Advertisement

Haveri; ಎಸ್‌ಟಿಗೆ ಸೇರಿಸಲು ಗಂಗಾಮತ ಸಮಾಜ ಅರ್ಹ: ಸಿಎಂ ಸಿದ್ದರಾಮಯ್ಯ

08:40 PM Jan 15, 2024 | Team Udayavani |

ಹಾವೇರಿ: ಅಂಬಿಗ (ಗಂಗಾಮತ) ಸಮುದಾಯವನ್ನು ಪರಿಶಿಷ್ಟ ಪಂಗಡಕ್ಕೆ ಸೇರಿಸಲು ಈಗಾಗಲೇ ಎರಡು ಬಾರಿ ರಾಜ್ಯ ಸರ್ಕಾರವು ಕೇಂದ್ರ ಸರ್ಕಾರಕ್ಕೆ ಶಿಫಾರಸು ಮಾಡಿದೆ. ಈಗ ಕೇಂದ್ರ ಸರ್ಕಾರ ಮತ್ತೊಮ್ಮೆ ಕೇಳಿರುವ ಸ್ಪಷ್ಟೀಕರಣವನ್ನು ಶೀಘ್ರವೇ ಸಲ್ಲಿಸಲಾಗುವುದು ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದರು.

Advertisement

ತಾಲೂಕಿನ ನರಸೀಪುರದ ಶ್ರೀ ನಿಜಶರಣ ಅಂಬಿಗರ ಚೌಡಯ್ಯನವರ ಗುರುಪೀಠದಲ್ಲಿ ಶ್ರೀ ನಿಜಶರಣ ಅಂಬಿಗರ ಚೌಡಯ್ಯನವರ 6ನೇ ಶರಣ ಸಂಸ್ಕೃತಿ ಉತ್ಸವ ಹಾಗೂ ನಿಜಶರಣ ಅಂಬಿಗರ ಚೌಡಯ್ಯನವರ 904ನೇ ಜಯಂತ್ಯುತ್ಸವಕ್ಕೆ ದೋಣಿಗೆ ಹುಟ್ಟು ಹಾಕುವ ಮೂಲಕ ಉದ್ಘಾಟಿಸಿ ಅವರು ಮಾತನಾಡಿದರು. ಪರಿಶಿಷ್ಟ ವರ್ಗಕ್ಕೆ ಸೇರಲು ಈ ಸಮುದಾಯ ಸಂಪೂರ್ಣ ಅರ್ಹತೆ ಪಡೆದಿದ್ದು, ಕೇಂದ್ರ ಸರ್ಕಾರ ಈಗ ಪುನಃ ಕೇಳಿರುವ ಸ್ಪಷ್ಟೀಕರಣವನ್ನು ಸಂಬಂಧಿಸಿದ ಇಲಾಖೆಯಿಂದ ಮಾಹಿತಿ ತರಿಸಿ ಕೂಡಲೇ ಸ್ಪಷ್ಟೀಕರಣ ನೀಡಲಾಗುವುದು. ಬಳಿಕ ಕೇಂದ್ರ ಸಚಿವ ಪ್ರಹ್ಲಾದ್‌ ಜೋಶಿ ಕ್ರಮ ವಹಿಸಬೇಕು ಎಂದರು.

1996-97ರಲ್ಲೇ ದಿ. ಶಾಸಕ ನಾರಾಯಣರಾವ್‌ ಎಸ್‌ಟಿಗೆ ಸೇರಿಸಲು ಪ್ರಯತ್ನಿಸಿದ್ದರು ಅದನ್ನು ಎಂದಿಗೂ ಮರೆಯಬಾರದು. ದೋಣಿ ನಡೆಸುವುದು ಹಾಗೂ ಮೀನು ಹಿಡಿಯುವ ಕಾಯಕ ಅಂಬಿಗರದ್ದು, ಕಾಯಕದಲ್ಲಿ ಮೇಲು-ಕೀಳು ಎಂಬುದಿಲ್ಲ. ಮನುಷ್ಯರ ನಡುವೆ ತಾರತಮ್ಯ ಇರಬಾರದು. ಕಾಯಕವನ್ನು ಆಧರಿಸಿ ಮೇಲು, ಕೀಳು ಎಂದು ತಾರತಮ್ಯ ಮಾಡಿದ್ದರ ವಿರುದ್ಧ ಬಸವಾದಿ ಶರಣರು ಹೋರಾಟ ಮಾಡಿದ್ದರು. ಈ ಸಾಲಿನಲ್ಲಿ ಅಂಬಿಗರಚೌಡಯ್ಯ ಮೊದಲನೇ ಸಾಲಿನಲ್ಲಿ ನಿಲ್ಲುತ್ತಾರೆ. ಅದಕ್ಕೆ ಬಸವಣ್ಣನವರು ಇವರಿಗೆ ನಿಜಶರಣ ಎಂದು ಕರೆದರು ಎಂದರು.

