Advertisement

“ಗಾಳಿಪಟ-2′ಚಿತ್ರಕ್ಕೆ ಗಣೇಶ್‌-ದಿಗಂತ್‌ ಎಂಟ್ರಿ

09:20 AM Jul 31, 2019 | Lakshmi GovindaRaj |

“ಗಾಳಿಪಟ-2′ ಎಂದ ಕೂಡಲೇ ಮೊದಲು ನೆನಪಿಗೆ ಬರುವು ನಟ ಗೋಲ್ಡನ್‌ಸ್ಟಾರ್‌ ಗಣೇಶ್‌, ದಿಗಂತ್‌ ಮತ್ತದರ ಸೂತ್ರಧಾರ ನಿರ್ದೇಶಕ ಯೋಗರಾಜ್‌ ಭಟ್‌. ಸುಮಾರು ಹತ್ತು ವರ್ಷಗಳ ಹಿಂದೆ ಬಂದ “ಗಾಳಿಪಟ’ ಇಂದಿಗೂ ಸಿನಿಪ್ರಿಯ ಮನದಲ್ಲಿ ಹಸಿರಾಗೇ ಇದೆ. ಇನ್ನು ಯೋಗರಾಜ್‌ ಭಟ್‌ “ಪಂಚತಂತ್ರ’ ಚಿತ್ರದ ಬಳಿಕ “ಗಾಳಿಪಟ-2′ ಚಿತ್ರ ಮಾಡುವುದಾಗಿ ಕೆಲ ತಿಂಗಳ ಹಿಂದಷ್ಟೇ ಅಧಿಕೃತವಾಗಿ ಘೋಷಿಸಿದ್ದರು. “ಗಾಳಿಪಟ’ ಚಿತ್ರವನ್ನು ಭಟ್ಟರು ನಿರ್ದೇಶನ ಮಾಡಿದ್ದರಿಂದ, “ಗಾಳಿಪಟ-2′ ಚಿತ್ರದಲ್ಲೂ ಬಹುತೇಕ ಅದೇ ಕಲಾವಿದರು ಮತ್ತು ತಂತ್ರಜ್ಞರ ತಂಡ ಇರಬಹುದು ಎಂದು ಅನೇಕರು ನಿರೀಕ್ಷಿಸಿದ್ದರು.

Advertisement

ಆದರೆ “ಗಾಳಿಪಟ-2′ ಚಿತ್ರದ ಬಗ್ಗೆ ಸ್ವತಃ ಒಂದಷ್ಟು ಸಂಗತಿಗಳನ್ನು ತೆರೆದಿಟ್ಟಿದ್ದ ನಿರ್ದೇಶಕ ಯೋಗರಾಜ್‌ ಭಟ್‌, ಈ ಬಾರಿ ನಟರಾದ ಶರಣ್‌, ರಿಷಿ, ಲೂಸಿಯಾ ನಿರ್ದೇಶಕ ಪವನ್‌ ಕುಮಾರ್‌, ಆದಿತಿ ಪ್ರಭುದೇವ, ಶರ್ಮಿಳಾ ಮಾಂಡ್ರೆ, ಸೋನಲ್‌ ಮೊಂತೆರೋ ಒಟ್ಟಾಗಿ ಸೇರಿ “ಗಾಳಿಪಟ-2′ ಹಾರಿಸುತ್ತಿದ್ದಾರೆ ಎಂದು ಹೇಳಿದ್ದರು. ಅನೇಕರು ಭಟ್ಟರ ಮಾತಿಗೆ ಅಚ್ಚರಿಯನ್ನೂ ವ್ಯಕ್ತಪಡಿಸಿದ್ದರು. ಆದರೆ ಈಗ ಭಟ್ಟರ “ಗಾಳಿಪಟ-2’ಯೋಜನೆಯಲ್ಲಿ ಸ್ವಲ್ಪ ಬದಲಾವಣೆ ಆಗಿದೆ.

ಹಿಂದಿನ “ಗಾಳಿಪಟ’ದಂತೆಯೇ ಈ ಬಾರಿ ಕೂಡ ನಟರಾದ ಗಣೇಶ್‌, ದಿಗಂತ್‌ ಅವರ ಕೈಯಲ್ಲೇ “ಗಾಳಿಪಟ-2′ ಹಾರಿಸಲು ಭಟ್ಟರು ಸಿದ್ಧತೆ ಮಾಡಿಕೊಳ್ಳುತ್ತಿದ್ದಾರೆ. ಹೌದು, ಯೋಗರಾಜ್‌ ಭಟ್ಟರು ಈ ಮೊದಲು ಘೋಷಿಸಿದ್ದ “ಗಾಳಿಪಟ-2′ ಚಿತ್ರದ ಪ್ರಮುಖ ಕಲಾವಿದರ ಪಟ್ಟಿಯಲ್ಲಿ ಸ್ವಲ್ಪ ಮಟ್ಟಿಗೆ ಬದಲಾವಣೆ ಆಗಿದೆ. ನಟರಾದ ಶರಣ್‌ ಮತ್ತು ರಿಷಿ ಅವರ ಜಾಗಕ್ಕೆ ಮತ್ತೆ ಗಣೇಶ್‌, ದಿಗಂತ್‌ ಅವರನ್ನು ಕರೆತರುವ ಯೋಚನೆಯಲ್ಲಿರುವ ಭಟ್ಟರು ಅದಕ್ಕಾಗಿ ಚಿತ್ರತಂಡದಲ್ಲಿ ಕೊಂಚ ಬದಲಾವಣೆ ಮಾಡಿಕೊಳ್ಳುತ್ತಿದ್ದಾರೆ.

