Advertisement

ನಾಳೆ ಕೃಷ್ಣೆಗಾಗಿ ನಿರ್ಣಾಯಕ ಗಾಂಧಿ ನಡಿಗೆ

06:45 PM Oct 01, 2021 | Team Udayavani |

ಬಾಗಲಕೋಟೆ: ಕಳೆದ ಆರು ದಶಕಗಳಿಂದ ವಿಳಂಬವಾಗಿರುವ ಯುಕೆಪಿ ಯೋಜನೆ ತ್ವರಿತ ಅನುಷ್ಠಾನಕ್ಕೆ ಒತ್ತಾಯಿಸಿ ಉತ್ತರ ಕರ್ನಾಟಕದ ಸ್ವಾಭಿಮಾನ ವೇದಿಕೆಯಿಂದ ಅ.2ರಂದು ಬೆಳಗ್ಗೆ 8 ಗಂಟೆಗೆ ಪಕ್ಷಾತೀತ ಪಾದಯಾತ್ರೆ ಆರಂಭಗೊಳ್ಳಲಿದೆ ಎಂದು ಉತ್ತರ ಕರ್ನಾಟಕ ಸ್ವಾಭಿಮಾನ ವೇದಿಕೆಯ ಹಿರಿಯರೂ ಆಗಿರುವ ವಿಧಾನ ಪರಿಷತ್‌ ವಿರೋಧ ಪಕ್ಷದ ನಾಯಕ ಎಸ್‌.ಆರ್‌. ಪಾಟೀಲ ಹೇಳಿದರು.

Advertisement

ಗುರುವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಪಾದಯಾತ್ರೆ ಅನಗವಾಡಿಯ ಘಟಪ್ರಭಾ ನದಿಯಿಂದ ಆರಂಭಗೊಂಡು ಕೊರ್ತಿ ಕೊಲ್ಹಾರ ಸೇತುವೆ ಬಳಿಯ ಕೃಷ್ಣಾ ನದಿವರೆಗೆ ಹಮ್ಮಿಕೊಳ್ಳಲಾಗಿದೆ ಎಂದು ಹೇಳಿದರು. ಆರು ದಶಕಗಳಿಂದ ವಿಳಂಬವಾದ ಈ ಯೋಜನೆ ತ್ವರಿತವಾಗಿ ಪೂರ್ಣಗೊಳಿಸುವ ಯಾವುದೇ ಲಕ್ಷಣ ಕಾಣುತ್ತಿಲ್ಲ. ಯೋಜನಾ ಸಂತ್ರಸ್ತರು, ಫಲಾನುಭವಿಗಳು ಅಲೆದು ಬಸವಳಿದಿದ್ದಾರೆ.

ಈ ಸಂದರ್ಭದಲ್ಲಿ ಮತ್ತೂಮ್ಮೆ ಯೋಜನೆಯ ತ್ವರಿತ ಅನುಷ್ಠಾನಕ್ಕೆ ಒತ್ತಾಯಿಸದಿದ್ದರೆ ಕುಂಭಕರ್ಣ ನಿದ್ರೆಯಲ್ಲಿದ್ದ ಸರ್ಕಾರ ಸಂತ್ರಸ್ತರ ಆಶೋತ್ತರಗಳಿಗೆ ಬೆಲೆ ಕೊಡಲ್ಲ. ಹೀಗಾಗಿ ಸರ್ಕಾರದ ಕಣ್ಣು ತೆರೆಸುವ ದೃಷ್ಟಿಸುವ ನಾಡಿನ ಹಲವು ಸ್ವಾಮೀಜಿಗಳ ನೇತೃತ್ವದಲ್ಲಿ ಧರ್ಮಾತೀತ, ಜಾತ್ಯತೀತ ಹಾಗೂ ಪಕ್ಷಾತೀತವಾದ ಪಾದಯಾತ್ರೆ ಹಮ್ಮಿಕೊಳ್ಳಲಾಗಿದೆ ಎಂದರು.

ಬಾಗಲಕೋಟೆ-ವಿಜಯಪುರ ಹಾಗೂ ಬೆಳಗಾವಿ ಜಿಲ್ಲೆಗಳಿಂದ ಸಾಕಷ್ಟು ಸಂಖ್ಯೆಯ ಸ್ವಾಮೀಜಿಗಳು, ರೈತ ಸಂಘಟನೆಗಳ ಮುಖಂಡರು, ಸಾಮಾಜಿಕ ಕಾರ್ಯಕರ್ತರು, ಯುಕೆಪಿ ಸಂತ್ರಸ್ತರು, ಫಲಾನುಭವಿಗಳು ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಂಡು ಪಾದಯಾತ್ರೆ ಯಶಸ್ವಿಗೊಳಿಸಲಿದ್ದಾರೆಂದರು. ಕೃಷ್ಣಾ ಮೇಲ್ದಂಡೆ ಯೋಜನೆಯಲ್ಲಿ ನಿಗದಿಪಡಿಸಿದ 3ನೇ ಹಂತದ 130 ಟಿಎಂಸಿ ನೀರಿನ ಸದ್ಭಳಕೆಯಾಗಬೇಕು.

