Advertisement

Ganesh Chaturthi 2023: ನಮ್ಮೊಳಗಿನ ಗಣಪತಿ, ನಮ್ಮರಿವ ಮೀರಿದ ಬ್ರಹ್ಮಾಸಿ

05:02 PM Sep 18, 2023 | Team Udayavani |

ಭಾರತೀಯ ದೇವರ ರೂಪಗಳನ್ನು ಹಿಂದೆ ದೇಶವನ್ನಾಳಿದ್ದ ಬ್ರಿಟಿಷರಿಗೆ ಅರ್ಥ ಮಾಡಿಕೊಳ್ಳಲು ಸಾಧ್ಯವೇ ಆಗಿರಲಿಲ್ಲ.
ಅದಕ್ಕೂ ಮೊದಲು ಈ ದೇಶದ ಮೇಲೆ ಬರ್ಬರವಾಗಿ ದಾಳಿ ಮಾಡಿದ್ದ ಮೊಘಲರು, ಅರಬ್ಬರಿಗಂತೂ ದೇವಸ್ಥಾನಗಳು ಕೊಳ್ಳೆ
ಹೊಡೆಯುವ ಜಾಗವಾಗಿದ್ದವು. ಅವರಿಗೆ ಅಲ್ಲಿದ್ದ ನಿಧಿ ಕಾಣಿಸುತ್ತಿತ್ತೇ ಹೊರತು, ದೇಗುಲಗಳ ಗಾಢ, ಗೂಢ, ಸೂಕ್ಷ್ಮ, ತೀಕ್ಷ್ಣ , ಅಗಾಧ ಅರ್ಥ-ಶಕ್ತಿ ಕಾಣಲೇ ಇಲ್ಲ. ಜಾತಿವಾದಗಳಲ್ಲಿ ಮುಳುಗಿದ್ದ ಇಲ್ಲಿನ ಜನರೂ ಅದನ್ನು ಬಿಡಿಸಿಹೇಳುವ ತಾಕತ್ತು ಕಳೆದುಕೊಂಡಿ ದ್ದರು. ಹಾಗಿರುವಾಗ ಹೊರದೇಶೀಯರಿಗಿರಲಿ, ಈ ಹೊತ್ತಿಗಾದರೂ ನಮಗೆ ಗಣಪತಿ ಎಂಬ ದೇವತತ್ತ್ವವನ್ನು ಅರಿಯಲು ಆಗಿದೆಯಾ?

Advertisement

ಒಂದು ವೇಳೆ ಆಗಿದೆ ಎನ್ನುವುದೇ ನಮ್ಮ ಉತ್ತರ ಆಗಿದ್ದಲ್ಲಿ, ಅದನ್ನೊಮ್ಮೆ ಒರೆಹಚ್ಚಿ ನೋಡಿಕೊಳ್ಳುವುದು ಒಳಿತು. ಆಗಿಲ್ಲ
ಎನ್ನುವುದಾದರೆ “ತ್ವಮೇವ ಸರ್ವಂ ಖಲ್ವಿದಂ ಬ್ರಹ್ಮಾಸಿ’ ಎಂಬುದನ್ನು ಮತ್ತೆಮತ್ತೆ ಮನನ ಮಾಡಬಹುದು. ಮನನಾತ್‌ ತ್ರಾಯತೇ ಇತಿ ಮಂತ್ರಃ ಎನ್ನುವುದು ಮಂತ್ರ ಪದದ ಅರ್ಥವಿವರಣೆ. ಮನನ ಮಾಡಿಕೊಳ್ಳುತ್ತ ಇರುವಾಗ ಯಾವುದು ನಮ್ಮನ್ನು ರಕ್ಷಿಸುತ್ತೋ ಅದು ಮಂತ್ರ! ಸರ್ವಂ ಖಲ್ವಿದಂ ಬ್ರಹ್ಮಾಸಿ ಎನ್ನುವುದು ಅಥರ್ವಣ ವೇದದ ಗಣಪತಿ ಉಪನಿಷತ್‌ನಲ್ಲಿ ಬರುವ ಅಥರ್ವಶೀರ್ಷ ಗಣಪತಿಯಲ್ಲಿನ ಒಂದು ಮಂತ್ರ.

