Advertisement

Ganesha Festival: ಇಂದು ಗಣೇಶ ಚತುರ್ಥಿ; ವಿಘ್ನ ನಿವಾರಕ ವಿನಾಯಕ ವಿಶ್ವನಾಯಕನೂ ಹೌದು

04:34 AM Sep 07, 2024 | Team Udayavani |

ಭಾರತೀಯ ಸಂಸ್ಕೃತಿ ಮತ್ತು ಪರಂಪರೆಯಲ್ಲಿ ದೇವಾತಾರಾಧನೆಗೆ ವಿಶೇಷ ಮಹತ್ವ. ಹೀಗಾಗಿ ಪ್ರಾಚೀನ ಕಾಲದಿಂದಲೂ ನಾವು ಅನೇಕ ಹಬ್ಬ, ಹರಿದಿನಗಳನ್ನು ವಿವಿಧ ಬಗೆಯಲ್ಲಿ ಆಚರಿಸುತ್ತಾ ಬಂದಿದ್ದೇವೆ. ಹಬ್ಬ ಹರಿದಿನಗಳ ಆಚರಣೆಯಿಂದ ಮಾನವ ಜೀವನ ಪವಿತ್ರ ವಾಗಿ ಅಂತಃಕರಣ ಪರಿಶುದ್ಧವಾಗುತ್ತದೆ. ಮಾನವನು ದಾನವ ನಾಗದೆ ಆಧ್ಯಾತ್ಮಿಕ ಚಿಂತನೆ, ದೈವಭಕ್ತಿಯು ಜಾಗೃತವಾ­ಗಿರಲು ಇದು ಸಾಧನವಾಗಿರುತ್ತದೆ.ನಮ್ಮ ಆಚರಣೆಗಳು ಧಾರ್ಮಿಕ, ಆಧ್ಯಾತ್ಮಿಕ ಹಿನ್ನೆಲೆಯಿಂದ ಶ್ರೇಷ್ಠವೆನಿಸಿವೆ.

Advertisement

ದುರ್ಲಭವಾದ ಮಾನವ ಜನ್ಮದಲ್ಲಿ ಭಗವಂತನ ಅನುಗ್ರಹವನ್ನು ಪಡೆಯು ವುದೇ ಮುಖ್ಯ ಉದ್ದೇಶವಾಗಿರು­ವುದರಿಂದ ನಮ್ಮ ಲೌಕಿಕ ಜೀವನದೊಂದಿಗೆ ಧಾರ್ಮಿಕ, ಆಧ್ಯಾತ್ಮಿಕ ಸಂದೇಶಗಳನ್ನು ನಿತ್ಯ ಜೀವನದಲ್ಲಿ ಅಳವಡಿಸಿ­ಕೊಂಡು ಮಾನವ ಜೀವನ ಸಾರ್ಥಕಪಡಿಸಿಕೊಳ್ಳಬೇಕು.

ಗಣಪತಿಯ ಆರಾಧನಾ ಪರಂಪರೆಯಲ್ಲಿ ಎಲ್ಲ ದೇವತೆ ಗಳಿಂದ ಭಿನ್ನವಾಗಿ ಜನಪ್ರಿಯ ದೇವತೆಯಾಗಿ ಶಿವನ ಅನುಗ್ರಹ ದಿಂದ ಆದಿಪೂಜಿತನಾಗಿರುವುದರಿಂದ ನಾವು ಆಚರಿಸುವ ಎಲ್ಲ ಕರ್ಮಾಂಗಗಳಲ್ಲಿ ವಿಘ್ನ ನಿವಾರಕನಾದ ಗಣಪತಿಯನ್ನು ಆದಿಯಲ್ಲಿ ಪೂಜಿಸುತ್ತೇವೆ.

ಗಣಸಂಜ್ಞಕಾನಾಂ ದೇವಾನಾಂ ಪತಿಃ ಗಣಪತಿಃ ಎಂಬ ಹಲಾಯುಧಕೋಶದ ವಿವರಣೆಯಂತೆ ಗಣಗಳ ಅಧಿಪತಿ ಗಣಪತಿ. ಶಿವನ ಅನುಚರರನ್ನು ಗಣಗಳೆಂದರೆ ಅವರ ಒಡೆಯ ನಮ್ಮ ಗಣಪ. ಪಾರ್ವತಿಯ ಮುದ್ದಿನ ಕುವರನೂ, ಸುಬ್ರ ಹ್ಮಣ್ಯನ ಅಣ್ಣನೂ, ಸರ್ವರಿಂದಲೂ ಪ್ರಥಮಪೂಜಿತನು ಈ ಲಂಬೋದರ.

