೊಳ್ಳುತ್ತಿರುವುದನ್ನು ನೋಡುತ್ತಲೇ ಇದ್ದೇವೆ. ನಮಗಿಂದು ರಾಂ ಜೇಠ್ಮಲಾನಿಯವರಂಥ ಮಂದಿ ಹೆಚ್ಚಿನ ಸಂಖ್ಯೆಯಲ್ಲಿ ಬೇಕು.  ನಮ್ಮ ರಾಜಕೀಯ ಪಕ್ಷಗಳಿಗೆ ಅಮರಿಕೊಂಡಿರುವ ವಂಶಾಡಳಿತ ಪ್ರವೃತ್ತಿಯನ್ನು ನಿರ್ಮೂಲನಗೊಳಿಸುವ ನಿಟ್ಟಿನಲ್ಲಿ ಇರಿಸಬೇಕಾಗಿರುವ ಪ್ರಥಮ ಹೆಜ್ಜೆಗಳ ಪೈಕಿ ಒಂದೆಂದರೆ, ಸಾಂಸ್ಥಿಕ ಚುನಾವಣೆಗಳನ್ನು ನಡೆಸುವುದು. ನಮ್ಮ ಎಲ್ಲ ಪಕ್ಷಗಳಲ್ಲೂ ಇದು ಪ್ರಹಸನವಾಗಿಬಿಟ್ಟಿದೆ.

ಕರ್ನಾಟಕ ಪ್ರದೇಶ ಕಾಂಗ್ರೆಸ್‌ನಲ್ಲಿ ಇತ್ತೀಚಿನ ದಶಕಗಳಲ್ಲಿ ನಡೆದ ಒಂದೇ ಒಂದು ನೈಜಸ್ವರೂಪದ ಸಾಂಸ್ಥಿಕ ಚುನಾವಣೆಯೆಂದರೆ, ಎಂ.ವಿ. ರಾಜಶೇಖರನ್‌ ಅವರನ್ನು ಧರ್ಮಸಿಂಗ್‌ ಅವರು ಪರಾಭವ ಗೊಳಿಸಿದ ಸಂದರ್ಭ. ಈಚಿನ ದಶಕಗಳಲ್ಲಿ ಎಐಸಿಸಿಯಲ್ಲಿ ಚುನಾಯಿತ ಅಧ್ಯಕ್ಷರಾಗಿದ್ದವರೆಂದರೆ ಸೀತಾರಾಮ ಕೇಸರಿಯ ವರಷ್ಟೇ. ಕೇಸರಿ ಅವರನ್ನು ಸೋನಿಯಾ ಹುದ್ದೆಯಿಂದ ಕಿತ್ತು ಹಾಕಿ ತಾವೇ ಅಧ್ಯಕ್ಷರಾದರು. ದಶಕಗಳ ಹಿಂದೆ ಎಐಸಿಸಿಯಲ್ಲಿ ನಡೆದಿದ್ದ ಅದ್ಭುತವೆನ್ನಬಹುದಾದ ಸಾಂಸ್ಥಿಕ ಚುನಾವಣೆಯಲ್ಲಿ (1950) ಬಾಬೂ ಪುರುಷೋತ್ತಮದಾಸ್‌ ಟಂಡನ್‌ ಪ್ರಧಾನಿ ನೆಹರೂ ಅವರ ಅಭ್ಯರ್ಥಿಯಾಗಿದ್ದ ಆಚಾರ್ಯ ಜೆ. ಬಿ. ಕೃಪಲಾನಿ ಯವರನ್ನು ಪರಾಭವಗೊಳಿಸಿದ್ದರು. 

ಈಗ ರಾಹುಲ್‌ ಮೊಘಲರ ಶೈಲಿಯಲ್ಲಿ ತಾಯಿಯನ್ನು ಅಧ್ಯಕ್ಷ ಪದವಿಯಿಂದ ಕೆಳಗಿಳಿಸಿ ತಾನೇ ಕಾಂಗ್ರೆಸ್‌ ಅಧ್ಯಕ್ಷ ರಾಗುವರೇ? ಕಾದು ನೋಡಬೇಕು. ನಾವು ಭಾರತೀಯರು, ಅಮೆರಿಕದಲ್ಲಿ ಮಾಜಿ ಅಧ್ಯಕ್ಷರ ಪುತ್ರರು ಅಧ್ಯಕ್ಷ ಪದವಿಗೆ ಆಯ್ಕೆಯಾಗಿರುವ ಪ್ರಸಂಗಗಳನ್ನು ಉಲ್ಲೇಖೀಸುತ್ತ ಓಡಾಡುತ್ತಿ ರುತ್ತೇವೆ. ಆದರೆ  ಅವರಲ್ಲಿ ಯಾರೂ ತಮ್ಮ ತಂದೆಯ ಅವಧಿ ಮುಗಿದ ಬೆನ್ನಿಗೇ ಉತ್ತರಾಧಿಕಾರಿಗಳಾಗಲಿಲ್ಲ. 19ನೆಯ ಶತಮಾನದಲ್ಲಿ ಜಾನ್‌ ಕ್ವಿನ್ಸಿ ಆ್ಯಡಮ್ಸ್‌ ಅವರು, ತಮ್ಮ ತಂದೆ ಜಾನ್‌ ಆ್ಯಡಮ್ಸ್‌ ಅಧಿಕಾರದಿಂದಿಳಿದ 24 ವರ್ಷಗಳ ಬಳಿಕ ಅಧ್ಯಕ್ಷರಾದರು. ಹಾಗೆಯೇ ಜಾರ್ಜ್‌ ಎಚ್‌. ಡಬ್ಲ್ಯು. ಬುಶ್‌ ಅವರ ಅಧ್ಯಕ್ಷತೆಯ ಅವಧಿ ಪೂರ್ಣಗೊಂಡ ಎಂಟು ವರ್ಷಗಳ ಬಳಿಕ 2001ರಲ್ಲಿ ಅಧ್ಯಕ್ಷ ಪಟ್ಟ ಪಡೆದರು. ಈ ನಡುವೆ, ವಂಶಾಡಳಿತ ಪದ್ಧತಿ ಹಾಗೂ ಉತ್ತರಾಧಿಕಾರ ಪರಂಪರೆಯನ್ನು ಪಾಲಿಸುವ ವಿಚಾರದಲ್ಲಿ ನಮ್ಮ ನೆರೆರಾಷ್ಟ್ರ ಪಾಕಿಸ್ಥಾನ ನಮ್ಮೊಂದಿಗೆ ಪೈಪೋಟಿ ನಡೆಸುತ್ತಿರುವ ಹಾಗಿದೆ!

ಅರಕೆರೆ ಜಯರಾಮ್‌

Advertisement

Udayavani is now on Telegram. Click here to join our channel and stay updated with the latest news.

Next