Advertisement

ಸ್ಮಾರ್ಟ್ ನಗರಿಯಲ್ಲಿ ಉದ್ಯಾನಗಳಿಗೂ ಸಿಗಲಿ ಪ್ರಾಧಾನ್ಯ 

04:27 PM May 06, 2018 | Team Udayavani |

ಉದ್ಯಾನಗಳು ಪ್ರಸ್ತುತ ನಗರ ಜೀವನದ ಮೂಲ ಆವಶ್ಯಕತೆಗಳಲ್ಲೊಂದಾಗಿವೆ. ಇವು ನಗರವಾಸಿಗಳಿಗೆ ಒಂದಷ್ಟು ಹೊತ್ತು ಆರಾಮದಾಯಕವಾಗಿ ಕಳೆಯಲು ಆಹ್ಲಾದಕರ ವಾತಾವರಣ ಒದಗಿಸುತ್ತವೆ ಮಾತ್ರವಲ್ಲದೆ ನಗರದ ಸೌಂದರ್ಯ ಹಾಗೂ ವರ್ಚಸ್ಸನ್ನು ಕೂಡ ಹೆಚ್ಚಿಸುತ್ತದೆ. ದೇಶದ ಅನೇಕ ನಗರಗಳು ಉದ್ಯಾನಗಳಿಂದಲೇ ಗುರುತಿಸಿಕೊಂಡಿವೆ.

Advertisement

ಬೆಂಗಳೂರು ಉದ್ಯಾನಗಳ ನಗರವೆಂಬ ಪ್ರತೀತಿಯನ್ನು ಪಡೆದುಕೊಂಡಿದೆ. ಆದರೆ ಕಡಲತಡಿಯ ನಗರ ಮಂಗಳೂರು ಉದ್ಯಾನ ಸೌಲಭ್ಯಗಳಲ್ಲಿ ಬಹಳಷ್ಟು ಹಿಂದುಳಿದಿದೆ.

ಕದ್ರಿ ಪಾರ್ಕ್‌ ಏಕೈಕ ಪ್ರಧಾನ ಉದ್ಯಾನ
ಮಂಗಳೂರು ನಗರದಲ್ಲಿ ಮೆಡಿಕಲ್‌ ಟೂರಿಸಂ, ಧಾರ್ಮಿಕ ಟೂರಿಸಂ ಸಹಿತ ಪ್ರವಾಸೋದ್ಯಮ ಪ್ರವರ್ಧಮಾನದಲ್ಲಿದೆ.
ಶೈಕ್ಷಣಿಕ ಹಬ್‌, ಸುಸಜ್ಜಿತ ಆರೋಗ್ಯ ಸೇವೆಗಳ ತಾಣವಾಗಿಯೂ ನಗರ ಗುರುತಿಸಿಕೊಂಡಿದೆ. ಹೊರದೇಶಗಳಿಂದ ಹಡಗು ಮೂಲಕ ಬಹಳಷ್ಟು ಪ್ರವಾಸಿಗರು ಮಂಗಳೂರಿಗೆ ಬಂದು ಒಂದು ದಿನ ಪೂರ್ತಿ ಇಲ್ಲಿ ಕಳೆಯುತ್ತಾರೆ. ಆದರೆ ಮಂಗಳೂರು ನಗರದಲ್ಲಿ ಪ್ರಸ್ತುತ ಇರುವ ಪ್ರಧಾನ ಉದ್ಯಾನವೆಂದರೆ ಕದ್ರಿ ಪಾರ್ಕ್‌ ಮಾತ್ರ. ಪಿಲಿಕುಳ ನಿಸರ್ಗಧಾಮ ಉದ್ಯಾನದ ಪರಿಕಲ್ಪನೆಗಿಂತ ಪ್ರವಾಸಿ ಮತ್ತು ಶೈಕ್ಷಣಿಕ ತಾಣವಾಗಿ ಹೆಚ್ಚು ಗುರುತಿಸಿಕೊಂಡಿದೆ. ಇವುಗಳನ್ನು ಹೊರತುಪಡಿಸಿದರೆ ಪುರಭವನದ ಮುಂಭಾಗದ ಗಾಂಧಿ ಪಾರ್ಕ್‌, ಬಾವುಟಗುಡ್ಡೆಯ ಟಾಗೋರ್‌ ಪಾರ್ಕ್‌, ನೆಹರೂ ಮೈದಾನದ ಬಳಿ ಇರುವ ಕಾರ್ಪೊರೇಶನ್‌ ಬ್ಯಾಂಕ್‌ ಪ್ರವರ್ತಿತ ಉದ್ಯಾನ, ಮಣ್ಣಗುಡ್ಡ ಪಾರ್ಕ್‌, ವೆಲೆನ್ಸಿಯಾ ಸಹಿ ತ ಕೆಲವು ಕಿರು ಉದ್ಯಾನಗಳಿವೆ. ಇವುಗಳು ಸೀಮಿತ ಸ್ಥಳಾವಕಾಶವನ್ನು ಹೊಂದಿರುವುದರಿಂದ ಆಕರ್ಷಣೀಯವಾಗಿ ಅಭಿವೃದ್ಧಿ ಪಡಿಸಲು ಅಡಚಣೆಯಾಗಿದೆ.

