Advertisement

ಭಾರತದಲ್ಲಿ ಗೋಹತ್ಯೆ ಸಂಪೂರ್ಣ ನಿಷೇಧ: ಧರ್ಮ ಸಂಸದ್‌ ನಿರ್ಣಯ

09:37 AM Nov 27, 2017 | |

ಉಡುಪಿ: ಭಾರತದಲ್ಲಿ ಗೋಹತ್ಯೆ ಸಂಪೂರ್ಣ ನಿಷೇಧವಾಗಬೇಕು ಎನ್ನುವುದು ಸಮಸ್ತ ಹಿಂದೂ ಸಮಾಜದ ಹಾಗೂ ಧರ್ಮ ಸಂಸದ್‌ನಲ್ಲಿ ಭಾಗಿಯಾಗಿರುವ ಸರ್ವಸಂತರ ಆಗ್ರಹವಾಗಿದೆ. ಅದನ್ನೇ ಧರ್ಮಸಂಸದ್‌ ನಿರ್ಣಯಿಸಿದೆ.

Advertisement

ವಿಹಿಂಪ ಸಂಯುಕ್ತ ಪ್ರಧಾನ ಕಾರ್ಯದರ್ಶಿ ಸುರೇಂದ್ರ ಕುಮಾರ್‌ ಜೈನ್‌ ಅವರು ರವಿವಾರ ಈ ಬಗ್ಗೆ ಮಾಧ್ಯಮಗಳಿಗೆ ವಿವರಿಸಿದ್ದಾರೆ. ಭಾರತದ ಸಂವಿಧಾನ ಹಾಗೂ ನ್ಯಾಯ ವ್ಯವಸ್ಥೆ ಕೂಡ ಗೋಹತ್ಯೆ ನಿಷೇಧಗೊಳಿಸುವ ಪ್ರಬಲ ಕಾನೂನಿನ ಪರವಾಗಿದೆ. ಭಾರತದ ಬಹುತೇಕ ರಾಜ್ಯಗಳಲ್ಲಿ ಗೋಹತ್ಯೆ ನಿಷೇಧ ಮೊದಲಿನಿಂದಲೂ ಇದೆ. ಆದರೆ ದೇಶವ್ಯಾಪಿ ಕಾನೂನಿನ ಉಲ್ಲಂಘನೆಯಾಗುತ್ತಿದೆ. ಗೋಹತ್ಯೆ ಬಗ್ಗೆ ಬಿಎಸ್‌ಎಫ್ ಕೂಡ ಆತಂಕ ವ್ಯಕ್ತ ಪಡಿಸಿದೆ. ಒಂದಿಲ್ಲೊಂದು ರೀತಿಯ ಕಾರಣಗಳನ್ನು ಮುಂದಿಟ್ಟುಕೊಂಡು ಕೇರಳ, ಪಶ್ಚಿಮ ಬಂಗಾಲ, ತಮಿಳುನಾಡು ಮೊದಲಾದ ರಾಜ್ಯಗಳಲ್ಲಿ ಸಾರ್ವ ಜನಿಕವಾಗಿ ಗೋಹತ್ಯೆ ನಿರಂತರ ನಡೆಯುತ್ತಲಿದೆ. ಇದನ್ನು ಸಂತ ಸಮಾಜ ಕಠೊರ ಶಬ್ದಗಳಿಂದ ಖಂಡಿಸುತ್ತದೆ ಎಂದು ನಿರ್ಣಯಿಸಲಾಗಿದೆ.

ಗೋರಕ್ಷಣೆಯ ಕರ್ತವ್ಯಕ್ಕೆ ಕಾನೂನಿನ ರಕ್ಷಣೆ ಇದೆ. ಗೋಹತ್ಯೆಗೆ ಕಠಿನ ಕಾನೂನು ಶಿಕ್ಷೆ ಇದ್ದರೂ ಗೋಮಾಂಸ ತಿನ್ನುತ್ತೇವೆಂದು ಹೇಳುವುದು, ಕೇರಳದಲ್ಲಿ ದನದ ತಲೆ ಕಡಿದು ಮೆರವಣಿಗೆ ಮಾಡುವುದು, ಬೆಂಗಳೂರಿನಲ್ಲಿ ಬಹಿರಂಗವಾಗಿ ದನದ ಮಾಂಸ ತಿನ್ನುವುದು, ಕರ್ನಾಟಕದ ಮುಖ್ಯ ಮಂತ್ರಿ ದನದ ಮಾಂಸ ತಿಂದರೇನು ತಪ್ಪು ಎಂದು ಪ್ರಶ್ನಿಸುತ್ತಿರುವುದು ಇತ್ಯಾದಿ ವರ್ತನೆಗಳಿಂದ ಹಿಂದೂಗಳ ಭಾವನೆಗೆ ಧಕ್ಕೆಯಾಗುತ್ತದೆ. ಸರ್ವ ಸಂತರು ಇದನ್ನು ಖಂಡಿಸಿದ್ದಾರೆ ಎಂದರು.

