Advertisement

“ಕನಸಾಗಿಯೇ ಉಳಿದ ಗಾಂಧೀಜಿ ಅವರ ಸರ್ವೋದಯ ಕಲ್ಪನೆ’

12:20 PM Jan 31, 2017 | Team Udayavani |

ಮೈಸೂರು: ದೇಶಕ್ಕೆ ಸ್ವಾತಂತ್ರ್ಯ ದೊರೆತು ಹಲವು ವರ್ಷಗಳಾದರೂ ಗಾಂಧೀಜಿ ಅವರ ಸರ್ವೋದಯ ಕಲ್ಪನೆ ಕನಸಾಗಿಯೇ ಉಳಿದಿದ್ದು, ಇದನ್ನು ನನಸಾಗಿಸುವ ನಿಟ್ಟಿನಲ್ಲಿ ದೇಶದ ಪ್ರತಿಯೊಬ್ಬರು ಒಂದಾಗಬೇಕಿದೆ ಎಂದು ಸ್ವಾತಂತ್ರ್ಯ ಹೋರಾಟಗಾರ ಡಾ.ಎಚ್‌.ಎಸ್‌.ದೊರೆಸ್ವಾಮಿ ಅಭಿಪ್ರಾಯಪಟ್ಟರು.

Advertisement

ಮೈಸೂರು ವಿಶ್ವವಿದ್ಯಾನಿಲಯ, ಗಾಂಧಿ ಅಧ್ಯಯನ ಕೇಂದ್ರ, ಗಾಂಧಿ ಆವನ ಹಾಗೂ ಹಾರ್ಟ್‌ಫ‌ುಲ್‌ನೆಸ್‌ ಇನ್‌ಸ್ಟಿಟ್ಯೂಟ್‌ ವತಿಯಿಂದ ಮಾನಸ ಗಂಗೋತ್ರಿಯ ಗಾಂಧಿ ಭವನ ಸಭಾಂಗಣದಲ್ಲಿ ಸೋಮವಾರ ಆಯೋಜಿಸಿದ್ದ 69ನೇ ಸರ್ವೋದಯ ದಿನಾಚರಣೆಯಲ್ಲಿ ಮಾತನಾಡಿದರು.

ದೇಶದಲ್ಲಿರುವ ಬಡತನವನ್ನು ನಿರ್ಮೂಲನೆ ಮಾಡುವ ನಿಟ್ಟಿನಲ್ಲಿ ಮಹಾತ್ಮಾ ಗಾಂಧೀಜಿ ಸಾಕಷ್ಟು ಹೋರಾಟ ನಡೆಸಿದ್ದರೂ, ದೇಶ ದಲ್ಲಿರುವ ಬಡತನ ಇಂದಿಗೂ ಸಂಪೂರ್ಣವಾಗಿ ನಿರ್ಮೂಲನೆಯಾಗಿಲ್ಲ. ಇದರಿಂದ ದೇಶ ದಲ್ಲಿರುವ ಬಡವರು ಬಡವರಾಗಿಯೇ ಉಳಿಯುತ್ತಿದ್ದು, ಶ್ರೀಮಂತರು ಮತ್ತಷ್ಟು ಶ್ರೀಮಂತರಾಗುತ್ತಿದ್ದಾರೆ. 

ಇನ್ನೂ ಜನರಿಂದ ಮತಪಡೆದು ಆಯ್ಕೆಯಾಗುವ ಜನಪ್ರತಿನಿಧಿಗಳು ಕೇವಲ ತಮ್ಮ ಪಕ್ಷಗಳಿಗೆ ನಿಷ್ಟರಾಗುವ ಮೂಲಕ ರಾಜಕೀಯದಲ್ಲಿ ಉನ್ನತಸ್ಥಾನ ಪಡೆಯುತ್ತಿದ್ದಾರೆ. ಈ ಕಾರಣದಿಂದ ಗಾಂಧೀಜಿ ಅವರ ಸರ್ವೋದಯ ಕನಸು ನನಸಾಗದೆ ಹಾಗೇ ಉಳಿದಿದೆ ಎಂದರು.ರಾಜಕೀಯ ನಾಯಕರ ವೇತನ ಮಾತ್ರ ಏರಿಕೆಯಾಗುತ್ತಿದ್ದು, ಆದರೆ ರಾಜಕಾರಿಣಿಗಳಿಗೆ ದೇಶದ ಬಡತನವನ್ನು ನಿವಾರಿಸುವ ಬಗ್ಗೆ ಚಿಂತೆಯಿಲ್ಲ.

