Advertisement

ಪರಿಸರ ಸ್ನೇಹಿಯಾಗಲಿ ಗಣೇಶೋತ್ಸವ

10:30 AM Sep 06, 2018 | |

ಬೆಂಗಳೂರು: ಗಣೇಶನ ಮೂರ್ತಿಯ ಎತ್ತರಕ್ಕೆ ಕತ್ತರಿ ಹಾಕಲಾಗಿದೆ. ಪ್ರತಿಷ್ಠಾಪನೆಗೆ ಹಲವು ಪರವಾನಗಿ ಕಡ್ಡಾಯಗೊಳಿಸಲಾಗಿದೆ. ಮನೆ ಅಥವಾ ಬಿಬಿಎಂಪಿ ಟ್ಯಾಂಕರ್‌ನಲ್ಲೇ ವಿಸರ್ಜನೆ ಮಾಡಬೇಕೆಂದು ಸೂಚಿಸಲಾಗಿದೆ. ಹೀಗೆ ಹೊಸ ನಿಯಗಳು ಸೇರ್ಪಡೆಯಾಗುತ್ತಿವೆ. ಆದರೂ ವಿಘ್ನ ವಿನಾಯಕನ ಸಂಖ್ಯೆ ಮಾತ್ರ ವರ್ಷದಿಂದ ವರ್ಷಕ್ಕೆ ಹೆಚ್ಚುತ್ತಲೇ ಇದೆ! ಹೌದು, ಕಾಲ ಬದಲಾದಂತೆ ಧಾರ್ಮಿಕ ಆಚರಣೆಗಳು ಪ್ರಾಮುಖ್ಯತೆ ಕಳೆದುಕೊಳ್ಳುತ್ತಿವೆ ಎಂಬ ಮಾತಿದೆ. ಆದರೆ, ಗಣೇಶೋತ್ಸವ ಇದಕ್ಕೆ ಅಪವಾದ. ನಗರದಲ್ಲಿ ಪ್ರತಿ ವರ್ಷ ಗಣೇಶನ ಪ್ರತಿಷ್ಠಾಪನೆ ಸಂಖ್ಯೆ ಸರಾಸರಿ ಒಂದು ಲಕ್ಷ ಏರಿಕೆಯಾಗುತ್ತಿದೆ. ಆದರೆ, ಇದರ ಬೆನ್ನಲ್ಲೇ ಆಚರಣೆಯ ವಿಧಾನ ಪರಿಸರದ ಮೇಲೆ ಹಲವು ರೀತಿಯ ಸಮಸ್ಯೆಗಳನ್ನೂ ತಂದೊಡ್ಡುತ್ತಿದೆ.

Advertisement

ವಾಸ್ತವವಾಗಿ ನಗರದಲ್ಲಿ ಪ್ರತಿಷ್ಠಾಪಿಸಲಾಗುವ ಗಣೇಶ ಮೂರ್ತಿಗಳ ಲೆಕ್ಕವೇ ಇಲ್ಲ. ಆದರೆ, ವಿಸರ್ಜನೆಯಾಗುವ ಗಣೇಶನ ಲೆಕ್ಕ 4ರಿಂದ 5 ಲಕ್ಷ ಆಗುತ್ತದೆ. ಇನ್ನು ಮನೆಯ ಬಾವಿಗಳು, ಬಕೆಟ್‌ಗಳಲ್ಲಿ ತಿಂಗಳುಗಟ್ಟಲೆ ವಿಸರ್ಜನೆಯಾಗುವುದು ಸೇರಿದರೆ 8 ಲಕ್ಷ ದಾಟುತ್ತದೆ. ನಗರದ ಜನಸಂಖ್ಯೆ ಸರಿಸುಮಾರು 1.20 ಕೋಟಿಯಾಗಿದ್ದು, ಮನೆಗಳ ಸಂಖ್ಯೆ 20 ಲಕ್ಷ ದಾಟುತ್ತದೆ. ಇದರಲ್ಲಿ ಕನಿಷ್ಠ ಎಂಟು ಲಕ್ಷ ಮನೆಗಳಲ್ಲಿ ಗಣೇಶನನ್ನು ಪ್ರತಿಷ್ಠಾಪಿಸಲಾಗುತ್ತದೆ ಎಂದು ಬಿಬಿಎಂಪಿ ಅಧಿಕಾರಿಗಳು ತಿಳಿಸುತ್ತಾರೆ. ಇದರಿಂದ ಕೋಟ್ಯಂತರ ರೂಪಾಯಿ ವಹಿವಾಟು ನಡೆಯುತ್ತಿದ್ದು, ಪೆಂಡಾಲ್‌, ಹೂವು, ತರಕಾರಿ ಸೇರಿದಂತೆ ಪೂರಕ ಅಂಶಗಳಿಂದ ಸಾವಿರಾರು ಕುಟುಂಬಗಳಿಗೆ ಅನುಕೂಲವೂ ಆಗುತ್ತಿದೆ. 