ಇಡೀ ಅಥರ್ವಶೀರ್ಷದಲ್ಲಿ ಗಣಪತಿಯ ಸ್ವರೂಪವನ್ನು ಬಿಡಿಸಲಾಗಿದೆ. ಗಣಕಯಂತ್ರ ಅಂತ ನಾವು ಭಾರತೀಯರು ಕಂಪ್ಯೂಟರ್‌ಗೆ ಕರೆದಿದ್ದೇವಲ್ಲ, ಅದು ಅಥರ್ವಶೀರ್ಷವನ್ನು ಜಗತ್ತಿಗೆ ಕೊಟ್ಟಿರುವ ಗಣಕ ಋಷಿಯ ಹೆಸರಿನಿಂದಲೇ ಹುಟ್ಟಿರುವುದು! ವಿಶೇಷವೆಂದರೆ ಗಣಪತಿ ಶಿವನಪುತ್ರ ಗಣಪನಲ್ಲ, ಆತ ಬೃಹಸ್ಪತಿ ಎಂದು ಕೆಲವರು ಹೇಳುತ್ತಾರೆ. ಬೃಹಸ್ಪತಿ ಮಂತ್ರಗಣಗಳಿಗೆ ಪತಿ, ಆತನೇ ಗಣಪತಿ ಎನ್ನುವುದು ಇಲ್ಲಿನ ತರ್ಕ. ಇದು ಯೋಚಿಸಲು ಯೋಗ್ಯವಾದ ಸಂಗತಿ. ಆದರೆ ಗಣಕ ಋಷಿ ಕೊಟ್ಟಿರುವ ಅಥರ್ವಶೀರ್ಷದಲ್ಲಿ ಗಣಪತಿಯ ಸ್ವರೂಪ, ರೂಪ, ಬಣ್ಣ ಎಲ್ಲವನ್ನೂ ಹೇಳಲಾಗಿದೆ.

ಓಂ ನಮಸ್ತೆ ಗಣಪತಯೇ ಎಂದು ಶುರುವಾಗುವ ಮಂತ್ರ ಮುಂದೆ ಅದ್ಭುತಗೊಳ್ಳುತ್ತ, ಅಸಾಧಾರಣಗೊಳ್ಳುತ್ತ, ಅಗಾಧಗೊಳ್ಳುತ್ತ, ವಿಸ್ಮಯಗೊಳಿಸುತ್ತ ಹೋಗಿ, ಕಡೆಗೆ ನಿಗೂಢವಾಗಿ ನಿಲ್ಲುತ್ತದೆ. ಅರಿಯಬೇಕಾದರೆ, ಏರಬೇಕು, ಆಳಕ್ಕೆ ಇಳಿಯಬೇಕು ಎಂದು ಕಲಿಸುತ್ತದೆ. ತ್ವಮೇವ ಪ್ರತ್ಯಕ್ಷಂ ತಣ್ತೀಮಸಿ ಎನ್ನುತ್ತದೆ ಮುಂದಿನ ಸಾಲು. ತತ್ವಂ ಅಸಿ ಅಂದರೆ ಆ ಪರಾಶಕ್ತಿಯೇ ನೀನು ಎನ್ನುವುದು. ತ್ವಮೇವ ಸರ್ವಂ ಖಲ್ವಿದಂ ಬ್ರಹ್ಮಾಸಿ ಎನ್ನುವಾಗ ಇಡೀ ಬ್ರಹ್ಮಾಂಡವನ್ನು ತುಂಬಿಕೊಂಡಿರುವ ಆ ಬ್ರಹ್ಮವೇ ನೀನು ಎಂಬ ಅರ್ಥ ಬರುತ್ತದೆ. ಇಡೀ ಬ್ರಹ್ಮಾಂಡವನ್ನು ತುಂಬಿಕೊಂಡಿರುವ ಆ ಬ್ರಹ್ಮ ಹೇಗಿದೆ? ಎಂಬ ಪ್ರಶ್ನೆ ನಮ್ಮಲ್ಲೀಗ ಹುಟ್ಟಿಕೊಳ್ಳಲಿ. ಆಗ ಆ ಮಾತನ್ನು ಹೇಳಿರುವ ಗಣಕ ಋಷಿಯ ಜ್ಞಾನದ ಎತ್ತರವೇನು ಎಂದು ಹೊಳೆಯುತ್ತದೆ.

