Advertisement

ಕಾಲು ದಾರೀಲಿ ಬದುಕಿನ ಅಂಬಾರಿ

04:52 PM Jun 13, 2019 | mahesh |

ದೊಡ್ಡ ದೊಡ್ಡ ಅಂಗಡಿಗಳಲ್ಲಿ, ನೂರಾರು ರೂಪಾಯಿ ಕೊಟ್ಟು, ಚೌಕಾಸಿ ಮಾಡದೆ ಚಪ್ಪಲಿ ಖರೀದಿಸುವ ನಾವು, ಅದೇ ಚಪ್ಪಲಿ ಹರಿದು ಹೋದಾಗ, ಚಮ್ಮಾರರ ಬಳಿ ಐದ್ಹತ್ತು ರೂಪಾಯಿಗೆ ಚೌಕಾಸಿಗೆ ಇಳಿಯುತ್ತೇವೆ. ಆದ್ರೆ, ಹರಿದ ಚಪ್ಪಲಿಯಿಂದಲೇ ಬದುಕು ಹೊಲಿಯುವ ಅವರ ಬಗ್ಗೆ ಒಮ್ಮೆಯಾದ್ರೂ ಯೋಚಿಸಿದ್ದೇವಾ?

Advertisement

ಗಡಿಬಿಡಿಯಲ್ಲಿ ಎಲ್ಲಿಗೋ ಹೊಗೋವಾಗ ಚಪ್ಪಲಿ ಕಿತ್ತು ಹೋದರೆ, ಮೊದಲು ಹುಡುಕೋದು ಚಮ್ಮಾರರನ್ನು. ರಸ್ತೆ ಬದಿಯಲ್ಲೊಂದು ಟೆಂಟ್‌ ಕಟ್ಟಿಕೊಂಡು, ಚಪ್ಪಲಿ ಹೊಲಿಯುವವರಲ್ಲಿ ಗಂಡಸರೇ ಹೆಚ್ಚು. ಚಮ್ಮಾರಿಕೆ ಮಾಡುತ್ತಿರೋ ಕೆಲವೇ ಕೆಲವು ಮಹಿಳೆಯರಲ್ಲಿ, ಐವತ್ತೈದು ವರ್ಷದ ಗಂಗಮ್ಮ ಅವರೂ ಒಬ್ಬರು. ವಿಜಯಪುರದ ಗಾಂಧಿ ಚೌಕದ ಬಳಿಯ ಸರಕಾರಿ ಕಾಲೇಜಿನ ಹತ್ತಿರ ಇವರು ಚಪ್ಪಲಿ ಹೊಲಿಯುತ್ತಿರುತ್ತಾರೆ.

ಬೆಳಗ್ಗೆದ್ದು ಚಮ್ಮಾರಿಕೆಯ ಸಾಮಗ್ರಿಗಳನ್ನು ಹಿಡಿದು ರಸ್ತೆ ಬದಿ ಕೂರುವ ಗಂಗಮ್ಮನನ್ನು, ವಾಹನದ ಧೂಳು, ಕರ್ಕಶ ಶಬ್ದ, ಬಿಸಿಲು, ಮಳೆಗಳ್ಯಾವುವೂ ಬಾಧಿಸುವುದೇ ಇಲ್ಲ. ಯಾಕೆಂದರೆ, ದುಡಿಯಲೇಬೇಕಾದ ಅನಿವಾರ್ಯ. ದಿನವಿಡೀ ಕುಳಿತರೂ 200 ರೂ. ಸಿಕ್ಕಿದರೆ ಅದೇ ಹೆಚ್ಚು ಎನ್ನುವ ಗಂಗಮ್ಮ, 35 ವರ್ಷಗಳಿಂದ ಹೊಟ್ಟೆಪಾಡಿಗೆ ಈ ಕೆಲಸ ಮಾಡುತ್ತಿದ್ದಾರೆ. 36 ವರ್ಷಗಳ ಹಿಂದೆ ನಾಪತ್ತೆಯಾದ ಗಂಡ ಈಕೆಗಾಗಿ ಬಿಟ್ಟು ಹೋಗಿದ್ದು ಚಮ್ಮಾರಿಕೆಯನ್ನು ಮಾತ್ರ.

