Advertisement

ಗಂಗೊಳ್ಳಿ ಜೆಟ್ಟಿ ಕಾಮಗಾರಿ ಅಡ್ಡಿ ನಿವಾರಣೆ

09:10 PM Jan 09, 2021 | Team Udayavani |

ಕುಂದಾಪುರ:  ಕಳೆದ ಎರಡೂವರೆ ವರ್ಷದ ಹಿಂದೆ ಕುಸಿದು ಬಿದ್ದ ಗಂಗೊಳ್ಳಿಯ ಎರಡನೇ ಹರಾಜು ಪ್ರಾಂಗಣದ ಜೆಟ್ಟಿ ನಿರ್ಮಾಣಕ್ಕೆ 12 ಕೋ.ರೂ. ಮಂಜೂರಾಗಿದ್ದರೂ ಕಾಮಗಾರಿಗೆ ಇನ್ನೂ ಚಾಲನೆ ಸಿಕ್ಕಿಲ್ಲ. ಟೆಂಡರ್‌ ಕುರಿತು ಆಕ್ಷೇಪಗಳಿದ್ದುದೇ   ಕಾಮಗಾರಿ ಆರಂಭ ವಿಳಂಬಕ್ಕೆ ಕಾರಣವಾಗಿದ್ದು ಸದ್ಯ ಈ ಎಲ್ಲ ಅಡೆತಡೆ ನಿವಾರಣೆಯಾಗಿ ಒಂದು ವಾರ ಅಥವಾ 15 ದಿನಗಳಲ್ಲಿ ಕಾಮಗಾರಿ ಆರಂಭವಾಗುವ ನಿರೀಕ್ಷೆ ಇದೆ. ಒಬ್ಬರು ಗುತ್ತಿಗೆದಾರರು ಟೆಂಡರ್‌ಗೆ

Advertisement

ಆಕ್ಷೇಪ ವ್ಯಕ್ತಪಡಿಸಿ ರಾಜ್ಯ ಸರಕಾರದ ಮುಖ್ಯ ಕಾರ್ಯದರ್ಶಿಯವರ ನ್ಯಾಯಾಲಯದಲ್ಲಿ ತಗಾದೆ ಅರ್ಜಿ ಹಾಕಿದ ಕಾರಣ ವಿಳಂಬವಾಗಿದೆ. ಇದೀಗ ಪ್ರಕರಣ ಇತ್ಯರ್ಥವಾಗಿದೆ. ಆಕ್ಷೇಪ ವ್ಯಕ್ತಪಡಿಸಿದವರಿಗೆ ಟೆಂಡರ್‌ ದೊರೆಯಲಿಲ್ಲ.

ನಿಷ್ಪ್ರಯೋಜಕ :

ಉಡುಪಿ ಜಿಲ್ಲೆಯ ಪ್ರಮುಖ ಮೀನುಗಾರಿಕಾ ನೆಲೆಯಾದ ಗಂಗೊಳ್ಳಿ ಮೀನುಗಾರಿಕಾ ಬಂದರಿನಲ್ಲಿ  11 ವರ್ಷಗಳ ಹಿಂದೆ ಸುಮಾರು 9.5 ಕೋ.ರೂ. ವೆಚ್ಚದಲ್ಲಿ 405 ಮೀ. ಉದ್ದದ ಜೆಟ್ಟಿ, ಹರಾಜು ಪ್ರಾಂಗಣ ಸಹಿತ ಇನ್ನಿತರ ಅಭಿವೃದ್ಧಿ ಕಾಮಗಾರಿಗಳನ್ನು ಮಾಡಲಾಗಿತ್ತು. 405 ಮೀ. ಉದ್ದದ ಜೆಟ್ಟಿಯಲ್ಲಿ ಈಗ ಮೀನುಗಾರಿಕಾ ಚಟುವಟಿಕೆಯ ಬಳಕೆಗೆ ಸಿಗುತ್ತಿರುವುದು ಕೇವಲ 150 ಮೀ. ಮಾತ್ರ. ಜೆಟ್ಟಿ ಕುಸಿದಿದ್ದರೆ, ಕಿರು ಬಂದರು ಹೂಳು ತುಂಬಿದ್ದು ನಿಷ್ಪ್ರಯೋಜಕವಾಗಿದೆ. ಪ್ರಾಂಗಣವೂ ಉಪಯೋಗಕ್ಕಿಲ್ಲದಂತಾಗಿದೆ.

