Advertisement

ಗದಗ: ಪೌರಾಯುಕ್ತ ಹುದ್ದೆ ಸೇರಿ 240 ಹುದ್ದೆಗಳು ಖಾಲಿ

04:21 PM Jul 17, 2024 | Team Udayavani |

ಉದಯವಾಣಿ ಸಮಾಚಾರ
ಗದಗ: ಗದಗ ಬೆಟಗೇರಿ ನಗರಸಭೆ ಪೌರಾಯುಕ್ತ ಹುದ್ದೆ ಸೇರಿ 240 ಹುದ್ದೆಗಳು ಖಾಲಿಯಿದ್ದು, ನಗರಸಭೆಯಲ್ಲಿ ಆಗಬೇಕಾದ ಸಣ್ಣ ಕೆಲಸಗಳಿಗೂ ಅವಳಿನಗರ ಜನತೆ ಪರದಾಡುವ ಸ್ಥಿತಿ ನಿರ್ಮಾಣವಾಗಿದೆ. ಸಾರ್ವಜನಿಕರ ಸಮಸ್ಯೆಗಳ ಪರಿಹಾರ ಮಾಡಬೇಕಾದ ನೂರಾರು ಅಧಿಕಾರಿ ಹುದ್ದೆಗಳು ಖಾಲಿ ಉಳಿದಿರುವುದೇ ಪ್ರಮುಖ ಕಾರಣವಾಗಿದ್ದು, ಇದಕ್ಕೆ ಸ್ಪಂದಿಸಬೇಕಾದ ಚುನಾಯಿತ ಪ್ರತಿನಿಧಿಗಳು, ಹಿರಿಯ ಅಧಿಕಾರಿಗಳ ಉದ್ದೇಶ ಪೂರ್ವಕ ನಿರ್ಲಕ್ಷ್ಯದಿಂದ ಜನರು ತೀವ್ರ ತೊಂದರೆ ಅನುಭವಿಸುವಂತಾಗಿದೆ.

Advertisement

ಗದಗ-ಬೆಟಗೇರಿ ನಗರಸಭೆ ವ್ಯಾಪ್ತಿಯ 35 ವಾರ್ಡ್‌ಗಳ ಜನಸಂಖ್ಯೆಗೆ ಅನುಗುಣವಾಗಿ ಒಟ್ಟು 457 ವಿವಿಧ ಹುದ್ದೆಗಳಿಗೆ ಸರ್ಕಾರ ಮಂಜೂರಾತಿ ನೀಡಿದೆ. ಆದರೆ ಕೇವಲ 217 ಜನ ಮಾತ್ರ ಕಾರ್ಯ  ನಿರ್ವಹಿಸುತ್ತಿದ್ದು, 240 ಹುದ್ದೆಗಳು ಖಾಲಿ ಉಳಿದಿವೆ. ಇದರ ನೇರ ಪರಿಣಾಮ ಸಾರ್ವಜನಿಕರ ಮೇಲಾಗಿದ್ದು, ಜನರ ಸಮಸ್ಯೆಗಳು ವರ್ಷಗಳೇ ಕಳೆದರೂ ಇತ್ಯರ್ಥವಾಗುತ್ತಿಲ್ಲ. ಯಾವುದೇ ಅಭಿವೃದ್ಧಿ ಕಾರ್ಯಗಳು ನಡೆಯುತ್ತಿಲ್ಲ. ಅವಳಿ ನಗರದಲ್ಲಿ ಕಸ ಸಂಗ್ರಹಣೆ, ಅದರ ನಿರ್ವಹಣೆ ಸಮರ್ಪಕವಾಗಿ ನಡೆಯುತ್ತಿಲ್ಲ.