15ಲಕ್ಷ ಎಕರೆ ಭೂಮಿಗೆ ನೀರಾವರಿ ಸೌಲಭ್ಯ ಸಿಗಬೇಕು. ಆಲಮಟ್ಟಿ ಜಲಾಶಯದ ಹಿನ್ನೀರಿನಿಂದ ಭೂಮಿ, ಮನೆ, ಮಠ, ಆಸ್ತಿ-ಪಾಸ್ತಿ ಕಳೆದುಕೊಂಡವರಿಗೆ ರಾಷ್ಟ್ರೀಯ ಪುನರ್‌ ವಸತಿ ನೀತಿಯನ್ವಯ ಯೋಗ್ಯ-ನ್ಯಾಯಯುತ ಪರಿಹಾರ ನೀಡಬೇಕು. ಭೂ ಪರಿಹಾರ ಹಾಗೂ ಕಟ್ಟಡ ಪರಿಹಾರ ನೀಡುವಾಗ ಅನುಸರಿಸುವ ಸಬ್‌ ರೆಜಿ ಸ್ಟ್ರಾರ್‌ ಮಾರ್ಗಸೂಚಿ ಬೆಲೆ ಪರಿಷ್ಕರಿಸಿ ಬೆಲೆ ನಿಗದಿಪಡಿಸಬೇಕು. ಬೀಳಗಿಯಂತೆ ವಿಜಯಪುರ, ಬೆಳಗಾವಿ ಜಿಲ್ಲೆಗಳಿಗೂ ಮಾರ್ಗಸೂಚಿ ಬೆಲೆ ಹೆಚ್ಚಿಸಬೇಕು. ಕಳೆದ 15 ವರ್ಷಗಳಿಂದ ಹೆಚ್ಚಳ ಮಾಡಿಲ್ಲ ಎಂದರು.

Advertisement

3ನೇ ಹಂತದ ನೀರಾವರಿ ಯೋಜನೆಗೆ ಒಟ್ಟು 1.33 ಲಕ್ಷ ಎಕರೆ ಭೂಮಿ ಸ್ವಾಧೀನಕೊಳ್ಳಬೇಕಿದೆ. ಅದರಲ್ಲಿ 75 ಸಾವಿರ ಎಕರೆ ಫಲವತ್ತಾದ ಭೂಮಿ ವಶಕ್ಕೆ ಪಡೆಯಲಾಗುತ್ತಿದೆ. ವಿಜಯಪುರ, ಬೆಳಗಾವಿ ಜಿಲ್ಲೆಗಳಲ್ಲಿ ಭೂ ಬೆಲೆ ಮಾರ್ಗದರ್ಶಿ ಬೆಲೆ ಪರಿಷ್ಕರಣೆಯಾಗಿಲ್ಲ. ಇದನ್ನು ತಕ್ಷಣ ಪರಿಷ್ಕರಣೆ ಡಬೇಕೆಂದು ಒತ್ತಾಯಿಸಿದರು. ಯುಕೆಪಿ 3ನೇ ಹಂತದ ಯೋಜನೆಗೆ 17 ಸಾವಿರ ಕೋಟಿ ಅನುದಾನ ನಿಗದಿ ಮಾಡಲಾಗಿತ್ತು.

ಈಗ 60 ಸಾವಿರ ಕೋಟಿ ಅಂದಾಜು ಮಾಡಲಾಗಿದೆ. ಸರ್ಕಾರದ ಈಗಿನ ಯುಕೆಪಿ ಕಾಳಜಿ ನೋಡಿದರೆ ಇನ್ನೂ ಮೂರು ದಶಕ ಬೇಕಾಗುತ್ತದೆ. ಇದೊಂದು ಶತಮಾನದ ಯೋಜನೆಯಾಗುವ ಭೀತಿ ಇದೆ ಎಂದರು. ಪಕ್ಕದ ತೆಲಂಗಾಣದಲ್ಲಿ ಕಾಲಕಾಲೇಶ್ವರ ಏತ ನೀರಾವರಿ ಯೋಜನೆ ಕೇವಲ ಮೂರೇ ವರ್ಷದಲ್ಲಿ ಪೂರ್ಣಗೊಳಿಸಿ ಇಡೀ ದೇಶಕ್ಕೆ ಮಾದರಿಯಾಗಿದೆ. ನಮ್ಮ ಯುಕೆಪಿ ಯೋಜನೆ ಆರು ದಶಕ ಕಳೆದರೂ ಪೂರ್ಣಗೊಳ್ಳುತ್ತಿಲ್ಲ. ಈಗ ನಮ್ಮದೇ ಭಾಗದ ಮುಖ್ಯಮಂತ್ರಿಗಳಿದ್ದಾರೆ, ಜಿಲ್ಲೆಯವರೇ ಆದ ಗೋವಿಂದ ಕಾರಜೋಳ ಜಲಸಂಪನ್ಮೂಲ ಸಚಿವರಾಗಿದ್ದಾರೆ. ಕೇಂದ್ರ-ರಾಜ್ಯದಲ್ಲಿ ಬಿಜೆಪಿ ಸರ್ಕಾರವಿದೆ. ಈ ಯೋಜನೆ ಪೂರ್ಣಗೊಳಿಸಲು ಇದು ಸಕಾಲವಾಗಿದ್ದು, ತಕ್ಷಣ ಕ್ರಮ ಕೈಗೊಳ್ಳಬೇಕೆಂದು ಆಗ್ರಹಿಸಿದರು.

