Advertisement

ತೋಟಗಾರಿಕೆ ರೈತರಿಗೆ ನೀರಿನ ಟ್ಯಾಂಕರ್‌ ಭಾಗ್ಯ

08:03 AM Jul 22, 2017 | |

ಬೆಂಗಳೂರು: ಕೃಷಿ ಭಾಗ್ಯದ ಮೂಲಕ ಕೃಷಿ ಹೊಂಡಗಳನ್ನು ನಿರ್ಮಿಸಿ ರೈತರ ನೆರವಿಗೆ ಬಂದಿದ್ದ ರಾಜ್ಯ ಸರ್ಕಾರ ಇದೀಗ ಕಳೆದ ಮೂರು ವರ್ಷಗಳ ಸತತ ಬರಗಾಲದಿಂದ ನಲುಗಿರುವ ತೋಟಗಾರಿಕೆ ಬೆಳೆಗಾರರು ತಮ್ಮ ಬೆಳೆಗಳಿಗೆ ನೀರೊದಗಿಸಲು “ನೀರಿನ ಟ್ಯಾಂಕರ್‌ ಭಾಗ್ಯ’ ಕಲ್ಪಿಸಲು ಮುಂದಾಗಿದೆ.

Advertisement

ಬರಪೀಡಿತ ಪ್ರದೇಶಗಳಿಗೆ ಟ್ಯಾಂಕರ್‌ ಮೂಲಕ ನೀರು ಪೂರೈಸಿ ತೋಟಗಾರಿಕೆ ಬೆಳೆ ನಾಶವಾಗದಂತೆ ತಡೆಯುವ ಉದ್ದೇಶದಿಂದ ನೀರಿನ ಟ್ಯಾಂಕರ್‌ ಗಳನ್ನು ಖರೀದಿಸಲು ಬೆಳೆಗಾರರಿಗೆ ಶೇ.50 ಸಹಾಯಧನ ಸರ್ಕಾರ ಒದಗಿಸಲಿದೆ. ಇದಕ್ಕಾಗಿ ಪ್ರಸಕ್ತ ವರ್ಷದಲ್ಲಿ ಸುಮಾರು 8 ಕೋಟಿ ರೂ. ಅನುದಾನ ಮೀಸಲಿಟ್ಟಿದ್ದು, ಜುಲೈ ಅಂತ್ಯದೊಳಗೆ ಟ್ಯಾಂಕರ್‌ ಖರೀದಿಗೆ ಸಹಾಯಧನ ನೀಡಲು
ತೋಟಗಾರಿಕೆ ಇಲಾಖೆ ಅರ್ಜಿ ಆಹ್ವಾನಿಸಲಿದೆ. ಕಳೆದ ವರ್ಷದಲ್ಲಿ ಬರಪೀಡಿತವೆಂದು ಘೋಷಿಸಲ್ಪಟ್ಟ ರಾಜ್ಯದ 158ಕ್ಕೂ ಹೆಚ್ಚು ತಾಲೂಕಿನ 1600 ಆಯ್ದ ಬೆಳೆಗಾರರು ಯೋಜನೆಯ ಲಾಭ ಪಡೆದುಕೊಳ್ಳಲಿದ್ದಾರೆ. ಆದರೆ, ಕರಾವಳಿ ಭಾಗದ ನೀರಾವರಿ ಸೌಲಭ್ಯ ಹೊಂದಿರುವ 16 ತಾಲೂಕುಗಳನ್ನು “ನೀರಿನ ಟ್ಯಾಂಕರ್‌ ಭಾಗ್ಯ’ದಿಂದ ಹೊರಗಿಡಲಾಗಿದೆ.

ಸಹಾಯಧನ: ಒಂದು ನೀರಿನ ಟ್ಯಾಂಕರ್‌ ಖರೀದಿಗೆ ಅಂದಾಜು 1.25 ಲಕ್ಷದಿಂದ 1.40 ಲಕ್ಷ ರೂ. ವೆಚ್ಚವಾಗಬಹುದು ಎಂದು ಅಂದಾಜಿಸಿರುವ ತೋಟಗಾರಿಕೆ ಇಲಾಖೆ, ಟ್ಯಾಂಕರ್‌ ಖರೀದಿಗೆ ಸರ್ಕಾರ ಸಾಮಾನ್ಯ ಬೆಳೆಗಾರರಿಗೆ 50 ಸಾವಿರ ರೂ. ಮತ್ತು ಪರಿಶಿಷ್ಟ ಜಾತಿ ಮತ್ತು ಪಂಗಡದ ಬೆಳೆಗಾರರಿಗೆ ತಲಾ 90 ಸಾವಿರ ರೂ. ಸಹಾಯಧನ ನೀಡಲಿದೆ. ಉಳಿದ ವೆಚ್ಚವನ್ನು ಬೆಳೆಗಾರರೇ
ಭರಿಸಬೇಕು. ಒಂದು ತಾಲೂಕಿನಲ್ಲಿ 10 ಬೆಳೆಗಾರರಿಗೆ ಸಹಾಯಧನ ಸಿಗಲಿದ್ದು, ಮೊದಲು ಅರ್ಜಿ ಸಲ್ಲಿಸಿದವರಿಗೆ ಮೊದಲ ಆದ್ಯತೆ ಮೇರೆಗೆ ಸಹಾಯಧನ ಲಭ್ಯವಾಗಲಿದೆ.