ಅದೇ ನೀನು, ಆ ಬ್ರಹ್ಮವೇ ನೀನು ಎನ್ನುವಾತ ಅದನ್ನು ಸುಮ್ಮನೆ ಮಾತಿಗೆ ಹೇಳಲು ಸಾಧ್ಯವೇ? ಮಾತಿಗೆ ಹೇಳುವವರಿರಬಹುದು, ಅಂತಹ ಮಾತುಗಳೆಲ್ಲ ಮಂತ್ರವಾಗಲು ಸಾಧ್ಯವೇ? ಯಾವಾಗ ಈ ಮಂತ್ರ ಜಗತ್ತಿಗೆ ನೀಡಲ್ಪಟ್ಟಿತು ಎಂದು ಗೊತ್ತಿಲ್ಲದಿದ್ದರೂ, ಇಂದಿಗೂ ಅಥರ್ವಶೀರ್ಷವನ್ನು ನಿರಂತರವಾಗಿ ಬಳಸಲಾಗುತ್ತದೆ. ಅದರ ಬೆಳಕನ್ನು, ಪರಮಶಾಂತಿಯನ್ನು ಈಗಲೂ ಪಡೆಯುತ್ತಿದ್ದಾರೆ. ಅದನ್ನು ಧ್ಯಾನಕ್ಕೆ ಬಳಸುತ್ತಾರೆ, ಪೂಜೆಗೆ ಬಳಸುತ್ತಾರೆ, ಯಜ್ಞಕ್ಕೆ ಬಳಸುತ್ತಾರೆ, ಮನನಕ್ಕೆ ಬಳಸುತ್ತಾರೆ, ಅದ್ವೆ„ತದ  ಪರಮತಣ್ತೀವನ್ನು ಹೇಳಲೂ ಬಳಸುತ್ತಾರೆ. ದ್ವೈತ, ವಿಶಿಷ್ಟಾದ್ವೈತಿಗಳೂ ಬಳಸುತ್ತಾರೆ.

Advertisement

ಇದೇ ಮಂತ್ರದಲ್ಲಿ ಓಂ ಗಂ ಗಣಪತಯೇ ನಮಃ ಎಂಬ ಬೀಜಾಕ್ಷರ ಬರುತ್ತದೆ. ಗಣಪತಿಯ ಆರಾಧಕರು ಇದನ್ನು ಕಡ್ಡಾಯವಾಗಿ ಬಳಸುತ್ತಾರೆ. ವಿಚಿತ್ರವೆಂದರೆ ಪ್ರಸ್ತುತ ನಮ್ಮೆಲ್ಲರಲ್ಲೂ ಒಂದು ಗಣಪತಿಯ ರೂಪ ಕಟ್ಟಿಕೊಂಡಿದೆ. ಆ ಹೆಸರು ಹೇಳಿದ ಕೂಡಲೇ ಆ ರೂಪ ಬಂದು ನಿಲ್ಲುತ್ತದೆ. ಅದರಿಂದ ಹೊರಬರುವುದು ಕಷ್ಟ. ಓಂ ಗಂ ಗಣಪತಯೇ ನಮಃ ಎಂದಾಗ, ಸಾವಿರಾರು ವರ್ಷಗಳಿಂದ ಪರಂಪರೆಯಿಂದ ಪರಂಪರೆಗೆ ಹರಿದುಬಂದಿರುವ ಗಜಮುಖನ ರೂಪವೇ ಕಾಣುತ್ತದೆ. ಹಿಂದಿನೆಲ್ಲ ವರ್ಣನೆಗಳನ್ನು ಪಕ್ಕಕ್ಕೆ ಇಟ್ಟು, ಗಣಪತಯೇ ನಮಃ ಎಂದು ನಮಸ್ಕರಿಸಿದರೆ, ನಮ್ಮ ಭಾವವೇ ಬದಲಾಗುತ್ತದೆ. ಇಲ್ಲಿ ಕಾಣಿಸುವುದು ಎಲ್ಲ ರೂಪಗಳನ್ನು ಮೀರಿದ್ದು. ರೂಪರೂಪಗಳನು ದಾಟುವಾಗ, ನಾಮಕೋಟಿಗಳನು ಮೀಟುವಾಗ, ಎದೆಯ ಬಿರಿಯೆ ಭಾವದೀಟಿ ಎನ್ನುವಾಗ ಚೇತನ ಅನಿಕೇತನವಾಗುತ್ತದೆ.

