Advertisement

ಗಜಮುಖನೇ ಗಣಪತಿಯೇ…; ಗಣೇಶ ಚತುರ್ಥಿ ವಿಶೇಷವಾದ ಹಬ್ಬ

06:56 PM Aug 31, 2019 | Nagendra Trasi |

ಹಿಂದೂ ಧರ್ಮದಲ್ಲಿ ಹಬ್ಬಗಳನ್ನು ಪಟ್ಟಿಮಾಡುತ್ತಾ ಹೋದರೆ ಬಹುಶಃ ವಾರಕ್ಕೊಂದು ಹಬ್ಬ ಸಿಕ್ಕೀತು. ಆದರೆ ನಾವು ಆಚರಿಸುವುದು ಕೆಲವೇ ಕೆಲವು ಹಬ್ಬಗಳು. ಅವುಗಳಲ್ಲಿ ಗಣೇಶಚತುರ್ಥಿ ವಿಶೇಷವಾದ ಹಬ್ಬ. ವಿಘ್ನವಿನಾಶಕನನ್ನು ಮನೆಗೆ ಕರೆತಂದು ಮಾಡುವ ಹಬ್ಬ. ಈ ಹಬ್ಬಕ್ಕೆ ನೆಂಟರಲ್ಲ, ಸ್ವತಃ ದೇವರೇ ಮನೆಗೆ ಬರುತ್ತಾನೆ. ಗಣೇಶನ ಮೂರ್ತಿಯನ್ನು ಮನೆಮನೆಗಳಲ್ಲಿ ಮತ್ತು ಸಾರ್ವಜನಿಕವಾಗಿ ಇಟ್ಟು ಪೂಜಿಸುವುದು ಈ ಹಬ್ಬದ ರೂಪ.

Advertisement

ವಂದಿಸುವುದಾದಿಯಲಿ ಗಣನಾಥನಾ ಎಂದು ಪುರಂದರದಾಸರು ತಮ್ಮ ಕೀರ್ತನೆಯಲ್ಲಿ ಹಾಡುತ್ತ ಗಣಪನ ಶಕ್ತಿಯನ್ನು ಪರಿಚಯಿಸಿದ್ದು ನಮಗೆಲ್ಲಾ ಗೊತ್ತು. ಈ  ಪ್ರಥಮಪೂಜಿಪ ಗಣಪನ ಜನನ ವೃತ್ತಾಂತವು ವಿಶೇಷವಾದುದು. ಪಾರ್ವತಿ ದೇವಿಯು ತನ್ನ ಬೇಸರದ ನಿವಾರಣೆಗೆಂದು ಮಣ್ಣಿನಿಂದ (ಅರಿಶಿನದಿಂದ ಎಂದೂ ಹೇಳಲಾಗುತ್ತದೆ) ಬಾಲಕನನ್ನು ರಚಿಸಿ, ಜೀವವನ್ನು ನೀಡಿ, ಸ್ನಾನಕ್ಕೆ ತೆರಳುತ್ತಾಳೆ.

ಅದೇ ವೇಳೆಗೆ ಬಂದ ಶಿವನನ್ನು ಒಳಕ್ಕೆ ಬಿಡದೆ, ಯುದ್ಧ ನಡೆದು ಬಾಲಕನ ಶಿರ ಶಿವನ ತ್ರಿಶೂಲದಿಂದ ಕತ್ತರಿಸಲ್ಪಟ್ಟದ್ದನ್ನು ಕಂಡು ಪಾರ್ವತಿ ಮಗನಿಗಾಗಿ ಅಳುತ್ತಾಳೆ ಮತ್ತು ಶಿವನ ಬಳಿ ಆ ಬಾಲಕನನ್ನು ಬದುಕಿಸಿಕೊಡುವಂತೆ ಕೇಳಿಕೊಳ್ಳುತ್ತಾಳೆ. ಶಿವನು ಉತ್ತರಕ್ಕೆ ತಲೆಹಾಕಿದ ಜೀವಿಯ ಶಿರವನ್ನು ತರಲು ಗಣಗಳಿಗೆ ಆದೇಶಿಸಿದಾಗ ಅವರಿಗೆ ಸಿಕ್ಕಿದ್ದು ಆನೆಯ ಶಿರ. ಅದನ್ನೆ ಈ ಬಾಲಕನಿಗೆ ಜೋಡಿಸಿ, ಶಿವನ ಗಣಗಳಿಗೆ ಅಧಿಪತಿಯನ್ನಾಗಿ ಮಾಡಿ, ಗಣಪತಿ ಎಂದು ನಾಮಕರಣ ಮಾಡಲಾಗುತ್ತದೆ. ಇದು ಗಜಮುಖನೇ ಗಣಪತಿಯಾದ ಕಥೆ. ಈ ಗಣಪನೂ ಗಣಪನ ಹುಟ್ಟಿನ ಕತೆಯೂ ಒಂದು ವಿಜ್ಞಾನವನ್ನು ನಮ್ಮೊಳಗೆ ತುಂಬುತ್ತದೆ. ಉತ್ತರದಿಕ್ಕಿಗೆ ತಲೆಹಾಕಿ ಮಲಗಬಾರದು ಎಂಬುದು ಈ ಕಥೆಯಲ್ಲಿ ಹೇಳಿರುವ ವೈಜ್ಞಾನಿಕ ಸತ್ಯ. ಅಯಸ್ಕಾಂತೀಯತೆಯಿಂದಾಗಿ ನಮ್ಮ ದೇಹಕ್ಕೆ ಆಗುವ ಬಾಧಕವನ್ನು ಇಲ್ಲಿ ಸೂಚ್ಯವಾಗಿ ಹೇಳಲಾಗಿದೆ.