ಬಸವಾದಿ ಶರಣರು ಕಾಯಕ ಮತ್ತು ದಾಸೋಹ ಎಂಬ ಎರಡು ತತ್ವಗಳನ್ನು ನೀಡಿದ್ದಾರೆ. ಕಾಯಕ ಎಂದರೆ ಉತ್ಪಾದನೆ, ದಾಸೋಹ ಎಂದರೆ ವಿತರಣೆ. ಕಾಯಕದಲ್ಲಿ ಎಲ್ಲರೂ ತೊಡಗಿ ಉತ್ಪಾದನೆಯನ್ನು ಎಲ್ಲರೂ ಹಂಚಿಕೊಳ್ಳಬೇಕು ಎನ್ನುವುದು ಇದರ ಅರ್ಥ. ಇನ್ನೊಬ್ಬರ ಗಳಿಕೆಯನ್ನು ಕುಳಿತು ಅನುಭವಿಸಬಾರದು ಎಂದರು.

ಮಕ್ಕಳು ಯಾವ ಕಾರಣದಿಂದಲೂ ವಿದ್ಯೆಯಿಂದ ವಂಚಿತರಾಗಬಾರದು. ಸಮಾಜದ ಅಸಮಾನತೆಯನ್ನು ಹೋಗಲಾಡಿಸಬೇಕು. ಪಟ್ಟಭದ್ರ ಹಿತಾಸಕ್ತಿಯ ವಿರುದ್ಧ ನಿಲ್ಲಬೇಕಾಗುತ್ತದೆ. ಬದಲಾವಣೆ ಬಯಸದ ಜನ ಆಗಲೂ ಇದ್ದರು, ಈಗಲೂ ಇದ್ದಾರೆ. ಅಂಬಿಗರ ಚೌಡಯ್ಯನವರ ಹಾದಿಯಲ್ಲಿ ನಡೆಯುವುದು ನಾವು ಅವರಿಗೆ ಸಲ್ಲಿಸುವ ನಿಜವಾದ ಗೌರವ. ಅವರ ವಿಚಾರಗಳನ್ನು ಜನರಿಗೆ ತಿಳಿಸಲು ಜಯಂತ್ಯುತ್ಸವವನ್ನು ಆಚರಿಸಲಾಗುತ್ತದೆ ಎಂದರು.