ಅಂದರೆ ಅಲ್ಲಿ ಕಾಣುವ ಗಣಪತಿ, ಆತ ಪರಂಬ್ರಹ್ಮ! ಈ ಪರಮಬ್ರಹ್ಮನನ್ನು ವಿವರಿಸಲು ಸಾಧ್ಯವಿಲ್ಲ, ಅರಿಯಲು ಸಾಧ್ಯವಿದೆ. ಕೇವಲ ನಮಗಿರುವ ಶಬ್ದಸಂಪತ್ತಿನಿಂದ ವಿವರಿಸುವುದಾದರೆ ಬೃಹ್‌ ಎಂಬ ಧಾತುವಿನಿಂದ ಬ್ರಹ್ಮ ಶಬ್ದ ಬಂತು. ಬೃಹತ್ತಾಗುವುದು, ವಿಸ್ತರಿಸುವುದು ಎನ್ನುವುದು ಬೃಹ್‌ನ ಅರ್ಥ. ಈ ವಿಸ್ತಾರದ ವ್ಯಾಪ್ತಿಯನ್ನು ಅರಿಯಲು ಸಾಧ್ಯವಿಲ್ಲ ಎಂಬ ಕಾರಣಕ್ಕೆ ಅದನ್ನು ಅನಂತ, ಆದಿಮಧ್ಯಾಂತರಹಿತ ಎನ್ನಲಾಯಿತು. ಅಥರ್ವಶೀರ್ಷದಲ್ಲಿಯೇ ಏಕದಂತಾಯ ವಿದ್ಮಹೇ ವಕ್ರತುಂಡಾಯ ಧೀಮಹಿ, ತನ್ನೋ ದಂತೀ ಪ್ರಚೋದಯಾತ್‌ ಎಂಬ ಗಾಯತ್ರೀ ಮಂತ್ರವಿದೆ. ಗಣಪತಿಗೆ ಈಗಿರುವ ರೂಪಕ್ಕೆ
ಈ ಗಾಯತ್ರೀ ಮಂತ್ರವೂ ಒಂದು ಕಾರಣ. ಒಂದೇ ದಂತ ಹೊಂದಿರುವವನು ಏಕದಂತ. ಆದರೆ ವಕ್ರತುಂಡ ಎಂಬ ಪದದ ಅರ್ಥವನ್ನು ಇದುವರೆಗೆ ನಿಖರವಾಗಿ ಬಿಡಿಸಲು ಆಗಿಲ್ಲ. ಬಾಗಿರುವ ಸೊಂಡಿಲು ಹೊಂದಿರುವವನು, ವಕ್ರವಾಗಿರುವ ಮುಖವನ್ನು ಹೊಂದಿರುವವನು ಎಂಬ ವಿವರಣೆಗಳಿವೆ. ತುಂಡಾಗಿದ್ದರಿಂದ ವಕ್ರವಾಗಿರುವ ದಂತ ಹೊಂದಿರುವಾತ ಎಂದೂ ಹೇಳುತ್ತಾರೆ. ಈ ಅರ್ಥವನ್ನು ತಿಳಿಯಬೇಕಾದರೆ ಗಣಪತಿಯ ಭಾವದಲ್ಲಿ ಮುಳುಗಬೇಕಾಗುತ್ತದೆ.

