Advertisement

ಗಂಗಾವತಿ: ಮಾಸ್ಟರ್‌ ಪ್ಲ್ಯಾನ್‌ ವಿಳಂಬ; ಪ್ರವಾಸೋದ್ಯಮಕ್ಕೆ ಹೊಡೆತ

06:38 PM Jul 04, 2023 | Team Udayavani |

ಗಂಗಾವತಿ: ಹಂಪಿ- ಆನೆಗೊಂದಿ ಭಾಗವನ್ನೊಳಗೊಂಡ ಹಂಪಿ ಅಭಿವೃದ್ಧಿ ಪ್ರಾಧಿಕಾರದ ನೂತನ ಮಾಸ್ಟರ್‌ ಪ್ಲ್ಯಾನ್‌
ಘೋಷಣೆ ವಿಳಂಬವಾಗುತ್ತಿರುವುದರಿಂದ ಹಂಪಿ-ಆನೆಗೊಂದಿ ಭಾಗದ ಪ್ರವಾಸೋದ್ಯಮಕ್ಕೆ ಭಾರಿ ಹೊಡೆತ ಬಿದ್ದಿದೆ.

Advertisement

ಹಂಪಿ-ಆನೆಗೊಂದಿ ಭಾಗದಲ್ಲಿ ಸ್ಥಳೀಯರು ಅಕ್ರಮವಾಗಿ ಹೊಟೇಲ್‌ ಉದ್ಯಮ ನಡೆಸುತ್ತಿದ್ದುದರಿಂದ ಅಲ್ಲದೇ ಪದೇ ಪದೇ
ತೆರವುಗೊಳಿಸುತ್ತಿರುವುದರಿಂದ ಹೊಟೇಲ್‌ ಉದ್ಯಮ ನಡೆಸುವ ಮತ್ತು ಹೊಟೇಲ್‌ ಗಳಲ್ಲಿ ಕೂಲಿ ಕೆಲಸ ಮಾಡುವ ಕಾರ್ಮಿಕರು
ಉದ್ಯೋಗಕ್ಕಾಗಿ ಅನ್ಯ ಊರುಗಳಿಗೆ ಗುಳೆ ಹೋಗುವ ಅನಿವಾರ್ಯತೆ ಎದುರಾಗಿದೆ.

ಹಂಪಿ ಪ್ರದೇಶವನ್ನು ಯುನೆಸ್ಕೋ ಸಂಸ್ಥೆ ವಿಶ್ವದ ಅಪರೂಪದ ಸ್ಮಾರಕಗಳೆಂದು ಘೋಷಣೆ ಮಾಡಿದಾಗಿನಿಂದ ಯುನೆಸ್ಕೋ
ಪಟ್ಟಿಯಲ್ಲಿ ಹಂಪಿ ಪ್ರದೇಶ ಉಳಿಸಿಕೊಳ್ಳಲು ರಚನೆಯಾಗಿರುವ ಹಂಪಿ ಅಭಿವೃದ್ಧಿ ಪ್ರಾ ಧಿಕಾರ ವ್ಯಾಪ್ತಿಯಲ್ಲಿ ಪ್ರಸ್ತುತ 28
ಗ್ರಾಮಗಳಿವೆ. ಇಲ್ಲಿ ಪ್ರಾಧಿಕಾರದ ನಿಯಮಗಳಿಗೆ ಅನುಗುಣವಾಗಿ ಅಭಿವೃದ್ಧಿ ಮತ್ತು ಪ್ರವಾಸೋದ್ಯಮ ಬೆಳೆಸಲು ಅವಕಾಶವಿದೆ.