ಕದ್ರಿ ಪಾರ್ಕ್‌ ಮೂಲದಲ್ಲಿ ಸುಮಾರು 20 ಎಕ್ರೆ ಜಾಗ ಹೊಂದಿತ್ತು. ಕೆಲವು ಜಾಗವನ್ನು ಇತರ ಉದ್ದೇಶಗಳಿಗೆ ನೀಡಿರುವ ಪರಿಣಾಮ ಪ್ರಸ್ತುತ ವಿಸ್ತೀರ್ಣ ಕಡಿಮೆಯಾಗಿದೆ. ಈಗ ಇಲ್ಲಿ ಸಂಗೀತ ಕಾರಂಜಿಗಳನ್ನು ಅಳವಡಿಸಿ ಒಂದಷ್ಟು ಆಕರ್ಷಣೀಯಗೊಳಿಸಲಾಗಿದೆ. ಇದನ್ನು ಇನ್ನಷ್ಟು ಆಕರ್ಷಕ ಉದ್ಯಾನವನವಾಗಿ ರೂಪಿಸಲು ಬಹಳಷ್ಟು ಅವಕಾಶವಿದ್ದು, ಆ ನಿಟ್ಟಿನಲ್ಲಿ ಪ್ರಯತ್ನಗಳು ನಡೆಯಬೇಕಾಗಿವೆ.

ಮಿನಿ ಪಾರ್ಕ್‌ಗಳಿಗೆ ಅವಕಾಶವಿದೆ
ನಗರದಲ್ಲಿ ಹಿಂದೆ ಪಾರ್ಕ್‌ಗಳಿಗೆ ಜಾಗ ಮೀಸಲಿರಿಸಿದ್ದರೂ ಆಡಳಿತರೂಢರ ನಿರ್ಲಕ್ಷ್ಯದಿಂದ ಅದು ಇತರ ಉದ್ದೇಶಗಳಿಗೆ
ಅಥವಾ ಇನ್ಯಾರದ್ದೊ ಪಾಲಾಗಿದೆ. ಈಗ ನಗರ ಬೆಳೆದಂತೆಲ್ಲ ಉದ್ಯಾನಗಳ ಅಗತ್ಯ ಮತ್ತು ಮಹತ್ವ ಅರಿವಾಗತೊಡಗಿದೆ. ಆದರೆ ಕಾಲ ಮಿಂಚಿದೆ. ಪ್ರಸ್ತುತ ನಗರದೊಳಗೆ ಉದ್ಯಾನಗಳಿಗೆ ಜಾಗ ಅತ್ಯಂತ ದುರ್ಲಭವಾಗಿದೆ.

Advertisement

ದೊಡ್ಡ ಗಾತ್ರದ ಉದ್ಯಾನಗಳಿಗೆ ಮಂಗಳೂರಿನಲ್ಲಿ ಜಾಗದ ಸಮಸ್ಯೆ ಇದೆ. ಇದಕ್ಕೆ ಪರ್ಯಾಯವಾಗಿ ಅಲ್ಲಲ್ಲಿ ಮಿನಿ
ಉದ್ಯಾನಗಳನ್ನು ಅಭಿವೃದ್ಧಿಪಡಿಸಬಹುದಾಗಿದೆ. ಇಂತಹ ಪ್ರಯತ್ನಗಳು ನಗರದಲ್ಲಿ ಕೆಲವೆಡೆ ಆರಂಭವಾಗಿದೆ. ನಗರದ ಬಿಜೈಯಲ್ಲಿ ಬಹಳಷ್ಟು ವರ್ಷಗಳಿಂದ ಕಸದ ಕೊಂಪೆಯಾಗಿ ಬಳಕೆಯಾಗುತ್ತಿದ್ದ ಜಾಗ ಸ್ಥಳೀಯ ಕಾರ್ಪೊರೇಟರ್‌ ಹಾಗೂ ದಾನಿಗಳ ಆಸಕ್ತಿಯಿಂದ ಇಂದು ಆಕರ್ಷಕ ಮಿನಿ ಪಾರ್ಕ್‌ ಆಗಿ ರೂಪುಗೊಂಡಿದೆ. ಇಲ್ಲಿ ಪುಟಾಣಿಗಳಿಗೆ ಆಟವಾಡಲು ಒಂದಷ್ಟು ಜಾಗ ಮೀಸಲಿರಿಸಲಾಗಿದೆ. ಜತೆಗೆ ಹಿರಿಯ ನಾಗರಿಕರು ಒಂದಷ್ಟು ಹೊತ್ತು ಕುಳಿತು ಆರಾಮ ಪಡೆಯಲು ವ್ಯವಸ್ಥೆ ರೂಪಿಸಲಾಗಿದೆ. ಉದ್ಯಾನದಲ್ಲಿ ಹಸುರು ಕಾಯ್ದುಕೊಳ್ಳುವ ನಿಟ್ಟಿನಲ್ಲಿ ಪ್ರಯತ್ನಗಳನ್ನು ಮಾಡಲಾಗಿದೆ. ಇದರೊಂದಿಗೆ ಕರಂಗಲ್ಪಾಡಿ ಬಳಿ ಅರೈಸ್‌ ಅವೇಕ್‌ ಮಿನಿ ಪಾರ್ಕ್‌ ಆಕರ್ಷಕವಾಗಿ ರೂಪುಗೊಂಡಿದೆ. ಕದ್ರಿ ಸಿಟಿ ಆಸ್ಪತ್ರೆ ಬಳಿ ಮಿನಿಪಾರ್ಕ್‌ ತಲೆಯೆತ್ತಿದೆ. 