ಸೂಕ್ಷ್ಮವಾಗಿ ವಿವೇಚಿಸಬೇಕಾದ ಸಂಗತಿಯೆಂದರೆ ಅಥರ್ವಶೀರ್ಷದಲ್ಲೆಲ್ಲೂ ಗಣಪತಿಯನ್ನು ಆನೆಯ ಮುಖ ಹೊಂದಿರುವವನು ಎಂದು ಹೇಳಿಲ್ಲ. ಹಾಗಾದರೆ ಗಣಪತಿಗೆ ಆನೆಯ ಮುಖ ಬಂದಿದ್ದೆಲ್ಲಿಂದ ಎಂದರೆ ಅದಕ್ಕೆ ಪುರಾಣವನ್ನು ತೋರಿಸಬೇಕಾಗುತ್ತದೆ! ಈ ಮಂತ್ರ ಮತ್ತು ಪುರಾಣಗಳ ಕಥೆಗಳ ನಡುವೆ ಹೋಲಿಕೆ ಬರುವುದರಿಂದ ಗಣಪನನ್ನು ಆನೆಯ ಸ್ವರೂಪದಲ್ಲಿ ನೋಡುವ ಒಂದು ಕ್ರಮ ಬೆಳೆದು ಬಂತು. ಅಥರ್ವಶೀರ್ಷದ ಪ್ರಕಾರ ಆತನಿಗೆ ಒಂದು ಹಲ್ಲಿದೆ, ಮೊರದಂತಹ ಕಿವಿಗಳನ್ನು ಹೊಂದಿದ್ದಾನೆ, ನಾಲ್ಕು ಕೈಗಳಿವೆ, ರಕ್ತವರ್ಣ ಅಂದರೆ ಕೆಂಬಣ್ಣದವನಾಗಿದ್ದಾನೆ.

ಇಲಿಯೇ ಅವನ ಧ್ವಜವಾಗಿದೆ. ಇಲಿ ಅವನ ವಾಹನ ಎಂದು ಇಲ್ಲಿ ಹೇಳಿಲ್ಲ. ಅವನ ಒಂದು ಕೈಯಲ್ಲಿ ಅಂಕುಶ, ಇನ್ನೊಂದರಲ್ಲಿ ಪಾಶವಿದೆ. ಒಂದು ಕೈ ಮೂಲಕ ಬೇಡಿದ್ದೆಲ್ಲವನ್ನೂ ಕೊಡುವ ವರಮುದ್ರೆಯಿದೆ, ಮತ್ತೊಂದರಲ್ಲಿ ರಕ್ಷಣೆ ನೀಡುವ ಅಭಯಮುದ್ರೆಯಿದೆ. ಹೀಗಾಗಿ ಅಭಯ, ವರ, ಅಂಕುಶ, ಪಾಶದ ಮಂತ್ರಗಳನ್ನು ಸಿದ್ಧಪಡಿಸಿ, ಪ್ರತ್ಯೇಕವಾಗಿ ಆರಾಧಿಸುವ ಒಂದು ಕ್ರಮವೂ ಇದೆ. ತಂತ್ರಸಾಧಕರು, ಮಂತ್ರಸಾಧಕರು ಪ್ರತ್ಯೇಕ, ಪ್ರತ್ಯೇಕವಾಗಿ ಆರಾಧಿಸುತ್ತಾರೆ.

