Advertisement

ಅಜ್ಜರಕಾಡು ಗಾಂಧಿ ಪ್ರತಿಮೆಗೆ 20 ವರ್ಷ; ಬಸ್‌ನಿಲ್ದಾಣದ ಪ್ರತಿಮೆಗೆ 50 ವರ್ಷ

09:06 PM Oct 01, 2021 | Team Udayavani |

ಉಡುಪಿ: ಸ್ವಾತಂತ್ರ್ಯ ಚಳವಳಿಯಲ್ಲಿ ಸಕ್ರಿಯವಾಗಿ ಪಾಲ್ಗೊಂಡಿದ್ದ ಉಡುಪಿ ಜನತೆಗೆ ಸ್ವಾತಂತ್ರ್ಯ ಹೋರಾಟದ ಸಖ್ಯ ಕಳೆದ ಶತಮಾನದ ಆರಂಭದಲ್ಲಿಯೇ ಇತ್ತು. 1920ರಿಂದ ಗಾಂಧೀಜಿ ಪ್ರಭಾವ ಭಾರತದಲ್ಲಿ ಹೆಚ್ಚಿದಂತೆ ಕರಾವಳಿ ಜಿಲ್ಲೆಗಳ ಮೇಲೂ ಆಯಿತು.

Advertisement

1934ರ ಫೆಬ್ರವರಿ 25ರಂದು ಉಡುಪಿ ಅಜ್ಜರಕಾಡು ಮೈದಾನದಲ್ಲಿ ಅವರು ಭಾರೀ ಜನಸ್ತೋಮವನ್ನುದ್ದೇಶಿಸಿ ಮಾತನಾಡಿದರು. ಇದಾದ ಬಳಿಕ ಮತ್ತಷ್ಟು ಭಾವನಾತ್ಮಕ ಸಂಬಂಧ ಬೆಳೆಯಿತು. ಪಾಂಗಾಳ ನಾಯಕ್‌ ಕುಟುಂಬದ ಮನೆ ಮಂದಿ ಜೈಲುವಾಸಿಗಳಾಗಿದ್ದರು.

ಗಾಂಧಿ ಕಟ್ಟೆ
ಉಡುಪಿಗೆ ಗಾಂಧೀಜಿ ಬಂದ ಸ್ಮರಣೆ ಅಂಗವಾಗಿ ಅಜ್ಜರಕಾಡಿನಲ್ಲಿ ಭಾಷಣ ಮಾಡಿದ ಸ್ಥಳದಲ್ಲಿ ಒಂದು ಕಟ್ಟೆಯನ್ನು 1992ರ ಗಾಂಧಿ ಜಯಂತಿಯಂದು ನಿರ್ಮಿಸಿ ಲೋಕಾರ್ಪಣೆ ಮಾಡಲಾಗಿತ್ತು. ಆಗ ಪುರಸಭಾಧ್ಯಕ್ಷರಾಗಿದ್ದ ಗುಜ್ಜಾಡಿ ಪ್ರಭಾಕರ ನಾಯಕ್‌, ಅಜ್ಜರಕಾಡು ಪುರಸಭೆ ಸದಸ್ಯರಾಗಿದ್ದ ಪ್ರಕಾಶ ಅಂದ್ರಾದೆ, ತಹಶೀಲ್ದಾರಾಗಿದ್ದ ಚಿಕ್ಕತಮ್ಮಯ್ಯ, ಬಿಡಿಒ ಮೊದಲಾದವರು ಭಾಗ ವಹಿಸಿದ್ದರು. ಪಾಂಗಾಳ ನಾಯಕ್‌ ಕುಟುಂಬದ 90ರ ಹರೆಯದವರನ್ನು ಭೇಟಿ ಮಾಡಿದ ಪ್ರಕಾಶ ಅಂದ್ರಾದೆಯವರು ಸ್ಥಳವನ್ನು ಗುರುತಿಸಿದ್ದರು. ಐಡಿಯಲ್‌ ಸ್ಟುಡಿಯೋಗೆ ತೆರಳಿ ಗಾಂಧೀಜಿ ಬಂದಾಗ ತೆಗೆದ ಭಾವಚಿತ್ರಗಳನ್ನು ಸಂಗ್ರಹಿಸಿ ಪುರಸಭೆ ಕಚೇರಿಯಲ್ಲಿಡಲಾಯಿತು.

