Advertisement

ಇಂದಿನಿಂದ ಸ್ವಚ್ಛಮೇವ ಜಯತೇ ಆಂದೋಲನ

09:27 PM Jun 10, 2019 | mahesh |

ಪುತ್ತೂರು: ಸ್ವಚ್ಛ ಭಾರತ ಮಿಷನ್‌ (ಗ್ರಾಮೀಣ) ಯೋಜನೆಯಡಿ ಸರಕಾರ ಸ್ವಚ್ಛ ಮೇವ ಜಯತೇ ಆಂದೋಲನವನ್ನು ಜೂ. 11ರಿಂದ ಪ್ರಾರಂಭಿಸಲಿದ್ದು, ಇದರಲ್ಲಿ ಗಿಡಗಳನ್ನು ಬೆಳೆಸುವ ಯೋಜನೆಯೂ ಇರುವುದರಿಂದ ಪುತ್ತೂರಿನ ಗ್ರಾ.ಪಂ.ಗಳು ಸಾಮಾಜಿಕ ಅರಣ್ಯ ಇಲಾಖೆಯಿಂದ 10 ಸಾವಿರಕ್ಕೂ ಅಧಿಕ ಗಿಡಗಳಿಗೆ ಬೇಡಿಕೆ ವ್ಯಕ್ತಪಡಿಸಿದೆ.

Advertisement

ಸೋಮವಾರವೇ ಜಿಲ್ಲೆಗೆ ಮುಂಗಾರು ಪ್ರವೇಶದ ಲಕ್ಷಣಗಳು ಕಂಡುಬರುತ್ತಿರು ವುದರಿಂದ ಗಿಡಗಳನ್ನು ನೆಡುವುದಕ್ಕೆ ಇದು ಸೂಕ್ತ ಸಮಯ ಎನಿಸಿದೆ. ಪ್ರತಿ ಗ್ರಾ.ಪಂ.ಗಳು ಪುತ್ತೂರಿನ ಸಾಮಾಜಿಕ ಅರಣ್ಯ ಇಲಾಖೆಗೆ ಇಮೇಲ್‌ ಮೂಲಕ 500, 200, 100 ಗಿಡಗಳಿಗೆ ಬೇಡಿಕೆ ಸಲ್ಲಿಸಿವೆ.

ಸೋಮವಾರವೇ ಸಾಕಷ್ಟು ಗ್ರಾ.ಪಂ.ಗಳು ಇಲಾಖೆಗೆ ಆಗಮಿಸಿ ತಮ್ಮ ಬೇಡಿಕೆಯಂತೆ ಗಿಡಗಳನ್ನು ಸಾಗಾಟ ನಡೆಸಿವೆ. ಇಲಾಖೆಯ ವತಿಯಿಂದ ಮಹಾತ್ಮಾ ಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತರಿ ಯೋಜನೆಯಡಿ ಫಲಾನುಭವಿಗಳಿಗೆ ಅರಣ್ಯ ಗಿಡ ನಾಟಿ ಮಾಡಲು 6ಗಿ9 ಅಳತೆ ಗಾತ್ರದ ಚೀಲಗಳಲ್ಲಿ ಸುಮಾರು 22,900 ವಿವಿಧ ಜಾತಿಯ ಗಿಡಗಳನ್ನು ಮುಕ್ವೆಯಲ್ಲಿರುವ ಇಲಾಖಾ ನರ್ಸರಿಯಲ್ಲಿ ಬೆಳೆಸಲಾಗಿದ್ದು, ಇದಕ್ಕೆ ವಿಶೇಷ ಪ್ರೋತ್ಸಾಹ ಧನವೂ ಲಭ್ಯವಾಗಲಿದೆ.ವಿವಿಧ ಜಾತಿಯ ಗಿಡಗಳುಇಲಾಖೆಯ ನರ್ಸರಿಯಲ್ಲಿ ಸಾಗುವಾನಿ, ಹಲಸು, ಹೆಬ್ಬಲಸು, ಮಾವು, ಪುನರ್‌ ಪುಳಿ, ಮಹಾಗನಿ, ಸಂಪಿಗೆ, ಕಿರಾಲ್‌ ಬೋಗಿ, ಶ್ರೀಗಂಧ, ರಕ್ತಚಂದನ, ನೇರಳೆ, ಹಾಲ್‌ವುಡ್ಡಿ, ಶಿವಣೆ, ಬಿಲ್ವಪತ್ರೆ, ನೆಲ್ಲಿ, ಸೀತಾಫಲ, ಬಾದಾಮಿ, ಬೇಂಗ, ಕಾಚು, ಔಷಧಿ ಸಸಿಗಳು, ಬೊಲ್ಪಾಲೆ, ರಾಂಪತ್ರೆ, ಹೆಬ್ಬೇವು ಮೊದಲಾದ ಗಿಡಗಳು ಇಲ್ಲಿ ಲಭ್ಯವಿವೆ.