ಗಂಡ ಎಲ್ಲಿ ಹೋದ ಅಂತ ತಿಳಿಯದ ಗಂಗಮ್ಮನಿಗೆ ಜೀವನ ಸಾಕು ಅನ್ನಿಸಿತ್ತು. ಆದರೆ, ಮಡಿಲಲ್ಲಿ ಮೂವರು ಗಂಡು ಮಕ್ಕಳು, ಇಬ್ಬರು ಹೆಣ್ಣು ಮಕ್ಕಳು ಇದ್ದರಲ್ಲ; ಅವರ ಮುಖ ನೋಡಿ, ಬದುಕು ನಡೆಸಲು ನಿರ್ಧರಿಸಿದ ಆಕೆ, ಗಂಡನ ಕುಲಕಸುಬಾದ ಚಮ್ಮಾರಿಕೆಯಲ್ಲಿ ತೊಡಗಿದರು. ಮುಂದೆ ಅದೇ ವೃತ್ತಿಯಿಂದ ಸಂಸಾರ ತೂಗಿಸುತ್ತಾ, ಹೆಣ್ಣುಮಕ್ಕಳ ಮದುವೆಯನ್ನೂ ಮಾಡಿ ದಿಟ್ಟೆ ಈಕೆ. ಈಗ ಗಂಡು ಮಕ್ಕಳೂ ಚಮ್ಮಾರಿಕೆಯಲ್ಲಿ ತೊಡಗಿಕೊಂಡು, ತಾಯಿಗೆ ನೆರವಾಗುತ್ತಿದ್ದಾರೆ.

ಸರ್ಕಾರಕ್ಕೆ ಬಾಡಿಗೆ
ಪ್ರತಿದಿನ ತಾವು ಕುಳಿತುಕೊಳ್ಳುವ ಸ್ಥಳದ ಬಾಡಿಗೆಯನ್ನು ಸರ್ಕಾರಕ್ಕೆ ಕೊಡಬೇಕು. ವ್ಯಾಪಾರವಾಗಲಿ, ಬಿಡಲಿ, ಸರ್ಕಾರ ಅದನ್ನು ಕೇಳುವುದಿಲ್ಲ. ಒಂದು ಚಪ್ಪಲಿ ಹೊಲಿದಿದ್ದಕ್ಕೆ 10-15 ರೂ. ಆಗುತ್ತೆ. ಆದ್ರೆ, ಕೆಲವರು ಅದರಲ್ಲೂ ಚೌಕಾಸಿಗಿಳಿದು 5 ರೂಪಾಯನ್ನಷ್ಟೇ ಕೊಟ್ಟು ಹೋಗ್ತಾರಂತೆ. ದಿನಕ್ಕೆ 10-12 ಮಂದಿ ಬಂದರೆ ಅದೇ ಹೆಚ್ಚು. ಉಳಿದ ಸಮಯದಲ್ಲಿ ಚರ್ಮ ತಂದು, ಎರಿ ಮಣ್ಣು ಹಚ್ಚಿ, ಸುತ್ತಲು ಮೊಳೆ ಬಡಿದು, ದಿನಕ್ಕೆ ಒಂದು ಜೋಡಿ ಚಪ್ಪಲಿ ತಯಾರಿಸ್ತಾರೆ. ಆ ಚಪ್ಪಲಿಗಳನ್ನು ರೈತರು, ಕುರಿಗಾಹಿಗಳು ಖರೀದಿಸ್ತಾರಂತೆ. ಕೆಲವೊಮ್ಮೆ ಚರ್ಮದ ಚಪ್ಪಲಿಗಳನ್ನು ಅಂಗಡಿಗೂ ಮಾರುತ್ತಾರೆ. ಗಂಗಮ್ಮ ಓದಿದ್ದು ಮೂರನೇ ಕ್ಲಾಸ್‌ವರೆಗೆ ಮಾತ್ರ. ಓದುವ ಆಸೆಯಿದ್ದರೂ, ಬಡತನ ಎಂಬ ಶತ್ರು ಓದಲು ಬಿಡಲಿಲ್ಲ ಎಂದು ವಿಷಾದಿಸುತ್ತಾರವರು.

Advertisement

“ಸುತ್ತಮುತ್ತ ಗಂಡಸರೇ ಚಪ್ಪಲಿ ಹೊಲಿಯೋದು. ಅವರ ಮಧ್ಯೆ ನಾನೊಬ್ಬಳೇ ಮಹಿಳೆ. ನನಗೆ ಚಪ್ಪಲಿ ಹೊಲಿಯೋದರ ಬಗ್ಗೆ ಯಾವುದೇ ನಾಚಿಕೆಯಿಲ್ಲ. ನಾಚಿಕೆ ಅಂತ ಸುಮ್ಮನಿದ್ದಿದ್ದರೆ ಇಷ್ಟೊತ್ತಿಗೆ ನಾನೂ, ನನ್ನ ಮಕ್ಕಳೂ ಕೆರೆ, ಬಾವಿ ನೋಡಿಕೊಳ್ಳಬೇಕಾಗುತ್ತಿತ್ತು. ಕಷ್ಟ ಎಲ್ರಿಗೂ ಬರುತ್ತೆ, ಛಲದಿಂದ ದುಡೀಬೇಕು ಅಷ್ಟೆ’
-ಗಂಗಮ್ಮ ಮಾನೆ

-ವಿದ್ಯಾಶ್ರೀ ಗಾಣಿಗೇರ

Advertisement

Udayavani is now on Telegram. Click here to join our channel and stay updated with the latest news.

Next