Advertisement

ಗಣಪತಿ ಬಪ್ಪಾ ಮೋರಯ್ನಾ

09:45 AM Sep 15, 2018 | |

ವಾಡಿ: ಗೌರಿ ಗಣೇಶ ಹಬ್ಬ ಆರಂಭಗೊಂಡಿದ್ದು, ಗುರುವಾರ ಎಲ್ಲೆಡೆ ಬಗೆಬಗೆಯ ಗಣೇಶ ಮೂರ್ತಿಗಳು ಪ್ರತಿಷ್ಠಾಪನೆಯಾಗಿವೆ. ಪಟ್ಟಣದ ಸೇವಾಲಾಲ ನಗರ, ಎಸಿಸಿ ಕಾಲೋನಿ, ಹನುಮಾನ ನಗರ, ರೈಲ್ವೆ ಕಾಲೋನಿ, ಪಿಲಕಮ್ಮ ಬಡಾವಣೆ, ಸೋನಾಬಾಯಿ ಏರಿಯಾ, ಮರಾಠಿ ಗಲ್ಲಿ, ಕಾಕಾ ಚೌಕ್‌, ಶಿವಾಜಿ ಚೌಕ್‌, ಅಂಬೇಡ್ಕರ್‌ ಕಾಲೋನಿ, ಶಿವರಾಯ ಚೌಕಿ, ರೆಸ್ಟ್‌ಕ್ಯಾಂಪ್‌ ತಾಂಡಾ ಸೇರಿದಂತೆ ಹಲವು ಬಡಾವಣೆಗಳ ಗಲ್ಲಿಗಳಲ್ಲಿ ಶ್ರದ್ಧಾ ಭಕ್ತಿಯಿಂದ ಗಜಮುಖನ ಆರಾಧನೆ ಶುರುವಾಗಿದೆ.

Advertisement

ಪಟ್ಟಣದಲ್ಲಿ ದೇಶದ ವಿವಿಧ ರಾಜ್ಯದ ಜನರು ವಾಸವಿದ್ದಾರೆ. ಇಲ್ಲಿನ ಪ್ರತಿಯೊಂದು ಧಾರ್ಮಿಕ ಆಚರಣೆ ಚಟುವಟಿಕೆಗಳ ಮೇಲೆ ಮಹಾರಾಷ್ಟ್ರ ಹಾಗೂ ಹೈದರಾಬಾದನ ಸಂಸ್ಕೃತಿಯ ಛಾಯೆ ಆವರಿಸಿದೆ. ಗುರುವಾರ ಪಟ್ಟಣದ ರೈಲು ನಿಲ್ದಾಣದಿಂದ ವಿವಿಧ ಬಡಾವಣೆಗಳತ್ತ ಮೆರವಣಿಗೆ ಹೊರಟ ಗಣೇಶ ಮೂರ್ತಿಗಳು, ಅರ್ಚಕರಿಂದ ವಿಶೇಷ ಪೂಜೆ ಪುನಸ್ಕಾರಗಳು ನಡೆದವು. 

ಐದು ದಿನದ ಗಣಪತಿ 23, ಏಳು ದಿನದ 8, ಒಂಬತ್ತು ದಿನದ 7, ಹತ್ತು ದಿನದ 1 ಹಾಗೂ 11 ದಿನದ 6 ಹೀಗೆ
ಒಟ್ಟು 45 ಗಣೇಶ ಮೂರ್ತಿಗಳನ್ನು ಪ್ರತಿಷ್ಠಾಪಿಸಲಾಗಿದೆ. ರಾವೂರ, ಇಂಗಳಗಿ, ಲಾಡ್ಲಾಪುರ, ನಾಲವಾರ,
ಹಳಕರ್ಟಿ, ಕುಂದನೂರ, ಚಾಮನೂರ, ಮಾರಡಗಿ, ಕುಲಕುಂದಾ, ಸನ್ನತಿ, ಬನ್ನೇಟಿ ಗ್ರಾಮಗಳ ಮನೆ ಮನೆಗಳಲ್ಲಿ
ಗೌರಿ ಗಣೇಶ ಪೂಜೆಗಳು ನಡೆದವು