ಗಣಪತಿಯ ಹುಟ್ಟಿನ ಕಥೆ
ಪುರಾಣಗಳ ಪ್ರಕಾರ ಗಣಪತಿ ಶಿವ-ಪಾರ್ವತಿಯರ ಮುದ್ದಿನ ಮಗ. ಪಾರ್ವತಿಯು ತನ್ನ ಮನದಿಚ್ಛೆಯಂತೆ ಬೊಂಬೆಯೊಂ­ದಕ್ಕೆ ಜೀವ ಕೊಟ್ಟು ಕಾವಲಿಗಿರಿಸಿದಾಗ ಶಿವನು ತನಗೇ ಪ್ರವೇಶ ನೀಡದ ಕುವರನ ತಲೆ ತೆಗೆಯಲು ಮುಂದೆ ಸತಿಯ ಕೋರಿಕೆಯಂತೆ ಉತ್ತರ ದಿಕ್ಕಿನಲ್ಲಿ ಮಲಗಿದ್ದ ಆನೆಯ ಮೊಗ ವೊಂದನ್ನು ಜೋಡಿಸಿ ಜನ್ಮ ಕೊಟ್ಟದ್ದು ಕಂಡುಬರುತ್ತದೆ. ಈಶನ ಮಾನಸಪುತ್ರನೆಂದೂ ಕೆಲವೆಡೆ ಉಲ್ಲೇಖವಿದೆ. ಒಟ್ಟಾರೆ ಶಿವ-ಪಾರ್ವತಿಯರ ಸುತ ಎನ್ನುವ ವಿಷಯದಲ್ಲಿ ಯಾವ ಸಂಶಯವೂ ಇಲ್ಲ. ಅನಂತರ ದೇವತೆಗಳೆಲ್ಲರೂ ಸೇರಿ ಸರ್ವ- ಕಾರ್ಯಗಳಲ್ಲಿ ಪ್ರಥಮಪೂಜಿತನಾಗಲಿ ಎಂದು ವರವಿತ್ತು ಅನುಗ್ರಹಿಸಿದರು.

Advertisement

ಗಣಪತಿಯ ಮಹಿಮೆಯ ಕಥೆಗಳು
ಸುಬ್ರಹ್ಮಣ್ಯನ ಜತೆಗೆ ವಿಶ್ವಪರ್ಯಟನೆಗೆ ಹೊರಟ ಗಣಪ ತನ್ನ ಮಾತಾ-ಪಿತರಿಗೆ ನಮಿಸಿ ಜಗವನ್ನೇ ಸುತ್ತಿದ ಮಹಿಮೆ ಸಾರ್ವಕಾಲಿಕ ಸಂದೇಶ ನೀಡುವಂತಹದು. ತಂದೆ – ತಾಯಂದಿರೇ ಮಕ್ಕಳ ಪಾಲಿಗೆ ದೊಡ್ಡ ಜಗತ್ತು. ಅವರನ್ನು ಧಿಕ್ಕರಿಸಿ ಎಂದಿಗೂ ಒಳಿತಾಗದು ಎಂಬುದು. ಮಾತಾ-ಪಿತರನ್ನು ಆದರಿಸುವುದು ಮಕ್ಕಳ ಪಾಲಿನ ಕರ್ತವ್ಯವೂ ಹೌದು.

ಮತ್ತೊಂದು ಕಥೆ ರಾವಣನು ಆತ್ಮಲಿಂಗವನ್ನು ಈಶನಿಂದ ಪಡೆದು ಲಂಕೆಗೆ ಹೊರಟಾಗ ಸಂಧ್ಯೆಗೆ ನಿಂತ ರಾವಣನ ಬಳಿ ಲಿಂಗ ಪಡೆದು ರಾವಣನ ನಾಶವನ್ನು ಖಚಿತಪಡಿಸಿದ ಆ ವಾಮನ ರೂಪೀ ಗಣಪತಿ. ಲೋಕದಲ್ಲಿ ಕೆಡುಕು ಉಂಟು ಮಾಡುವುದನ್ನು ತಪ್ಪಿಸಲು ಗಟ್ಟಿ ಮನಸ್ಸು ಬೇಕೇ ಹೊರತು ದೇಹಶಕ್ತಿಯೋ ಖ್ಯಾತಿಯೋ ಅಲ್ಲ.