ವಾರ್ಡ್‌ಗೊಂದು ಪಾರ್ಕ್‌
ಮಂಗಳೂರಿನಲ್ಲಿ 60 ವಾರ್ಡ್‌ಗಳಿವೆ. ಎಲ್ಲ ವಾರ್ಡ್‌ಗಳಲ್ಲೂ ಸೂಕ್ತ ಜಾಗ ಹುಡುಕಿ ಬಿಜೈ , ಕರಂಲ್ಪಾಡಿ ಮಾದರಿಯಲ್ಲಿ ಮಿನಿಪಾರ್ಕ್‌ ನಿರ್ಮಿಸುವುದು ಅಸಾಧ್ಯವಾದ ಕೆಲಸವೇನೂ ಅಲ್ಲ . ಬಹಳಷ್ಟು ಕಡೆಗಳಲ್ಲಿ ಈಗಾಗಲೂ ಕಸದಕೊಂಪೆಗಳಿವೆ. ಈಗ ಮನೆಮನೆ ತ್ಯಾಜ್ಯ ಸಂಗ್ರಹ ನಡೆಯುತ್ತಿದ್ದು, ಸಾರ್ವಜನಿಕ ಸ್ಥಳಗಳಲ್ಲಿ ಕಸ ಹಾಕಲು ಅವಕಾಶವಿಲ್ಲ . ಆದರೂ ಕೆಲವು ಕಡೆ ಸಾರ್ವಜನಿಕ ಪ್ರದೇಶಗಳಲ್ಲಿರುವ ಖಾಲಿ ಜಾಗಗಳಲ್ಲಿ ಕಸಕಡ್ಡಿ, ಕಟ್ಟಡಗಳ ತ್ಯಾಜ್ಯಗಳನ್ನು ಹಾಕುವುದು ಈಗಲೂ ನಡೆಯುತ್ತಿದೆ. ಅಂತಹ ಸ್ಥಳಗಳನ್ನು ಗುರುತಿಸಿ ಸ್ಥಳೀಯವಾಗಿ ದಾನಿಗಳ ನೆರವು ಪಡೆದುಕೊಂಡು ಮಿನಿಪಾರ್ಕ್‌ ನಿರ್ಮಿಸಿದರೆ ತ್ಯಾಜ್ಯ ಹಾಕುವ ಸಮಸ್ಯೆಯೂ ನಿವಾರಣೆಯಾಗುತ್ತದೆ. ವಾರ್ಡ್‌ನ ಸೌಂದರ್ಯವೂ ಹೆಚ್ಚುತ್ತದೆ. ಆಯಾಯ ಭಾಗದ ಕಾರ್ಪೊರೇಟರ್‌ಗಳು ಆಸಕ್ತಿ ವಹಿಸಿದರೆ ಇದು ಸಾಕಾರಗೊಳ್ಳಲು ಸಾಧ್ಯ. ಉತ್ತಮ ಕಾರ್ಯಗಳಿಗೆ ದಾನಿಗಳು ಖಂಡಿತವಾಗಿಯೂ ಇರುತ್ತಾರೆ. ಇಂತಹ ಪ್ರಯತ್ನಗಳು ನಗರದ ಎಲ್ಲ ವಾರ್ಡ್‌ಗಳಲ್ಲೂ ನಡೆದರೆ ಸ್ಥಳೀಯವಾಗಿ ಜನರಿಗೆ ಮಿನಿ ಪಾರ್ಕ್‌ ಲಭಿಸುತ್ತದೆ. ಜತೆಗೆ ನಗರದ ಸೌಂದರ್ಯವು ಹೆಚ್ಚುತ್ತದೆ.

ಕೇಶವ ಕುಂದರ್‌

Advertisement

Udayavani is now on Telegram. Click here to join our channel and stay updated with the latest news.

Next