ಯುನೆಸ್ಕೋ ಸಹ ಸ್ಥಳೀಯರನ್ನೊಳಗೊಳ್ಳದ ಪ್ರವಾಸೋದ್ಯಮ ಬಹಳದಿನ ಉಳಿಯದು ಎಂದು ಸ್ಪಷ್ಟಪಡಿಸಿದರೂ ಪ್ರಾಧಿ ಕಾರದ ನಿಯಮಗಳು ಪ್ರತಿ 10 ವರ್ಷಗಳಿಗೊಮ್ಮೆ ಬದಲಾಗದೇ ಇರುವುದರಿಂದ ಅನಧಿಕೃತ ವ್ಯವಹಾರಗಳು ಹೆಚ್ಚಾಗಲು ಕಾರಣವಾಗಿದೆ. ಯುನೆಸ್ಕೋ ನಿಯಮದ ಪ್ರಕಾರ ಕೋರ್‌, ಬಫರ್‌, ಪೆರಿಪರಲ್‌ ವಲಯಗಳು(ಝೋನ್‌) ಎಂದು ಸ್ಮಾರಕಗಳಿರುವ ಪ್ರದೇಶ ಗುರುತಿಸಿ ಸ್ಮಾರಕಗಳಿರುವ ಜಾಗದಲ್ಲಿ ಯಾವುದೇ ವಾಣಿಜ್ಯ ವ್ಯವಹಾರ ನಡೆಸಲು ಅವಕಾಶ ನೀಡಿಲ್ಲ. ಹಂಪಿ ಪ್ರದೇಶದಲ್ಲಿ ಸುಮಾರು 87 ಎಎಸ್‌ಐ(ಭಾರತೀಯ ಪುರಾತತ್ವ ಸರ್ವೇಕ್ಷಣಾ ಇಲಾಖೆಯ ಸ್ಮಾರಕಗಳು) ಗಳಿದ್ದು ಆನೆಗೊಂದಿ ಗ್ರಾಮ ಮತ್ತು ವಿರೂಪಾಪುರಗಡ್ಡಿ ಪ್ರದೇಶ ಮಾತ್ರ ಕೋರ್‌ ಝೋನ್‌ ವ್ಯಾಪ್ತಿಗೆ ಬರುತ್ತದೆ.

ಉಳಿದಂತೆ ಸಾಣಾಪುರ, ಹನುಮನಹಳ್ಳಿ, ರಾಘವೇಂದ್ರ ಕಾಲೋನಿ(ಬೆಂಚಿಕುಟ್ರಿ) ಜಂಗ್ಲಿ, ರಂಗಾಪುರ, ಚಿಕ್ಕರಾಂಪುರ, ಕಡೆಬಾಗಿಲು, ರಾಂಪುರ, ತಿರುಮಲಾಪುರ ಸೇರಿ ಉಳಿದ ಗ್ರಾಮಗಳು ಭಪರ್‌ ಮತ್ತು ಪೆರಿಪರಲ್‌ ಝೋನ್‌ನಲ್ಲಿ ಬರುತ್ತವೆ. ಪ್ರಾಧಿಕಾರ ಸ್ಥಾಪನೆಯಾಗಿ 30 ವರ್ಷ ಕಳೆದರೂ ಈ ಮೂರು ಝೋನ್‌ ಗಳ ನಿಯಮಗಳಲ್ಲಿ ಸ್ವಲ್ಪವೂ ಬದಲಾಗಿಲ್ಲ. ಯುನೆಸ್ಕೋ ಪ್ರಕಾರ ಸ್ಥಳೀಯರನ್ನೊಳಗೊಂಡ ಪ್ರವಾಸೋದ್ಯಮ ಅತ್ಯುತ್ತಮವಾಗಿರುತ್ತದೆ.

