Advertisement

ಹಂತಕರ ಸೆರೆಗೆ ಒಕ್ಕೊರಲ ಆಗ್ರಹ

06:00 AM Sep 13, 2017 | |

ಬೆಂಗಳೂರು: ಪತ್ರಕರ್ತೆ ಗೌರಿ ಲಂಕೇಶ್‌ ಹತ್ಯೆ ಖಂಡಿಸಿ ಮಂಗಳವಾರ ನಗರದಲ್ಲಿ ಹಮ್ಮಿಕೊಂಡಿದ್ದ ಬೃಹತ್‌ ಪ್ರತಿರೋಧ
ಸಮಾವೇಶದಲ್ಲಿ ಪ್ರಕರಣದ ತನಿಖೆಯನ್ನು ತ್ವರಿತವಾಗಿ ನಡೆಸಿ ಹಂತಕರನ್ನು ಪತ್ತೆ ಹಚ್ಚಬೇಕೆಂಬ ಒಕ್ಕೊರಲ ಆಗ್ರಹ
ಮಾಡಲಾಯಿತು.

Advertisement

ಜತೆಗೆ ಸಮಾವೇಶದಲ್ಲಿ ಮಾತನಾಡಿದ ಬಹುತೇಕರು ಡಾ.ಎಂ. ಎಂ.ಕಲಬುರಗಿ ಹಾಗೂ ಗೌರಿ ಹತ್ಯೆ ಪ್ರಕರಣಗಳಲ್ಲಿ ಹಂತಕರ
ಪತ್ತೆಯಾಗದ ಬಗ್ಗೆ ಅಸಮಾಧನವನ್ನೂ ವ್ಯಕ್ತಪಡಿಸಿದರು. ಕಲಬುರಗಿ ಹತ್ಯೆ ಆರೋಪಿಗಳನ್ನು ಬಂಧಿಸಿದ್ದರೆ, ಗೌರಿ ಹತ್ಯೆ ನಡೆಯುತ್ತಿರಲಿಲ್ಲ ಎಂದು ಪ್ರತಿಪಾದಿಸಿದರು.

ಕಲಬುರಗಿ ಹತ್ಯೆ ನಡೆದು 2 ವರ್ಷವಾದರೂ ಹಂತಕರ ಸುಳಿವು ಪತ್ತೆ ಹಚ್ಚುವಲ್ಲಿ ರಾಜ್ಯ ಸರ್ಕಾರ ವಿಫ‌ಲವಾಗಿದೆ. ಇದೀಗ ಗೌರಿ
ಹಂತಕರ ಸುಳಿವು ಸಹ ಪತ್ತೆ ಹಚ್ಚಿಲ್ಲ. ಹೀಗಾಗಿ, ನಮಗೆ ನ್ಯಾಯ ದೊರೆಯುವ ವಿಶ್ವಾಸವಿಲ್ಲವೆಂದು ಸರ್ಕಾರದ ಕಾರ್ಯವೈಖರಿ ಬಗ್ಗೆಯೂ ಬಹಿರಂಗವಾಗಿಯೇ ಆಕ್ರೋಶ ಹೊರಹಾಕಿದರು.

ಸಮಾವೇಶದಲ್ಲಿ ಮಾತನಾಡಿದ ಪ್ರತಿಯೊಬ್ಬರೂ, ಗೌರಿ ಲಂಕೇಶ್‌ ಅವರ ಹತ್ಯೆ ಒಬ್ಬ ವ್ಯಕ್ತಿಯ ಕೊಲೆಯಲ್ಲ. ಅದೊಂದು ವಿಚಾರ ಮತ್ತು ಸಿದಾಟಛಿಂತಗಳ ಹತ್ಯೆ. ಸಂವಿಧಾನ ಮತ್ತು ಪ್ರಜಾಪ್ರಭುತ್ವದ ಮೇಲೆ ನಡೆದ ಘೋರ ದಾಳಿ. ಈ ಸಾವಿಗೆ ಸಂಭ್ರಮಿಸುತ್ತಿರುವವರು ಯಾರು ಅನ್ನುವುದು ಜಗಜ್ಜಾಹಿರಾಗಿದೆ. ಇದರ ಹಿಂದೆ ಮತೀಯವಾದಿ, ಕೋಮುವಾದಿ ಮತ್ತು ಮೂಲಭೂತವಾದಿಗಳ ಕೈವಾಡವಿದೆ. 