ಯೋಜನಾ ವೆಚ್ಚ ಎಷ್ಟು: ಮಾಜಿ ಶಾಸಕ ಜೆ.ಟಿ. ಪಾಟೀಲ ಮಾತನಾಡಿ, ಯುಕೆಪಿ 3ನೇ ಹಂತದ ಯೋಜನೆಗಳಿಗೆ 50 ಸಾವಿರ ಕೋಟಿ ಬೇಕು ಎಂದು ಸರ್ಕಾರ ಹೇಳುತ್ತಿದೆ. ಹೊಸ ಭೂಸ್ವಾಧೀನ ಕಾಯ್ದೆ ಅನ್ವಯ ಸ್ವಾಧೀನಗೊಳ್ಳುವ ಭೂಮಿಗೆ ಕಾನೂನು ಬದ್ಧವಾಗಿ ಪರಿಹಾರ ನೀಡಲು ಎಷ್ಟು ಅನುದಾನ ಬೇಕೆಂಬುದನ್ನು ಸ್ಪಷ್ಟಪಡಿಸಬೇಕು. ಭೂಮಿ ಕಳೆದುಕೊಳ್ಳುವವರಷ್ಟೇ ಸಂತ್ರಸ್ತರಲ್ಲ. ಕೃಷಿ ಉಪ ಕಸಬುಗಳಿಂದ ಬದುಕುವವರೂ ಸಂತ್ರಸ್ತರು ಎಂದರು.

ಕಾಂಗ್ರೆಸ್‌ ಜಿಲ್ಲಾ ಅಧ್ಯಕ್ಷ ಎಸ್‌.ಜಿ. ನಂಜಯ್ಯನಮಠ, ಮಾಜಿ ಸಚಿವ ಎಚ್‌.ವೈ. ಮೇಟಿ, ಕೆಪಿಸಿಸಿ ಕಾರ್ಯದರ್ಶಿ ಬಸವಪ್ರಭು ಸರನಾಡಗೌಡ, ಜಿಪಂ ಮಾಜಿ ಉಪಾಧ್ಯಕ್ಷ ಮುತ್ತಪ್ಪ ಕೋಮಾರ, ಮುಧೋಳದ ಕಾಂಗ್ರೆಸ್‌ ಮುಖಂಡ ಸತೀಶ ಬಂಡಿವಡ್ಡರ, ಜಿಲ್ಲಾ ಪ್ರಧಾನ ಕಾರ್ಯದರ್ಶಿ ನಾಗರಾಜ ಹದ್ಲಿ, ಸಂತ್ರಸ್ತರ ಹೋರಾಟ ಸಮಿತಿಯ ಪ್ರಕಾಶ ಅಂತರಗೊಂಡ ಮುಂತಾದವರು ಉಪಸ್ಥಿತರಿದ್ದರು.

ಕಾವೇರಿ ಮತ್ತು ಮಹದಾಯಿ ನೀರು ಹಂಚಿಕೆ ಅಂತಿಮ ತೀರ್ಪಿನ ವಿಷಯ ಕೋರ್ಟ್‌ನಲ್ಲಿತ್ತು. ಆದರೂ ಕೇಂದ್ರ ಸರ್ಕಾರ ಅಧಿಸೂಚನೆ ಹೊರಡಿಸಿತ್ತು. ಈಗ ಕೃಷ್ಣಾ ನದಿ ನೀರು ಹಂಚಿಕೆಯ ಬ್ರಿಜೇಶಕುಮಾರ ನೇತೃತ್ವದ ನ್ಯಾಯಾಧಿಕರಣದ ಐತೀರ್ಪಿಗೆ ಅಧಿಸೂಚನೆ ಹೊರಡಿಸಲು ಮನವಿ ಮಾಡಿದರೆ, ವಿವಾದ ಕೋರ್ಟ್‌ನಲ್ಲಿದೆ ಎಂಬ ಸಬೂಬು ಹೇಳಲಾಗುತ್ತಿದೆ. ಅಧಿಸೂಚನೆ ಹೊರಡಿಸಲು ಯಾವುದೇ ತೊಂದರೆ ಇಲ್ಲ. ಕೇಂದ್ರ ಸರ್ಕಾರ ಕೂಡಲೇ ಅಧಿಸೂಚನೆ ಹೊರಡಿಸಬೇಕು.
*ಎಸ್‌.ಆರ್‌. ಪಾಟೀಲ,
ವಿರೋಧ ಪಕ್ಷದ ನಾಯಕ, ವಿಧಾನ ಪರಿಷತ್‌

Advertisement

Udayavani is now on Telegram. Click here to join our channel and stay updated with the latest news.

Next