ಶಹಾಬಾದ: ತಾಲೂಕಿನ ಭಂಕೂರಿನಲ್ಲಿ ಎರಡು ಉದ್ಭವ ಗಣಪತಿ ಮೂರ್ತಿಗಳಿದ್ದು, ವಿಶೇಷತೆಯಿಂದ ಕೂಡಿವೆ. 12 ಅಡಿ ಎತ್ತರದ ಏಕಶಿಲಾ ಗಣಪತಿ ಮೂತಿ ಗ್ರಾಮದ ಹೊರವಲಯದಲ್ಲಿ ಮತ್ತು ಅದರದೇ ಪ್ರತಿರೂಪದ ನಾಲ್ಕು ಅಡಿ ಗಣಪತಿ ಮೂರ್ತಿ ಸಣ್ಣೂರು ರಸ್ತೆಯಲ್ಲಿ ಕಾಣ ಸಿಗುತ್ತದೆ. ಎರಡು ಮೂರ್ತಿ ಒಂದೇ ರೀತಿ ಇರುವುದರಿಂದ ಅವುಗಳ ದರ್ಶನಕ್ಕೆ ಸಾವಿರಾರು ಜನರು ಬರುತ್ತಾರೆ. ರಾಷ್ಟ್ರಕೂಟರ ಕಾಲದಲ್ಲಿ ಇಲ್ಲಿನ ಅರಸರು ಈ ಗಣೇಶ ಮೂರ್ತಿಗೆ ವಿಶೇಷ ಪೂಜೆ ಸಲ್ಲಿಸಿ ತಮ್ಮ ಹರಕೆ ತೀರಿಸುತ್ತಿದ್ದರು ಎನ್ನಲಾಗಿದೆ.

ಹಿಂದೊಮ್ಮೆ ರಜಾಕರು ಈ ಗಣಪತಿ ಮೂರ್ತಿ ಹೊಟ್ಟೆಯಲ್ಲಿ ನಿಧಿಇದೆ ಎಂದು ತಿಳಿದು ಅದಕ್ಕೆ ಬೆಂಕಿ ಹಚ್ಚಿ ಒಡೆದಿದ್ದರು. ಆದರೆ ಮರುದಿನವೇ ಗಣಪನ ಹೊಟ್ಟೆ ಮತ್ತೆ ಬಂದಿತ್ತು ಎಂದು ಜನರು ಹೇಳುತ್ತಾರೆ. ಹನ್ನೇರಡು ಅಡಿ ಎತ್ತರದ ಗಣಪತಿ ಮೂರ್ತಿ ತಲೆ ಮೇಲೆ ಯಾರೊ ಹಾರೆ ಹೊಡೆದಿದ್ದರಿಂದ ಬೆಳೆಯದೇ ಹಾಗೇ ನಿಂತಿದೆ. ಚಿಕ್ಕ ಗಣಪತಿ ಮೂರ್ತಿ ಮಾತ್ರ ಇಂದಿಗೂ ಬೆಳೆಯುತ್ತಿದೆ ಎಂದು ಗ್ರಾಮಸ್ಥರು ಹೇಳುತ್ತಾರೆ.

Advertisement

ತಮ್ಮ ಇಷ್ಟಾರ್ಥಗಳು ನೆರವೇರಿದರೆ ಭಕ್ತರು ಹೆಚ್ಚಾಗಿ ಬಣ್ಣ ಬಳೆಯುತ್ತಾರೆ. ಹೀಗೆ ವರ್ಷಕ್ಕೆ ಹತ್ತಾರು ಬಾರಿ ಇಲ್ಲಿನ ಗಣಪತಿ ಮೂರ್ತಿಗಳ ಬಣ್ಣ ಬದಲಾಗುತ್ತವೆ. ಪ್ರತಿ ವರ್ಷದಂತೆ ವಿಶೇಷ ಪೂಜೆ ನಡೆಯುತ್ತದೆ ಎಂದು ದೇವಸ್ಥಾನದ ಪೂಜಾರಿ ತಿಳಿಸಿದ್ದಾರೆ.

