Advertisement

ನಿರಾತಂಕವಾಗಿ ನಡೆದ ಮದ್ಯ ಅಕ್ರಮ ಮಾರಾಟ

02:50 PM Jun 27, 2019 | Naveen |

ಕೆ.ನಿಂಗಜ್ಜ
ಗಂಗಾವತಿ:
ಗ್ರಾಮೀಣ ಹಾಗೂ ನಗರದ ಕೊಳಗೇರಿ ಪ್ರದೇಶಗಳಲ್ಲಿ ಮದ್ಯ ಅಕ್ರಮ ಮಾರಾಟದ ಹತ್ತಾರು ಅಂಗಡಿಗಳು 10 ವರ್ಷಗಳಿಂದ ಆರಂಭವಾಗಿದ್ದು, ಎಂಆರ್‌ಪಿಗಿಂತ ಅಧಿಕ ದರಕ್ಕೆ ಮದ್ಯ ಮಾರಾಟದ ಮೂಲಕ ನಿತ್ಯ ಸರಕಾರಕ್ಕೆ ಲಕ್ಷಾಂತರ ರೂ. ನಷ್ಟವುಂಟು ಮಾಡುವಲ್ಲಿ ಅಬಕಾರಿ ಇಲಾಖೆ ಪಾತ್ರವೂ ಮಹತ್ವದ್ದಾಗಿದೆ.

Advertisement

ಸರಾಯಿ ಬಂದ್‌ ಆದ ನಂತರ ಪಾನ್‌ಶಾಪ್‌, ಕಿರಾಣಿ ಹಾಗೂ ಚಹಾ ಅಂಗಡಿಗಳಲ್ಲಿ ಮದ್ಯ ಮಾರಾಟ ನಡೆಯುತ್ತಿದೆ. ಸರಕಾರ ನಿಗದಿಪಡಿಸಿದ ದರಕ್ಕಿಂತಲೂ ಅಧಿಕ ಬೆಲೆಗೆ ಮಾರಾಟ ಮಾಡುವ ಮೂಲಕ ಮದ್ಯದಂಗಡಿ ಪರವಾನಗಿ ಪಡೆದವರು ಹಣ ಗಳಿಸುತ್ತಿದ್ದಾರೆ. ತಾಲೂಕಿನಲ್ಲಿ ಸುಮಾರು 2740 ಮದ್ಯ ಅಕ್ರಮ ಮಾರಾಟ ಅಂಗಡಿಗಳಿದ್ದು, ಲೈಸೆನ್ಸ್‌ ಪಡೆದ ಮದ್ಯದ ಮಾರಾಟಗಾರರು ಈ ಅಂಗಡಿಗಳಿಗೆ ಮದ್ಯ ಪೂರೈಕೆ ಮಾಡುತ್ತಿದ್ದಾರೆ. ಅಬಕಾರಿ ಇಲಾಖೆ ಬಳಿ ಇಷ್ಟೆಲ್ಲ ಮಾಹಿತಿ ಇದ್ದರೂ ಪ್ರತಿ ವರ್ಷ ಪರವಾನಗಿ ನವೀಕರಣ ಸಂದರ್ಭದಲ್ಲಿ ಅಕ್ರಮವೆಸಗಿದವರ ಪರವಾನಗಿ ರದ್ದುಗೊಳಿಸದೇ ನವೀಕರಣ ಮಾಡುವ ಮೂಲಕ ಅಕ್ರಮಗಳಿಗೆ ಸರಕಾರ ನೇರವಾಗಿ ಕಾರಣವಾಗಿದೆ.