ಆದರೆ, ಆಚರಣೆಯು ಇಂದು ಆಕರ್ಷಣೆಗೆ ಮೊರೆಹೋಗಿದೆ. ಭಕ್ತಿಗಿಂತ ಹೆಚ್ಚಾಗಿ ಭಕ್ತರ ಬೇಡಿಕೆ ತಕ್ಕಂತೆ ರೂಪುಗೊಳ್ಳುತ್ತಿದ್ದಾನೆ ಎಂಬ ಮಾತೂ ಇದೆ. ಹೀಗಾಗಿ, ಮಣ್ಣಿನಲ್ಲಿ ಮೂಡಿಬರುತ್ತಿದ್ದ ಸಾಂಪ್ರದಾಯಿಕ ಗಣಪ ಇಂದು ಆಕರ್ಷಕ ವಿನ್ಯಾಸಗಳಲ್ಲಿ ಟ್ರೆಂಡ್‌ಗೆ ತಕ್ಕಂತೆ ಮೂಡಿಬರುತ್ತಿದ್ದಾನೆ. ಬದಲಾದ ಈ ಪರಿಕಲ್ಪನೆಯಿಂದ ಉತ್ಸವ ಹಲವು ಸಮಸ್ಯೆಗಳನ್ನು ಹುಟ್ಟುಹಾಕುತ್ತಿದೆ.

ಶಾಸ್ತ್ರ-ಪುರಾಣಗಳೇ ಹೇಳುವಂತೆ ಗಣಪನ ಸೃಷ್ಟಿ ಮಣ್ಣಿನಿಂದಾಗಿದ್ದು, ಆತನಿಗೆ ಇರುವುದು ಆನೆಯ ಮುಖ. ಹಾಗಾಗಿ, ಗಣೇಶ ಅಪ್ಪಟ ಪರಿಸರದ ಪ್ರತೀಕ. ಆದರೆ, ಎಲ್ಲೆಡೆ ಇದಕ್ಕೆ ವಿರುದ್ಧವಾಗಿ ಗಣೇಶೋತ್ಸವ ಆಚರಿಸಲಾಗುತ್ತಿದೆ. ಮಣ್ಣಿನ ಗಣಪತಿಗೆ ಬದಲಾಗಿ ಪ್ಲಾಸ್ಟರ್‌ ಆಫ್ ಪ್ಯಾರಿಸ್‌ ಗಣಪ ಮಾರುಕಟ್ಟೆಗೆ ಬಂದಿದ್ದಾನೆ. ಶೇ.50ರಿಂದ 60ರಷ್ಟು ಗಣೇಶನ ಮೂರ್ತಿಗಳು ಪಿಒಪಿ ಮತ್ತು ರಾಸಾಯನಿಕ ಬಣ್ಣಗಳಿಂದ ಕೂಡಿರುತ್ತವೆ ಎಂದು ಮಾಲಿನ್ಯ ನಿಯಂತ್ರಣ ಮಂಡಳಿಯೇ ಹೇಳುತ್ತದೆ. ಈ ಕಾರಣದಿಂದ ಪ್ರತಿ ವರ್ಷ ರಾಜ್ಯದಲ್ಲಿ ಅದರಲ್ಲೂ ಬೆಂಗಳೂರಿನಂತಹ ಪ್ರಮುಖ ನಗರಗಳಲ್ಲಿ ಭಾರೀ
ಪ್ರಮಾಣದ ಜಲಮಾಲಿನ್ಯ, ಅಂತರ್ಜಲ ಮತ್ತು ವಾಯುಮಾಲಿನ್ಯ ಉಂಟಾಗುತ್ತಿದೆ. 