ಗೌರೀ ಗಣೇಶ ಹಬ್ಬ ಎಂದೂ ಕರೆಯಲ್ಪಡುವ ಈ ಹಬ್ಬ ಭಾದ್ರಪದ ಮಾಸದ ಶುಕ್ಲ ತದಿಗೆಯದಿನ ಗೌರಿಪೂಜೆಯೂ ಚತುರ್ಥಿಯ ದಿನ ಗಣೇಶನ ಪೂಜೆಯೂ  ಪಂಚಮಿಯದಿನ ಋಷಿಪಂಚಮಿಯ ಆಚರಣೆಯೂ ಇದ್ದು, ಗಣಪನನ್ನು ತಮಗಿಷ್ಟವಿರುವಷ್ಟು ದಿನ ಪೂಜಿಸಿ, ನೀರಿಗೆ ಬಿಡುವ ಕ್ರಮವಿದೆ. ಈ ಹಬ್ಬದ ಸಂಭ್ರಮ ಮೂರು ತಿಂಗಳುಗಳ ಮೊದಲೇ ಆರಂಭವಾಗುತ್ತದೆ. ಮಣ್ಣಿನ ಮೂರ್ತಿಯನ್ನು ಮಾಡುವಲ್ಲಿಂದ ಶುರುವಾಗುವ ಈ ಹಬ್ಬ ಗಣಪತಿಯನ್ನು ವಿಸರ್ಜನೆ ಮಾಡುವ ತನಕ ಇರುತ್ತದೆ. ಗಣಪನ ಮಣ್ಣಿನ ಮೂರ್ತಿಯನ್ನು ತಯಾರಿಸಿ ಸಾಲಾಗಿ ಇಟ್ಟಿರುವುದನ್ನು ನೋಡುವುದೇ ಒಂದು ಬಗೆಯ ಸೊಬಗು.

ವಿಭಿನ್ನ ಶೈಲಿಯಲ್ಲಿ ಕುಳಿತುಕೊಂಡ ವಿಗ್ರಹಗಳು ಮನಸ್ಸನ್ನು ಮುದೊಳಿಸುತ್ತವೆ. ಹಬ್ಬದ ದಿನ ಈ ಮೂರ್ತಿಯನ್ನು ಹೊತ್ತು ತಮ್ಮ ತಮ್ಮ ಮನೆಗಳಿಗೆ ಕೊಂಡೊಯ್ಯುವಾಗ ಕೈಲಾಸದಿಂದಲೇ ಗಣಪನನ್ನು ಹೊತ್ತುತಂದಂತಹ ಹುರುಪು! ಮನೆಯಲ್ಲಿ ಈ ಗಣಪನಿಗಾಗಿ ಅಂದದ ಮಂಟಪವನ್ನು ರಚಿಸಿ ಅದರೊಳಗೆ ಗಣಪನನ್ನು ಕುಳ್ಳಿರಿಸಿ, ಬಗೆಬಗೆಯ ಖಾದ್ಯಗಳನ್ನು ನೈವೇದ್ಯ ಮಾಡಿ, ಪುಷ್ಪಗಳಿಂದ ಅಲಂಕರಿಸಿ, ಆರತಿ ಬೆಳಗಿ ಪೂಜಿಸಿ, ನಮಿಸಿ, ವಿಘ್ನಗಳನ್ನು ದೂರ ಮಾಡುವಂತೆ ಪ್ರಾರ್ಥಿಸಿಕೊಂಡು, ಪ್ರಸಾದ ಸ್ವೀಕರಿಸುವ ಹೊತ್ತಿಗೆ ಒಂದು ಸಾರ್ಥಕಭಾವ. ಮನಸ್ಸು ಹಗುರಾದ ಆನಂದ. ಗಣಪನನ್ನು ಕಳುಹಿಸಿಕೊಡವಾಗ ಮಾತ್ರ ಮನೆಯ ಮಗುವನ್ನು ದೂರದ, ಕಾಣದ ಊರಿಗೆ ಕಳುಹಿಸಿದಂತಹ ನೋವು ಮನದೊಳಗೆ.

