Advertisement

ಗಣಿನಾಡಲ್ಲಿ ಸಂಭ್ರಮದ ಗೌರಿ ಹಬ್ಬ

03:35 PM Nov 24, 2018 | |

ಬಳ್ಳಾರಿ: ಹೈದ್ರಾಬಾದ್‌ ಕರ್ನಾಟಕ ಭಾಗದಲ್ಲಿ ವಿಶೇಷವಾಗಿ ಆಚರಿಸಲಾಗುವ ಹಬ್ಬಗಳಲ್ಲಿ ದೊಡ್ಡಗೌರಿ ಹಬ್ಬವೂ ಒಂದು. ಹಬ್ಬದ ವಿಶೇಷವಾದ ಸಕ್ಕರೆ ಆರತಿ ಖರೀದಿ ಜೋರು ಪಡೆದಿದೆ. ಬಳ್ಳಾರಿ, ರಾಯಚೂರ, ಕೊಪ್ಪಳ ಭಾಗದಲ್ಲಿ ದೊಡ್ಡಗೌರಿ ಹಬ್ಬವನ್ನು ಅತ್ಯಂತ ಸಂಭ್ರಮದಿಂದ ಆಚರಿಸಲಾಗುತ್ತಿದೆ.

Advertisement

ಈ ದೊಡ್ಡಗೌರಿ ಹಬ್ಬ ಬಂತೆಂದರೆ ಸಾಕು, ಮನೆಯ ಮಗಳು, ಮದುವೆಯಾಗಿ ಗಂಡನ ಮನೆಗೆ ತೆರಳಿದ್ದ ಗೃಹಿಣಿಯರು ತಮ್ಮ ತಮ್ಮ ತವರು ಮನೆಗಳಿಗೆ ಆಗಮಿಸುವ ಮೂಲಕ ಸಕ್ಕರೆಯ ಆರತಿಯನ್ನು ಬೆಳಗುತ್ತಾರೆ. 

ಗಂಡನ ಮನೆಯಲ್ಲಿದ್ದ ಗೌರಿಯು ತವರು ಮನೆಗೆ ಬರುತ್ತಾಳಂತೆ. ಅಲ್ಲಿಗೆ ಹೋದರೆ ಕುಡಿಯಲು ಗಂಜಿಯೂ ಸಹ ಇರಲ್ಲ. ಏಕೆ ಹೋಗುತ್ತೀಯಾ ಎಂದು ಗಂಡನೆ ಮನೆಯವರು ಹೇಳುತ್ತಾರಂತೆ. ಬಡವರ ಮನೆಯ ಗಂಜಿಯನ್ನಾದರೂ ಕುಡಿದು ಬರುವೆನೆಂದು ತವರು ಮನೆಗೆ ಬರುತ್ತಾಳಂತೆ ಎಂಬ ಪ್ರತೀತಿಯಿದೆ. ಹಾಗಾಗಿ ಗಂಡನ ಮನೆಗೆ ತೆರಳಿರುವ ಪ್ರತಿಯೊಬ್ಬ ಗೃಹಿಣಿಯರು ಗೌರಿ ಹಬ್ಬದ
ವೇಳೆ ತವರು ಮನೆಗೆ ತೆರಳುತ್ತಾಳೆ.

ತವರು ಮನೆಯವರು ಆ ಗೃಹಿಣಿ ಅಥವಾ ಮಹಿಳೆಗೆ ಹೊಸ ಉಡುಗೆಯನ್ನು ಉಡುಗೊರೆಯಾಗಿ ನೀಡುತ್ತಾರೆ. ಮರದ ಅಚ್ಚನ್ನು ಬಳಸಿ ತಯಾರಿಸಲ್ಪಡುವ ಸಕ್ಕರೆ ಆರತಿಯನ್ನು ಖರೀದಿಸುತ್ತಾರೆ. ತವರು ಮನೆಯವರು ಮನೆಯ ಮಗಳು ಬರುತ್ತಾರೆಂಬ ಸಂಭ್ರಮದಲ್ಲಿ ತವರು ಮನೆಯವರು ಮಿಂದೇಳುತ್ತಾರೆ.

