ಬೆಂಗಳೂರು: ಆರು ದಶಕಗಳಿಂದ ಸಾವಿರಾರು ವಿದ್ಯಾರ್ಥಿಗಳಿಗೆ ಗುಣಮಟ್ಟದ ಪದವಿ ಶಿಕ್ಷಣ ನೀಡಿ, ಅವರೆಲ್ಲರ ಅಭ್ಯುದಯಕ್ಕೆ ಕಾರಣವಾದ ಉಡುಪಿಯ ಪೂರ್ಣಪ್ರಜ್ಞ ಕಾಲೇಜಿನ, ಬೆಂಗಳೂರಿನಲ್ಲಿ ನೆಲೆಸಿರುವ ಹಳೇ ವಿದ್ಯಾರ್ಥಿಗಳು ಆಗಸ್ಟ್ 6ರಂದು ಪೂರ್ಣಪ್ರಜ್ಞ ವಿದ್ಯಾಸಂಸ್ಥೆಯ ಸಭಾಂಗಣದಲ್ಲಿ ಸೇರಿ ಬೆಂಗಳೂರು ಚಾಪ್ಟರ್ಗೆ ಚಾಲನೆ ನೀಡಿದರು.
ಪೂರ್ಣಪ್ರಜ್ಞ ವೈಜ್ಞಾನಿಕ ಸಂಶೋಧನಾ ಸಂಸ್ಥೆಯ ನಿರ್ದೇಶಕ ಡಾ. ಎ.ಬಿ. ಹಲ್ಗೇರಿಯವರು ಉದ್ಘಾಟಿಸಿ ಮಾತನಾಡಿ, ಶ್ರೀ ವಿಬುಧೇಶತೀರ್ಥ ಶ್ರೀಪಾದರು ವಿದ್ಯಾರ್ಥಿಗಳು ಗುಣಮಟ್ಟದ ಶಿಕ್ಷಣ ಪಡೆದು ಸುಜ್ಞಾನಿ, ವಿಜ್ಞಾನಿಗಳಾಗಬೇಕೆಂಬ ಉದ್ದೇಶದಿಂದ ಪೂರ್ಣಪ್ರಜ್ಞ ಶಿಕ್ಷಣ ಸಂಸ್ಥೆಗಳನ್ನು ನಾಡಿನಾದ್ಯಂತ ಕಟ್ಟಿ ಬೆಳೆಸಿದರು.
ಶ್ರೀ ವಿಶ್ವಪ್ರಿಯತೀರ್ಥರು ಆ ಸಂಸ್ಥೆಗಳನ್ನು ಮತ್ತಷ್ಟು ಎತ್ತರಕ್ಕೆ ಬೆಳೆಸಿದರು. ಉಡುಪಿಯ ಪೂರ್ಣಪ್ರಜ್ಞ ಕಾಲೇಜು ಹಳೇ ವಿದ್ಯಾರ್ಥಿಗಳು ಬೆಂಗಳೂರು ಚಾಪ್ಟರ್ ಸ್ಥಾಪಿಸಿ ಮಾತೃಸಂಸ್ಥೆಗೆ ನೆರವಾಗಲು ಮುಂದಾಗಿರುವುದು ಅರ್ಥಪೂರ್ಣವಾಗಿದೆ ಎಂದರು.
ಹಳೇ ವಿದ್ಯಾರ್ಥಿ ಸಂಘದ ಅಧ್ಯಕ್ಷ ಡಾ. ಬಿ.ಎ. ಸೋಮಯಾಜಿ ಮಾತನಾಡಿ, ಕಾಲೇಜಿನ ಚರಿತ್ರೆಯ ಪುಟದಲ್ಲಿ ಇದೊಂದು ಚಾರಿತ್ರಿಕ ಘಟನೆ. ಆಗಸ್ಟ್ 20ರಂದು ಉಡುಪಿ ಪೂರ್ಣಪ್ರಜ್ಞ ಸಭಾಂಗಣದಲ್ಲಿ ನಡೆಯಲಿರುವ ಪೂರ್ಣ ಸಮ್ಮಿಲನದಲ್ಲಿ ಹಳೇ ವಿದ್ಯಾರ್ಥಿಗಳೆಲ್ಲರು ಬಂದು ನಮಗೆ ಶಿಕ್ಷಣ ನೀಡಿದ ಸಂಸ್ಥೆಗೆ ನೆರವಾಗಬೇಕೆಂದು ನುಡಿದರು.
ಪೂರ್ಣಪ್ರಜ್ಞ ಸಂಸ್ಥೆಗಳ ಗೌರವ ಆರ್ಥಿಕ ಸಲಹೆಗಾರ ಪಿ.ಶ್ರೀನಿವಾಸ ರಾವ್ ರವರು ಶುಭಾಶಂಸನೆಗೈದರು. ಇದೇ ಸಂದರ್ಭದಲ್ಲಿ ಕಾಲೇಜಿನ ನಿವೃತ್ತ ಉಪನ್ಯಾಸಕರಾದ ಪ್ರೊ. ಎಸ್.ಎಲ್ . ಕೇರೂರ್, ಪ್ರೊ.ಕೆ.ಎಸ್.ಕಾರಂತ್ ಹಾಗೂ ಪ್ರೊ.ಬಿ.ಜಿ. ನವರತ್ನರನ್ನು ಹಳೆದ್ಯಾರ್ಥಿ ಸಂಘದಿಂದ ಗೌರಸಲಾಯಿತು.
ಕಾಲೇಜಿನ ಪ್ರಾಂಶುಪಾಲರಾದ ಡಾ.ಬಿ. ಜಗದೀಶ್ ಶೆಟ್ಟಿ ಸ್ವಾಗತಿಸಿದರು. ಹಳೇ ವಿದ್ಯಾರ್ಥಿ ಸಂಘದ ಕಾರ್ಯದರ್ಶಿ ಮುರಲಿ ಕಡೆಕಾರ್ ಕಾರ್ಯಕ್ರಮ ನಿರ್ವಹಿಸಿದರು. ಸದಸ್ಯ ಪಿ. ಅಮೃತ್ ಶೆಣೈ ವಂದಿಸಿದರು. ಸಮಿತಿಯ ಸದಸ್ಯರಾದ ಉಪನ್ಯಾಸಕ ಮಂಜುನಾಥ ಕರಬ, ಮಂಜುನಾಥ ನಿಟ್ಟೂರು ಸೇರಿದಂತೆ 120ಕ್ಕೂ ಅಧಿಕ ಹಳೇ ವಿದ್ಯಾರ್ಥಿಗಳು ಭಾಗವಹಿಸಿದ್ದರು. ಸದಸ್ಯ ತೇಜಸ್ವಿ ಶಂಕರ್ (ಜ್ಯೂನಿಯರ್ ಶಂಕರ್) ಅವರಿಂದ ಮ್ಯಾಜಿಕ್ ಶೋ ನಡೆಯಿತು.