Advertisement

ಗಜೇಂದ್ರಗಡ: ಮಠಗಳ ಜನಪರ ಕೆಲಸ ಸರ್ಕಾರಕ್ಕೆ ಪ್ರೇರಣೆ

05:51 PM Aug 14, 2024 | Team Udayavani |

ಉದಯವಾಣಿ ಸಮಾಚಾರ
ಗಜೇಂದ್ರಗಡ: ಸರ್ಕಾರಗಳಿಗೂ ಮೊದಲೇ ನಾಡಿನ ಮಠ ಮಾನ್ಯಗಳು ಜನಪರ ಯೋಜನೆ ಜಾರಿಗೆ ತಂದಿದ್ದು, ಅವುಗಳಿಂದ ಪ್ರೇರೇಪಿತರಾಗಿ ಸರ್ಕಾರಗಳು ವಿವಿಧ ಯೋಜನೆ ಜಾರಿಗೆ ತಂದಿವೆ. ಎಲ್ಲ ಯೋಜನೆಗಳ ಶ್ರೇಯ ನಾಡಿನ ಮಠಮಾನ್ಯಗಳಿಗೆ ಸಲ್ಲುತ್ತದೆ ಎಂದು ಸಚಿವೆ ಲಕ್ಷ್ಮೀ ಹೆಬ್ಬಾಳಕರ ಹೇಳಿದರು.

Advertisement

ಸಮೀಪದಲ್ಲಿ ಹಾಲಕೆರೆಯ ಲಿಂ| ಅನ್ನದಾನ ಶ್ರೀ ಅವರ 47ನೇ ಪುಣ್ಯಸ್ಮರಣೆ ನಿಮಿತ್ತ ಸೋಮವಾರ ಸಂಜೆ ಬೆಳ್ಳಿ ರಥೋತ್ಸವದ ನಂತರ ನಡೆದ ಶಿವಾನುಭಗೋಷ್ಠಿಯಲ್ಲಿ ಶ್ರೀ ಅನ್ನದಾನೇಶ್ವರ ಕೃಪಾ ಪೋಷಿತ ಅಕ್ಕಮಹಾದೇವಿ ಮಾತೃ ಬಳಗಕ್ಕೆ ಚಾಲನೆ ನೀಡಿ
ಅವರು ಮಾತನಾಡಿದರು.

ರಾಜ್ಯದ ಮಠಗಳು ಸ್ವಾತಂತ್ರ್ಯ ಪೂರ್ವದಲ್ಲೇ ಶಿಕ್ಷಣ ಸಂಸ್ಥೆಗಳನ್ನು ಪ್ರಾರಂಭಿಸುವ ಮೂಲಕ ಉಚಿತ ಶಿಕ್ಷಣ, ವಸತಿ, ಆಹಾರ ನೀಡುವ ಮೂಲಕ ತಮ್ಮದೇ ಆದ ಕೊಡುಗೆ ನೀಡಿವೆ. ವಿಶೇಷವಾಗಿ ಹಾಲಕೆರೆಯ ಶ್ರೀಮಠವು ಗ್ರಾಮೀಣ ಭಾಗದಲ್ಲಿ ಉಚಿತ ಅನ್ನ, ಅಕ್ಷರದ ದಾಸೋಹ ಮಾಡುವ ಮೂಲಕ ಈ ಭಾಗದ ಬೆಳವಣಿಗೆಗೆ ತನ್ನದೇ ಆದ ಕೊಡುಗೆ ನೀಡಿದೆ.

ಸಮಾಜದ ಅಭಿವೃದ್ಧಿಯಲ್ಲಿ ಮಹಿಳೆಯ ಪಾತ್ರದ ಬಗ್ಗೆ ಗಮನ ಹೆಚ್ಚಿಸುವ ಉದ್ದೇಶದಿಂದ ಶ್ರೀಮಠದಿಂದ ಬೆಳ್ಳಿ ರಥ ನಿರ್ಮಾಣ ಮಾಡಿ, ಅದನ್ನು ಅವರಿಂದಲೇ ಎಳೆಯುವ ಮೂಲಕ ಸಮಾಜದಲ್ಲಿ ಮಹಿಳೆಯರಿಗೂ ಸಮಾನವಾದ ಅವಕಾಶ ಕಲ್ಪಿಸಿದ ಕೀರ್ತಿ ಶ್ರೀಮಠಕ್ಕೆ ಸಲ್ಲುತ್ತದೆ ಎಂದರು.

