Advertisement

ಗದಗ-ಅಭಿವೃದ್ಧಿ ಶೂನ್ಯ: ಕೆರೆಗಳ ತುಂಬ ಹೂಳೇ ಹೂಳು

06:30 PM Aug 03, 2023 | Team Udayavani |

ಗದಗ: ಜಿಲ್ಲೆಯು ಕಳೆದ ಕೆಲ ವರ್ಷಗಳಿಂದ ಅತೀವೃಷ್ಟಿ, ಅನಾವೃಷ್ಟಿ ಸೇರಿದಂತೆ ನೆರೆ ಹಾಗೂ ಬರಗಾಲದಂತಹ ಪರಿಸ್ಥಿತಿ ಅನುಭವಿಸಿದೆ. ಇದರಿಂದ ಕೆಲ ಕೆರೆಗಳು ಭರ್ತಿಯಾಗಿ ಕೋಡಿ ಹರಿದಿದ್ದರೆ, ಇನ್ನು ಕೆಲವು ಕೆರೆಗಳು ನೀರಿಲ್ಲದೇ ಬತ್ತಿಹೋದ ಉದಾಹರಣೆಗಳು ಸಾಕಷ್ಟಿವೆ.

Advertisement

ಜಿಲ್ಲೆಯಲ್ಲಿ ನೀರಾವರಿ ಮತ್ತು ಸಣ್ಣ ನೀರಾವರಿ  ವ್ಯಾಪ್ತಿಯಲ್ಲಿ 22 ಕುಡಿಯಲು ಯೋಗ್ಯವಾದ ಕೆರೆಗಳು, 192 ಬಳಕೆಗೆ ಸೀಮಿತವಾದ ಕೆರೆಗಳು ಸೇರಿ ಒಟ್ಟು 214 ಕೆರೆಗಳಿದ್ದು, ಬಹುತೇಕ ಕೆರೆಗಳು ಮಳೆಯ ನೀರನ್ನೇ ನೆಚ್ಚಿಕೊಂಡಿವೆ. ಆದರೆ, ಸಧ್ಯ ಮುಂಗಾರು ಚಾಲ್ತಿಯಲ್ಲಿದ್ದು, ಅಷ್ಟಾಗಿ ಮಳೆ ಸುರಿಯದ ಕಾರಣ ಜಿಲ್ಲೆಯ ಬಹುತೇಕ ಕೆರೆಗಳು ತುಂಬದಿದ್ದರೂ ತಕ್ಕಮಟ್ಟಿನ ನೀರು ಶೇಖರಣೆಯಾಗಿದೆ.

ಇನ್ನು ತುಂಗಭದ್ರಾ ಎಡದಂಡೆ ಕಾಲುವೆ ಮೂಲಕ ಮುಂಡರಗಿ ತಾಲೂಕಿನ ಹಿರೇವಡ್ಡಟ್ಟಿ, ಡಂಬಳ, ಶಿರೋಳ, ತಾಮ್ರಗುಂಡಿ, ನಾಗರಳ್ಳಿ, ಜಂತ್ಲಿ ಶಿರೂರು ಸೇರಿದಂತೆ 15 ಕೆರೆಗಳು, 20ಕ್ಕೂ ಹೆಚ್ಚು ಚೆಕ್‌ಡ್ಯಾಂಗಳಿಗೆ ಹಾಗೂ ಗದಗ ತಾಲೂಕಿನ ಲಕ್ಕುಂಡಿ, ಸಂಭಾಪುರ, ಕಳಸಾಪುರ, ಕಣಗಿನಹಾಳ ಸೇರಿದಂತೆ 8 ಗ್ರಾಮದ ಕೆರೆಗಳಿಗೆ ಕಳೆದ ಕೆಲ ವರ್ಷಗಳ ಹಿಂದೆ ನದಿ ನೀರು ಹರಿಸಲಾಗಿದ್ದು, ಪುನಶ್ಚೇತನಗೊಂಡಿದ್ದವು.