Advertisement

ಗಣೇಶನ ರೂಪವೂ ವಿಶೇಷವಾಗಿಯೂ ಆಕರ್ಷಕವಾಗಿಯೂ ಇದೆ. ಆನೆಯ ಮೊಗ, ದೊಡ್ಡ ಹೊಟ್ಟೆ, ಸಣ್ಣ ಕೈಕಾಲುಗಳು, ಏಕದಂತ, ಅವನ ದೇಹಕ್ಕೆ ಸರಿಹೊಂದದ ಇಲಿ ಆತನ ವಾಹನ. ಹೊಟ್ಟೆಗೆ ಸುತ್ತಿಕೊಂಡ ಹಾವು. ಈ ರೂಪ ಎಲ್ಲರಿಗೂ ಪ್ರಿಯ. ಅಂತೆಯೇ ಗಣಪನ ಬಗೆಗಿನ ಸ್ವಾರಸ್ಯಕರವಾದ ಕತೆಗಳೂ ಚಂದ.

ಗಣಪನ ಸ್ವಾರಸ್ಯಕರ ಕಥೆಗಳು  

ಒಮ್ಮೆ ಅತಿವೇಗದಲ್ಲಿ ಮೂರು ಲೋಕವನ್ನು ಯಾರು ಮೊದಲು ಸುತ್ತುವರು ಎಂಬ ಅಣ್ಣ ತಮ್ಮನ ಪಂಥದಲ್ಲಿ ಅಣ್ಣ ಸುಬ್ರಹ್ಮಣ್ಯ ತನ್ನ ವಾಹನ ನವಿಲನ್ನು ಏರಿ ಹೊರಟೇ ಬಿಟ್ಟಾಗ ಗಣಪ ತನ್ನ ವಾಹನದತ್ತ ನೋಡಿದ. ಈ ಇಲಿಯಿಂದ ಎಷ್ಟು ದೂರ ಹೊರಲು ಸಾಧ್ಯ ಎಂದುಕೊಂಡು ನಸುನಕ್ಕು ತನ್ನ ಅಪ್ಪ ಅಮ್ಮನಿಗೇ ಮೂರು ಸುತ್ತು ಬಂದು ಅವರೇ ಮುರೂ ಲೋಕ ಎಂಬುದನ್ನು ಅರುಹಿದ್ದ ಮತ್ತು ಗಣಪನೇ ಪಂಥದಲ್ಲಿ ಗೆದ್ದಿದ್ದ.

ಇನ್ನೊಮ್ಮೆ ರಾವಣನು ಶಿವನ ಆತ್ಮಲಿಂಗವನ್ನು ಕೊಂಡೊಯ್ದಾಗ ಅದನ್ನು ಅವನ ಕೈಯಿಂದ ತಪ್ಪಿಸುವ ಸಲುವಾಗಿ ಬಾಲಕನ ವೇಷ ಧರಿಸಿಕೊಂಡು ರಾವಣನ ಬಳಿ ಬಂದ. ಸಂಧ್ಯಾವಂದನೆಗೆ ಹೊರಟ ರಾವಣ ಆತ್ಮಲಿಂಗವನ್ನು ನೆಲಕ್ಕೆ ತಾಗಿಸಬಾರದಾಗಿಯೂ, ನಾನು ಬರುವತನಕ ಆತ್ಮಲಿಂಗದ ರಕ್ಷಣೆಯ ಜವಾಬ್ದಾರಿಯನ್ನು ಕೊಟ್ಟ. ನಾನು ಮೂರುಬಾರಿ ಕರೆಯುವ ಮೊದಲು ಬಾರದೇ ಇದ್ದಲ್ಲಿ ಈ ಶಿವಲಿಂಗವನ್ನು ನೆಲಕ್ಕೆ ಇಡುವೆ ಎಂದು ರಾವಣನನ್ನು ಎಚ್ಚರಿಸಿದ. ಆತ ಅತ್ತಕಡೆ ಹೋಗುತ್ತಿದ್ದಂತೆ  ಮೂರು ಬಾರಿ ಕರೆದು, ನೆಲಕ್ಕೆ ಇಟ್ಟುಬಿಟ್ಟ. ರಾವಣನಿಂದ ಆಗಬಹುದಾಗಿದ್ದ ಅನಾಹುತ ತಪ್ಪಿಸಿದ. ಮತ್ತು ರಾವಣನ ಅಹಂಕಾರ ಇಳಿದು ಹೋಯಿತು.