ಎಂಆರ್‌ಪಿ ದರದಲ್ಲಿ ಮದ್ಯ ಮಾರಾಟ ಮಾಡಲು ಸರಕಾರ ಎಂಎಸ್‌ಐಎಲ್ ಅಂಗಡಿಗಳನ್ನು ಮಂಜೂರು ಮಾಡುತ್ತಿದೆ. ಈ ಅಂಗಡಿಗಳು ಆರಂಭವಾಗದಂತೆ ಲಿಕ್ಕರ್‌ ಲಾಭಿ ತಡೆಯುತ್ತಿದೆ. ಕೊಪ್ಪಳ ಜಿಲ್ಲೆಗೆ 45 ಎಂಎಸ್‌ಐಎಲ್ ಅಂಗಡಿಗಳು ಮಂಜೂರಿಯಾಗಿದ್ದು, ಪ್ರಸ್ತುತ 24 ಅಂಗಡಿಗಳು ಕಾರ್ಯ ನಿರ್ವಹಿಸುತ್ತಿವೆ. ಉಳಿದ ಅಂಗಡಿಗಳು ಆರಂಭವಾಗಲು ಲಿಕ್ಕರ್‌ ಲಾಭಿ ಬಿಡುತ್ತಿಲ್ಲ. ಬಿಲ್ಡಿಂಗ್‌ ಸೇರಿ ಹಲವು ಕೃತಕ ಸಮಸ್ಯೆಗಳ ನೆಪದಲ್ಲಿ ಎಂಎಸ್‌ಐಎಲ್ ಅಂಗಡಿಗಳನ್ನು ಆರಂಭ ಮಾಡಲು ಆಗುತ್ತಿಲ್ಲ. ಈ ಕುರಿತು ಜಿಲ್ಲಾ ಅಬಕಾರಿ ಇಲಾಖೆ ಸರಕಾರಕ್ಕೆ ಕೂಡಲೇ ಎಂಎಸ್‌ಐಎಲ್ ಮದ್ಯದಂಗಡಿ ಆರಂಭಿಸುವಂತೆ ಹಲವಾರು ಬಾರಿ ಪತ್ರ ಬರೆದರೂ ಪ್ರಯೋಜನವಾಗಿಲ್ಲ.

ಅಕ್ರಮ ತಡೆಯಬಹುದು: ಕರ್ನಾಟಕ ಅಬಕಾರಿ ಕಾಯ್ದೆ 1965ರ ಕಲಂ 50ರ ಅಡಿಯಲ್ಲಿ ಕಂದಾಯ ಅಧಿಕಾರಿಗಳು, ಗ್ರಾಪಂ ಪಿಡಿಒ, ತಾಪಂ ಇಒ, ನಗರಸಭೆ ಪೌರಾಯುಕ್ತ, ಪೊಲೀಸ್‌ ಇಲಾಖೆ ಅಧಿಕಾರಿಗಳು ಸೇರಿ ಎಲ್ಲಾ ಜನಪ್ರತಿನಿಧಿಗಳು ಮದ್ಯ ಮತ್ತು ಗಾಂಜಾ ಸೇರಿ ನಶೆ ಏರಿಸುವ ವಸ್ತುಗಳ ಅಕ್ರಮ ಮಾರಾಟ ತಡೆಯಲು ಅಧಿಕಾರ ಹೊಂದಿದ್ದಾರೆ. ಮದ್ಯದ ಅಕ್ರಮ ಮಾರಾಟವನ್ನು ಅಬಕಾರಿ ಇಲಾಖೆಯವರು ಮಾತ್ರ ತಡೆಗಟ್ಟಲು ಕಾಯ್ದೆ ಇದೆ ಎಂಬಂತೆ ಎಲ್ಲಾ ಇಲಾಖೆಯ ಅಧಿಕಾರಿಗಳು ನಿರ್ಲಕ್ಷ್ಯ ವಹಿಸಿದ್ದಾರೆ. ಅಬಕಾರಿ ಕಾಯ್ದೆ ಜಾರಿ ಕುರಿತು ಜನಸಾಮಾನ್ಯರಿಗೆ ಸರಕಾರ ಕೂಡ ಅರಿವು ಮೂಡಿಸುವುದು ಅವಶ್ಯವಾಗಿದೆ.

