Advertisement

ಮಹಿಳೆಯ ಆತ್ಯಾಚಾರ ಪ್ರಕರಣ: ಆರೋಪಿಗಳಿಗೆ 20 ವರ್ಷಗಳ ಕಠಿಣ ಶಿಕ್ಷೆ ವಿಧಿಸಿದ ನ್ಯಾಯಾಲಯ

07:24 PM Feb 27, 2024 | Team Udayavani |

ಗಂಗಾವತಿ: ತಾಲೂಕಿನ ವಿರೂಪಾಪೂರಗಡ್ಡಿಯ ರೆಸಾರ್ಟ್ ಒಂದರಲ್ಲಿ ಇಬ್ಬರು ಆರೋಪಿಗಳು ಓರ್ವ ಮಹಿಳಾ ಸಹಪಾಟಿಯನ್ನು ಪ್ರವಾಸಕ್ಕೆಂದು ಕರೆ ತಂದು ತಂಪು ಪಾನೀಯದಲ್ಲಿ ಮತ್ತು ಬರುವ ಪುಡಿ ಬೆರೆಸಿ ಕುಡಿಸಿ ಮಹಿಳೆ ಎಚ್ಚರ ತಪ್ಪಿದಾಗ ಆತ್ಯಾಚಾರವೆಸಗಿದ್ದ ಪ್ರಕರಣದಲ್ಲಿ ಒಂದನೇಯ ಹೆಚ್ಚುವರಿ ಜಿಲ್ಲಾ ಮತ್ತು ಸತ್ರ ನ್ಯಾಯಾಲಯ ತೀರ್ಪು ಪ್ರಕಟಿಸಿದ್ದು 20 ವರ್ಷಗಳ ಕಠಿಣ ಶಿಕ್ಷೆ ಜತೆಗೆ ಆರೋಪಿಗಳಿಬ್ಬರಿಗೂ ತಲಾ 3 ಲಕ್ಷ ರೂ.ದಂಡ ಅಥವಾ 3 ತಿಂಗಳೊಳಗೆ ಸಂತ್ರಸ್ಥೆಗೆ ದಂಡ ಪಾವತಿಸದೇ ಇದ್ದಲ್ಲಿ 5 ವರ್ಷ ಕಾರಾಗೃಹ ವಾಸ ಶಿಕ್ಷೆ ವಿಧಿಸಿ ತೀರ್ಪು ಪ್ರಕಟಿಸಿದೆ.

Advertisement

2015 ಆ.22 ರಂದು ತಾಲೂಕಿನ ವಿರೂಪಾಪೂರಗಡ್ಡಿಯಲ್ಲಿದ್ದ ಹೇಮಾ ಗೆಸ್ಟ್ ಹೌಸ್‌ಗೆ ಹೈದ್ರಾಬಾದಿನ ಐಟಿ ಬಿಟಿ ಕಂಪನಿಯಲ್ಲಿ ಕೆಲಸ ನಿರ್ವಹಿಸುತ್ತಿದ್ದ ಉತ್ತರ ಪ್ರದೇಶದ ರೋಹಿತ್ ಮಾಂಗಲೀಕ್, ರಾಜಸ್ಥಾನದ ರಾಜಕುಮಾರ ಎನ್ನುವ ಟೆಕ್ಕಿಗಳು ತಮ್ಮ ಮಹಿಳಾ ಸಹಪಾಟಿಯೊರ್ವಳನ್ನು ಪ್ರವಾಸಕ್ಕೆಂದು ಕರೆ ತಂದು ಸಂಜೆ ವೇಳೆ ತಂಪು ಪಾನೀಯದಲ್ಲಿ ಮತ್ತು ಬರುವ ಪುಡಿ ಬೆರೆಸಿ ಮಹಿಳೆ ಎಚ್ಚರ ತಪ್ಪಿದ ಸಂದರ್ಭದಲ್ಲಿ ಆತ್ಯಾಚಾರ ಮಾಡಿದ್ದಾರೆಂದು ಸಂತ್ರಸ್ಥೆ ಹೈದ್ರಾಬಾದಿನ ಪೊಲೀಸ್ ಠಾಣೆಯಲ್ಲಿ ಕೇಸ್ ದಾಖಲಿಸಿದ್ದಳು.

ನಂತರ ಹೈದ್ರಾಬಾದ್ ಪೊಲೀಸರು ಕೇಸನ್ನು ಗಂಗಾವತಿ ಗ್ರಾಮೀಣ ಠಾಣೆಗೆ ವರ್ಗಾಯಿಸಿದ್ದರು. ಪ್ರಕರಣವನ್ನು ಗಂಭೀರವಾಗಿ ತೆಗೆದುಕೊಂಡಿದ್ದ ಗ್ರಾಮೀಣ ಪೊಲೀಸ್ ಠಾಣೆಯ ಅಂದಿನ ಸಿಪಿಐ ಆಗಿದ್ದ ಪ್ರಭಾಕರ್ ಧರ್ಮಟ್ಟಿ ಸಮಗ್ರ ತನಿಖೆ ನಡೆಸಿದ ನಂತರ ನ್ಯಾಯಾಲಯಕ್ಕೆ ಅಂತಿಮ ವರದಿ ಸಲ್ಲಿಸಿದ್ದರು.

ಪ್ರಕರಣದಲ್ಲಿ ಅಭಿಯೋಜನಾ ಪರವಾಗಿ ಸರಕಾರಿ ಅಭಿಯೋಜಕಿ ನಾಗಲಕ್ಷ್ಮಿ ಎಸ್ ಇವರು ವಾದ ಮಾಡಿದ್ದರು. ಪ್ರಕರಣದ ಸಾಕ್ಷಿ ಹಾಗೂ ವಾದ ವಿವಾದ ಆಲಿಸಿದ ಒಂದನೇಯ ಹೆಚ್ಚುವರಿ ಜಿಲ್ಲಾ ಮತ್ತು ಸತ್ರ ನ್ಯಾಯಾಲಯದ ನ್ಯಾಯಾಧೀಶ ಸದಾನಂದ ನಾಯಕ ತೀರ್ಪು ನೀಡಿ ಶಿಕ್ಷೆ ಪ್ರಕಟಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next