ಗೌರಿ ಲಂಕೇಶ್‌ ಬಲಿದಾನವನ್ನು ವ್ಯರ್ಥವಾಗಲು ಬಿಡುವುದಿಲ್ಲ. ಈ ಹೋರಾಟವನ್ನು ರಾಷ್ಟ್ರಮಟ್ಟಕ್ಕೆ ಕೊಂಡೊಯ್ಯುತ್ತೇವೆ. ನ್ಯಾಯ ಸಿಗುವವರೆಗೆ ಹೋರಾಟ ನಿಲ್ಲದು ಎಂದು ಹೇಳಿದರು. ಹಿರಿಯ ಪತ್ರಕರ್ತರಾದ ಪಿ.ಸಾಯಿನಾಥ್‌, ಸಾಗರಿಕ ಘೋಷ್‌,ಸಿದಾಟಛಿರ್ಥ್ ವರದರಾಜನ್‌, ರಂಜಾನ್‌ ದರ್ಗಾ, ವಿಚಾರವಾದಿ ಇರ್ಫಾನ್‌ ಅಲಿ ಇಂಜಿನಿಯರ್‌, ಚಿಂತಕರಾದ ದೇವನೂರು ಮಹದೇವ, ಪ್ರೊ.ಚಂದ್ರಶೇಖರ ಪಾಟೀಲ್‌, ಜಿ.ಕೆ.ಗೋವಿಂದ ರಾವ್‌, ಡಾ.ಮರುಳಸಿದಟಛಿಪ್ಪ, ಆಮ್‌ಆದ್ಮಿ ಪಕ್ಷದ ಆಶಿಷ್‌ ಖೇತಾನ್‌, ಹಿರಿಯ ವಕೀಲರಾದ ಪ್ರಶಾಂತ್‌ ಭೂಷಣ್‌, ಪ್ರೊ.ರವಿವರ್ಮಕುಮಾರ್‌, ಹಿಂದುಳಿದ ವರ್ಗಗಳ ಆಯೋಗದ ಮಾಜಿ ಅಧ್ಯಕ್ಷ ಸಿ.ಎಸ್‌.ದ್ವಾರಕಾನಾಥ್‌, ದಲಿತ ಹೋರಾಟಗಾರ ಜಿಗ್ನೇಶ್‌ ಮೇವಾನಿ, ಮಾಜಿ ಸಚಿವೆ ಬಿ.ಟಿ.ಲಲಿತಾನಾಯಕ್‌, ಪುಸ್ತಕ ಪ್ರಾಧಿಕಾರದ ಅಧ್ಯಕ್ಷೆ ವಸುಂಧರ ಭೂಪತಿ, ಕ್ರೈಸ್ತ ಫಾದರ್‌ ಲೋಬೋ,ಮುಸ್ಲಿಂ ಧಾರ್ಮಿಕ ಮುಖಂಡ ಮಹಮ್ಮದ್‌ ಯೂಸುಫ್ ಖನ್ನಿ ಮತ್ತಿತರ ಪ್ರಮುಖರು ಪಾಲ್ಗೊಂಡಿದ್ದರು.

