Advertisement

ಕಪ್ಪತ್ತಗುಡ್ಡಕ್ಕೆ ಗಣಿಗಾರಿಕೆ ಕರಿನೆರಳು

04:21 PM Sep 26, 2019 | Naveen |

ವೀರೇಂದ್ರ ನಾಗಲದಿನ್ನಿ
ಗದಗ: ದಕ್ಷಿಣ ಭಾರತ ಸಸ್ಯಕಾಶಿ, ಅಮೂಲ್ಯ ಔಷಧೀಯ ಸಸ್ಯ, ಜೀವ ವೈವಿದ್ಯ ಹಾಗೂ ಉತ್ಕೃಷ್ಟ ಖನಿಜ ಸಂಪತ್ತು ಹೊಂದಿರುವ ಜಿಲ್ಲೆಯ ಕಪ್ಪತ್ತಗುಡ್ಡದ ಮೇಲೆ ಮತ್ತೆ ಗಣಿಗಾರಿಕೆಯ ಕರಿನೆರಳು ಆವರಿಸತೊಡಗಿದೆ. ಮುಖ್ಯಮಂತ್ರಿ ಬಿ.ಎಸ್‌. ಯಡಿಯುರಪ್ಪ ನೇತೃತ್ವದಲ್ಲಿ ಸೆ. 26ರಂದು ನಡೆಯಲಿರುವ ರಾಜ್ಯ ವನ್ಯಜೀವಿ ಮಂಡಳಿ ಸಭೆಯಲ್ಲಿ ಕಪ್ಪತ್ತಗುಡ್ಡ ವನ್ಯಧಾಮ ಘೋಷಣೆಯನ್ನು ಹಿಂಪಡೆಯುತ್ತಾರೆ ಎಂಬ ಮಾತುಗಳು ಕೇಳಿ ಬಂದಿದ್ದು, ಪರಿಸರ ಪ್ರೇಮಿಗಳಲ್ಲಿ ಆತಂಕ ಶುರುವಾಗಿದೆ.

Advertisement

ಪೋಸ್ಕೋ ಹೋರಾಟದ ಬಳಿಕ 2016ರಿಂದ ಕಪ್ಪತ್ತಗುಡ್ಡ ವಿಚಾರವಾಗಿ ಸರಕಾರ ಮತ್ತು ಈ ಭಾಗದ ಪರಿಸರವಾದಿಗಳ ನಡುವಿನ ಹಗ್ಗ ಜಗ್ಗಾಟ ಮುಂದುವರಿದಿದೆ. 2016ರ ಆ. 31ರಂದು ಕಪ್ಪತ್ತಗುಡ್ಡಕ್ಕೆ ಸಂರಕ್ಷಿತ ಅರಣ್ಯ ಸ್ಥಾನಮಾನ ಕಲ್ಪಿಸಿದ್ದ ಸರಕಾರ, ಅದೇ ವರ್ಷ ನ. 4ರಂದು ಹಿಂಪಡೆದಿತ್ತು. ಸರಕಾರದ ಈ ನಡೆಯನ್ನು ಖಂಡಿಸಿ ಲಿಂ| ತೋಂಟದ ಸಿದ್ಧಲಿಂಗ ಸ್ವಾಮೀಜಿ, ಎಸ್‌.ಆರ್‌. ಹಿರೇಮಠ, ರವಿಕೃಷ್ಣಾರೆಡ್ಡಿ ನೇತೃತ್ವದಲ್ಲಿ ನಗರದ ಗಾಂಧಿ ವೃತ್ತದಲ್ಲಿ ಮೂರು ದಿನಗಳ ಕಾಲ ಅಹೋರಾತ್ರಿ ಧರಣಿ ನಡೆದ ಫಲವಾಗಿ ಏಪ್ರಿಲ್‌ 2017ರಲ್ಲಿ ಸರಕಾರ ಮತ್ತೆ ಸಂರಕ್ಷಿತ ಸ್ಥಾನ ಕಲ್ಪಿಸಿತ್ತು.