ಗಣಪತಿ ಶಿವಸುತ ಎಂದು ಅಥರ್ವಶೀರ್ಷದಲ್ಲಿ ಹೇಳಲಾಗಿದೆ. ಈಗ ಒಂದು ಹಲ್ಲಿರುವ, ಕಿವಿ ಸ್ವಲ್ಪ ದೊಡ್ಡದಿರುವ, ಮುಖ ಸ್ವಲ್ಪ ತಿರುಗಿದಂತೆ (ವಕ್ರ) ಇರುವ, ಹೊಟ್ಟೆ ಉಬ್ಬಿರುವ, ರಕ್ತವರ್ಣದ ಒಂದು ಮನುಷ್ಯ ರೂಪವನ್ನು ಊಹಿಸಿಕೊಳ್ಳಿ! ಈಗ ಆತನಿಗೆ ನಾಲ್ಕು ಕೈಗಳನ್ನು ಏಕೆ ನೀಡಿರಬಹುದು? ಪಾಶ, ಅಂಕುಶ, ಅಭಯ, ವರಮುದ್ರೆಗಳ ಅರ್ಥವೇನೆಂದು ಚಿಂತಿಸಿ. ಪಾಶ ಅನ್ನುವುದು ಭೂಮಿಯಲ್ಲಿ ಮನುಷ್ಯ ಸಹಜವಾಗಿ ಒಳಗಾಗುವ ಬಂಧನಗಳ ಸಂಕೇತ. ಅಂಕುಶ, ಎಲ್ಲವನ್ನೂ ತಾನು ನಿಯಂತ್ರಿಸುತ್ತೇನೆ ಎಂಬ ಅರ್ಥವನ್ನು ನೀಡುತ್ತದೆ. ಅಭಯ, ಸಮಸ್ತ ಜೀವಜಗತ್ತಿನಲ್ಲಿ ಅಕಾರಣವಾಗಿ ತುಂಬಿಕೊಂಡಿರುವ ಭೀತಿಯನ್ನು ಒಧ್ದೋಡಿಸುವ ಧೈರ್ಯ ನೀಡುತ್ತದೆ. ವರ, ಜ್ಞಾನವನ್ನು ಕೊಡುವ ಸಂಕೇತವಾಗಿ ನಿಲ್ಲುತ್ತದೆ.

ಅವನ ದೊಡ್ಡ ಹೊಟ್ಟೆ ಬ್ರಹ್ಮಾಂಡದ ಸಂಕೇತ, ದೊಡ್ಡ ಕಿವಿ ಜಗತ್ತಿನ ಸರ್ವಜೀವಿಗಳ ಸರ್ವಸಂಕಟ, ಸಂತೋಷಪೂರಿತ ಧ್ವನಿಗಳನ್ನು ಕೇಳುತ್ತಿದ್ದೇನೆ ಎನ್ನುವುದನ್ನು ಧ್ವನಿಸುತ್ತದೆ. ರಕ್ತವರ್ಣ ಜೀವಧಾತುವಾದ ರಕ್ತದ ಕುರಿತೇ ಹೇಳುತ್ತಿರುವುದು. ಗೌರಿಗಣಪತಿ ಹಬ್ಬದ ಹೊತ್ತಿನಲ್ಲಿ ಬ್ರಹ್ಮಾಂಡದ ಕಣಕಣದಲ್ಲೂ ತುಂಬಿ ಹರಿಯುತ್ತಿರುವ ಆ ಬ್ರಹ್ಮಶಕ್ತಿ ನಮ್ಮ ತಿಳಿವಿಗೆ ಬರಲಿ. ಗಣಪತಿಯನ್ನು ಪೂಜಿಸುವಾಗ ಬ್ರಹ್ಮಶಕ್ತಿ ಸರ್ವವ್ಯಾಪಕವಾಗಿರುವ ಅರಿವು ಹುಟ್ಟಲಿ. ಜ್ಞಾನೋ  ಪಾಸನೆಯೇ ನಮ್ಮ ಮಂತ್ರವಾಗಲಿ. ಸರ್ವಂ ಖಲ್ವಿದಂ ಬ್ರಹ್ಮಾಸಿ. ಓಂ ತತ್‌ ಸತ್‌.

*ಕೆ.ಪೃಥ್ವಿಜಿತ್‌

Advertisement

Udayavani is now on Telegram. Click here to join our channel and stay updated with the latest news.

Next