Advertisement

ಪ್ರಗತಿಪರ ಸಂಘಟನೆಗಳು, ಚಿಂತಕರು, ಮುಸ್ಲಿಂ ಸಂಘಟನೆಗಳು, ವಿದ್ಯಾರ್ಥಿ ಸಂಘಟನೆಗಳು ಪ್ರತಿರೋಧ ಸಮಾವೇಶದಲ್ಲಿ
ಪಾಲ್ಗೊಂಡಿದ್ದವು. ಗೌರಿ ಲಂಕೇಶ್‌ ಅವರ ತಾಯಿ ಇಂದಿರಾ, ಸಹೋದರಿ ಕವಿತಾ ಲಂಕೇಶ್‌, ಸಹೋದರ ಇಂದ್ರಜಿತ್‌ ಲಂಕೇಶ್‌,ಗೌರಿ ಅವರ ವಿಚ್ಛೇದಿತ ಪತಿ ಅಮೆರಿಕದಿಂದ ಬಂದಿದ್ದ ಚಿದಾನಂದ ರಾಜಘಟ್ಟ ಹಾಗೂ ಅವರ ಪತ್ನಿ ಸಮಾವೇಶದಲ್ಲಿ ಭಾಗಿಯಾಗಿದ್ದರು. ಗೋವಿಂದ ಪನ್ಸಾರೆ, ನರೇಂದ್ರ ದಾಬೋಲ್ಕರ್‌, ಡಾ.ಎಂ.ಎಂ.ಕಲಬುರಗಿ ಅವರ ಕುಟುಂಬ ಸದಸ್ಯರು ಸಹ ಸಮಾವೇಶದಲ್ಲಿ ಪಾಲ್ಗೊಂಡಿದ್ದರು.

ಏಕಾಂಗಿ ಇಂದ್ರಜಿತ್‌
ಪ್ರತಿರೋಧ ಸಮಾವೇಶದಲ್ಲಿ ಗೌರಿ ಲಂಕೇಶ್‌ ಸಹೋದರ ಇಂದ್ರಜಿತ್‌ ಲಂಕೇಶ್‌ ಪಾಲ್ಗೊಂಡರೂ ಏಕಾಂಗಿಯಾಗಿದ್ದರು.
ಮಧ್ಯಾಹ್ನ 2 ಗಂಟೆ ಸುಮಾರಿಗೆ ಆಗಮಿಸಿದ ಅವರ ಮೊದಲ ಸಾಲಿನಲ್ಲಿ ತಾಯಿ ಇಂದಿರಾ ಲಂಕೇಶ್‌ ಪಕ್ಕದ ಆಸನದಲ್ಲಿ ಕುಳಿತರು. ತಮ್ಮ ತಾಯಿ ಜೊತೆ ಬಿಟ್ಟರೆ ಬೇರಾರ ಜೊತೆಯೂ ಮಾತನಾಡಲಿಲ್ಲ. ಅವರನ್ನು ಯಾರೂ ಮಾತನಾಡಿಸಿಲ್ಲ. ನಿರೂಪಕರು ಅಥವಾ ಭಾಷಣಕಾರರು ಮಾತು ಆರಂಭಿಸುವಾಗ ಇಂದ್ರಜಿತ್‌ ಹೆಸರೂ ಹೇಳಿಲ್ಲ. 5 ಗಂಟೆ ಸುಮಾರಿಗೆ ಕಾರ್ಯಕ್ರಮದ ಮಧ್ಯೆಯೇ ಅವರು ವೇದಿಕೆಯಿಂದ ನಿರ್ಗಮಿಸಿದರು. ಇದೇ ವೇಳೆ ಕಾರ್ಯಕ್ರಮದ ಆರಂಭದಲ್ಲಿ ಕೆಲ ಹೊತ್ತು ವೇದಿಕೆಯಲ್ಲಿ ಕುಳಿತ ಸಹೋದರಿ ಕವಿತಾ ಲಂಕೇಶ್‌ ಹಾಗೂ ಅವರ ಮಗಳು ಇಶಾ ಲಂಕೇಶ್‌ ಬಳಿಕ ಸಭಿಕರ ಮೊದಲ ಸಾಲಿನಲ್ಲಿ ಕಾರ್ಯಕ್ರಮ ಮುಗಿಯುವವರೆಗೆ ಕೂತಿದ್ದರು.