ಕಾಮಗಾರಿಯಲ್ಲಿ ಮೋಸ :

Advertisement

ಕಿರು ಜೆಟ್ಟಿ ಪ್ರದೇಶದಲ್ಲಿ ಕಲ್ಲು ಹಾಗೂ ಹೂಳು ತುಂಬಿರುವುದರಿಂದ ಇದರ ತುರ್ತು ಕಾಮಗಾರಿಗೆ 10 ಲಕ್ಷ ರೂ. ಅನುದಾನ ಬಿಡುಗಡೆ ಕೂಡ ಆಗಿತ್ತು. ಆದರೆ ಆಗ ಜೆಸಿಬಿಯನ್ನು ಒಮ್ಮೆ ನೀರಿಗಿಳಿಸಿ 2 ದಿನ ಕೆಲಸ ಮಾಡಿದ್ದು ಬಿಟ್ಟರೆ ಬೇರೇನೂ ಆಗಿಲ್ಲ ಎನ್ನುವುದು ಸ್ಥಳೀಯರ ಆರೋಪ. ಆದರೆ ಅಧಿಕಾರಿಗಳು ಅದು ಇ- ಟೆಂಡರ್‌ನಲ್ಲಿ ಆದ ಲೋಪ ಎನ್ನುತ್ತಾರೆ. ಇದರಿಂದ ಕಿರುಜೆಟ್ಟಿಯೂ ಮೀನುಗಾರರಿಗೆ ಪ್ರಯೋಜನಕ್ಕಿಲ್ಲವಾಗಿದೆ.

ಸಮಸ್ಯೆ :

ಜೆಟ್ಟಿ ಕುಸಿತವಾಗಿ ಬಳಕೆಗೆ ದೊರಕದ ಕಾರಣ ಮೀನುಗಾರರಿಗೆ ಬೋಟ್‌, ದೋಣಿಗಳನ್ನು ನಿಲ್ಲಿಸಲು ನಿತ್ಯ ಸಮಸ್ಯೆಯಾಗುತ್ತಿದೆ. ಗಂಗೊಳ್ಳಿ ಬಂದರಿನಲ್ಲಿ 300ಕ್ಕೂ ಅಧಿಕ ಪಸೀìನ್‌ ಬೋಟುಗಳು, 600ಕ್ಕೂ ಮಿಕ್ಕಿ ಮೀನುಗಾರಿಕಾ ಬೋಟು ಹಾಗೂ 500ಕ್ಕೂ ಅಧಿಕ ನಾಡ ದೋಣಿಗಳಿವೆ. ಎರಡು ವರ್ಷಗಳ ಹಿಂದೆ ಇಲ್ಲಿನ ಬಂದರಿನ ಜೆಟ್ಟಿಯ ಸ್ಲ್ಯಾಬ್‌ ಕುಸಿದಿತ್ತು. ಆ ಕಾರಣಕ್ಕೆ ಇಡೀ ಕಟ್ಟಡವೇ ಕುಸಿಯುವ ಭೀತಿಯಿಂದ ಎರಡನೇ ಹರಾಜು ಪ್ರಾಂಗಣದ ವಠಾರದಲ್ಲಿ ಮೀನುಗಾರಿಕೆ ಚಟುವಟಿಕೆ ನಿರ್ಬಂಧಿಸಲಾಗಿದೆ. ಇದರಿಂದ ಈಗ ಬಂದರಿನಲ್ಲಿ ಬೋಟುಗಳನ್ನು ನಿಲ್ಲಿಸಲು ಸಮಸ್ಯೆಯಾಗುತ್ತಿದೆ. ಈ ಕಾರಣಕ್ಕೆ ಜೆಟ್ಟಿಯ ವಿಸ್ತರಣೆ ಅಥವಾ ಪುನರ್‌ ನಿರ್ಮಾಣ ಈಗಿನ  ತುರ್ತು ಅಗತ್ಯವಾಗಿದೆ.

