Advertisement

25 ವರ್ಷ ಬಳಿಕ ಒಂದಾದ ಗೆಳೆಯರು

12:11 PM Jul 28, 2019 | Suhan S |

ಕೊಪ್ಪಳ: ಶಿಕ್ಷಕನಾದವ ವಿದ್ಯಾರ್ಥಿಗಳಿಗೆ ಕಲಿಸುವ ಜೊತೆಗೆ ತಾನು ಕೂಡ ನಿರಂತರವಾಗಿ ಕಲಿಯುತ್ತಾ ಸಾಗುತ್ತಾನೆ. ಯಾವುದೇ ಮತ್ಸರ ಭಾವಗಳಿಗೆ ಅವಕಾಶವಿಲ್ಲದ ಏಕೈಕ ವೃತ್ತಿ ಶಿಕ್ಷಕರದ್ದಾಗಿದೆ ಎಂದು ನಿವೃತ್ತ ಕೆಎಎಸ್‌ ಅಧಿಕಾರಿ ಎ.ಎಂ. ಮದರಿ ಹೇಳಿದರು.

Advertisement

ತಾಲೂಕಿನ ಭಾಗ್ಯನಗರದ ಸರಕಾರಿ ಪ್ರೌಢಶಾಲೆಯ ಆವರಣದಲ್ಲಿ 1994-95ನೇ ಸಾಲಿನ ಎಸ್ಸೆಸ್ಸೆಲ್ಸಿ ವಿದ್ಯಾರ್ಥಿಗಳು ಶನಿವಾರ ಏರ್ಪಡಿಸಿದ್ದ ರಜತ ಮಹೋತ್ಸವ ಹಾಗೂ ಗುರು ವಂದನಾ ಕಾರ್ಯಕ್ರಮಲ್ಲಿ ಅವರು ಮಾತನಾಡಿದರು.

25 ವರ್ಷಗಳ ನಂತರ ಅಂದಿನ ವಿದ್ಯಾರ್ಥಿಗಳು ಮತ್ತು ಶಿಕ್ಷಕರು ಒಂದೇ ವೇದಿಕೆಯಲ್ಲಿ ಸಮಾಗಮವಾಗಿರುವುದು ಭಾವುಕ ಸಂದರ್ಭವಾಗಿದೆ. ಭಾಗ್ಯನಗರದಲ್ಲಿ 4 ದಶಕಗಳ ಹಿಂದೆ ಸರಕಾರಿ ಪ್ರೌಢಶಾಲೆ ಆರಂಭವಾದಾಗ ಶಿಕ್ಷಣ ಗುಣಮಟ್ಟದ ಬಗ್ಗೆ ಉದಾಸೀನ ಭಾವನೆ ಹೊಂದಿದ್ದವರೇ ಹೆಚ್ಚಾಗಿದ್ದರು. ಶಾಲೆಯ ಮೊದಲ ಮುಖ್ಯೋಪಾಧ್ಯಾಯ ಚನ್ನಬಸವಯ್ಯ ಹಾಗೂ ಸಿಬ್ಬಂದಿ ಬಿ.ಜಿ. ಮಡಿವಾಳರ್‌ ಅಂತಹವರ ಶ್ರಮದಿಂದ ಕ್ರಮೇಣ ಈ ಶಾಲೆಗೆ ಉತ್ತಮ ಹೆಸರು ಪ್ರಾಪ್ತಿಯಾಯಿತು. ಕೊಪ್ಪಳ ನಗರ ಹಾಗೂ ಸುತ್ತಮುತ್ತಲಿನ ಗ್ರಾಮಗಳ ವಿದ್ಯಾರ್ಥಿಗಳು ಗುಣಮಟ್ಟದ ಶಿಕ್ಷಣ ಹುಡುಕಿಕೊಂಡು ಈ ಶಾಲೆಯಲ್ಲಿ ಪ್ರವೇಶ ಪಡೆಯಲು ತುದಿಗಾಲಲ್ಲಿ ನಿಲ್ಲುವ ಮಟ್ಟಕ್ಕೆ ಬೆಳೆಯಲು ಇಲ್ಲಿನ ಅಂದಿನ ಶಿಕ್ಷಕರ ಕೊಡುಗೆ ಕಾರಣ ಎಂದರು.