ಕಳೆದ ಮೇ 16ರಂದು ನಡೆದ ಮುಖ್ಯಮಂತ್ರಿ ಎಚ್‌.ಡಿ. ಕುಮಾರಸ್ವಾಮಿ ನೇತೃತ್ವದಲ್ಲಿ ನಡೆದ ವನ್ಯಜೀವಿ ಮಂಡಳಿ ಸಭೆಯಲ್ಲಿ ಕಪ್ಪತ್ತಗುಡ್ಡ 80 ಸಾವಿರ ಎಕರೆ ಪ್ರದೇಶದಲ್ಲಿ 50 ಸಾವಿರ ಎಕರೆ ಪ್ರದೇಶವನ್ನು ವನ್ಯಧಾಮ ಎಂದು ಘೋಷಿಸಿ ಆದೇಶ ಹೊರಡಿಸಿ, ಕಪ್ಪತ್ತಗುಡ್ಡದಲ್ಲಿ ಗಣಿಗಾರಿಕೆ ನಡೆಸಬೇಕು ಎಂಬ ಗಣಿದಣಿಗಳ ಆಸೆಗೆ ಚಪ್ಪಡಿ ಕಲ್ಲು ಹಾಕಿದ್ದರು.

ಕಪ್ಪತ್ತಗಿರಿಗೆ “ಗಣಿ’ಯೇ ಕುತ್ತು?: ಕಪ್ಪತ್ತಗುಡ್ಡ ಭಾಗದಲ್ಲಿರುವ ಅತ್ತಿಕಟ್ಟಿ ಗ್ರಾಮದ ಬಳಿ ಪ್ರಮುಖ ಗಣಿಗಾರಿಕೆ ಕಂಪನಿಯೊಂದರ 40 ಎಕರೆಗೂ ಹೆಚ್ಚಿನ ಭೂಮಿ ಇದೆ. ಅಲ್ಲಿ ಬಂಗಾರದ ಗಣಿಗಾರಿಕೆಗೆ ಸಿದ್ಧತೆ ನಡೆದಿರುವುದು ಎಲ್ಲರಿಗೂ ತಿಳಿದ ವಿಚಾರ. ಆದರೆ, ಕಂಪನಿ ಕೆಲವು ಮಧ್ಯವರ್ತಿಗಳಿಂದ ಖರೀದಿಸಿದ ಭೂಮಿಯದ್ದು ಅದಕ್ಕೆ ತೊಡಕಾಗಿದೆ.

ರಾಜ್ಯದಲ್ಲಿಯೇ ಅತೀ ವೇಗವಾಗಿ ಜಿಲ್ಲೆಯಲ್ಲಿ ಗಾಳಿ ಬೀಸುತ್ತದೆ. ಈ ಕಾರಣಕ್ಕಾಗಿ ಇಲ್ಲಿ ಪವನ ವಿದ್ಯುತ್‌ ಗೋಪುರಗಳ ಸಂಖ್ಯೆ ಹೆಚ್ಚು. ಜಿಲ್ಲೆಯ ಎತ್ತರ ಪ್ರದೇಶವಾಗಿರುವ ಕಪ್ಪತಗುಡ್ಡದಲ್ಲಿಯೇ ಗೋಪುರ ನಿರ್ಮಿಸಿ ಲಾಭ ಮಾಡಿಕೊಳ್ಳಲು ಹಲವು ಕಂಪನಿಗಳು ಈಗಾಗಲೇ ಕೋಟ್ಯಂತರ ಹಣ ಸುರಿದು ಕಾಯುತ್ತಿವೆ. ಗಣಿಗಾರಿಕೆ ಮತ್ತು ಪವನ ವಿದ್ಯುತ್‌ ಘಟಕ ಸೇರಿದಂತೆ ಅರಣ್ಯೇತರ ಚಟುವಟಿಕೆಗಳಿಗೆ ಸಂರಕ್ಷಿತ ಅರಣ್ಯ ಹಾಗೂ ವನ್ಯಜೀವಿಧಾಮ ಪ್ರದೇಶದಲ್ಲಿ ಅವಕಾಶ ಸಿಗದು. ಇದೇ ಕಾರಣಕ್ಕೆ 2016ರಲ್ಲಿ ಸರಕಾರ ಸಂರಕ್ಷಿತ ಅರಣ್ಯವೆಂದು ಘೋಷಿಸಿದಾಗ ಗಣಿ ಕಂಪನಿಯೊಂದು ನ್ಯಾಯಾಲಯದ ಮೆಟ್ಟಿಲೇರಿತ್ತು. ಅದಕ್ಕೂ ಮುನ್ನ ಸಂರಕ್ಷಿತ ಸ್ಥಾನ ಮಾನ ಕಲ್ಪಿಸಿದ್ದ ಸರಕಾರ ಹಿಂಪಡೆಯುವಂತೆ ಮಾಡಿದ್ದು, ಇದೇ ಗಣಿ ಕಂಪನಿ ಲಾಭಿ ನಡೆಸಿತ್ತು ಎಂಬ ವಿಚಾರ ಗುಟ್ಟಾಗಿ ಉಳಿದಿಲ್ಲ.