Advertisement

ಕೇಂದ್ರ ಸಚಿವ ಪ್ರಹ್ಲಾದ್‌ ಜೋಶಿ ಮಾತನಾಡಿ, ಅಂಬಿಗರ ಚೌಡಯ್ಯನವರು 12ನೇ ಶತಮಾನದಲ್ಲೇ ಸಮಾಜದ ಕಟ್ಟುಪಾಡುಗಳನ್ನು ವಿರೋಧಿ ಸಿದ್ದರು. ಸಮಾಜದಲ್ಲೀಗ ದ್ವೇಷ, ಅಸೂಯೆ ಬೆಳೆಯುತ್ತಿರುವ ಹೊತ್ತಿನಲ್ಲಿ ಇಂತಹ ಮಹಾನ್‌ ವ್ಯಕ್ತಿಗಳು ಬರೆದಿರುವ ವಚನಗಳನ್ನು ಓದಬೇಕು. ಅವು ದ್ವೇಷ ದೂರ ಮಾಡಲು ಪ್ರೇರಣೆ ಎಂದರು.
ಕಾರ್ಯಕ್ರಮದಲ್ಲಿ ನರಸೀಪುರ ಗುರುಪೀಠದ ಶಾಂತಭೀಷ್ಮ ಚೌಡಯ್ಯ ಸ್ವಾಮೀಜಿ, ಚರಮೂರ್ತಿ ಚರಂತೇಶ್ವರ ಮಠದ ಶರಣಬಸವ ದೇವರು, ಗುರುಮಹಾಂತ ಸ್ವಾಮೀಜಿ, ಜ್ಞಾನಪ್ರಕಾಶ ಸ್ವಾಮೀಜಿ, ಶಾಂತವೀರ ಸ್ವಾಮೀಜಿ, ಅನ್ನದಾನಿ ಬಸವಪ್ರಿಯ ಅಪ್ಪಣ್ಣ ಸ್ವಾಮೀಜಿ, ಬಸವಮಾಚಿದೇವ ಸ್ವಾಮೀಜಿ, ಇಮ್ಮಡಿ ಸಿದ್ದರಾಮೇಶ್ವರ ಸ್ವಾಮೀಜಿ, ಚಂದ್ರಶೇಖರ ಶಿವಾಚಾರ್ಯ ಸ್ವಾಮೀಜಿ, ನಿಜಗುಣದೇವರು, ಯೋಗಾನಂದ ಸ್ವಾಮೀಜಿ, ಸಚಿವರಾದ ಶಿವಾನಂದ ಪಾಟೀಲ, ಮಾಂಕಾಳ ವೈದ್ಯ, ಸಂಸದ ಜಿ.ಎಂ. ಸಿದ್ದೇಶ ಸೇರಿ ಹಲವರು ಇದ್ದರು.

ಆರ್ಥಿಕ, ಸಾಮಾಜಿಕ ಶಕ್ತಿ ಬೇಕು
ಅಂಬಿಗರ ಚೌಡಯ್ಯ ಅಭಿವೃದ್ಧಿ ನಿಗಮ ಸ್ಥಾಪನೆಯನ್ನು ಹಿಂದೆ ನಮ್ಮ ಅವಧಿ ಯಲ್ಲಿಯೇ ಮಾಡಲಾಯಿತು. ಆರ್ಥಿಕ ಶಕ್ತಿ ಇಲ್ಲದವರು ಸಮಾಜದ ಮುಖ್ಯ ವಾಹಿನಿಗೆ ಬರಲು ಸಾಧ್ಯವಿಲ್ಲ. ಸಮಸಮಾಜದ ಕನಸು ನನಸಾಗಲು ಆರ್ಥಿಕ, ಸಾಮಾಜಿಕ ಶಕ್ತಿ ಪ್ರತಿಯೊಬ್ಬರಿಗೂ ಬರಬೇಕು.
-ಸಿದ್ದರಾಮಯ್ಯ, ಸಿಎಂ

ಅಂಬಿಗರ ಸಮುದಾಯವನ್ನು ಎಸ್‌ಟಿಗೆ ಸೇರ್ಪಡೆಗೊಳಿಸುವ ನಿಟ್ಟಿನಲ್ಲಿ ಕೆಲ ಸ್ಪಷ್ಟೀಕರಣ ಕೇಳಲಾಗಿದ್ದು, ಅವುಗಳನ್ನು ರಾಜ್ಯ ಸರ್ಕಾರ ಕಳುಹಿಸಿಕೊಟ್ಟರೆ ಸಂಬಂಧಿ ಸಿದ ಅ ಧಿಕಾರಿಗಳು, ಸಚಿವರು, ಸಮುದಾಯದ ಮುಖಂಡರನ್ನು ಕರೆಸಿ ಚರ್ಚಿಸಿ ಎಸ್‌ಟಿ ಸೇರಿಸುವ ನಿಟ್ಟಿನಲ್ಲಿ ಪ್ರಾಮಾಣಿಕ ಪ್ರಯತ್ನ ಮಾಡಲಾಗುವುದು.
-ಪ್ರಹ್ಲಾದ್‌ ಜೋಶಿ, ಕೇಂದ್ರ ಸಚಿವ

Advertisement

Udayavani is now on Telegram. Click here to join our channel and stay updated with the latest news.

Next