ಪೌರಾಯುಕ್ತರ ಹುದ್ದೆಯೂ ಖಾಲಿ:
ಗದಗ-ಬೆಟಗೇರಿ ನಗರಸಭೆಯ ಪೌರಾಯುಕ್ತರ ಹುದ್ದೆ ಖಾಲಿ ಇದ್ದು ವರ್ಷವೇ ಗತಿಸಿದೆ. ಪ್ರಭಾರ ಅಧಿಕಾರಿಗಳಾಗಿ ಮೂವರು ಅಧಿಕಾರಿಗಳು ಬದಲಾದರೂ ಕಾಯಂ ಅಧಿಕಾರಿಗಳ ನೇಮಕವಾಗುತ್ತಿಲ್ಲ. ಇದರಿಂದ ಪ್ರಭಾರಿ ಅಧಿಕಾರಿಗಳೇ ಕಾರ್ಯ ನಿರ್ವಹಿಸುವಂತಾಗಿದೆ. ಪ್ರಭಾರಿ ಅಧಿ ಕಾರಿಗಳಾಗಿ ನಿಯೋಜನೆಗೊಂಡಿರುವ ಅನ್ಯ ಇಲಾಖೆ ಅ ಧಿಕಾರಿಗಳು ತಮ್ಮ ಮೂಲ ಇಲಾಖೆ ಕೆಲಸ ಪೂರ್ಣಗೊಳಿಸಿ ನಂತರ ನಗರಸಭೆಯ ಕೆಲಸ ಕಾರ್ಯಗಳಿಗೆ ಆದ್ಯತೆ ನೀಡುತ್ತಿರುವ ಹಿನ್ನೆಲೆಯಲ್ಲಿ ಯಾವುದೇ ಅಭಿವೃದ್ಧಿ ಕೆಲಸಗಳು ಆರಂಭವಾಗದೇ ಅವಳಿ ನಗರದ ಆಡಳಿತ ನಿಂತ ನೀರಾಗಿದೆ.

136 ಪೌರಕಾರ್ಮಿಕರ ಹುದ್ದೆಗಳು ಖಾಲಿ:
ಗದಗ- ಬೆಟಗೇರಿ ಅವಳಿ ನಗರವನ್ನು ನಿತ್ಯವೂ ಸ್ವಚ್ಛವಾಗಿಡುವ, ಸಾರ್ವಜನಿಕರ ಆರೋಗ್ಯದೊಂದಿಗೆ ನೇರ ಸಂಪರ್ಕ
ಹೊಂದಿರುವ ಪೌರ ಕಾರ್ಮಿಕರ 264 ಹುದ್ದೆಗಳಿಗೆ ಮಂಜೂರಾತಿ ಇದೆ. ಸದ್ಯ ಕೇವಲ 128 ಜನರು ಮಾತ್ರ ಕಾರ್ಯ ನಿರ್ವಹಿಸುತ್ತಿದ್ದು, 136 ಹುದ್ದೆಗಳು ಖಾಲಿ ಇವೆ. ಇದರಿಂದ ಸಾರ್ವಜನಿಕರಿಗೆ ತೀವ್ರ ತೊಂದರೆಯಾಗುತ್ತಿದೆ. 35 ವಾರ್ಡ್‌ಗಳನ್ನು ಹೊಂದಿರುವ ಅವಳಿ ನಗರವನ್ನು ಸ್ವತ್ಛಗೊಳಿಸುವಂತಹ ಹೆಚ್ಚಿನ ಹೊರೆ, ಕಡಿಮೆ ಸಂಖ್ಯೆಯಲ್ಲಿರುವ ಪೌರ ಕಾರ್ಮಿಕರ ಮೇಲೆಯೇ ಬಿದ್ದಿರುವ ಹಿನ್ನೆಲೆಯಲ್ಲಿ ಅವರು ಕೂಡಾ ಒತ್ತಡದಲ್ಲಿ ಕೆಲಸ ನಿರ್ವಹಿಸುವಂತಾಗಿದೆ.

Advertisement

141 ಹೊರ ಗುತ್ತಿಗೆ ನೌಕರರು: ನಗರಸಭೆ ವ್ಯಾಪ್ತಿಯಲ್ಲಿ ಸರ್ಕಾರದ ಮಂಜೂರಾತಿ ಪಡೆದ ಹುದ್ದೆಗಳನ್ನು ಹೊರತು ಪಡಿಸಿ 141
ಜನ ಹೊರಗುತ್ತಿಗೆ ಆಧಾರದಲ್ಲಿ ಕಾರ್ಯ ನಿರ್ವಹಿಸುತ್ತಿದ್ದು, ಅವುಗಳಲ್ಲಿ ಪ್ರಮುಖವಾಗಿ 59 ಜನ ಕಸದ ಗಾಡಿಗಳ ವಾಹನ ಚಾಲಕರು, 64 ಜನ ಕಸವನ್ನು ಗಾಡಿಗಳಿಗೆ ಸಂಗ್ರಹಿಸುವವರು(ಲೋಡರ್‌)4 ಜನ ಕಂಪ್ಯೂಟರ್‌ ಆಪರೇಟರ್‌ಗಳಿದ್ದಾರೆ.