Advertisement

ಈ ನಡುವೆ ಎಚ್‌.ಡಿ. ಕುಮಾರಸ್ವಾಮಿ ಸರಕಾರ ಕಪ್ಪತ್ತಗುಡ್ಡವನ್ನು ವನ್ಯಧಾಮವನ್ನಾಗಿಸಿ ಘೋಷಿಸಿದ್ದು, ಲಾಭಿ ಕೋರರನ್ನು ಮತ್ತಷ್ಟು ಇಕ್ಕಟ್ಟಿಗೆ ಸಿಲುಕಿಸಿದೆ. ಹೇಗಾದರೂ ಮಾಡಿ ಕಪ್ಪತ್ತಗುಡ್ಡವನ್ನು ಗಣಿಗಾರಿಕೆ ಮುಕ್ತಗೊಳಿಸಬೇಕು ಎಂಬ ಉದ್ದೇಶದಿಂದ ಇದೀಗ ಬಿಜೆಪಿ ಸರಕಾರದಲ್ಲಿ ಲಾಭಿ ನಡೆದಿದೆ ಎಂದು ಹೇಳಲಾಗಿದೆ.

ಅದಕ್ಕಾಗಿ ಹೋರಾಟದ ನೆಪದಲ್ಲಿ ಕಪ್ಪತ್ತಗುಡ್ಡ ಸೆರಗಿನಲ್ಲಿ ವಾಸಿಸುವರನ್ನು ಸರಕಾರದ ವಿರುದ್ಧ ಎತ್ತಿಕಟ್ಟು ಪ್ರಯತ್ನಗಳು ನಿರಂತರವಾಗಿದೆ. ತೋಂಟದ ಸಿದ್ಧಲಿಂಗ ಸ್ವಾಮೀಜಿ ಅವರು ಲಿಂಗೈಕ್ಯರಾದ ಬಳಿಕ ಪ್ರಾಯೋಜಿತ ಹೋರಾಟಗಳು ಹೆಚ್ಚುತ್ತಿದ್ದು, ಅದೇ ಅರ್ಜಿಗಳನ್ನು ಮುಂದಿಟ್ಟುಕೊಂಡು ಸರಕಾರ ವನ್ಯಧಾಮ ಆದೇಶವನ್ನು ಹಿಂಪಡೆಯಬಹುದು. ಸೆ.26 ರಂದು ಮುಖ್ಯಮಂತ್ರಿಗಳ ನೇತೃತ್ವದಲ್ಲಿ ನಡೆಯಲಿರುವ
ವನ್ಯಜೀವಿ ಮಂಡಳಿ ಸಭೆಯಲ್ಲಿ ಕಪ್ಪತ್ತಗುಡ್ಡ ವನ್ಯಧಾಮ ಡಿನೋಟಿಫಿಕೇಷನ್‌ ವಿಚಾರ ಪ್ರಸ್ತಾಪವಾಗಲಿದೆ ಎಂದು ಹೇಳಲಾಗುತ್ತಿದೆ.

Advertisement

Udayavani is now on Telegram. Click here to join our channel and stay updated with the latest news.

Next