ಸಹಾಯಧನ ಪಡೆಯಲು ಹಲವು ಷರತ್ತುಗಳು:
ನೀರಿನ ಟ್ಯಾಂಕರ್‌ಗೆ ಸಹಾಯಧನ ಪಡೆಯಲು ತೋಟಗಾರಿಕೆ ಇಲಾಖೆಯು ಷರತ್ತುಗಳನ್ನು ವಿಧಿಸಿದ್ದು, ಸಾಮಾನ್ಯ ವರ್ಗದ ಬೆಳೆಗಾರ ಒಂದು ಹೆಕ್ಟೇರ್‌, ಪರಿಶಿಷ್ಟ ಜಾತಿ ಅಥವಾ ಪಂಗಡದ ಬೆಳೆಗಾರ ಒಂದು ಎಕರೆ ತೋಟ ಹೊಂದಿರಬೇಕು. ಅದು ಅವರ ಹೆಸರಿನಲ್ಲಿರಬೇಕು. ಮುಖ್ಯವಾಗಿ ಸಹಾಯಧನ ಪಡೆಯಲು ಬೆಳೆಗಾರನ ಹೆಸರಿನಲ್ಲಿ ಟ್ರ್ಯಾಕ್ಟರ್‌ ಇರಲೇಬೇಕು. ತೋಟ ಮತ್ತು
ಟ್ರ್ಯಾಕ್ಟರ್‌ ಇಲ್ಲದ ರೈತರು ಅರ್ಜಿ ಸಲ್ಲಿಸಲು ಅರ್ಹರಾಗಿರುವುದಿಲ್ಲ. ನೀರಿನ ಟ್ಯಾಂಕರನ್ನು ತೋಟಗಾರಿಕೆ ಇಲಾಖೆ ನಿಗದಿಪಡಿಸಿ ಪಟ್ಟಿ ಮಾಡಿದ ಕಂಪನಿಗಳಲ್ಲಿ ಸಂಪೂರ್ಣವಾಗಿ ಹಣ ಪಾವತಿಸಿ, ನಂತರ ರಶೀದಿಯನ್ನು ಇಲಾಖೆಗೆ ಸಲ್ಲಿಸಬೇಕು. ಬಳಿಕ ಸಹಾಯಧನದ ಮೊತ್ತವು ಬೆಳೆಗಾರನ ಬ್ಯಾಂಕ್‌ ಖಾತೆಗೆ ಸಲ್ಲಿಕೆಯಾಗಲಿದೆ. ಷರತ್ತು ಪೂರೈಸುವ ಬೆಳೆಗಾರರು ಆಯಾ ತಾಲೂಕುಗಳ ಸಹಾಯಕ
ತೋಟಗಾರಿಕೆ ಅಧಿಕಾರಿಗಳ ಕಚೇರಿಯಲ್ಲಿ ಅರ್ಜಿ ಪಡೆದು, ನಿಗದಿತ ಅವಧಿಯೊಳಗೆ ಅಗತ್ಯ ದಾಖಲೆಗಳೊಂದಿಗೆ ಅರ್ಜಿ ಸಲ್ಲಿಸಬೇಕು.

ಬರದಿಂದಾಗಿ ನೀರಿನ ಕೊರತೆಯಿಂದ ಬೆಳೆ ನಾಶವಾಗಬಾರದು ಎಂದು ಸರ್ಕಾರ ನೀರಿನ ಟ್ಯಾಂಕರ್‌ಗೆ ಖರೀದಿಸುವ ಬೆಳೆಗಾರನಿಗೆ
ಸಹಾಯಧನ ನೀಡುತ್ತಿದೆ. ಆಯಾ ತಾಲೂಕು ಸಹಾಯಕ ತೋಟಗಾರಿಕೆ ಇಲಾಖೆ ಅಧಿಕಾರಿಗಳನ್ನು ಸಂಪರ್ಕಿಸಿ ಅಗತ್ಯ ದಾಖಲೆ
ಸೇರಿ ಹೆಚ್ಚಿನ ಮಾಹಿತಿ ಪಡೆದು ರೈತರು ಅರ್ಜಿ ಸಲ್ಲಿಸಬೇಕು. ಶೀಘ್ರವೇ ಇಲಾಖೆ ಈ ಕುರಿತು ಅರ್ಜಿ ಆಹ್ವಾನಿಸಲಿದೆ.
ಪರಶಿವಮೂರ್ತಿ, ಅಪರ ನಿರ್ದೇಶಕರು (ಹಣ್ಣುಗಳು), ತೋಟಗಾರಿಕೆ ಇಲಾಖೆ

Advertisement

ನೀರಿನ ಅಭಾವ ನೀಗಿಸಲು ಸರ್ಕಾರ ಕೈಗೊಂಡ ನೀರಿನ ಟ್ಯಾಂಕರ್‌ ಭಾಗ್ಯ ಸ್ವಾಗತಾರ್ಹ. ಆದರೆ, ಶೇ.75ರಷ್ಟು ಸಹಾಯಧನ ನೀಡಬೇಕಿತ್ತು. ಅದರಲ್ಲೂ ಮೊದಲು ರೈತನೇ ಹಣ ಹೂಡಿಕೆ ಮಾಡಿ ಟ್ಯಾಂಕರ್‌ ಖರೀದಿಸಿದ ಬಳಿಕ, ಸಹಾಯಧನ ಬಿಡುಗಡೆ ಮಾಡುವುದು ಸರಿಯಲ್ಲ. ಇಲಾಖೆ ಅಧಿಕಾರಿಗಳು ಈ ಬಗ್ಗೆ ಪರಿಶೀಲನೆ ನಡೆಸಿದರೆ ಒಳ್ಳೆಯದು.
ಸತೀಶ್‌ಗೌಡ, ಪ್ರಗತಿಪರ ರೈತ, ದೊಡ್ಡಬಳ್ಳಾಪುರ

ಸಂಪತ್‌ ತರೀಕೆರೆ

Advertisement

Udayavani is now on Telegram. Click here to join our channel and stay updated with the latest news.

Next