ಗಂಡನ ಮನೆಯಿಂದ ತವರು ಬರುವ ಮನೆಯ ಮಗಳಿಗೆ ಗ್ರಾಮೀಣ ಭಾಗದಲ್ಲಿ ರಾಜಾಥಿತ್ಯ ಇರುತ್ತದೆ. ಗೌರಿ ಹುಣ್ಣಿಮೆ ದಿನವಾದ ಈ ದಿನವೂ ಜಿಲ್ಲೆಯ ಬಹುತೇಕ ಗ್ರಾಮಗಳಲ್ಲಿ ದೊಡ್ಡಗೌರಿ ಮೂರ್ತಿಯನ್ನು ಮೆರವಣಿಗೆ ಮೂಲಕ ಆಯಾ ಗ್ರಾಮಗಳ ಅಧಿದೇವತೆಯ ದೇವಾಲಯದ ಬಳಿ ಪ್ರತಿಷ್ಠಾಪಿಸಲಾಗುತ್ತದೆ. ಆ ಮೂರ್ತಿಗೆ ವಿಶೇಷ ಪೂಜೆ ನೆರವೇರಿಸಲಾಗುತ್ತದೆ.

Advertisement

ನಾಳೆಯ ದಿನ ಸಂಜೆ ದೂರದ ನಗರ, ಪಟ್ಟಣ ಪ್ರದೇಶಗಳಿಂದ ತವರು ಮನೆಗೆ ಬಂದ ಗೃಹಿಣಿಯರು, ಅವರ ಮಕ್ಕಳು ಬಾಲಕಿಯರು, ಪುಟ್ಟ ಪುಟ್ಟ ಕಂದಮ್ಮಗಳು ಹೊಸ ಬಟ್ಟೆ ಉಟ್ಟು ದೊಡ್ಡಗೌರಿ ಮೂರ್ತಿಗೆ ಸಕ್ಕರೆ ಆರತಿಯೊಂದಿಗೆ ಬೆಳಗಲು ತೆರಳುವುದು ಸರ್ವೆ ಸಾಮಾನ್ಯ. ತಟ್ಟೆಯಲ್ಲಿ ಸಕ್ಕರೆ ಆರತಿಯನ್ನು ಇಟ್ಟುಕೊಂಡು ಗೌರಿಗೆ ಬೆಳಗಲು ಮಹಿಳೆಯರು, ಮಕ್ಕಳು ಸಾಲುಸಾಲಾಗಿ ತೆರಳುತ್ತಿರುವ ದೃಶ್ಯವನ್ನು ನೋಡಲು ಎರಡು ಕಣ್ಣುಗಳು ಸಾಲದು.
 
ಕುಂತಿ ರೊಟ್ಟಿಯ ಸವಿಭೋಜನ: ದೊಡ್ಡಗೌರಿಹಬ್ಬವಾದ ಮಾರನೇ ದಿನ ಭಾನುವಾರ ಸಂಜೆ ಕುಂತಿರೊಟ್ಟಿಯ ಸವಿಭೋಜನ ಕೂಟವನ್ನು ಆಚರಿಸಲಾಗುತ್ತದೆ. ಆಯಾ ಗ್ರಾಮಗಳ ಪ್ರತಿಯೊಂದು ಮನೆಯ ಮಾಳಿಗೆಯ ಮೇಲೆ ಬೆಳದಿಂಗಳ ಊಟವನ್ನು ಸವಿಯುವುದನ್ನು ನೋಡಲು ಬಲುಸುಂದರ. ಮನೆಯ ಮಾಳಿಗೆಯನ್ನು ಸಗಣಿಯಿಂದ ಸಾವರಿಸಿ, ರಂಗೋಲಿಯಿಂದ ಚಿತ್ತಾರವನ್ನು ಬಿಡಿಸಿ ಮಧ್ಯ ಭಾಗದಲ್ಲಿ ಸಗಣಿಯಿಂದ ಮಾಡಿದ ಕುಂತಿಯನ್ನು ಪ್ರತಿಷ್ಠಾಪಿಸಿ, ವಿಶೇಷ ಪೂಜೆ ಸಲ್ಲಿಸುವ ಮೂಲಕ ಮನೆಯ
ಮಂದಿಯೆಲ್ಲಾ ಸವಿಭೋಜನವನ್ನು ಸವೆಯುತ್ತಾರೆ.