ತಿಲಕರಿಂದ ಗಣೇಶೋತ್ಸವ ಸಾರ್ವಜನಿಕ ಸ್ವರೂಪ
ಶಹಾಬಾದ: ಸ್ವಾತಂತ್ರ್ಯಾ ಪೂರ್ವದಲ್ಲಿ ಗಣೇಶನ ಹಬ್ಬ ಕೇವಲ ಮನೆಯಲ್ಲಿ ಆಚರಣೆಯಲ್ಲಿತ್ತು. ನಂತರ ಸಮಾಜ ಸುಧಾರಕ ಮತ್ತು ಸ್ವಾತಂತ್ರ್ಯಾಯೋಧ ಲೋಕಮಾನ್ಯ ಬಾಲಗಂಗಾಧರ ತಿಲಕ್‌ ಅದಕ್ಕೆ ಸಾರ್ವಜನಿಕ ಸ್ವರೂಪ ನೀಡಿದರು ಎಂದು ಸಿ.ಎ. ಇಂಗಿನಶೆಟ್ಟಿ ಕಾಲೇಜಿನ ಪ್ರಾಂಶುಪಾಲ ರಾಜಗೋಪಾಲ ಜೂಜಾರೆ ಹೇಳಿದರು. ನಗರದ ರಾಷ್ಟ್ರಭಾಷಾ ಶಿಕ್ಷಣ ಸಮಿತಿಯಲ್ಲಿ ವಿವಿಧ ಪ್ರಕಲ್ಪಗಳಲ್ಲಿ ಗಣೇಶ ಮೂರ್ತಿ ಪ್ರತಿಷ್ಠಾಪನೆ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

ತಿಲಕ್‌ ಅವರು ಗಣೇಶ ಮೂರ್ತಿ ಸಾಂಸ್ಕೃತಿಕ ಮಹತ್ವ ಅರಿತಿದ್ದರು. ಬ್ರಾಹ್ಮಣರು ಮತ್ತು ಬ್ರಾಹ್ಮಣೇತರರ ನಡುವಿನ ಅಂತರ ತುಂಬಲು ಮತ್ತು ಏಕತೆ ಮೂಡಿಸಲು ಸೂಕ್ತ ಸಂದರ್ಭವಾಗಿ ಗಣೇಶೋತ್ಸವ ಆಚರಣೆಯನ್ನು ರಾಷ್ಟ್ರೀಯ ಹಬ್ಬವನ್ನಾಗಿ ಮಾರ್ಪಡಿಸಿದರು ಎಂದು ಹೇಳಿದರು. ದಮಯಂತಿ ಸೂರ್ಯವಂಶಿ, ಅನಿತಾ ಶರ್ಮಾ, ಬಾಬಾಸಾಹೇಬ ಸಾಳುಂಕೆ,ರಮೇಶ ವಾಲಿ, ಚನ್ನಬಸಪ್ಪ ಕೊಲ್ಲೂರ, ರಾಜಕುಮಾರ ಬಾಸೂತ್ಕರ್‌, ಪ್ರಕಾಶ ಕೋಸಗಿಕರ್‌, ಸಾಯಿಬಣ್ಣ, ವೀರಯ್ಯ ಹಿರೇಮಠ, ರಮೇಶ ಮಹಿಂದ್ರಕರ್‌ ಇದ್ದರು.

Advertisement

Udayavani is now on Telegram. Click here to join our channel and stay updated with the latest news.

Next