ದೇವಾನುದೇವತೆಗಳೆಲ್ಲ ಕೈಚೆಲ್ಲಿದ ಆ ಕಾರ್ಯವನ್ನು ಸಣ್ಣ ಗಣಪತಿ ಮಾಡಿ ತೋರಿಸಿ ನಮಗೆ ಮಾದರಿಯಾಗಿದ್ದಾನೆ. ಚಂದ್ರನು ಅಹಂಭಾವ ತೋರಿದಾಗ ಅವನಿಗೇ ಶಪಿಸಿ ಸೌಂದರ್ಯ – ಅಧಿಕಾರ – ಶ್ರೀಮಂತಿಕೆ ಇದಾವುದಿದ್ದರೂ ಅಹಂಕಾರ ಸಲ್ಲದು ಎಂಬ ಸಂದೇಶವನ್ನು ಸರ್ವರಿಗೂ ಉಪ­ದೇ­ಶಿ­ಸಿದ ಕೀರ್ತಿ ತನ್ನ ಕೃತಿಯಿಂದ ಎಂಬುದು ವಿಶೇಷ.

ಯಾವಾಗ ಗಣಪತಿ ಪೂಜಿಸಬೇಕು?
ಭಾದ್ರಪದ ಮಾಸದ ಚತುರ್ಥಿಯಂದು ಗಣಪತಿಯು ಸರ್ವತ್ರ ಪೂಜಿತನಾಗುವನು. ಹಿಂದಿನ ದಿನ ತಾಯಿ ಗೌರಿಯನ್ನು ಆರಾಧಿಸಿ ಮರುದಿನ ಮಗನ ಪೂಜೆ. ಸ್ಮತಿಗಳು ಈ ವಿಷಯದಲ್ಲಿ ಸಾಕಷ್ಟು ಶ್ಲೋಕಗಳನ್ನು ಉದಾಹರಿಸುತ್ತವೆ. ಉಳಿದಂತೆ ಕೃಷ್ಣಪಕ್ಷದ ಚತುರ್ಥಿ ಸಂಕಷ್ಟ ಕಳೆಯುವ ಚತುರ್ಥಿ ಆದರೆ ಶುಕ್ಲಪಕ್ಷದ ಚತುರ್ಥಿ ವಿನಾಯಕ ಚತುರ್ಥಿ ಎಂದು ಖ್ಯಾತವಾಗಿದೆ. ಈ ದಿನಗಳಲ್ಲೂ ಗಣಪನ ಪೂಜೆ ಪ್ರಸಿದ್ಧ.

ಪೂಜೆಯ ವಿಧಿ-ವಿಧಾನ ಏನು?
ಶುದ್ಧ ಮಣ್ಣಿನಲ್ಲಿ ಮಾಡಿದ ಗಣಪತಿಯ ವಿಗ್ರಹವನ್ನು ತಂದು ಮಂಟಪ ಸಿದ್ಧಪಡಿಸಿ ಮೋದಕ-ಚಕ್ಕುಲಿ ಮೊದಲಾದ ಭಕ್ಷÂಗಳನ್ನು ಸಿದ್ಧಪಡಿಸಿ ಮನೆಮಂದಿಯೆಲ್ಲ ಸೇರಿ, ಪೂಜಿಸಿ ಅಂದು ಅಥವಾ ಸಂಪ್ರದಾಯದಂತೆ ನೀರಿನಲ್ಲಿ ವಿಸರ್ಜಿಸಿ ಕೃತಾರ್ಥರಾಗುವುದು.

ಈ ಗಣಪನ ಪೂಜೆ ಪ್ರಕೃತಿ ಪೂಜೆಯೂ ಹೌದು. ವಿಗ್ರಹ ನಿರ್ಮಿಸಲು ಬಳಸುವ ಮಣ್ಣಿನಿಂದ ಹಿಡಿದು, ಪತ್ರೆ-ಪುಷ್ಪ, ಬೆಲ್ಲ-ಕಾಯಿ- ಹಿಟ್ಟು-ಎಣ್ಣೆ ಅಥವಾ ತುಪ್ಪದ ಮಿಶ್ರಣವಾದ ಮೋದಕವೂ ಮನೆಯಲ್ಲಿ ಸಿಗುವ ವಸ್ತುಗಳಿಂದಲೇ ತಯಾರಿಸುವಂತಹದು. ಕೊನೆಗೆ ವಿಸರ್ಜಿಸುವುದೂ ನೀರಿನಲ್ಲೇ . ಮಣ್ಣು ಕರಗಿ ನೀರಾಗಿ, ಹೂವು-ಪತ್ರೆ ಮೊದಲಾದವು ಗೊಬ್ಬರವಾಗಿ ಪ್ರಕೃತಿಗೇ ಮತ್ತೆ ಸೇರುವಂತಹವು. ಪರಿಸರ ಸಂರಕ್ಷಕರೆಲ್ಲರೂ ಈ ಹಬ್ಬ ಆಚರಿಸಲಡ್ಡಿಯಿಲ್ಲ.