ವಿಶೇಷ ಖಾದ್ಯ ತಯಾರಿ: ಕುಂತಿರೊಟ್ಟಿಯ ಅಂಗವಾಗಿ ಕಳೆದ 15 ದಿನಗಳ ಹಿಂದೆಯೇ ಕರ್ಜಕಾಯಿ, ಎಳ್ಳು ಹಚ್ಚಿದ ಸಜ್ಜೆರೊಟ್ಟಿ, ಅತ್ತಿರಸ, ಗಾರಿಗೆ, ಮಜ್ಜಿಗೆ ಮೆಣಸಿನಕಾಯಿ, ಕಡ್ಲೆ ಹಿಟ್ಟಿನ ಸಿಹಿ ಅಚ್ಚು, ರವೆವುಂಡೆ ಸೇರಿದಂತೆ ಬಾಯಲ್ಲಿ ನೀರೂರಿಸುವ ಖಾದ್ಯ, ತಿನಿಸುಗಳನ್ನು ತಯಾರಿಸಲಾಗುತ್ತದೆ. ಗೌರಿಹಬ್ಬ ಬಂತೆಂದರೆ ಗ್ರಾಮೀಣ ಪ್ರದೇಶಗಳ ಮನೆಗಳಲ್ಲಿ ಕಳೆದ ಒಂದು ತಿಂಗಳಿಂದಲೇ
ಖಾದ್ಯ ತಿನಿಸುಗಳ ತಯಾರಿ ಮತ್ತು ಹೊಸ ಬಟ್ಟೆ ಖರೀದಿ ಜೋರಾಗಿರುತ್ತದೆ. ಅಲ್ಲದೇ, ಖಾದ್ಯ ತಿನಿಸುಗಳನ್ನು ಕುಂತಿರೊಟ್ಟಿಯ ದಿನ ಸಾಮೂಹಿಕವಾಗಿ ಸವಿಭೋಜನ ಸವೆದು ಮಾಳಿಗೆಯ ಮೇಲೆ ಪಟಾಕಿ ಸಿಡಿಸಿ ಮನೆಯ ಮಂದಿಯೆಲ್ಲ ದೊಡ್ಡಗೌರಿ ಹಬ್ಬವನ್ನು ಆಚರಿಸುತ್ತಾರೆ. ಮನೆಯ ಮಂದಿಯೆಲ್ಲ ಮಾಳಿಗೆಯ ಮೇಲೆ ಹತ್ತಿ ಸಾಮೂಹಿಕ ಭೋಜನ ಸೇವಿಸುತ್ತಾರೆ. ದೂರದ ಪಟ್ಟಣ, ನಗರಗಳಿಂದ ಆಗಮಿಸುವ ಮಗಳು, ಅಳಿಯ ಹಾಗೂ ಮೊಮ್ಮಕ್ಕಳೊಂದಿಗೆ ಪೋಷಕರು ಕಾಲ ಕಳೆಯುವುದೇ ದೊಡ್ಡಗೌರಿ ಹಬ್ಬದ ವಿಶೇಷ.

ಈ ಪದ್ಧತಿ ಪೂರ್ವ ಕಾಲದಿಂದಲೂ ಬಳುವಳಿಯಾಗಿ ಬಂದಿದ್ದು, ಇಂದಿನ ಆಧುನಿಕ ದಿನಗಳಲ್ಲೂ ಆಚರಿಸುತ್ತಿರುವುದು ವಿಶೇಷವಾಗಿದೆ. ಇನ್ನು ಕೆಲ ಗ್ರಾಮಗಳಲ್ಲಿ ಗೌರಿಹುಣ್ಣಿಮೆ ಆರಂಭದಿಂದಲೂ ಮುಂದಿನ ಮೂರು ದಿನಗಳ ಕಾಲ ಭಜನೆ, ವಿಶೇಷ ಪೂಜೆ ಸೇರಿದಂತೆ ಇತರೆ ಸಾಂಪ್ರದಾಯಿಕ ಆಚರಣೆಗಳನ್ನು ಈ ಹಬ್ಬದ ವಿಶೇಷವಾಗಿದೆ.