ಹಾಲಕೆರೆ ಅನ್ನದಾನೇಶ್ವರ ಸಂಸ್ಥಾನ ಮಠದ ಶ್ರೀ ಮುಪ್ಪಿನ ಬಸವಲಿಂಗ ಶ್ರೀ ಆಶೀರ್ವಚನ ನೀಡಿದರು. ಮುಂಡರಗಿ ಸಾಹಿತಿ ವೀಣಾ ಪಾಟೀಲ ಕೌಟುಂಬಿಕ ನಿರ್ವಹಣೆಯಲ್ಲಿ ಮಹಿಳೆಯರ ಪಾತ್ರ ಬಗ್ಗೆ ವಿಶೇಷ ಉಪನ್ಯಾಸ ನೀಡಿದರು. ಸಂತೆಕೆಲ್ಲೂರ ಘನಮಠೇಶ್ವರ ಮಠದ ಗುರುಬಸವ ಶ್ರೀ, ನಿಲಗುಂದ ಪ್ರಭುಲಿಂಗ ಶ್ರೀ, ನಿಡಗುಂದಿಕೊಪ್ಪ ಶಾಖಾ ಶಿವಯೋಗ ಮಂದಿರದ ಅಭಿನವ ಚನ್ನಬಸವ ಶ್ರೀ, ಕರೆಗುಡ್ಡ ಮಹಾಂತೇಶ್ವರ ಮಠದ ಮಹಾಂತಲಿಂಗ ಶಿವಾಚಾರ್ಯರು, ಖೇಳಗಿ ಶಿವಲಿಂಗೇಶ್ವರ ಸಂಸ್ಥಾನ ಮಠದ ಶಿವಲಿಂಗ ಶ್ರೀ, ಗುಳೇದಗುಡ್ಡ ಮರಡಿಮಠದ ಅಭಿನವ ಕಾಡಸಿದ್ಧೇಶ್ವರ ಶಿವಾಚಾರ್ಯರು, ವಳಬಳ್ಳಾರಿ ಸುವರ್ಣಗಿರಿ ವಿರಕ್ತಮಠದ ಸದಾಶಿವ ದೇವರು, ಕುರಗೋಡ ನಾಗಲಾಪೂರ ವಿರಕ್ತಮಠದ ಪರ್ವತ ದೇವರು. ಸೋಮಸಮುದ್ರ ವಿರಕ್ತಮಠದ ಸಿದ್ಧಲಿಂಗ ದೇವರು, ಶ್ರೀಧರಗಡ್ಡೆ ವಿರಕ್ತಮಠದ ಮರಿ ಕೊಟ್ಟೂರ ದೇವರು ನೇತೃತ್ವ ವಹಿಸಿದ್ದರು. ಅಅನ್ನಪೂರ್ಣ ಪಾಟೀಲ, ಮಹಿಳಾ ಮಂಡಳದ ಅಧ್ಯಕ್ಷೆ ಸಂಯುಕ್ತಾ ಬಂಡಿ, ಕೆವಿಜಿ ಬ್ಯಾಂಕ್‌ ವ್ಯವಸ್ಥಾಪಕಿ ಕದರಿ ಇದ್ದರು.

Advertisement

ಭಾರತ ಇತಿಹಾಸ ಹೊಂದಿದ ದೇಶ. ಸಂಸ್ಕೃತಿಯ ಪ್ರತೀಕ. ನಾಡಿನ ಕಲೆ, ಸಂಪ್ರದಾಯಗಳನ್ನು ಪ್ರತಿನಿಧಿಸುವ ಕಲೆಗಳನ್ನು ಮಕ್ಕಳಿಗೆ ಕಲಿಸಲು ತಾಯಂದಿರು ಹೆಚ್ಚಿನ ಆಸಕ್ತಿ ತೋರಬೇಕು.
●ಲಕ್ಷ್ಮೀ ಹೆಬ್ಬಾಳಕರ, ಸಚಿವೆ

 

Advertisement

Udayavani is now on Telegram. Click here to join our channel and stay updated with the latest news.

Next