Advertisement

ಕೋವಿಡ್‌ ಆ್ಯಪ್‌ ಬಳಸಿ ಮಾಹಿತಿ ಸಂಗ್ರಹಿಸಿ

04:15 PM May 23, 2020 | Suhan S |

ಕೊಪ್ಪಳ: ಕೋವಿಡ್‌-19 ಸೋಂಕು ಹರಡುವಿಕೆ ನಿಯಂತ್ರಣ, ಸೋಂಕಿತರ ಪ್ರಾಥಮಿಕ ಮತ್ತು ದ್ವಿತೀಯ ಸಂಪರ್ಕದಲ್ಲಿದ್ದ ವ್ಯಕ್ತಿಗಳನ್ನು ಪತ್ತೆ ಹಚ್ಚಲು ಹಾಗೂ ಬೇರೆ ರಾಜ್ಯ, ಜಿಲ್ಲೆಗಳಿಂದ ಬರುವ ಕಾರ್ಮಿಕರು, ನಾಗರಿಕರನ್ನು ಗುರುತಿಸಿ ಕ್ವಾರಂಟೈನ್‌ಗೆ ಒಳಪಡಿಸಲುನೆರವಾಗುವ ಕೋವಿಡ್‌-19 ಸಂಬಂಧಿಸಿದ ಆ್ಯಪ್‌ಗ್ಳನ್ನು ಸಂಬಂಧಿಸಿದ ಎಲ್ಲ ಅಧಿಕಾರಿಗಳು ಬಳಸಬೇಕು. ಅದರಲ್ಲಿ ಸೂಕ್ತ ಮಾಹಿತಿಯನ್ನು ಸಂಗ್ರಹಿಸಬೇಕು ಎಂದು ಜಿಲ್ಲಾಧಿಕಾರಿ ಪಿ. ಸುನೀಲ್‌ ಕುಮಾರ್‌ ತಿಳಿಸಿದರು.

Advertisement

ನಗರದ ಜಿಲ್ಲಾ ಪಂಚಾಯತಿ ಜೆ.ಎಚ್‌. ಪಟೇಲ ಸಭಾಂಗಣದಲ್ಲಿ ಶುಕ್ರವಾರ ಜಿಲ್ಲಾ ಮತ್ತು ತಾಲೂಕು ಮಟ್ಟದ ಅಧಿಕಾರಿಗಳಿಗೆ ಆಯೋಜಿಸಿದ್ದ ಕೋವಿಡ್‌ -19 ಆ್ಯಪ್‌ ತರಬೇತಿ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು. ಕಾಂಟ್ಯಾಕ್ಟ್ ಟ್ರೇಸಿಂಗ್‌ ಆ್ಯಪ್‌, ಕ್ವಾರಂಟೈನ್‌ ವಾಚ್‌ ಆ್ಯಪ್‌, ಹೆಲ್ತ್‌ ವಾಚ್‌ ಆ್ಯಪ್‌ ಸೇರಿದಂತೆ ಕೋವಿಡ್‌-19 ಪತ್ತೆ ಮತ್ತು ನಿಯಂತ್ರಣಕ್ಕಾಗಿ ಅಭಿವೃದ್ಧಿಪಡಿಸಿರುವ ಆ್ಯಪ್‌ಗ್ಳಲ್ಲಿ ಅಧಿಕಾರಿಗಳು ಸರಿಯಾದ ಮಾಹಿತಿ ನೀಡಬೇಕು. ಕ್ವಾರಂಟೈನ್‌ ಕೇಂದ್ರಗಳಲ್ಲಿರುವವರ ಹೆಸರು, ಮೊಬೈಲ್‌ ಸಂಖ್ಯೆ, ಆಧಾರ್‌ ಸಂಖ್ಯೆ, ವಿಳಾಸ ಮತ್ತು ಅವರೊಂದಿಗೆ ಪ್ರಯಾಣ ಮಾಡಿದವರ ವಿವರ ಸಂಗ್ರಹಿಸಬೇಕು. ಕೆಲವರು ಯಾವುದೋ ಮೊಬೈಲ್‌ ಸಂಖ್ಯೆ ನೀಡಿ ತಪ್ಪು ಮಾಹಿತಿ ನೀಡುತ್ತಾರೆ. ಆದ್ದರಿಂದ ಅವರ ಮೊಬೈಲ್‌ ಸಂಖ್ಯೆಯನ್ನು ಪಡೆದ ನಂತರ ಸ್ಥಳದಲ್ಲಿಯೇ ಡಯಲ್‌ ಮಾಡಿ ಖಾತ್ರಿ ಪಡಿಸಿಕೊಳ್ಳಿ. ಮುಖ್ಯವಾಗಿ ಸಾರ್ವಜನಿಕ ಸಾರಿಗೆ ಬಸ್‌ಗಳಲ್ಲಿ ಪ್ರಯಾಣಿಸುವಾಗ ಪ್ರಯಾಣಿಕರು ನೀಡುವ ಮೊಬೈಲ್‌ ಸಂಖ್ಯೆಯ ನೈಜತೆಯನ್ನು ಸ್ಥಳದಲ್ಲಿಯೇ ಪರಿಶೀಲಿಸಿ. ಗ್ರಾಮೀಣಕ್ಕೆ ಸಮೀಕ್ಷೆಗೆ ತೆರಳಿದಾಗ ಇಂತಹ ಸಮಸ್ಯೆ ಎದುರಾಗುತ್ತಿದ್ದು, ಈ ಬಗ್ಗೆ ಅಧಿಕಾರಿಗಳು ಎಚ್ಚರ ವಹಿಸಬೇಕು ಎಂದರು.