ಗಣಪತಿ ಆಕಾರ ಏನನ್ನು ಸೂಚಿಸುತ್ತದೆ?
ಬುದ್ಧಿವಂತ ಪ್ರಾಣಿಗಳಲ್ಲಿ ಆನೆಯೂ ಒಂದು. ಆನೆಮೊಗವು ನಂಬಿಕೆ-ಬುದ್ಧಿವಂತಿಕೆಯನ್ನು ನಮಗೆ ಪ್ರಚೋದಿಸುತ್ತದೆ.
ಒಂದು ದಂತವು ದ್ವಂದ್ವಗಳನ್ನು ಮೀರಿ ಏಕತೆಯೆಡೆಗೆ ಸಾಗುವ ಮಾರ್ಗವನ್ನು ತೋರಿಸಿಕೊಡುತ್ತದೆ. ಅಗಲವಾದ ಕಿವಿ ಗಳು ಹೆಚ್ಚು ಆಲಿಸಿರಿ ಕಡಿಮೆ ಮಾತನಾಡಿ ಎಂಬ ಸಂದೇಶ ನೀಡುತ್ತದೆ. ಜ್ಞಾನಿಯಾಗಲು ಮೊದಲು ಉತ್ತಮ ಕೇಳುಗನಾಗ ಬೇಕು ಎಂಬ ಮಾತು ಇಲ್ಲಿ ಮನನೀಯ.

ದೊಡ್ಡ ಹೊಟ್ಟೆ ಸುಖ-ದುಃಖಗಳನ್ನೂ ಸಮಾನವಾಗಿ ಸ್ವೀಕರಿಸಿ ಮುನ್ನಡೆಯುವುದನ್ನು ಸಂಕೇತಿಸುತ್ತದೆ. ಆಡುಭಾಷೆ­ಯಲ್ಲಿ ಏನಾದರೂ ತಪ್ಪಿ ವ್ಯವಹರಿಸಿದರೆ ಹೊಟ್ಟೆಗೆ ಹಾಕಿಕೋ ಎನ್ನುತ್ತೇವೆ. ಅವನ ಹೊಟ್ಟೆಯನ್ನು ಸುತ್ತಿದ ಹಾವು ನಮ್ಮನ್ನು ಆವರಿಸಿದ ಕುಂಡಲಿನೀ ಶಕ್ತಿಯಾದರೆ ವಾಹನವಾದ ಇಲಿ ಕಾಲನಂತೆ ಸದಾ ನಮ್ಮ ಆಯುಷ್ಯವನ್ನು ಕತ್ತರಿಸುತ್ತದೆ. ಹೀಗೆ ಗಣಪತಿಯ ಸ್ವರೂಪವೇ ನಮ್ಮ ಜೀವನಕ್ಕೆ ಮಾರ್ಗದರ್ಶಕ.

ಸಾರ್ವಜನಿಕ ಗಣೇಶೋತ್ಸವ ಆಚರಣೆ
1893ರಲ್ಲಿ ಸ್ವಾತಂತ್ರ್ಯ ಹೋರಾಟಕ್ಕೆ ಮುನ್ನುಡಿ ಬರೆದ ಬಾಲಗಂಗಾಧರ ತಿಲಕರು ತಮ್ಮ ಕೇಸರಿ ಪತ್ರಿಕೆಯಲ್ಲಿ ಗಣೇಶ ಉತ್ಸವದ ಬಗ್ಗೆ ಹೊಗಳಿ ಬರೆದದ್ದು, ಸಮಾಜದಲ್ಲಿ ಸಂಚಲನ ಮೂಡಿಸಿತು. ಅನಂತರ ಸ್ವಾತಂತ್ರ್ಯ  ಸಂಗ್ರಾಮದ ವಿಷಯದಲ್ಲಿ ಸಮಾಜವನ್ನು ಒಂದುಗೂಡಿಸಲು ಇದು ಉತ್ತಮ ಮಾಧ್ಯಮವಾಗಬಹುದೆಂದು ನಿರ್ಧರಿಸಿದ ತಿಲಕರು ಸಾರ್ವಜನಿಕ ಗಣೇಶೋತ್ಸವ ಆಚರಣೆಗೆ ಚಾಲನೆ ನೀಡಿದರು.