ಇಲಾಖೆಯು ಆಸಕ್ತ ಫಲಾನುಭವಿಗಳಿಗೆ ಉಚಿತವಾಗಿ ಗಿಡಗಳನ್ನು ನೀಡುವುದರ ಜತೆಗೆ ಗಿಡ ನಾಟಿ ಮಾಡುವುದಕ್ಕೆ ಕೂಲಿ ಪಾವತಿ ಕೂಡ ಯೋಜನೆಯಡಿ ಗಿಡ ಒಂದಕ್ಕೆ ಕೂಲಿ ಹಾಗೂ ಸಾಮಗ್ರಿ ವೆಚ್ಚ ಸೇರಿ ಅಂದಾಜು 55 ರೂ.ನಷ್ಟು ಪಾವತಿಯಾಗುತ್ತದೆ (ಹೊಂಡ ತೋಡಿ, ಮಣ್ಣಿನ ಅಗತೆ ಕೆಲಸ, ಗೊಬ್ಬರ ಹಾಕುವುದು ಇತ್ಯಾದಿ).

ನಿರ್ವಹಣ ವೆಚ್ಚವೂ ಸಿಗುತ್ತದೆ
ಉದ್ಯೋಗ ಖಾತರಿ ಯೋಜನೆಯ ಜಾಬ್‌ ಕಾರ್ಡ್‌ ಮಾಡಿಸಿಕೊಂಡವರಿಗೆ ಪ್ರತಿ ಗಿಡಗಳ ನಾಟಿಗೆ 55ರಿಂದ 60 ರೂ. ಸಿಗಲಿದ್ದು, ಬದುಕಿ ಉಳಿದ ಗಿಡಗಳ ನಿರ್ವಹಣೆಗೆ ಮೊದಲ ವರ್ಷ 10.50 ರೂ. ನಿರ್ವಹಣ ವೆಚ್ಚವೂ ಸಿಗಲಿದೆ. ಗ್ರಾ.ಪಂ.ಗಳಿಗೂ ಇದೇ ಯೋಜನೆಯಲ್ಲಿ ಗಿಡಗಳ ನಾಟಿಗೆ ಅವಕಾಶವಿರುವ ಹಿನ್ನೆಲೆಯಲ್ಲಿ, ತಿಂಗಳಪೂರ್ತಿ ವಿವಿಧ ಕಡೆಗಳಲ್ಲಿ ಗಿಡಗಳನ್ನು ನಾಟಿ ಮಾಡುವ ದೃಷ್ಟಿಯಿಂದ ಹೆಚ್ಚಿನ ಗಿಡಗಳಿಗೆ ಬೇಡಿಕೆ ಇದೆ.