ಇಂದಿನ ರಾಜಕಾರಣಿಗಳು ಮೊದಲು ಪಕ್ಷ ನಂತರ ವೈಯಕ್ತಿಕ ಹಿತಾಸಕ್ತಿಯ ಮೇಲೆ ಹೆಚ್ಚಿನ ಕಾಳಜಿ ಇದೆ. ನಮ್ಮ ಅನುಕೂಲಕ್ಕಾಗಿ ಮಾಡಿಕೊಂಡ ಹಣ ಪ್ರಸ್ತುತ ಸಂದರ್ಭದಲ್ಲಿ ನಮ್ಮನ್ನು ಆಳುತ್ತಿದ್ದು, ಹಣದ ಪ್ರತಿಷ್ಠೆ ಅಂತ್ಯವಾಗಬೇಕು. ಮತ್ತೂಂದೆಡೆ ದೇಶದಲ್ಲಿ ಅಸಮಾನತೆ, ದುರ್ನಡತೆ, ಜಾತಿ ಪದ್ಧತಿ, ನಿರುದ್ಯೋಗ ಹಾಗೂ ಮೇಲು-ಕೀಳು ಎಂಬ ಬೇಧ ಸಮಾಜದ ಸ್ವಾಸ್ಥ ಹಾಳು ಮಾಡುತ್ತಿದೆ. ಆದ್ದರಿಂದ ಮರುಳು ದಿಬ್ಬಗಳಂತಿರುವ ದೇಶದ ಜನತೆ ಜೇಡಿ ಮಣ್ಣಿನಂತೆ ಒಗ್ಗೂಡಿದಾಗ ಮಾತ್ರ ಸಮಾಜದಲ್ಲಿನ ಈ ಎಲ್ಲಾ ಕಂದಕಗಳು ಮುಚ್ಚಿ ಹೋಗಲಿದೆ ಎಂದು ಹೇಳಿದರು.

Advertisement

ದೇಶದಲ್ಲಿರುವ ಕಪ್ಪು ಹಣವನ್ನು ಹೊರತರುವ ಉದ್ದೇಶದಿಂದ ಪ್ರಧಾನಿ ನರೇಂದ್ರ ಮೋದಿ ಜಾರಿಗೆ ತಂದ ನೋಟ್‌ಬ್ಯಾಣ್‌ ನಿರೀಕ್ಷಿತ ಪ್ರಮಾಣದಲ್ಲಿ ಯಶಸ್ವಿಯಾಗಲಿಲ್ಲ. ಕೇಂದ್ರ ಸರ್ಕಾರದ ನೋಟ್‌ಬ್ಯಾನ್‌ ನಿರ್ಧಾರದಿಂದ ಜನರಿಗೆ ತೊಂದರೆಯಾಗಿದ್ದು, ಸರಿಯಾದ ಮುನ್ನೆಚ್ಚರಿಕೆ ಇಲ್ಲದೆ ಕೈಗೊಂಡ ಈ ತೀರ್ಮಾನದಿಂದಾಗಿ ಬ್ಯಾಂಕ್‌ಗಳು, ಸೊಸೈಟಿಗಳು ಭ್ರಷ್ಟರ ಕೂಟದಲ್ಲಿ ಸೇರಿಕೊಂಡು ಮತ್ತಷ್ಟು ಕಪ್ಪು ಹಣವನ್ನು ಸಂಗ್ರಹಿಸಲು ಅವಕಾಶ ಕಲ್ಪಿಸಿತು ಎಂದು ಅಸಮಾಧಾನ ವ್ಯಕ್ತಪಡಿಸಿದರು.

ಕಾರ್ಯಕ್ರಮದಲ್ಲಿ ಮೈಸೂರು ವಿಶ್ವವಿದ್ಯಾ ನಿಲಯದ ಪ್ರಭಾರ ಕುಲಪತಿ ಪ್ರೊ. ಯಶವಂತ ಡೋಂಗ್ರೆ, ಕುಲಸಚಿವ ಪ್ರೊ.ಆರ್‌. ರಾಜಣ್ಣ, ಪರೀûಾಂಗ ಕುಲಸಚಿವ ಪ್ರೊ.ಜೆ. ಸೋಮಶೇಖರ್‌, ಗಾಂಧಿ ಭವನ ನಿರ್ದೇಶಕ ಪ್ರೊ. ಎಸ್‌. ಶಿವರಾಜಪ್ಪ, ಹಾರ್ಟ್‌ಫ‌ುಲ್‌ನೆಸ್‌ ಇನ್ಸ್ಟಿಟ್ಯೂಟ್‌ ಸಂಯೋಜನಾಧಿಕಾರಿ ಕೆ. ಮಧುಸೂದನ್‌ ಹಾಜರಿದ್ದರು.

ರಾಜ್ಯದಲ್ಲಿ ಆಡಳಿತ ನಡೆಸುತ್ತಿರುವ ಕಾಂಗ್ರೆಸ್‌ ಸರ್ಕಾರ ಅನ್ನವನ್ನೇ ಮತವನ್ನಾಗಿ ಪರಿವರ್ತಿಸಿಕೊಳ್ಳುವ ಮೂಲಕ ಜನರನ್ನು ಸೋಮಾರಿ ಹಾಗೂ ಭಿಕ್ಷುಕರನ್ನಾಗಿ ಮಾಡುತ್ತಿದೆ. ಸರ್ಕಾರವು ಅನ್ನಭಾಗ್ಯ ಯೋಜನೆ ನೀಡುವ ಬದಲು ಯುವಕರಿಗೆ ಉದ್ಯೋಗಾವಕಾಶಗಳನ್ನು ಕಲ್ಪಿಸಿದರೆ ನಮ್ಮಲ್ಲಿರುವ ನಿರುದ್ಯೋಗ ಸಮಸ್ಯೆಯನ್ನು ನಿರ್ಮೂಲನೆ ಮಾಡಬಹುದಾಗಿದೆ.
-ಡಾ. ಎಚ್‌.ಎಸ್‌. ದೊರೆಸ್ವಾಮಿ, ಸ್ವಾತಂತ್ರ್ಯ ಹೋರಾಟಗಾರ

Advertisement

Udayavani is now on Telegram. Click here to join our channel and stay updated with the latest news.

Next