ಬಸ್‌ ನಿಲ್ದಾಣದ
ಗಾಂಧಿ ಪ್ರತಿಮೆ
ಉಡುಪಿ ಬಸ್‌ ನಿಲ್ದಾಣದ ಬಳಿ ಗಾಂಧೀಜಿ ಪ್ರತಿಮೆ ಇದಕ್ಕೂ ಹಿಂದಿನದು. 1960ರ ದಶಕದ ಕೊನೆಯಲ್ಲಿ ಇದರ ಉದ್ಘಾಟನೆಯಾಯಿತು. ಈ ಪ್ರತಿಮೆಯನ್ನು ಮಾಡಿಸಿಕೊಟ್ಟವರು ಆರೂರು ಕುಟುಂಬದ ವೆಂಕಟರಾವ್‌ ಸ್ಮರಣಾರ್ಥ ಪತ್ನಿ ಕಲ್ಯಾಣಿಯಮ್ಮನವರು.ಇದರ ಉದ್ಘಾಟನೆ ಸಮಾರಂಭದಲ್ಲಿ ಪುರಸಭಾಧ್ಯಕ್ಷರಾಗಿದ್ದ ಕೆ.ಕೆ.ಪೈ, ಡಾ| ವಿ.ಎಸ್‌.ಆಚಾರ್ಯ, ಉಪಾಧ್ಯಕ್ಷರಾಗಿದ್ದ ಡಾ| ಬಿ.ಆರ್‌.ಶೆಟ್ಟಿ, ಸದಸ್ಯರಾಗಿದ್ದ ಕಾಳಪ್ಪ ಶೆಟ್ಟಿ, ಮುಖ್ಯಾಧಿಕಾರಿಯಾಗಿದ್ದ ದೇವದಾಸ್‌, ಆರೂರು ಕುಟುಂಬದ ಪರವಾಗಿ ಶಾನುಭಾಗರಾಗಿದ್ದ ಎ.ಎಂ.ನಾರಾಯಣ ರಾವ್‌ ಭಾಗವಹಿಸಿದ್ದರು. ಈ ಪ್ರತಿಮೆ ಕಟ್ಟೆ ಸುತ್ತ ಹೂವಿನ ಅಂಗಡಿಗಳಿದ್ದವು. ಬಳಿಕ ಹೂವಿನ ಅಂಗಡಿಗಳನ್ನು ಸರ್ವಿಸ್‌ ಬಸ್‌ ನಿಲ್ದಾಣದ ಒಂದು ಮಗ್ಗುಲಿಗೆ ಸ್ಥಳಾಂತರಿಸಿ ಕಟ್ಟೆಯ ಹೊರಗೆ ಲಯನ್ಸ್‌ ಕ್ಲಬ್‌ ಸಹಕಾರದಲ್ಲಿ ಕ್ಲಾಕ್‌ ಟವರ್‌ ನಿರ್ಮಿಸಲಾಯಿತು.

ಇದನ್ನೂ ಓದಿ:ವಿಜಯಲಕ್ಷ್ಮಿ ಕಷ್ಟಕ್ಕೆ ಸ್ಪಂದಿಸಿದ ಕನ್ನಡಿಗರು|’ನಾಗಮಂಡಲ’ ನಟಿಗೆ ಹರಿದು ಬಂತು ಸಹಾಯ ಧನ