ಇನ್ನು “ಗಾಳಿಪಟ’ ಚಿತ್ರದಲ್ಲಿ ರಾಜೇಶ್‌ ಕೃಷ್ಣನ್‌ ಅವರು ಅಭಿನಯಿಸಿದ್ದರೆ, “ಗಾಳಿಪಟ-2’ನಲ್ಲಿ “ಲೂಸಿಯಾ’ ನಿರ್ದೇಶಕ ಪವನ್‌ ಕುಮಾರ್‌ ಅವರನ್ನು ತಂಡಕ್ಕೆ ಸೇರಿಸಿಕೊಂಡಿದ್ದರು. ಈಗ “ಗಾಳಿಪಟ-2′ ಚಿತ್ರದ ಇಬ್ಬರು ನಾಯಕ ನಟರು ಬದಲಾವಣೆ ಆಗಿರುವುದರಿಂದ ಮೂರನೇ ನಾಯಕ ಪವನ್‌ ಕುಮಾರ್‌ ಕೂಡ ಬದಲಾಗುತ್ತಾರಾ, ಅಥವಾ ತಂಡದಲ್ಲಿ ಮುಂದುವರೆಯುತ್ತಾರಾ. ಉಳಿದಂತೆ ಈಗಾಗಲೇ ಚಿತ್ರತಂಡದಲ್ಲಿ ಗುರುತಿಸಿಕೊಂಡಿರುವ ಆದಿತಿ ಪ್ರಭುದೇವ, ಶರ್ಮಿಳಾ ಮಾಂಡ್ರೆ, ಸೋನಲ್‌ ಮೊಂತೆರೋ ಅವರು ಚಿತ್ರದಲ್ಲಿ ಇರುತ್ತಾರಾ, ಎಂಬುದು ಇನ್ನಷ್ಟೇ ಗೊತ್ತಾಗಬೇಕಿದೆ.

ಮೂಲಗಳ ಪ್ರಕಾರ, ಆಗಸ್ಟ್‌ ಮೊದಲ ವಾರದಿಂದ “ಗಾಳಿಪಟ-2′ ಚಿತ್ರದ ಚಿತ್ರೀಕರಣ ಆರಂಭವಾಗಲಿದೆ ಎನ್ನಲಾಗಿತ್ತು. ಆರಂಭದಲ್ಲಿ ಕರ್ನಾಟಕದ ಕುದುರೆಮುಖ, ಮೈಸೂರು, ಮಂಗಳೂರು, ಬೆಂಗಳೂರು ಸೇರಿದಂತೆ ಹಲವು ಸ್ಥಳಗಳಲ್ಲಿ ಚಿತ್ರೀಕರಣ ನಡೆಸಲು ಉದ್ದೇಶಿಸಿದ್ದ ಚಿತ್ರತಂಡ ಬಳಿಕ ಲಂಡನ್‌, ಮಲೇಶಿಯಾ ಮತ್ತಿತರ ಸ್ಥಳಗಳಲ್ಲಿ ಚಿತ್ರೀಕರಣ ನಡೆಸಲು ಪ್ಲಾನ್‌ ಹಾಕಿಕೊಂಡಿತ್ತು. ಆದರೆ ಸದ್ಯ ಚಿತ್ರತಂಡದಲ್ಲಿ ಮೇಜರ್‌ ಸರ್ಜರಿ ಆಗಿರುವುದರಿಂದ “ಗಾಳಿಪಟ-2′ ಚಿತ್ರದ ಚಿತ್ರೀಕರಣ ಕೆಲಕಾಲ ಮುಂದೆ ಹೋಗುವ ಸಾಧ್ಯತೆ ಇದೆ ಎನ್ನಲಾಗಿದೆ.

Advertisement

“ಗಾಳಿಪಟ-2′ ನಂತರ ಶರಣ್‌ ಜೊತೆ ನಾನು ಹೊಸ ಸಿನಿಮಾವೊಂದನ್ನು ಮಾಡಲಿದ್ದು, ಈ ಚಿತ್ರವನ್ನು ಮಹೇಶ್‌ ದಾನಣ್ಣವರ್‌ ನಿರ್ಮಿಸಲಿದ್ದಾರೆ. ನಾಯಕ ರಿಷಿ ಅವರು ಮೋಹನ್‌ ಸಿಂಗ್‌ ನಿರ್ದೇಶನದ ಚಿತ್ರದಲ್ಲಿ ನಟಿಸುತ್ತಿರುವುದರಿಂದ ಅವರ ದಿನಾಂಕ ಹೊಂದಿಕೆಯಾಗದೇ “ಗಾಳಿಪಟ-2′ ಮುಖ್ಯಭೂಮಿಕೆಯಲ್ಲಿ ಇರಲು ಸಾಧ್ಯವಾಗುತ್ತಿಲ್ಲ. ಚಿತ್ರದಲ್ಲಿ ರಾಜೇಶ್‌ ಕೃಷ್ಣನ್‌ ಅವರ ಗೌರವ ಪಾತ್ರದಲ್ಲಿ ನಟಿಸುವ ಸಾಧ್ಯತೆ ಇದೆ.
-ಯೋಗರಾಜ್‌ ಭಟ್‌, ನಿರ್ದೇಶಕ

Advertisement

Udayavani is now on Telegram. Click here to join our channel and stay updated with the latest news.

Next