Advertisement

ಸ್ಮಾ ಫ್ಸ್ (ಎಸ್‌ಎಂಎಎಫ್‌) ನಲ್ಲೂ ಅವಕಾಶ
ಸಬ್‌ಮಿಷನ್‌ ಆನ್‌ ಆ್ಯಗ್ರೋಫಾರೆಸ್ಟ್ರಿ (ಎಸ್‌ಎಂಎಎಫ್‌) ಯೋಜನೆಯ ಮೂಲಕವೂ ಗಿಡಗಳ ನಾಟಿಗೆ ಅವಕಾಶವಿದ್ದು, 6ಗಿ9 ಅಳತೆಗೆ 1 ರೂ. ಹಾಗೂ 8ಗಿ12 ಅಳತೆಗೆ 3 ರೂ. ಪಾವತಿಸಿ ಫಲಾನುಭವಿಗಳು ಗಿಡಗಳನ್ನು ಪಡೆಯಬಹುದಾಗಿದೆ. ಇದರಲ್ಲಿ ಬೌಂಡರಿ ಪ್ಲಾಟಿಂಗ್‌ಗೆ ಪ್ರತಿ ಗಿಡಕ್ಕೆ 14 ರೂ., ಒಂದು ಹೆಕ್ಟೇರ್‌ನಲ್ಲಿ 100ರಿಂದ 500ರಂತೆ ಪ್ರತಿಗಿಡಕ್ಕೆ 14 ರೂ., ಒಂದು ಹೆಕ್ಟೇರ್‌ನಲ್ಲಿ 500ರಿಂದ 1000ದಂತೆ ಪ್ರತಿ ಗಿಡಕ್ಕೆ 10 ರೂ., ಒಂದು ಹೆಕ್ಟೇರ್‌ನಲ್ಲಿ 1000ದಿಂದ 1200ರಂತೆ ಪ್ರತಿ ಗಿಡಕ್ಕೆ 7 ರೂ. ಪ್ರೋತ್ಸಾಹ ಧನ ಲಭ್ಯವಾಗಲಿದೆ. ಇದರ ನಿರ್ವಹಣೆಗೂ ನಿರ್ವಹಣ ವೆಚ್ಚ ಸಿಗಲಿದೆ.

ಫಲಾನುಭವಿಗಳು ಹೀಗೆ ಮಾಡಿ
ಆಸಕ್ತ ಹಾಗೂ ಅರ್ಹ ಫಲಾನುಭವಿಗಳು ಸಂಬಂಧಿಸಿದ ಗ್ರಾಮ ಪಂಚಾಯತ್‌ಗಳಲ್ಲಿ ನರೇಗಾ ಯೋಜನೆಯಡಿ ಉದ್ಯೋಗ ಚೀಟಿಯನ್ನು ನೋಂದಾಯಿಸಿಕೊಂಡು ಪೂರ್ಣ ವಿಳಾಸ ಹಾಗೂ ಸ್ಥಳದ ವಿವರಗೊಂದಿಗೆ (ಆರ್‌ಟಿಸಿ, ನಕಾಶೆ ಪ್ರತಿ, ಸಣ್ಣ ರೈತ ದೃಢೀಕರಣ ಪತ್ರ, ಜಾತಿ ಪ್ರಮಾಣ ಪತ್ರ, ಬ್ಯಾಂಕ್‌ ಖಾತೆ ವಿವರ, ಆಧಾರ್‌ ಕಾರ್ಡ್‌ ಪ್ರತಿ ಇತ್ಯಾದಿ) ಸಸಿ ಬೇಡಿಕೆ ವಿವರಗಳನ್ನು ಕಚೇರಿಗೆ ಸಲ್ಲಿಸಿ ಗಿಡಗಳನ್ನು ಇಲಾಖೆಯ ಮುಕ್ವೆ ನರ್ಸರಿಯಿಂದ ಪಡೆದುಕೊಳ್ಳಬಹುದಾಗಿದೆ.

 ಗ್ರಾ.ಪಂ.ನಿಂದ ಬೇಡಿಕೆ
ಇಮೇಲ್‌ ಮೂಲಕ ಸಾಕಷ್ಟು ಗ್ರಾ.ಪಂ.ನಿಂದ ಬೇಡಿಕೆ ಬಂದಿದ್ದು, ಸ್ವತ್ಛ ಮೇವ ಜಯತೇ ಆಂದೋಲನ ತಿಂಗಳ ಪೂರ್ತಿ ನಡೆಯುತ್ತಿರುವುದರಿಂದ ವಿವಿಧ ಸ್ಥಳಗಳಲ್ಲಿ ಗ್ರಾ.ಪಂ. ಗಿಡಗಳನ್ನು ನೆಡಲಿದೆ. ಉದ್ಯೋಗ ಖಾತರಿ ಯೋಜನೆಯ ಮೂಲಕ ಇದಕ್ಕೆ ಪ್ರೋತ್ಸಾಹ ಧನ ಪಡೆಯುವುದಕ್ಕೆ ಅವಕಾಶವಿದೆ.
– ವಿದ್ಯಾರಾಣಿ ಪಿ.ಕೆ. ವಲಯ ಅರಣ್ಯಾಧಿಕಾರಿ, ಸಾಮಾಜಿಕ ಅರಣ್ಯ ವಿಭಾಗ, ಪುತ್ತೂರು

Advertisement

Udayavani is now on Telegram. Click here to join our channel and stay updated with the latest news.

Next