ನಗರಸಭೆಯಲ್ಲಿನ ಅಧಿಕಾರಿಗಳ ಕೊರತೆಯನ್ನು ನೀಗಿಸಬೇಕಾದದ್ದು, ಸರ್ಕಾರದ ಕರ್ತವ್ಯ. ಈ ವಿಷಯದಲ್ಲಿ ಜಿಲ್ಲಾ ಉಸ್ತುವಾರಿ ಸಚಿವರು ಹೆಚ್ಚು ಗಮನ ನೀಡಿ ಖಾಲಿ ಇರುವ ಹುದ್ದೆಗಳಿಗೆ ಅಧಿಕಾರಿಗಳ ನೇಮಿಸುವ ಕೆಲಸ ಮಾಡಬೇಕು. ಇಲ್ಲವಾದಲ್ಲಿ
ಮೊದಲೇ ಜಿಡ್ಡುಗಟ್ಟಿರುವ ನಗರಸಭೆ ಆಡಳಿತದಲ್ಲಿ ಕಾರ್ಯ ನಿರ್ವಹಿಸುತ್ತಿರುವ ಇನ್ನುಳಿದ ಅಧಿಕಾರಿಗಳು ಸಿಬ್ಬಂದಿ ಕೊರತೆ
ಹೇಳುತ್ತಲೇ ಕಾಲಹರಣ ಮಾಡುತ್ತಿದ್ದಾರೆ. ತಮ್ಮದಲ್ಲದ ತಪ್ಪಿನಿಂದ ಅವಳಿ ನಗರದ ಜನರು ಸಮಸ್ಯೆಗಳನ್ನು ಎದುರಿಸುವಂತಾಗಿದೆ.

ಅಧಿಕಾರಿಗಳ ಹಾಗೂ ಸಿಬ್ಬಂದಿ ನೇಮಕ ರಾಜ್ಯ ಸರ್ಕಾರದ ಹಂತದಲ್ಲಿ ಆಗಬೇಕಿರುವ ಕೆಲಸ, ಇರುವ ಸಿಬ್ಬಂದಿಯಿಂದಲೇ ಸಮರ್ಪಕ ಕೆಲಸ ಕಾರ್ಯಗಳನ್ನು ನಿರ್ವಹಿಸಲಾಗುತ್ತಿದೆ.
●ಉಷಾ ದಾಸರ, ಅಧ್ಯಕ್ಷರು,
ಗದಗ-ಬೆಟಗೇರಿ ನಗರಸಭೆ

ಉಳಿದಂತೆ ಇಲೆಕ್ಟ್ರಿಷಿಯನ್‌, ಪ್ಲಂಬರ್‌, ಹೆಡ್‌ ಗಾರ್ಡನ್‌ ಮಂಜೂರಾಗಿರುವ ಒಂದೊಂದು ಹುದ್ದೆಗಳು ಖಾಲಿ ಇವೆ. ಉಳಿದಂತೆ ವಾಟರ್‌ ಸಪ್ಲೈ ವಾಲ್‌ವುನ್‌, ಹೆಲ್ಪರ್‌ ಸೇರಿದಂತೆ ಒಟ್ಟು 50 ಹುದ್ದೆಗಳ ಮಂಜೂರಾತಿ ಇದ್ದರೂ ಕಾರ್ಯ ನಿರ್ವಹಿಸುತ್ತಿರುವವರು 16 ಜನ ಮಾತ್ರ ಇನ್ನುಳಿದ 34 ಹುದ್ದೆಗಳು ಖಾಲಿಯೇ ಉಳಿದಿವೆ.

■ ಅರುಣಕುಮಾರ ಹಿರೇಮಠ

Advertisement

Udayavani is now on Telegram. Click here to join our channel and stay updated with the latest news.

Next