Advertisement

ಪ್ರಾಧಿಕಾರ ನಿಯಮಗಳು ಮೂಲ ಸ್ವರೂಪಕ್ಕೆ ಧಕ್ಕೆಯಾಗದಂತೆ ಪ್ರತಿ 10 ವರ್ಷಗಳಿಗೊಮ್ಮೆ ಹಂಪಿ ಪ್ರಾಧಿಕಾರದ ಮಾಸ್ಟರ್‌ ಪ್ಲ್ಯಾನ್‌ ಬದಲಾವಣೆ ಮಾಡಲು ಅವಕಾಶವಿದ್ದರೂ ಇದುವರೆಗೂ ಒಂದು ಬಾರಿ ಮಾತ್ರ ಸ್ಥಳೀಯರನ್ನು ಹೊರಗಿಟ್ಟು ಮಾಸ್ಟರ್‌
ಪ್ಲ್ರಾನ್‌ ಬದಲಾಯಿಸಲಾಗಿದೆ. 2018ರಲ್ಲಿ ಬದಲಾಗಬೇಕಿದ್ದ ಮಾಸ್ಟರ್‌ ಪ್ಲ್ಯಾನ್‌ ಇದುವರೆಗೂ ಘೋಷಣೆಯಾಗಿಲ್ಲ. ಇದರಿಂದ
ಹಂಪಿ-ಆನೆಗೊಂದಿ ಭಾಗದಲ್ಲಿ ಹೋಂ ಸ್ಟೇ, ಫಾರ್ಮ್ ಸ್ಟೇಗಳ ಮಾಡಿಕೊಂಡು ಪ್ರವಾಸಿಗರಿಗೆ ಊಟ-ವಸತಿ ನೀಡುವುದು ಸಹ ಪ್ರಾಧಿಕಾರದ ನಿಯಮಗಳ ಪ್ರಕಾರ ಅಪರಾಧವಾಗಿದೆ.

ಹುಸಿಯಾದ ಸಿಎಂ ಭರವಸೆ:
ಹಂಪಿ-ಆನೆಗೊಂದಿ ಭಾಗದ ಜನತೆ ಇಲ್ಲಿಗೆ ವೀಕ್‌ ಆ್ಯಂಡ್‌ ಮತ್ತು ದಿನನಿತ್ಯ ಆಗಮಿಸುವ ಪ್ರವಾಸಿಗಳಿಗೆ ಊಟ-ವಸತಿ ನೀಡಲು ಹೊಲ ಗದ್ದೆ ಹೊಂದಿರುವ ಕೃಷಿಕರು ಸ್ವಲ್ಪ ಭಾಗದಲ್ಲಿ ಫಾರ್ಮ್ ಸ್ಟೇ ಮಾಡಿ ಊಟ-ವಸತಿ ನೀಡುವ ಯೋಜನೆ ಕುರಿತು ಹಿಂದಿನ ಸಿಎಂ ಬಸವರಾಜ ಬೊಮ್ಮಾಯಿ ಅವರನ್ನು ಭೇಟಿಯಾಗಿ ಮನವಿ ಮಾಡಿದ ಹಿನ್ನೆಲೆಯಲ್ಲಿ ಫಾರ್ಮ್ ಹೌಸ್‌ ಗಳಿಗೆ ಪರವಾನಗಿ ನೀಡಲು ಇರುವ ಅವಕಾಶಗಳ ಕುರಿತು ಭರವಸೆ ನೀಡಿದ್ದರು.

ಸರಕಾರ ಕೂಡ ಪ್ರಾಧಿಕಾರಕ್ಕೆ ಸೂಕ್ತ ಕ್ರಮ ಕೈಗೊಳ್ಳಲು ಸೂಚನೆ ನೀಡಿತ್ತು. ನಂತರ ಪ್ರಾಧಿಕಾರ ಮತ್ತು ಕೊಪ್ಪಳ, ವಿಜಯನಗರ ಜಿಲ್ಲಾಡಳಿತಗಳು ಫಾರ್ಮ್ ಸ್ಟೇ ಪರವಾನಗಿ ನೀಡಲು ಕೆಲ ಇರುವ ಝೋನ್‌ ನಿಯಮಗಳನ್ನು ಬದಲಾಯಿಸಿ ಗೆಜೆಟ್‌ ಮೂಲಕ ಸಾರ್ವಜನಿಕರ ಆಕ್ಷೇಪವನ್ನು ಕರೆದು ಸರಕಾರಕ್ಕೆ ವರದಿ ಕಳುಹಿಸಿತ್ತು. ನಂತರ ಹಂಪಿ-ಆನೆಗೊಂದಿ ಭಾಗದ ಸ್ಮಾರಕಗಳ ಸಂರಕ್ಷಣೆಯ ನೋಡೆಲ್‌ ಏಜೆನ್ಸಿಯಾಗಿರುವ ಭಾರತೀಯ ಪುರಾತತ್ವ ಇಲಾಖೆ ಅಭಿಪ್ರಾಯ ಪಡೆಯಲು ನಗರಾಭಿವೃದ್ಧಿ
ಇಲಾಖೆ ಪತ್ರ ಬರೆದು ಅಭಿಪ್ರಾಯ ಪಡೆದು ವರ್ಷ ಕಳೆದರೂ ಫಾರ್ಮ್ ಸ್ಟೇ ಪರವಾನಗಿ ನೀಡಲು ಗೆಜೆಟ್‌ ಮೂಲಕ ನಿಯಮಾವಳಿ ಘೋಷಣೆ ಮಾಡುತ್ತಿಲ್ಲ.