ಜಾತಿ-ಮತ ಭೇದವಿಲ್ಲದೆ ಸಮಾಜವನ್ನು ಒಂದುಗೂಡಿಸಿ ಸಂಸ್ಕೃತಿಯನ್ನು ಉಳಿಸಿ, ಸಹಕಾರ ಮನೋಭಾವನೆ ಬೆಳೆಸಿ, ನಾವೆಲ್ಲರೂ ಭಾರತೀಯರು ಎಂಬ ಮನೋಭೂಮಿಕೆ ಮೂಡಿಸಲು ನಾಂದಿ ಹಾಡಿದ್ದೇ ಈ ಸಾರ್ವಜನಿಕ ಗಣೇಶೋತ್ಸವ ಆಚರಣೆಗಳು.

ಈಗಂತೂ ದೇಶದ ಲಕ್ಷಾಂತರ ಕಡೆಗಳಲ್ಲಿ ರಸ್ತೆ- ಗಲ್ಲಿ – ಓಣಿ – ಮನೆ -ಬ್ಯಾಂಕ್‌ – ಕಚೇರಿ-ನ್ಯಾಯಾಲಯ-ಪೊಲೀಸ್‌ ಸ್ಟೇಶನ್‌-ಆಟದ ಮೈದಾನ ಹೀಗೆ ಯಾವ ಭೇದವಿಲ್ಲದೆ ಆಚರಿಸಲ್ಪಡುವ ಈ ಗಣೇಶೋತ್ಸವವು ಸಾಮಾಜಿಕವಾಗಿ ಜನರನ್ನು ಸಂಸ್ಕೃತಿಯ ಹೆಸರಲ್ಲಿ ಒಂದುಗೂಡಿಸುತ್ತಿದೆ. ಸಣ್ಣ ಮಕ್ಕಳು, ಯುವಜನತೆ, ಹಿರಿಯ ನಾಗರಿಕರು ಹೀಗೆ ಆಬಾಲವೃದ್ಧರಿಗೂ ಪ್ರಿಯನಾದ ಈ ಏಕದಂತ ಏಕತೆಯ ಮೂರ್ತಿ ಎಂದರೂ ತಪ್ಪಿಲ್ಲ. ಕಾರ್ಯಗಳಲ್ಲಿ ಒದಗುವ ವಿಘ್ನಗಳನ್ನು ಪರಿಹರಿಸುವವನು, ಕ್ಷಿಪ್ರವಾಗಿ ಪ್ರಸನ್ನನಾಗು ವವನು, ಮೋದಕವನ್ನು ತಿಂದು ನಮಗೂ ಮುದವನ್ನು ತರು ವವನು ಹೀಗೆ ಎಲ್ಲ ವಯಸ್ಸಿನ ಜನರಿಗೂ ಗಣಪ ಪ್ರೀತಿಪಾತ್ರ.

ಗಣಪತಿಯ ಆರಾಧನೆಯಿಂದ ಸಜ್ಜನರಿಗೆ ತಮ್ಮ ಕಾರ್ಯಗಳಲ್ಲಿ ಇಷ್ಟಾರ್ಥಸಿದ್ಧಿಯಾಗಿ ಯಶಸ್ಸನ್ನು ಕಾಣುತ್ತಾರೆ. ಇನ್ನು ದುರ್ಜನರ ಕಾರ್ಯಗಳಿಗೆ ವಿಘ್ನಗಳು ಎದುರಾಗಿ ತಡೆಯುಂಟಾಗುತ್ತದೆ. ಆದುದರಿಂದ ಗಣಪತಿಯು ವಿಘ್ನನಾಶಕನೂ ವಿಘ್ನಕಾರಕನೂ ಆಗಿದ್ದಾನೆ. ಲೋಕ ನಾಯಕನಾದ ವಿಘ್ನ ನಿವಾರಕ ವಿನಾಯಕನ ಆರಾಧನೆಯಿಂದ ಸಮಸ್ತ ಲೋಕದ ಜನರು ಆಯುರಾರೋಗ್ಯ, ಐಶ್ವರ್ಯ, ಸುಖ, ಶಾಂತಿ, ನೆಮ್ಮದಿ ಪಡೆಯುವಂತಾಗಲಿ.

ಶ್ರೀನಿಧಿ ಅಭ್ಯಂಕರ್‌ , ಮೂಡುಬಿದಿರೆ

Advertisement

Udayavani is now on Telegram. Click here to join our channel and stay updated with the latest news.

Next