ಕಸಾಯಿಖಾನೆ ಮುಚ್ಚಿಸಿ: ಕೇಂದ್ರಕ್ಕೆ ಸಂತರು
ರಾಷ್ಟ್ರೀಯ ಹಸಿರು ಪ್ರಾಧಿಕಾರ (ಎನ್‌ಜಿಟಿ)ದ ಆದೇಶದಂತೆ ದೇಶದ ಎಲ್ಲ ಕಸಾಯಿಖಾನೆಗಳನ್ನು ಮುಚ್ಚುವಂತೆ ಧರ್ಮ ಸಂಸದ್‌ ಮೂಲಕ ಸಂತರು ಕೇಂದ್ರ ಸರಕಾರಕ್ಕೆ ಕರೆ ನೀಡಿದ್ದಾರೆ.

ಡಿಎನ್‌ಎ ಪರೀಕ್ಷೆ, ಆಜೀವ ಜೈಲು
ಬೀಫ್ ಎನ್ನುವುದು ಆಕಳ ಮಾಂಸ ಮಾತ್ರ ಅಲ್ಲ. ಇತರ ಪ್ರಾಣಿಗಳದ್ದೂ ಇದರಲ್ಲಿ ಸೇರುತ್ತದೆ ಎಂದು ಹೇಳಿ ದಾರಿ ತಪ್ಪಿಸಲಾಗುತ್ತಿದೆ. ಕಳ್ಳತನದ ಮೂಲಕ ಗೋಮಾಂಸ ರಫ್ತು ಮಾಡುವುದನ್ನು ತಪ್ಪಿಸಲು ಬಂದರುಕಟ್ಟೆಗಳಲ್ಲಿ ಮಾಂಸದ ಡಿಎನ್‌ಎ ಪರೀಕ್ಷೆ ಮಾಡಬೇಕು. ದನದ ಮಾಂಸವೆಂದು ಸಾಬೀತಾದರೆ ಅಂತಹ ತಪ್ಪಿತಸ್ಥರಿಗೆ ಕಠಿನ ಶಿಕ್ಷೆಯಾಗಿ ಆಜೀವ ಜೈಲುವಾಸ ನೀಡಬೇಕು ಹಾಗೂ ಅವರ ಅನುಮತಿ ರದ್ದುಪಡಿಸಬೇಕು.