ಇದರಿಂದ ಹಂಪಿ-ಆನೆಗೊಂದಿ ಭಾಗದ ಸ್ಥಳೀಯರು ಪ್ರವಾಸೋದ್ಯಮ ಮೂಲಕ ಉದ್ಯೋಗ ಕಂಡುಕೊಳ್ಳುವಲ್ಲಿ ನಿರಾಸೆ
ಹೊಂದಿದ್ದಾರೆ. ಹಂಪಿ ಪ್ರಾಧಿಕಾರದ ಮಾಸ್ಟರ್‌ ಪ್ಲ್ಯಾನ್‌ ಘೋಷಣೆಯೂ ಇಲ್ಲ ಮತ್ತು ಫಾರ್ಮ್ಸ್ಟೇಗಳಿಗೆ ಪರವಾನಗಿ
ನೀಡುವ ಸರಕಾರದ ಘೋಷಣೆಯೂ ಅನುಷ್ಠಾನವಾಗದಿರುವುದರಿಂದ ಸ್ಥಳೀಯರು ನಿರುದ್ಯೋಗಿಗಳಾಗುತ್ತಿದ್ದಾರೆ.

ಹಂಪಿ ಪ್ರಾಧಿಕಾರದ ನೂತನ ಮಾಸ್ಟರ್‌ ಪ್ಲ್ಯಾ ನ್‌ ಇನ್ನೂ ಘೋಷಣೆಯಾಗಿಲ್ಲ. ಇತ್ತೀಚೆಗೆ  ಫಾರ್ಮ್ ಸ್ಟೇಗಳಿಗೆ ಪರವಾನಗಿ
ನೀಡುವ ಕುರಿತು ಸರಕಾರದ ಚಿಂತನೆಯ ಪರಿಣಾಮ ಸಾರ್ವಜನಿಕರಿಂದ ಆಕ್ಷೇಪ ಕರೆಯಲಾಗಿತ್ತು. ನಗರಾಭಿವೃದ್ಧಿ ಇಲಾಖೆ
ನೋಡೆಲ್‌ ಏಜೆನ್ಸಿ ಎಎಸ್‌ಐ ಅಭಿಪ್ರಾಯ ಕೇಳಿ ಪಡೆದಿದ್ದು ಪ್ರಾಧಿಕಾರ ಅಥವಾ ಜಿಲ್ಲಾಡಳಿತಕ್ಕೆ ಫಾರ್ಮ್ ಸ್ಟೇಗಳಿಗೆ
ಪರವಾನಗಿ ನೀಡುವ ಕುರಿತು ಯಾವುದೇ ನೂತನ ಆದೇಶವಾಗಿಲ್ಲ. ಪ್ರಾಧಿಕಾರದ ನಿಯಮ ಉಲ್ಲಂಘಿಸಿ ನಿರ್ಮಿಸಿದ್ದ ಅಕ್ರಮ ರೆಸಾರ್ಟ್‌, ಹೊಟೇಲ್‌ ತೆರವು ಮಾಡಲಾಗಿದ್ದು ಕೋರ್ಟ್‌ನಿಂದ ತಡೆಯಾಜ್ಞೆ ಇರುವ ರೆಸಾರ್ಟ್‌, ಹೊಟೇಲ್‌ ಸೀಜ್‌ ಮಾಡಲಾಗಿದೆ.
ಎಂ.ಸುಂದರೇಶಬಾಬು,
ಜಿಲ್ಲಾಧಿಕಾರಿಗಳು

ಕೆ.ನಿಂಗಜ್ಜ

Advertisement

Udayavani is now on Telegram. Click here to join our channel and stay updated with the latest news.

Next