ಪ್ರತಿ ವರ್ಷ ಜುಲೈ ಒಂದರೊಳಗೆ ಮದ್ಯ ಮಾರಾಟಗಾರರು ಪರವಾನಗಿ ನವೀಕರಣ ಮಾಡಿಕೊಳ್ಳಬೇಕು. ಈ ಭಾರಿ ಕೊಪ್ಪಳ ಜಿಲ್ಲೆಯಲ್ಲಿ ಮದ್ಯದ ಅಕ್ರಮ ಮಾರಾಟ ಮಾಡುವ ಕುರಿತು 60ಕ್ಕೂ ಹೆಚ್ಚು ದೂರುಗಳು ಅಬಕಾರಿ ಇಲಾಖೆಗೆ ಬಂದಿವೆ. ಇವುಗಳನ್ನು ಲೆಕ್ಕಿಸದೇ ಎಲ್ಲಾ ಲೈಸೆನ್ಸ್‌ಗಳು ನವೀಕರಣಗೊಳ್ಳುತ್ತಿವೆ. ಲೈಸೆನ್ಸ್‌ ನವೀಕರಣದ ನೀತಿ ಅವೈಜ್ಞಾನಿಕವಾಗಿದೆ. ನವೀಕರಣ ತಾಲೂಕು ಮಟ್ಟದ ಅಧಿಕಾರಿಗಳಿಗೆ ಆನ್‌ಲೈನ್‌ ಮೂಲಕ ಅರ್ಜಿ ಸಲ್ಲಿಸಲಾಗುತ್ತದೆ. ಇದು ಜಿಲ್ಲಾ ಅಬಕಾರಿ ಅಧಿಕಾರಿ ನಂತರ ಜಿಲ್ಲಾಧಿಕಾರಿ (ಕಂದಾಯ ಇಲಾಖೆ) ನಂತರ ಕಮೀಷನ್‌ ಲಾಗೀನ್‌ಗೆ ರವಾನೆಯಾಗುತ್ತದೆ. ಲೈಸೆನ್ಸ್‌ದಾರರ ವಿರುದ್ಧ ದೂರುಗಳು ಇಲ್ಲಿ ನಗಣ್ಯವಾಗುತ್ತಿವೆ. ಮದ್ಯದ ಅಕ್ರಮ ಮಾರಾಟ ಮತ್ತು ಅಧಿಕ ದರಕ್ಕೆ ಮಾರಾಟ ತಡೆಯುವ ಹೋರಾಟವನ್ನು ಲಿಕ್ಕರ್‌ ಲಾಭಿ ಹತ್ತಿಕ್ಕುತ್ತಿದೆ. ಅಥವಾ ಅಬಕಾರಿ ಇಲಾಖೆ ಎಲ್ಲಾ ದೂರುಗಳನ್ನು ಗಾಳಿಗೆ ತೂರಿ ಲೈಸೆನ್ಸ್‌ ನವೀಕರಣ ಮಾಡಲಾಗುತ್ತದೆ. ಲೈಸೆನ್ಸ್‌ ನವೀಕರಣ ಸಂದರ್ಭದಲ್ಲಿ ಗ್ರಾಪಂ ಮತ್ತು ನಗರಸಭೆ ವ್ಯಾಪ್ತಿ ಜನಪ್ರತಿನಿಧಿಗಳು ಮದ್ಯ ಮಾರಾಟ ತಡೆಯಲು ಮದ್ಯಮುಕ್ತ ಗ್ರಾಮ ಘೋಷಣೆ ಮಾಡುವ ಮೂಲಕ ಕೌಟುಂಬಿಕ ಕಲಹ ತಪ್ಪಿಸಬಹುದಾಗಿದೆ.