ಬಳಕೆಯಾಗಲಿಲ್ಲ  :

ಈಗ ಬಿರುಸಿನ ಮೀನುಗಾರಿಕೆ ನಡೆ ಯುತ್ತಿಲ್ಲವಾದ್ದರಿಂದ ಬಂದರಿನಲ್ಲಿ ಬೋಟ್‌ಗಳು ಹಾಗೂ ದೋಣಿಗಳ ಒತ್ತಡ ಅಷ್ಟೇನೂ ಇಲ್ಲ. ಆದರೆ ಒಂದು ವೇಳೆ ಈ ಸಮಯದಲ್ಲಿ ಉತ್ತಮ ಮೀನು ಗಾರಿಕೆ ನಡೆಯುತ್ತಿದ್ದರೆ ಕುಸಿದ ಜೆಟ್ಟಿ ದುರಸ್ತಿಯಾಗುವವರೆಗೆ ಮೀನುಗಾರಿಕೆಗೆ ತೊಂದರೆಯಾಗದಂತೆ ಬಂದರಿನ ಉತ್ತರ ದಿಕ್ಕಿನಲ್ಲಿ ನಿರುಪಯುಕ್ತ ವಾಗಿರುವ ಕಿರು ಜೆಟ್ಟಿ ಬಳಸಿಕೊಳ್ಳಲು ಕ್ರಮ ಕೈಗೊಳ್ಳಲಾಗುವುದು ಎಂದು ಮೀನುಗಾರಿಕಾ ಇಲಾಖೆ ಅಧಿಕಾರಿಗಳು ಹೇಳಿದ್ದರೂ ಅಂತಹ ಪರಿಸ್ಥಿತಿಯೇ ಬರಲಿಲ್ಲ.

ಟೆಂಡರ್‌ ಆಗಿದೆ ಎನ್ನುವ ಮಾಹಿತಿ ಇದ್ದು ಇನ್ನೂ ಕಾಮಗಾರಿ ಆರಂಭವಾಗಿಲ್ಲ. ಕಳೆದ ಅನೇಕ ವರ್ಷಗಳ ಬೇಡಿಕೆ ಇದಾಗಿದ್ದು ನಮಗೆ ಇಲ್ಲಿ ಬೋಟ್‌ಗಳನ್ನು ನಿಲ್ಲಿಸಲು ಜಾಗದ ಕೊರತೆಯಾಗುವುದರಿಂದ ತತ್‌ಕ್ಷಣ ಕಾಮಗಾರಿ ಆರಂಭಿಸಬೇಕು. ರಾಮಪ್ಪ ಖಾರ್ವಿ ಮೀನುಗಾರರು, ಗಂಗೊಳ್ಳಿ

ನಾನು ಹಾಗೂ ಸಂಸದರು ಗಂಗೊಳ್ಳಿ ಬಂದರಿನ ಜೆಟ್ಟಿ ಪುನರ್‌ ನಿರ್ಮಾಣಕ್ಕೆ 12 ಕೋ.ರೂ. ಗೆ ಬೇಡಿಕೆ ಇಟ್ಟಂತೆ ಮಂಜೂರಾಗಿ ಟೆಂಡರ್‌ ಪ್ರಕ್ರಿಯೆ ಪೂರ್ಣವಾಗಿದೆ. ಟೆಂಡರ್‌ ಕುರಿತಂತೆ ಇದ್ದ ಅಡೆತಡೆ ನಿವಾರಣೆಯಾಗಿದೆ. ಎರಡು ವಾರದಲ್ಲಿ ಕಾಮಗಾರಿ ಆರಂಭಿಸಲು ಎಲ್ಲ ರೀತಿಯ ಕ್ರಮ ಕೈಗೊಳ್ಳಲಾಗುವುದು.ಬಿ.ಎಂ. ಸುಕುಮಾರ್‌ ಶೆಟ್ಟಿ, ಶಾಸಕರು, ಬೈಂದೂರು

Advertisement

Udayavani is now on Telegram. Click here to join our channel and stay updated with the latest news.

Next