ಮಾರಾಟ ಎಲ್ಲಿ?
ಬಸವನಗುಡಿ, ಜಯನಗರ, ಜೆ.ಪಿ.ನಗರ, ಮಲ್ಲೇಶ್ವರ, ನ್ಯೂ ಬಿಇಎಲ್‌ ರಸ್ತೆ, ಗೋಕುಲ ಎಕ್ಸ್‌ಟೆನ್ಷನ್‌, ಬನಶಂಕರಿ, ಬನ್ನೇರುಘಟ್ಟ ರಸ್ತೆ ಪ್ರಮುಖ ಮಾರುಕಟ್ಟೆಯಾಗಿದೆ. ಜತೆಗೆ ನಗರದ ಎಲ್ಲಾ ಪ್ರಮುಖ ಪ್ರದೇಶಗಳಲ್ಲೂ ಗಣೇಶ ಮೂರ್ತಿಯ ಮಾರಾಟ ಭರಾಟೆ ಜೋರಾಗಿರುತ್ತದೆ. 

Advertisement

ಎಲ್ಲಿಂದ ಬಂದ ಗಣಪ?
ಸ್ಥಳೀಯವಾಗಿ ತಯಾರಾಗುವುದು ಮಾತ್ರವಲ್ಲದೇ ಮಹಾರಾಷ್ಟ್ರ, ತಮಿಳುನಾಡು, ಒಡಿಶಾ, ಪಶ್ಚಿಮ ಬಂಗಾಳ ಹಾಗೂ ಆಂಧ್ರಪ್ರದೇಶದ ತಿರುಪತಿಯಿಂದಲೂ ನಗರಕ್ಕೆ ಗಣೇಶನ ವಿಗ್ರಹಗಳು ಬರುತ್ತವೆ. ಇನ್ನು ಕೆಲವೆಡೆ ಕಲಾವಿದರನ್ನು ಕರೆತಂದು ವಿಗ್ರಹಗಳನ್ನು ತಮ್ಮ ಬೇಡಿಕೆಗೆ ತಕ್ಕಂತೆ ರೂಪಿಸಲಾಗುತ್ತದೆ.

ಏನು ಮಾಡಬಹುದು?
ನಗರದಲ್ಲಿ ನೋಂದಣಿಯಾದ ಸಂಘ-ಸಂಸ್ಥೆಗಳೇ ಅಂದಾಜು ನಾಲ್ಕೂವರೆ ಸಾವಿರಕ್ಕೂ ಅಧಿಕ. ನೋಂದಣಿಯಾದ ನಿವಾಸಿಗಳ ಕ್ಷೇಮಾಭಿವೃದ್ಧಿ ಸಂಘ (ರೆಸಿಡೆನ್ಸ್‌ ವೆಲ್‌ಫೇರ್‌ ಅಸೋಸಿಯೇಷನ್ಸ್‌) ಗಳು ಸುಮಾರು 400 ಇವೆ. ನಗರದಲ್ಲಿ ನೂರಕ್ಕೂ ಹೆಚ್ಚು ಗಣಪತಿ ತಯಾರಿಸುವ ಪ್ರಮುಖ ಕಲಾವಿದರು ಇದ್ದಾರೆ. ಅವರೆಲ್ಲರನ್ನೂ ಒಂದೇ ವೇದಿಕೆ ಅಡಿ ತಂದು “ಪರಿಸರ ಸ್ನೇಹಿ’ ಗಣೇಶೋತ್ಸವದ ಬಗ್ಗೆ ಅರಿವು ಮೂಡಿಸುವ ಕೆಲಸ ಆಗಬೇಕು. ಈ ವೇದಿಕೆಗಳು ಕಲಾವಿದರನ್ನು ಕರೆತಂದು, ತಮ್ಮ ವ್ಯಾಪ್ತಿಯಲ್ಲಿ ಪ್ರತಿಷ್ಠಾಪಿಸುವ ಗಣೇಶನನ್ನು ಸ್ಥಳೀಯ ಕಲಾವಿದರಿಂದ ಕೇವಲ ಮಣ್ಣಿನಿಂದ ತಯಾರಿಸುವ ಕೆಲಸ ಮಾಡಬಹುದು ಎಂದು ಸಲಹೆ ಮಾಡುತ್ತಾರೆ ತಜ್ಞರು. 

 ವಿಜಯಕುಮಾರ ಚಂದರಗಿ

Advertisement

Udayavani is now on Telegram. Click here to join our channel and stay updated with the latest news.

Next