ಹೋರಾಟ ಸಮಿತಿ ನಿರ್ಣಯ
ಬೆಂಗಳೂರು
: ಗೌರಿ ಲಂಕೇಶ್‌ ಹತ್ಯೆ ಖಂಡಿಸಿ ವಿವಿಧ ಸಂಘಟನೆಗಳನ್ನೊಳ ಗೊಂಡ “ಗೌರಿ ಲಂಕೇಶ್‌ ಹತ್ಯೆ ವಿರೋಧಿ ಹೋರಾಟ ಸಮಿತಿ’ ವತಿಯಿಂದ ಹಮ್ಮಿಕೊಳ್ಳಲಾಗಿದ್ದ ಪ್ರತಿರೋಧ ಸಮಾವೇಶದಲ್ಲಿ 3 ಪ್ರಮುಖ ನಿರ್ಣಯ ಕೈಗೊಂಡು ಅವುಗಳನ್ನು ಹಕ್ಕೊತ್ತಾಯ ಮನವಿ ಪತ್ರದ ಮೂಲಕ ಸರ್ಕಾರಕ್ಕೆ ಸಲ್ಲಿಸಲಾಯಿತು. ಸಾರಿಗೆ ಸಚಿವ ಎಚ್‌.ಎಂ. ರೇವಣ್ಣ ಹಾಗೂ ಆಹಾರ ಸಚಿವ ಯು.ಟಿ. ಖಾದರ್‌ ಸರ್ಕಾರದ ಪರವಾಗಿ ಮನವಿ ಸ್ವೀಕರಿಸಿದರು. ಪ್ರಕರಣದ ಬಗ್ಗೆ ರಾಜ್ಯ ಸರ್ಕಾರ ಗಂಭೀರವಾಗಿದ್ದು, ಆರೋಪಿಗಳ ಪತ್ತೆಗೆ ರಾಜ್ಯದ ಪೊಲೀಸರು ಸಮರ್ಥರಾಗಿದ್ದಾರೆ. ಮನವಿಯನ್ನು ಮುಖ್ಯಮಂತ್ರಿಯವರ ಗಮನಕ್ಕೆ ತರುತ್ತೇನೆ ಎಂದು ಸಚಿವ ರೇವಣ್ಣ ಭರವಸೆ ನೀಡಿದರು.

ನಿರ್ಣಯಗಳು
1 . 
ಗೌರಿ ಹತ್ಯೆಯ ತನಿಖೆಯನ್ನು ರಾಜ್ಯ ಸರ್ಕಾರ ರಚಿಸಿರುವ ಎಸ್‌ಐಟಿ ಮುಖಾಂತರ ತೀವ್ರಗೊಳಿಸಿ, ಕಾಲಮಿತಿಯೊಳಗೆ ಮುಗಿಸಿ ಹಂತಕರನ್ನು ಹಾಗೂ ಅದರ ಹಿಂದಿರುವ ಶಕ್ತಿಗಳನ್ನು ಶೀಘ್ರ ಪತ್ತೆ ಹಚ್ಚಬೇಕು.

2.  ಗೌರಿ ಕಳೆದ ಒಂದೂವರೆ ದಶಕದಿಂದ ಕೆಲವು ಸಂವಿಧಾನ ವಿರೋಧಿ ಹಾಗೂ ಮಾನವೀಯ ವಿರೋಧಿಗಳನ್ನು ಖಂಡಿಸುತ್ತಾ ಚಿಂತನೆ ಹಾಗೂ ಹೋರಾಟ ನಡೆಸಿದ್ದರು. ಅವರು ಮಾತ್ರವಲ್ಲದೇ ಈ ದೇಶದಲ್ಲಿ ಸಂವಿಧಾನದ ಆಶಯಗಳನ್ನು ಎತ್ತಿ ಹಿಡಿಯುವ ವಿಚಾರವಾದಿಗಳ ಸರಣಿ ಕೊಲೆಗಳು ಇನ್ನೂ ನಡೆಯುತ್ತಿದೆ. ಹಾಗಾಗಿ ಈ ಆಯಾಮವನ್ನು ವಿಶೇಷವಾಗಿ ಪರಿಗಣಿಸಿ, ತನಿಖೆ ಚುರುಕುಗೊಳಿಸಬೇಕೆಂದು ಈ ಸಮಾವೇಶ ಒತ್ತಾಯಿಸುತ್ತದೆ.