Advertisement

ಆಮರಣಾಂತ ಉಪವಾಸ-ಸ್ವರಾಜ್ಯ ಕಲ್ಪನೆ
ಗೋವಿನ ಮಹತ್ವವನ್ನು ಅರಿತ ಮಹಾತ್ಮಾ ಗಾಂಧೀಜಿಯವರು ಗೋರಕ್ಷಣೆಯ ಹೊರತಾದ ಸ್ವರಾಜ್ಯ ಅಪೂರ್ಣವಾಗಿರುತ್ತದೆ ಎಂದಿದ್ದರು. ಶಂಕರಾಚಾರ್ಯ ನಿರಂಜನದೇವತೀರ್ಥರು, ಪ್ರಭುದತ್ತ ಬ್ರಹ್ಮಚಾರಿ, ಪಂಡಿತ್‌ ರಾಮಚಂದ್ರ ವೀರ ಮಹಾರಾಜರು ಮತ್ತು ಆಚಾರ್ಯ ವಿನೋಬಾ ಭಾವೆಯವರು ಗೋರಕ್ಷಣೆಗೆ ಕೇಂದ್ರೀಯ ಕಾನೂನು ಜಾರಿಗೆ ತರುವಂತೆ ಆಗ್ರಹಿಸಿ ಆಮರಣಾಂತ ಉಪವಾಸ ಸತ್ಯಾಗ್ರಹ ಮಾಡಿದ್ದರು. ಪಂಡಿತ ದೀನ ದಯಾಳ್‌ ಉಪಾಧ್ಯಾಯರು ಗೋವಂಶ ಆಧಾರಿತ ಕೃಷಿಯಿಂದ ಭಾರತದ ಉಜ್ವಲ ಭವಿಷ್ಯದ ಕನಸು ಕಂಡಿದ್ದರು. ಆಗ ಎಲ್ಲಿತ್ತು ವಿಶ್ವ ಹಿಂದೂ ಪರಿಷದ್‌? ಮಹಾನ್‌ ಪುರುಷರೇ ಗೋಹತ್ಯೆ ನಿಷೇಧವನ್ನು ಬೆಂಬಲಿಸಿದ್ದರಲ್ಲವೆ. ಹೀಗಿರುವಾಗ ಗೋಹತ್ಯೆ ನಿಷೇಧ ವಿಹಿಂಪ ಅಜೆಂಡಾ ಆಗುವುದು ಹೇಗೆ? ವಿಹಿಂಪದ ಅಜೆಂಡವಲ್ಲ. ದೇಶದ ಮನುಕುಲದ ಎಲ್ಲರ ಆಶಯವೇ ಗೋಹತ್ಯೆ ಸಂಪೂರ್ಣ ತಡೆಗಟ್ಟುವುದಾಗಿದೆ. ಗೋಹತ್ಯೆ ನಿಷೇಧವು ಹಿಂದೂ ಸಮಾಜದ ಬದ್ಧತೆಯಾಗಿದೆ.

ಗೋ-ಅಭಯಾರಣ್ಯ ಅಗತ್ಯ
ಗೋಮಾಳ ಜಾಗವು ಉಳ್ಳವರಿಂದ ಒತ್ತುವರಿ ಯಾಗಿದೆ. ಅಂತಹ ಜಾಗವಿದ್ದರೆ ಸರಕಾರ ಮುಕ್ತ ಗೊಳಿಸಬೇಕು. ಅದಕ್ಕಾಗಿ ಜಿಲ್ಲಾಧಿಕಾರಿಗಳಿಗೆ ಆದೇಶ ನೀಡುವಂತೆ ರಾಜ್ಯ ಸರಕಾರಕ್ಕೆ ಕೇಂದ್ರ ನಿರ್ದೇಶ ನೀಡಬೇಕು. ಗೋವುಗಳ ಸುರಕ್ಷೆಗಾಗಿ ಸರಕಾರದ ವತಿಯಿಂದ ಗೋ-ಅಭಯಾರಣ್ಯಗಳನ್ನು ನಿರ್ಮಿಸಬೇಕು. ಗೋವಂಶ ಆಧಾರಿತ ಕೃಷಿ ಪದ್ಧತಿಯನ್ನು ಶೈಕ್ಷಣಿಕ ಪಠ್ಯಪುಸ್ತಕದಲ್ಲಿ ಸೇರಿಸಬೇಕು.

ಗೋಕಳ್ಳರ ಮೇಲೆ ನಿಗಾ ಇರಲಿ
ಕೇಂದ್ರ ಸರಕಾರ ಹಾಗೂ ನ್ಯಾಯಾಲಯ ಆದೇಶದಂತೆ ನೇಮಕವಾಗಿರುವ ನೋಡಲ್‌ ಅಧಿಕಾರಿ ಗೋಸಂರಕ್ಷಕರ ಮೇಲೆ ನಿಗಾ ಇರಿಸಿದ್ದಾರೆ. ಅವರು ಮೊದಲು ಗೋಹತ್ಯೆ, ಗೋಕಳ್ಳರ ಮೇಲೆ ನಿಗಾ ವಹಿಸಬೇಕು. ಈ ಬಗ್ಗೆ ಸುಪ್ರೀಂ ಕೋರ್ಟಿಗೆ ಹಾಗೂ ಕೇಂದ್ರಕ್ಕೆ ಮಾಹಿತಿ ನೀಡಲಾಗಿದೆ. ನೋಡಲ್‌ ಅಧಿಕಾರಿಯ ಕಾರ್ಯವ್ಯಾಪ್ತಿಯನ್ನು ವಿಸ್ತರಿಸಿ ಗೋಕಳ್ಳರು, ಗೋಹಂತಕರ ಮೇಲೆ ಅವರು ನಿಗಾ ಇಡುವಂತಾಗಬೇಕು. ಅವರ ಮೇಲೆ ಕ್ರಮ ಕೈಗೊಳ್ಳಲು ಕೂಡ ಅಧಿಕಾರ ನೀಡಬೇಕು. ಗೋಕಳ್ಳತನ, ಸಾಗಾಟ ತಡೆಯುವುದಕ್ಕೆ ಜಿಲ್ಲಾಧಿಕಾರಿಗಳು ನೀಡುವ ಅನುಮತಿ ಪತ್ರ ಕಂಪ್ಯೂಟರೀಕೃತವಾಗಬೇಕು.