ಸಣ್ಣ ನೀರಾವರಿ ವ್ಯಾಪ್ತಿಯ ಕೆರೆಗಳು 32:
ಜಿಲ್ಲೆಯ ಸಣ್ಣ ನೀರಾವರಿ ವ್ಯಾಪ್ತಿಯಲ್ಲಿ ಮುಂಡರಗಿ ತಾಲೂಕಿನಲ್ಲಿ 11, ಗಜೇಂದ್ರಗಡ 9, ಶಿರಹಟ್ಟಿ ತಾಲೂಕಿನಲ್ಲಿ 5, ಗದಗ ತಾಲೂಕಿನಲ್ಲಿ 4 ಹಾಗೂ ಲಕ್ಷ್ಮೇ ಶ್ವರ ತಾಲೂಕಿನಲ್ಲಿ 3 ಸೇರಿ ಜಿಲ್ಲಾದ್ಯಂತ 32 ಕೆರೆಗಳಿದ್ದು, ಇವುಗಳಲ್ಲಿ ಮುಂಡರಗಿ ತಾಲೂಕಿನ ಡಂಬಳ, ಜಂತ್ಲಿಶಿರೂರ, ಪೇಠಾಲೂರ ಹಾಗೂ ಶಿರೋಳ ಕೆರೆಗಳಿಗೆ ಮಾತ್ರ ನದಿ ಮೂಲಕ ನೀರು ಹರಿಸಲಾಗುತ್ತಿದೆ.

ವಿಸ್ತೀರ್ಣ-ಅಚ್ಚುಕಟ್ಟು ಪ್ರದೇಶ: ಸಣ್ಣ ನೀರಾವರಿ ವ್ಯಾಪ್ತಿಯಲ್ಲಿ ಮುಂಡರಗಿ ತಾಲೂಕಿನ 11 ಕೆರೆಗಳ 776.76 ಹೆಕ್ಟೇರ್‌ ಪ್ರದೇಶದಲ್ಲಿ 4,330.88 ಹೆಕ್ಟೇರ್‌ ಅಚ್ಚುಕಟ್ಟು ಪ್ರದೇಶವಿದೆ. ಶಿರಹಟ್ಟಿ ತಾಲೂಕಿನ 5 ಕೆರೆಗಳ 243.50 ಹೆಕ್ಟೇರ್‌ ಪ್ರದೇಶದಲ್ಲಿ 1,294.70 ಹೆಕ್ಟೇರ್‌ ಅಚ್ಚುಕಟ್ಟು ಪ್ರದೇಶವಿದೆ.

Advertisement

ಗಜೇಂದ್ರಗಡ/ ರೋಣ ತಾಲೂಕಿನ 9 ಕೆರೆಗಳ 170.78 ಹೆಕ್ಟೇರ್‌ ಪ್ರದೇಶವಿದ್ದು, 905.31 ಹೆಕ್ಟೇರ್‌ ಅಚ್ಚುಕಟ್ಟು ಪ್ರದೇಶವಿದೆ. ಗದಗ ತಾಲೂಕಿನ 4 ಕೆರೆಗಳ 126.97 ಹೆಕ್ಟೇರ್‌ ಪ್ರದೇಶವಿದ್ದು, 967 ಹೆಕ್ಟೇರ್‌ ಅಚ್ಚುಕಟ್ಟು ಪ್ರದೇಶವಿದೆ. ಲಕ್ಷ್ಮೇ ಶ್ವರ ತಾಲೂಕಿನ 3 ಕೆರೆಗಳ 61.92 ಹೆಕ್ಟೇರ್‌ ಪ್ರದೇಶವಿದ್ದು, 222.69 ಹೆಕ್ಟೇರ್‌ ಅಚ್ಚುಕಟ್ಟು ಪ್ರದೇಶವಿದೆ. ಜಿಲ್ಲೆಯಲ್ಲಿ ಒಟ್ಟಾರೆ 32 ಕೆರೆಗಳ ವಿಸ್ತೀರ್ಣ 1,379.93 ಹೆಕ್ಟೇರ್‌ ಪ್ರದೇಶ ಹೊಂದಿದ್ದು, ಅದರಲ್ಲಿ 7,520.58 ಹೆಕ್ಟೇರ್‌ ಅಚ್ಚುಕಟ್ಟು ಪ್ರದೇಶ ಹೊಂದಿದೆ.