3. ಆರೆಸ್ಸೆಸ್‌, ಹಿಂದೂ ಜಾಗರಣ ವೇದಿಕೆ, ವಿಎಚ್‌ಪಿ, ಭಜರಂಗದಳ, ಶ್ರೀರಾಮಸೇನೆ, ಸನಾತನ ಸಂಸ್ಥೆ ಇತ್ಯಾದಿ ಆರೆಸ್ಸೆಸ್‌ನ ಅಂಗ ಸಂಘಟನೆಗಳ ಸದಸ್ಯರು/ಬೆಂಬಲಿಗರು. ಈ ಹತ್ಯೆಯನ್ನು ಸಂಭ್ರಮಿಸಿದ ದುರಂತವು ಈ ನಾಡಿನಲ್ಲಿ ನಡೆದುದ್ದಕ್ಕೆ ನಾವೆಲ್ಲರೂ ಸಾಕ್ಷಿಗಳಾಗಿದ್ದೇವೆ. ಹಾಗೆಯೇ ಬಿಜೆಪಿಯ ನಾಯಕರು ಹತ್ಯೆಗೆ ಪರೋಕ್ಷ ಸಮರ್ಥನೆ ನೀಡಿ ಮಾತನಾಡಿದ್ದನ್ನೂ ನಾಡು ನೋಡಿದೆ. ಯಾವುದೇ ಧರ್ಮದ ಬೋಧನೆಗಳಿಗೂ ವಿರುದಟಛಿವಾದ ಇಂತಹ ಅಮಾನವೀಯ ನಡವಳಿಕೆಗಳನ್ನು ಸಮಾವೇಶ ಖಂಡಿಸುತ್ತದೆ.

ಗೌರಿ ಎಂಜಿನಿಯರ್‌ ಆಗಬೇಕು ಎಂಬುದು ನನ್ನ ಆಸೆ ಆಗಿತ್ತು. ಆದರೆ, ಪತ್ರಿಕೋದ್ಯಮ ಆಯ್ಕೆ ಮಾಡಿ ಕೊಂಡಳು. ಅದಕ್ಕೂ ನ್ಯಾಯ ಒದಗಿ ಸಿದಳು. ಅವಳ ಬಗ್ಗೆ ನನಗೆ ಹೆಮ್ಮೆ ಇದೆ. ಇಂದು ಎಲ್ಲರಲ್ಲೂ ಗೌರಿ ಕಾಣುತ್ತಿದ್ದೇನೆ.
– ಇಂದಿರಾ ಲಂಕೇಶ್‌, ಗೌರಿ ತಾಯಿ

ಗುಂಡೇಟಿನಿಂದ ವೈಚಾರಿಕೆಯನ್ನು ಕೊಲ್ಲವುದು “ಐಡಿಯಾ ಆಫ್ ಇಂಡಿಯಾ’ ಅಲ್ಲ.ಸಮಾನತೆ, ಭಾÅತೃತ್ವ ನಿಜವಾದ ಐಡಿಯಾ ಆಫ್ ಇಂಡಿಯಾ.
– ಸೀತಾರಾಂ ಯೆಚೂರಿ, ಸಿಪಿಎಂ ಮುಖಂಡ

ದಾಬೋಲ್ಕರ್‌ನಿಂದ ಗೌರಿ ಹತ್ಯೆ ಪ್ರಕರಣದಲ್ಲಿ ಗೋವಾದ ಸನಾತನ ಸಂಸ್ಥೆಯ ಕೈವಾಡವಿರುವುದು ಬಹಿರಂಗವಾಗಬೇಕು.
– ಮೇಧಾ ಪಾಟ್ಕರ್‌, ಸಾಮಾಜಿಕ ಹೋರಾಟಗಾರ್ತಿ