ದೊಡ್ಡಗೌರಿ ಹಬ್ಬ ಹೈಕ ಭಾಗದ ವಿಶೇಷ ಹಬ್ಬವಾಗಿದೆ. ಮಹಿಳೆಯರಿಗೆ ಅತ್ಯಂತ ಪ್ರಿಯವಾದ ಹಬ್ಬ. ಹಬ್ಬದ ನಿಮಿತ್ತ ವರ್ಷಕ್ಕೊಮ್ಮೆ ಗಂಡನ ಮನೆಯಿಂದ ತವರು ಮನೆಗೆ ಮಹಿಳೆಯರು, ಗೃಹಿಣಿಯರು ಬರುತ್ತಾರೆ. ಸಕ್ಕರೆ  ರತಿಯೊಂದಿಗೆ ಮಹಿಳೆಯರು ಸಾಲು ಸಾಲಾಗಿ ತೆರಳಿ ದೊಡ್ಡಗೌರಿಗೆ ಬೆಳಗುವುದು ಮತ್ತು ಮಾರನೇ ದಿನ ಮನೆಯ ಮಾಳಿಗೆಯ ಮೇಲೆ ಕುಟುಂಬದ ಎಲ್ಲ ಸದಸ್ಯರು ಸೇರಿ ಬೆಳದಿಂಗಳ ಬೆಳಕಿನಲ್ಲಿ ಕುಂತಿರೊಟ್ಟಿಯ ಸವಿಭೋಜನ ಸವೆಯುವುದೇ ಹಬ್ಬದ ವಿಶೇಷ. ಎಷ್ಟೇ ಒತ್ತಡಗಳಿದ್ದರೂ ಈ ಹಬ್ಬದಲ್ಲಿ ಮಾತ್ರ ಮಹಿಳೆಯರು ಎಲ್ಲವನ್ನೂ ಮರೆತು ಹಬ್ಬವನ್ನು ಸಂಭ್ರಮಿಸುತ್ತಾರೆ.
 ಅಂಬಿಕ, ಬಳ್ಳಾರಿ ನಗರ ನಿವಾಸಿ.

ಕಳೆದ ವರ್ಷ ಬರಗಾಲ ಆವರಿಸಿದ್ದರಿಂದ ದೊಡ್ಡಗೌರಿ ಹಬ್ಬದಲ್ಲಿ ನಿರೀಕ್ಷಿತ ಪ್ರಮಾಣದಲ್ಲಿ ವ್ಯಾಪಾರ ಆಗಿರಲಿಲ್ಲ. ಆದರೆ, ಈ ಬಾರಿ ಬರ ಇದ್ದರೂ ಅದರ ಎಫೆಕ್ಟ್ ಅಷ್ಟಾಗಿ ಬಿದ್ದಿಲ್ಲ. ಹೀಗಾಗಿ ಪ್ರಸಕ್ತ ವರ್ಷ ದೊಡ್ಡಗೌರಿ ಹಬ್ಬದಲ್ಲಿ ಸಕ್ಕರೆ ಆರತಿ ವ್ಯಾಪಾರ ಒಂದಷ್ಟು ಮೇಲು. ಬಳ್ಳಾರಿ ನಗರ ಸೇರಿದಂತೆ ತಾಲೂಕಿನ ರೂಪನಗುಡಿ, ಮೋಕಾ ಹೋಬಳಿ ವ್ಯಾಪ್ತಿಯ ಗ್ರಾಮಗಳಿಂದ ಹೆಚ್ಚಿನ ಜನರು ಸಕ್ಕರೆ ಆರತಿಯನ್ನು ಖರೀದಿಸುತ್ತಾರೆ. ಬಹುತೇಕವಾಗಿ ಮಹಿಳೆಯರೇ ಹೆಚ್ಚು ವ್ಯಾಪಾರ ಮಾಡುವುದು ಹಬ್ಬದ ವಿಶೇಷ.
 ಪಾರ್ವತಿ, ಸಕ್ಕರೆ ಆರತಿ ಮಾರಾಟಗಾರರು.

Advertisement

Udayavani is now on Telegram. Click here to join our channel and stay updated with the latest news.

Next