Advertisement

ಮದ್ಯ ಅಕ್ರಮ ಮಾರಾಟ ತಡೆಯಲು ಜಿಲ್ಲಾದ್ಯಂತ ದಾಳಿ ನಡೆಸಿ ಕೇಸ್‌ ಹಾಕಲಾಗಿದೆ. ಅಕ್ರಮ ತಡೆಯಲು ಸರಕಾರದ ಎಂಎಸ್‌ಐಎಲ್ ಮದ್ಯದಂಗಡಿ ಆರಂಭಿಸುವಂತೆ ಮನವಿ ಮಾಡಿದಂತೆ 45 ಅಂಗಡಿಗಳು ಮಂಜೂರಾಗಿದ್ದು, ಇವುಗಳ ಪೈಕಿ 24 ಎಂಎಸ್‌ಐಎಲ್ ಅಂಗಡಿಗಳು ಆರಂಭವಾಗಿವೆ. ಉಳಿದ ಅಂಗಡಿ ಅರಂಭಕ್ಕೆ ಎಂಎಸ್‌ಐಎಲ್ ಅಧಿಕಾರಿ ನೆಪ ಹೇಳುತ್ತಿದ್ದು ಅಧಿಕಾರಿ ವಿರುದ್ಧ ಸರಕಾರಕ್ಕೆ ಪತ್ರ ಬರೆಯಲಾಗಿದೆ. ಸರಕಾರದ ಮದ್ಯದಂಗಡಿಗಳಾದರೆ ಎಂಆರ್‌ಪಿ ದರ ಸಿಗುತ್ತದೆ. ಮದ್ಯದ ಅಕ್ರಮ ಮಾರಾಟ ತಡೆಯಲು ಸಾಧ್ಯವಾಗುತ್ತದೆ. ಲೈಸೆನ್ಸ್‌ ನವೀಕರಣ ಪ್ರಕ್ರಿಯೆ ಸರಕಾರ ಸರಳಗೊಳಿಸಿದ್ದು ತಾಲೂಕು, ಜಿಲ್ಲಾಮಟ್ಟದ ಅಧಿಕಾರಿಗಳ ಕೈಯಲ್ಲಿ ಏನು ಇಲ್ಲ. ನೇರವಾಗಿ ಕಮೀಷನರ್‌ ಲಾಗಿನ್‌ ಮೂಲಕ ನವೀಕರಣ ಮಾಡಲು ಅವಕಾಶವಿದೆ. ನಿರಂತರ ಕೇಸ್‌ ಮಾಡುವ ಮೂಲಕ ಅಕ್ರಮ ತಡೆಯಲಾಗುತ್ತಿದೆ.
•ಆರ್‌. ವೀಣಾ, ಉಪ ಆಯುಕ್ತ ಕೊಪ್ಪಳ

ಮದ್ಯ ಅಕ್ರಮ ಮಾರಾಟ ತಡೆಯುವಂತೆ ನ್ಯಾಯಯುತ ಹೋರಾಟ ನಡೆಸಲು ಮುಂದಾದರೆ ಕೆಲ ದುಷ್ಟಶಕ್ತಿಗಳು ಮತ್ತು ಲಿಕ್ಕರ್‌ ಲಾಭಿಗಳು ದೌರ್ಜನ್ಯವೆಸಗುತ್ತಿವೆ. ಸರಕಾರ ತಾಲೂಕಿನಲ್ಲಿ ಅಕ್ರಮ ಮದ್ಯ ತಡೆಯುವ ಮೂಲಕ ಬಡ ಕೂಲಿಕಾರರನ್ನು ಸಂರಕ್ಷಣೆ ಮಾಡಬೇಕಿದೆ. ಸಿಎಲ್, 02, 07, 09 ಲೈಸೆನ್ಸ್‌ ಪಡೆದು ಬಹಿರಂಗವಾಗಿ ಹೊರಗಡೆ ಮದ್ಯ ಮಾರಾಟ ಮಾಡುವುದಕ್ಕೆ ಬ್ರೇಕ್‌ ಬೀಳಬೇಕಿದೆ. ಮದ್ಯ ಮಾರಾಟದ ಲೈಸೆನ್ಸ್‌ ನವೀಕರಣ ಮಾಡದೇ ಸರಕಾರದ ಮೂಲಕ ಎಂಎಸ್‌ಐಎಲ್ ಮದ್ಯದಂಗಡಿ ಆರಂಭಿಸುವ ಮೂಲಕ ಸರಕಾರಕ್ಕೆ ಆದಾಯ ಬರುವಂತೆ ಮಾಡುವುದು ಅವಶ್ಯ.
ಮಲ್ಲಿಕಾರ್ಜುನ ನಂದಾಪೂರ, ಹೋರಾಟಗಾರ

Advertisement

Udayavani is now on Telegram. Click here to join our channel and stay updated with the latest news.

Next