Advertisement

ಇದರ ಅಭಿವೃದ್ಧಿಪಡಿಸಿದ ಕಾಮಗಾರಿಯನ್ನು 2017ರ ಫೆ. 1ರಂದು ಸಚಿವರಾಗಿದ್ದ ಪ್ರಮೋದ್‌ ಮಧ್ವರಾಜ್‌ ಉದ್ಘಾಟಿಸಿದ್ದರು. ನಗರಸಭಾಧ್ಯಕ್ಷೆಯಾಗಿದ್ದ ಮೀನಾಕ್ಷಿ ಮಾಧವ ಬನ್ನಂಜೆ, ಉಪಾಧ್ಯಕ್ಷೆ ಸಂಧ್ಯಾಕುಮಾರಿ, ಶೋಭಾ ಕಕ್ಕುಂಜೆ, ಡಾ| ಎಂ.ಆರ್‌.ಪೈ, ಪೌರಾಯುಕ್ತ ಮಂಜುನಾಥಯ್ಯ ಪಾಲ್ಗೊಂಡಿದ್ದರು. ಪ್ರತಿಮೆ ಇರುವಲ್ಲಿ ಲಯನ್ಸ್‌ ಕ್ಲಬ್‌ ಅಮ್ಮುಂಜೆ ಮೋಹಿನಿ ನಾಯಕ್‌ ಸ್ಮರಣಾರ್ಥ ನಿರ್ಮಿಸಿದ ಕ್ಲಾಕ್‌ ಟವರ್‌ ಅನ್ನು 2000ರ ಫೆ. 10ರಂದು ಲಯನ್ಸ್‌ ಗವರ್ನರ್‌ ಡಾ| ಎಂ. ಸಂತೋಷಕುಮಾರ್‌ ಶಾಸ್ತ್ರೀ ಉದ್ಘಾಟಿಸಿದ್ದರು.

ಅಜ್ಜರಕಾಡಿನಲ್ಲಿ ಗಾಂಧಿ ಪ್ರತಿಮೆ
2000ನೇ ಅ. 2 ಗಾಂಧಿ ಜಯಂತಿ ಯಂದು ಇದೇ ಸ್ಥಳದಲ್ಲಿ ಗಾಂಧೀಜಿಯವರ ಶಿಲಾ ಪ್ರತಿಮೆಯನ್ನು ಸಮಾಜ ಕಲ್ಯಾಣ ಸಚಿವರಾಗಿದ್ದ ಕಾಗೋಡು ತಿಮ್ಮಪ್ಪನವರು ಪ್ರತಿಮೆಯನ್ನು ಆನಾವರಣಗೊಳಿಸಿದ್ದರು.

ಸಿಂಡಿಕೇಟ್‌ ಬ್ಯಾಂಕ್‌ ಅಧ್ಯಕ್ಷರಾಗಿದ್ದ ಡಿ.ಟಿ.ಪೈ, ಸಂಸದರಾಗಿದ್ದ ವಿನಯಕುಮಾರ್‌ ಸೊರಕೆ, ಶಾಸಕರಾಗಿದ್ದ ಯು.ಆರ್‌.ಸಭಾಪತಿ, ವಿಧಾನ ಪರಿಷತ್‌ ಸದಸ್ಯರಾಗಿದ್ದ ಡಾ| ವಿ.ಎಸ್‌.ಆಚಾರ್ಯ, ಜಿಲ್ಲಾಧಿಕಾರಿ ಗೌರವ ಗುಪ್ತ, ಉದ್ಯಮಿ ಕೆ.ಸತೀಶ್ಚಂದ್ರ ಹೆಗ್ಡೆ, ಡಾ| ಮುರಾರಿ ಬಲ್ಲಾಳ್‌, ನಗರಸಭಾಧ್ಯಕ್ಷೆ ಆನಂದಿ, ಉಪಾಧ್ಯಕ್ಷ ರೆನೋಲ್ಡ್‌ ಪ್ರವೀಣ್‌ಕುಮಾರ್‌, ಪೌರಾಯುಕ್ತ ಡಿ.ಬಸಪ್ಪ ಮೊದಲಾದವರು ಪಾಲ್ಗೊಂಡಿದ್ದರು.

-ಮಟಪಾಡಿ ಕುಮಾರಸ್ವಾಮಿ

Advertisement

Udayavani is now on Telegram. Click here to join our channel and stay updated with the latest news.

Next