ಜಿಲ್ಲೆಯಲ್ಲಿ ಕೋವಿಡ್‌ ಸೋಂಕು ಪ್ರಕರಣಗಳು ಪತ್ತೆಯಾದ ಹಿನ್ನೆಲೆಯಲ್ಲಿ ಆರೋಗ್ಯ, ಕಂದಾಯ ಇಲಾಖೆ, ನಗರ ಸ್ಥಳೀಯ ಸಂಸ್ಥೆಗಳು ಹೆಚ್ಚು ಕ್ರಮ ವಹಿಸಬೇಕು. ಸೋಂಕು ಇತರರಿಗೆ ಹರಡುವುದನ್ನು ತಡೆಯುವ ಜೊತೆಗೆ ಅನ್ಯ ಜಿಲ್ಲೆ, ರಾಜ್ಯದಿಂದ ಆಗಮಿಸಿದ ನಾಗರಿಕರನ್ನು ಗುರುತಿಸಿ ಅವರನ್ನು ಕಡ್ಡಾಯ ಕ್ವಾರಂಟೈನ್‌ಗೆ ಒಳಪಡಿಸಬೇಕು. ಸೋಂಕಿತರ ಪ್ರಾಥಮಿಕ ಸಂಪರ್ಕಕ್ಕೆ ಬಂದವರನ್ನು ಗುರುತಿಸುವುದು ಸುಲಭ. ಆದರೆ ದ್ವಿತೀಯ ಸಂಪರ್ಕಕ್ಕೆ ಬಂದವರನ್ನು ಪತ್ತೆ ಹಚ್ಚುವುದು ತುಸು ಕಷ್ಟದ ಕೆಲಸ. ಬಹುತೇಕರು ಜಿಲ್ಲೆಗೆ ಆಗಮಿಸುವಾಗ ಸೇವಾ ಸಿಂಧುವಿನಲ್ಲಿ ಅರ್ಜಿ ಸಲ್ಲಿಸಿ, ಡಿಸಿ ಅನುಮತಿ ಮೇರೆಗೆ ಬಂದವರಿದ್ದಾರೆ. ಅವರ ಮಾಹಿತಿ ನಮಗೆ ದೊರೆಯುತ್ತದೆ. ಆದರೆ ಸೇವಾಸಿಂಧುವಿನಲ್ಲಿ ಅರ್ಜಿ ಸಲ್ಲಿಸದೆ, ಚೆಕ್‌ಪೋಸ್ಟ್‌ ತಪ್ಪಿಸಿ ಬೇರೆ ದಾರಿಯಿಂದ ಬಂದಿರುವವರನ್ನು ಗುರುತಿಸುವುದು ಮುಖ್ಯವಾಗಿದೆ. ಅಂತಹವರ ಕುರಿತು ಹೆಚ್ಚಿನ ಜವಾಬ್ದಾರಿಯಿಂದ ಪರಿಶೀಲನೆ ನಡೆಸಿ ಮಾಹಿತಿ ಸಂಗ್ರಹಿಸಿ ಎಂದರು.