ತನ್ನ ಹೊಟ್ಟೆಯನ್ನು ನೋಡಿ ನಕ್ಕ ಚಂದ್ರನಿಗೆ ನನ್ನ ಹಬ್ಬದ ದಿನ ನಿನ್ನನ್ನು ಯಾರೂ ನೋಡಬಾರದು, ನೋಡಿದರೆ ಅವರಿಗೆ ಅಪವಾದ ಬರಲಿ ಎಂದು ಶಪಿಸಿದ್ದು, ಕೃಷ್ಣ ಚಂದ್ರನನ್ನು ನೋಡಿ ಅಪವಾದಕ್ಕೆ ಗುರಿಯಾಗದ ಕಥೆ ಇವತ್ತಿಗೂ ಜನರ ಬಾಯಲ್ಲಿದೆ. ಇನ್ನೊಂದು ವಿಶೇಷವಾದ ಕಥೆಯಂದರೆ ವ್ಯಾಸರು ಗಣಪತಿಯ ಕೈಯಿಂದ ಮಹಾಭಾರತವನ್ನು ಬರೆಸಿದ್ದು. ಗಣೇಶ ಹೇಳಿದ್ದ. “ನಾನು ಬರೆಯುದು ನಿಲ್ಲುವ ಮೊದಲೇ ಇನ್ನೊಂದು ಶ್ಲೋಕ ರಚಿಸಿಟ್ಟಿರಬೇಕು. ಅಡೆತಡೆಯಾದರೆ ನಾನು ಎದ್ದು ಹೊರಟು ಬೀಡುವೆ” ಎಂದಿದ್ದ. ವ್ಯಾಸರು ತಮ್ಮ ಚಾಣಕ್ಷತನವನ್ನು  ಬಳಸಿ, ಅಂತಹ ಸಂದರ್ಭ ಬಂದಾಗಲೆಲ್ಲ ಕ್ಲಿಷ್ಟವಾದ ಪದಗಳನ್ನು ಬಳಸಿ ಶ್ಲೋಕ ರಚಿಸಿ ಬಿಡುತ್ತಿದ್ದರಂತೆ. ಹೀಗೆ ಗಣಪನ ಬಗ್ಗೆ ಹಲವಾರು ಕಥೆಗಳಿವೆ.

ಹಬ್ಬಗಳು ಕೇವಲ ಆಡಂಬರದ ಆಚರಣೆಯಲ್ಲ. ಹಬ್ಬಕ್ಕೆ ನಿಸರ್ಗದ ನಂಟಿದೆ. ಈ ಪ್ರಕೃತಿಯನ್ನು ಬಿಟ್ಟು ಮನಷ್ಯನೂ ಇಲ್ಲ; ಹಬ್ಬವೂ ಇಲ್ಲ. ಅಲ್ಲೊಂದು ಧರ್ಮದ ನಡೆಯಿದೆ. ಪ್ರತಿ ಹಬ್ಬದ ಹಿಂದೆ ನೀತಿಯನ್ನು ಹೇಳುವ ಕಥೆಗಳಿವೆ. ಬದುಕಿನ ಹಾದಿ ಇದೆ. ಇವು ಮೊದಲು ನಮ್ಮನ್ನು ಆವರಿಸಬೇಕು. ನಾವು ಅನುಸರಿಸಬೇಕು. ದೇವರು ನಮ್ಮ ಅಹಂಕಾರದ ಪ್ರತಿಬಿಂಬವಲ್ಲ. ನಮ್ಮೊಳಗಿನ ದೀಪ. ಅದು ಹದವಾಗಿ ಬೆಳಗಬೇಕು. ಬೆಂಕಿಯಾಗಿ ಉರಿಯಬಾರದು!

ವಿಷ್ಣು ಭಟ್ ಹೊಸ್ಮನೆ.

Advertisement

Udayavani is now on Telegram. Click here to join our channel and stay updated with the latest news.

Next