“ಯೋಗಿ ಗೈರು ಉದ್ದೇಶಪೂರ್ವಕವಲ್ಲ’
ಉತ್ತರ ಪ್ರದೇಶ ಮುಖ್ಯಮಂತ್ರಿ  ಯೋಗಿ ಆದಿತ್ಯನಾಥ ಅವರಿಗೆ ಭಾಗವಹಿಸುವ ಅತೀವ ಆಸಕ್ತಿ ಇದ್ದಿತ್ತು. ಆದರೆ ಅಲ್ಲಿನ ಸ್ಥಳೀಯ ಚುನಾವಣೆಯ ಕಾರಣ ವಿವಿಧ ಜವಾಬ್ದಾರಿಗಳ ನಿರ್ವಹಣೆ ಮಾಡ ಬೇಕಾಗಿದ್ದ  ದೃಷ್ಟಿಯಿಂದ ಅವರು ಬರಲಿಲ್ಲ. ಉಮಾಭಾರತಿ ಅವರು ಅನ್ಯಕಾರ್ಯ ನಿಮಿತ್ತ ಬರಲಿಲ್ಲ. ಯಾರು ಕೂಡ ಉದ್ದೇಶಪೂರ್ವಕವಾಗಿ ತಪ್ಪಿಸಿಕೊಂಡದ್ದಲ್ಲ ಎಂದು ಸುರೇಂದ್ರ ಕುಮಾರ್‌ ಜೈನ್‌ ಹೇಳಿದ್ದಾರೆ.

ಅವರದು 200; ಇವರದು 15 ಪ್ರಕರಣ
ಗೋಸಂರಕ್ಷಕರ ಬಗ್ಗೆ ದೇಶದಲ್ಲಿ ಅಪನಂಬಿಕೆ ಹುಟ್ಟುಹಾಕಲಾಗಿದೆ. ಮಾಧ್ಯಮಗಳು ಕೂಡ ಅದನ್ನೇ ದೊಡ್ಡ ಸುದ್ದಿಯಾಗಿ ಪ್ರಸಾರ ಮಾಡುತ್ತಲಿವೆ. ದೇಶದಲ್ಲಿ ಕಳೆದ 3 ವರ್ಷಗಳಲ್ಲಿ ಗೋಹತ್ಯಾಕೋರರಿಂದ 200ಕ್ಕೂ ಅಧಿಕ ಹಲ್ಲೆಗಳು ನಡೆದಿವೆ. ಗೋಸಂರಕ್ಷಕರಿಂದ 15 ಹಲ್ಲೆಗಳು ನಡೆದಿವೆ ಅಷ್ಟೆ. ಗೋಸಂರಕ್ಷಕರು ಗೋವುಗಳನ್ನು ಉಳಿಸಲು ಮಾಡಿದ ಕೃತ್ಯಗಳನ್ನು ಹಿಂಸೆ ಎಂದು ಹೇಳಿ ವೈಭವೀಕರಣ ಮಾಡಲಾಗುತ್ತಿದೆ. ಹಣದ ಆಸೆಗಾಗಿ ನಕಲಿ ಗೋರಕ್ಷಕರು ಹುಟ್ಟಿಕೊಂಡಿದ್ದಾರೆ. ಅವರನ್ನು ನಾವು ಬೆಂಬಲಿಸುವುದಿಲ್ಲ ಎಂದು ಸುರೇಂದ್ರ ಕುಮಾರ್‌ ಜೈನ್‌ ಹೇಳಿದರು.

Advertisement

Udayavani is now on Telegram. Click here to join our channel and stay updated with the latest news.

Next