ಜಿಲ್ಲೆಯಲ್ಲಿ ಎಲ್ಲ ಖಾಸಗಿ ಔಷಧಿಅಂಗಡಿ ತೆರೆಯುವಂತೆ ಆದೇಶಿಸಿದೆ. ಆದರೂ ಕೆಲವರು ಇದನ್ನು ಉಲ್ಲಂಘಿಸಿ ಔಷಧಿ ಅಂಗಡಿ ಮುಚ್ಚಿರುತ್ತಾರೆ. ಅವರಿಗೆ ನೋಟಿಸ್‌ ನೀಡಿ, ಅಂಗಡಿ ತೆರೆಯಲು 2 ದಿನ ಕಾಲಾವಕಾಶ ನೀಡಿ. ನಂತರವೂ ತೆರೆಯದಿದ್ದರೆ ಅಂತವರ ವಿರುದ್ಧ ಕಾನೂನು ಕ್ರಮ ತೆಗೆದುಕೊಳ್ಳಿ. ಜಿಲ್ಲೆಯಿಂದ ಹೊರರಾಜ್ಯದ ಬಹುತೇಕ ಕಾರ್ಮಿಕರನ್ನು ಅವರ ಊರಿಗೆ ಕಳುಹಿಸಲಾಗಿದೆ. ಜಿಲ್ಲೆಯ ಕೆಲವು ಕಂಪನಿಗಳಲ್ಲಿ ಇನ್ನೂ ಅನೇಕ ಹೊರ ರಾಜ್ಯದ ಕಾರ್ಮಿಕರು ಉಳಿದುಕೊಂಡಿದ್ದಾರೆ.

ಆ ಕಾರ್ಮಿಕರು ಅವರ ಊರುಗಳಿಗೆ ತೆರಳಲು ಇಚ್ಛಿಸಿದರೆ ಅವರು ಮಾಹಿತಿ ನೀಡಿದಲ್ಲಿ ಅವರ ಊರುಗಳಿಗೆ ಕಳುಹಿಸಿಕೊಡಲು ಜಿಲ್ಲಾಡಳಿತ ಸಿದ್ಧವಾಗಿದೆ. ಇನ್ನೂ ಬೇರೆ ರಾಜ್ಯ, ಜಿಲ್ಲೆಗಳಿಂದ ಜಿಲ್ಲೆಯ ಕ್ವಾರಂಟೈನ್‌ ಕೇಂದ್ರಗಳಲ್ಲಿರುವ ಕಾರ್ಮಿಕರ ಆಧಾರ್‌ ಸಂಖ್ಯೆ ಸಹಿತ ಮಾಹಿತಿಯನ್ನು ನೀಡಿದಲ್ಲಿ ಅವರಿಗೆ ಪಡಿತರ ನಿಡುವ ವ್ಯವಸ್ಥೆ ಕಲ್ಪಿಸಲಾಗುವುದು ಎಂದರು. ಎಡಿಸಿ ಎಂ.ಪಿ.ಮಾರುತಿ ಮಾತನಾಡಿದರು. ಜಿಪಂ ಸಿಇಒ ರಘುನಂದನ್‌ ಮೂರ್ತಿ, ಎಸಿ ಸಿ.ಡಿ. ಗೀತಾ ಸೇರಿದಂತೆ ಜಿಲ್ಲೆಯ ಎಲ್ಲ ತಾಲೂಕುಗಳ ತಹಶೀಲ್ದಾರರು, ವಿವಿಧ ಇಲಾಖೆಗಳ ಜಿಲ್ಲಾಮಟ್ಟದ ಅಧಿಕಾರಿಗಳು, ನಗರ ಸ್ಥಳೀಯ ಸಂಸ್ಥೆಗಳ ಅಧಿಕಾರಿಗಳು ಉಪಸ್ಥಿತರಿದ್ದರು.

Advertisement

ಆರೋಗ್ಯ ಸೇತು ಆ್ಯಪ್‌ನ್ನು ಎಲ್ಲರೂಕಡ್ಡಾಯವಾಗಿ ಬಳಸಬೇಕು. ಆರೋಗ್ಯ ಸೇತು ಆ್ಯಪ್‌ನಲ್ಲಿನ ಜಿಲ್ಲೆಯ ಮಾಹಿತಿಯನ್ನು ಕ್ರೋಢೀಕರಿಸಿ ಸೋಂಕಿನ ಲಕ್ಷಣವಿರುವ ವ್ಯಕ್ತಿಗಳನ್ನು ಗುರುತಿಸಬೇಕು. ಸಾರ್ವಜನಿಕರು ಸೋಂಕಿನ ಲಕ್ಷಣಗಳನ್ನು ಹೊಂದಿದ್ದು, ಆಸ್ಪತ್ರೆಗೆ ಹೋಗಲು ಭಯವಿದ್ದರೆ ಆಪ್ತಮಿತ್ರ ಸಹಾಯವಾಣಿ ಸಂಖ್ಯೆ: 14410ಗೆ ಕರೆಮಾಡಿ ತಮ್ಮ ಸಂದೇಹ ನಿವಾರಿಸಿಕೊಳ್ಳಬಹುದು. –ಸುನೀಲ್‌ ಕುಮಾರ, ಜಿಲ್ಲಾಧಿಕಾರಿ

Advertisement

Udayavani is now on Telegram. Click here to join our channel and stay updated with the latest news.

Next