ಕೆರೆಗಳ ಒತ್ತುವರಿ: ಸಣ್ಣ ನೀರಾವರಿ ವ್ಯಾಪ್ತಿಯ ಮುಂಡರಗಿ ತಾಲೂಕಿನ ಶಿರೋಳ ಕೆರೆಯನ್ನು ಅತಿಕ್ರಮಣ ಮಾಡಲಾಗಿದೆ ಎಂಬ ದೂರು ಬಂದ ಹಿನ್ನೆಲೆಯಲ್ಲಿ ಕೆರೆಯನ್ನು ಸರ್ವೇ ಮಾಡುವಂತೆ ಸೂಚಿಸಲಾಗಿದೆ. ಸರ್ವೇ ನಂತರ ಅತಿಕ್ರಮಣದ
ಮಾಹಿತಿ ಲಭ್ಯವಾಗಲಿದೆ. ಇನ್ನು ಗದಗ ನಗರದ ಹೃದಯ ಭಾಗದಲ್ಲಿರುವ 103 ಎಕರೆ ವ್ಯಾಪ್ತಿಯ ಭೀಷ್ಮ ಕೆರೆಯೂ ಒತ್ತುವರಿಯಾದ ದೂರುಗಳು ಬಂದಿದ್ದರಿಂದ ಕರ್ನಾಟಕ ರಾಜ್ಯ ಕಾನೂನು ಸೇವೆಗಳ ಪ್ರಾಧಿಕಾರದ ನಿರ್ದೇಶನ ಹಿನ್ನೆಲೆಯಲ್ಲಿ ಜಿಲ್ಲಾಡಳಿತ ಕೆರೆ ಸರ್ವೇ ಮಾಡಿದ್ದು, ವರದಿ ಇನ್ನು ಸ್ಪಷ್ಟವಾಗಿ ದೊರೆತಿಲ್ಲ. ಜತೆಗೆ ಭೀಷ್ಮ ಕೆರೆಯ ಒಡಲಿಗೆ ಚರಂಡಿ ನೀರು ತುಂಬಿಕೊಂಡು ಮಲೀನವಾಗತೊಡಗಿದರೂ ನಗರಸಭೆ ಅ ಧಿಕಾರಿಗಳು ಕಂಡು ಕಾಣದಂತೆ ವರ್ತಿಸುತ್ತಿರುವುದು ಶೋಚನೀಯ.

ಕೆರೆಗಳ ಅಭಿವೃದ್ಧಿ ಶೂನ್ಯ: ಜಿಲ್ಲೆಯಲ್ಲಿ ನೀರಾವರಿ ಮತ್ತು ಸಣ್ಣ ನೀರಾವರಿ ವ್ಯಾಪ್ತಿಯಲ್ಲಿ 22 ಕುಡಿಯಲು ಯೋಗ್ಯವಾದ ಕೆರೆಗಳು, 192 ಬಳಕೆಗೆ ಸೀಮಿತವಾದ ಕೆರೆಗಳು ಸೇರಿ ಒಟ್ಟು 214 ಕೆರೆಗಳಿದ್ದು, ಹೂಳೆತ್ತುವುದು, ಬೌಂಡರಿಂಗ್‌ ಕ್ರಂಚ್‌ ಹಾಗೂ ಯಾವುದೇ ಅಭಿವೃದ್ಧಿ ಕಾರ್ಯಗಳು ನಡೆದಿಲ್ಲ.

ಕಳೆದ ಎರಡು ವರ್ಷಗಳಿಂದ ಯಾವುದೇ ಅನುದಾನವಿರದ ಕಾರಣ ಜಿಲ್ಲೆಯ ಸಣ್ಣ ನೀರಾವರಿ ವ್ಯಾಒತಿಯ ಕೆರೆಗಳ ಹೂಳೆತ್ತುವುದು ಮತ್ತು ಬೌಂಡರಿಂಗ್‌ ಕ್ರಂಚ್‌ ಹಾಕುವುದು ಸೇರಿ ಯಾವುದೇ ಅಭಿವೃದ್ಧಿ ಕಾರ್ಯಗಳು ನಡೆದಿಲ್ಲ. ಅನುದಾನ ಬಿಡುಗಡೆಗೊಂಡ ನಂತರ ಆದ್ಯತೆ ಮೇರೆಗೆ ಹೂಳೆತ್ತುವುದು ಸೇರಿ ಕೆರೆಗಳ ಬೌಂಡರಿಂಗ್‌ ಕ್ರಂಚ್‌ ಹಾಕಲು ಸೂಕ್ತ ಕ್ರಮ
ಕೈಗೊಳ್ಳಲಾಗುವುದು.
ನಾಗಶೆಟ್ಟಿ ಚಂದ್ರಶೇಖರ, ಸಹಾಯಕ ಕಾರ್ಯನಿರ್ವಾಹಕ ಇಂಜಿನಿಯರ್‌, ಸಣ್ಣ ನೀರಾವರಿ

*ಅರುಣಕುಮಾರ ಹಿರೇಮಠ

Advertisement

Udayavani is now on Telegram. Click here to join our channel and stay updated with the latest news.

Next