ಹಿಂದೂವಾದಿಗಳು ಹಾಗೂ ಗಾಂಧಿಯವರನ್ನು ಕೊಂದವರೇ ಗೌರಿ ಅವರನ್ನು ಕೊಂದಿದ್ದಾರೆ. ಇದೇ ಮಾಹಿತಿ ಆಧರಿಸಿ ತನಿಖೆ ನಡೆಸುತ್ತೀರಾ?
– ಸ್ವಾಮಿ ಅಗ್ನಿವೇಶ್‌, ಸಾಮಾಜಿಕ ಕಾರ್ಯಕರ್ತ

ಇದು ಫ್ಯಾಸಿಸ್ಟರ ದೇಶವಲ್ಲ, ಬದಲಾಗಿ ಬುದ್ಧ-ಬಸವರ ಬಹುತ್ವದ ದೇಶ. ಫ್ಯಾಸಿಸ್ಟ್‌ ಶಕ್ತಿಗಳ ಗುಂಡಿಗೆ ಗೌರಿ ಬಲಿಯಾಗಿದ್ದಾಳೆ. ಆದರೆ, ಅವರ ಸಾವು ವ್ಯರ್ಥವಾಗಲು ಬಿಡುವುದಿಲ್ಲ.
– ತೀಸ್ತಾ ಸೆಟಲ್‌ವಾಡ್‌, ಸಾಮಾಜಿಕ ಕಾರ್ಯಕರ್ತೆ

ಧರ್ಮಗುರುಗಳ ಮೇಲೆ ಅವ್ಯಕ್ತವಾಗಿ ನಿಗಾ ಇಡಲಾಗುತ್ತಿದೆ. ಪೆನ್ನಿಗೆ ಪೆನ್ನಿನ ಮೂಲಕವೇ ಉತ್ತರಿಸಬೇಕು. ಗನ್‌ ಯಾವತ್ತೂ ಪರಿಹಾರ ಆಗುವುದಿಲ್ಲ.
– ಮುರಘಾ ಶರಣರು, ಚಿತ್ರದುರ್ಗ

ಹೆಣ್ಣು ಮಗಳಿಗೆ ನಡು ರಸ್ತೆಯಲ್ಲಿ ಗುಂಡು ಹಾಕುವವರು ಅವರು. ಅವರು ಹಿಂದಿನಿಂದ ಗುಂಡು ಹಾರಿಸಿದ್ದರೆ, ನಾವು ಗುಂಡಿಗೆ ಎದೆ ಕೊಟ್ಟು ನಿಂತವರು.
– ನಿಜಗುಣಾನಂದ ಸ್ವಾಮಿ, ಮುಂಡರಗಿ

ಈ ಕೊಲೆಯ ಪ್ರಾಯೋಜಕರು ಇಲ್ಲೇ ಕರ್ನಾಟಕದಲ್ಲಿ ಇದ್ದಾರೆ. ಹತ್ಯೆಕೋರರ ಜೊತೆಗೆ ಆ ಪ್ರಾಯೋಜಕರನ್ನು ಪತ್ತೆ ಹಚ್ಚುವ ಕೆಲಸ ಸರ್ಕಾರ ಮಾಡಬೇಕು.
– ವೀರಭದ್ರಚನ್ನಮಲ್ಲ ಶ್ರೀ, ನಿಡುಮಾಮಿಡಿ ಮಠ

ಹತ್ಯೆ ಮಾಡಿದವರನ್ನು ಪತ್ತೆ ಹಚ್ಚುವ ಪ್ರಾಮಾಣಿಕ ಕೆಲಸ ಸರ್ಕಾರ ಮಾಡುತ್ತಿರಬಹುದು. ಆದರೆ, ಆರೋಪಿಗಳು ಪತ್ತೆಯಾಗುತ್ತಾರೆ ಎಂಬ ಖಾತರಿ ಇಲ್ಲ.
– ಎ.ಕೆ. ಸುಬ್ಬಯ್ಯ, ಹಿರಿಯ ವಕೀಲ

Advertisement

Udayavani is now on Telegram. Click here to join our channel and stay updated with the latest news.

Next