ಭಾಗ್ಯನಗರ ಸರಕಾರಿ ಪಪೂ ಕಾಲೇಜಿನ ಪ್ರಾಚಾರ್ಯ ರಾಜಶೇಖರ ಪಾಟೀಲ ಮಾತನಾಡಿ, ಜಿಲ್ಲಾದ್ಯಂತ ಕಳೆದ ಏಳೆಂಟು ವರ್ಷಗಳಿಂದ ಗುರುವಂದನಾ ಕಾರ್ಯಕ್ರಮಗಳು ನಡೆಯುತ್ತಿರುವುದನ್ನು ನೋಡಿದಾಗ ನಮ್ಮಲ್ಲಿ ಸಂಸ್ಕಾರ ಮತ್ತೇ ಜಾಗೃತವಾಗುತ್ತಿರುವುದು ಸ್ಪಷ್ಟ. ಶಿಕ್ಷಣ ಎಂದರೆ ಕಲಿಯುವ ಅವಧಿಯ ನಂತರ ನಮ್ಮಲ್ಲಿ ಉಳಿಯುವ ಭಾವನೆಗಳಾಗಿವೆ. ಗಟ್ಟಿಯಾದ ನೆನಪುಗಳು ಬಿಡದೇ ಕಾಡುತ್ತವೆ ಎಂದರು.ನಿವೃತ್ತ ಉಪನ್ಯಾಸಕ ಡಿ.ಎಂ. ಬಡಿಗೇರ ಮಾತನಾಡಿದರು.

ಪ್ರಭಾರಿ ಮುಖ್ಯೋಪಾಧ್ಯಾಯೆ ಭಾರತಿ ಅರಳಿಕಟ್ಟಿ ಅಧ್ಯಕ್ಷತೆ ವಹಿಸಿ ಮಾತನಾಡಿದರು. ಹಿಂದಿನ ಶಿಕ್ಷಕರಾಗಿದ್ದ ನಿಂಗಪ್ಪ ಬ್ಯಾಳಿಶೆಟ್ಟರ್‌, ವೀರಣ್ಣ ಶಿಗೇನಹಳ್ಳಿ, ಶಿವಪ್ಪ ತೊಂಡಿಹಾಳ, ಸೋಮಣ್ಣ ಚಿತ್ರಗಾರ, ಬಿ.ಜೆ. ಮಡಿವಾಳರ್‌, ಎ.ವಿ. ಉಪಾಧ್ಯಾಯ, ಶರಣಬಸಪ್ಪ ಹಳ್ಳಿಕೇರಿ, ಖಾಜಾಸಾಬ್‌ ಬೂದಗುಂಪಿ, ಈಶ್ವರಪ್ಪ ನಾಲವಾಡ ಸೇರಿದಂತೆ ಇತರರಿಗೆ ಗುರುವಂದನೆ ಸಲ್ಲಿಸಲಾಯಿತು.

Advertisement

ರೇಣುಕಾ ಮಣ್ಣೂರ, ಜಗದೀಶ ಹನುಮನಾಳ, ಜ್ಯೋತಿ ತುಂಬಳದ, ಗುರುರಾಜ ಬನ್ನಿಗೋಳ, ಶರಣು ತಿಳಿಗೋಳ ಮತ್ತಿತರರು ಅನಿಸಿಕೆ ವ್ಯಕ್ತಪಡಿಸಿದರು. ಪ್ರಭಾಕರ ಪಟವಾರಿ, ಮಾರುತಿ ಚಿತ್ರಗಾರ ಮತ್ತು ಸಂಗಡಿಗರು ಸಂಗೀತ ಕಾರ್ಯಕ್ರಮ ನಡೆಸಿಕೊಟ್ಟರು. ಗಾಯತ್ರಿ ಹಾಗೂ ಸುಮಿತ್ರಾ ಬೆಟಗೇರಿ ಪ್ರಾರ್ಥಿಸಿದರು. ಪರಶುರಾಮ ನಾಯಕ ಸ್ವಾಗತಿಸಿದರು. ಡಿ.ಗುರುರಾಜ ಪ್ರಾಸ್ತಾವಿಕ ಮಾತನಾಡಿದರು. ಮಂಜುನಾಥ ಡೊಳ್ಳಿನ್‌ ಆಶಯ ನುಡಿಗಳನ್ನಾಡಿದರು. ರವಿ ಕುರಗೋಡ ವರದಿ ವಾಚಿಸಿದರು. ಬಸವರಾಜ ಕರುಗಲ್ ನಿರೂಪಿಸಿದರು. ಗಿರೀಶ್‌ ಪಾನಘಂಟಿ ವಂದಿಸಿದರು.

ವಿದೇಶದಿಂದ ಬಂದ ಗೆಳೆಯರು:

ಹಳೆಯ ವಿದ್ಯಾರ್ಥಿ ಚಂದ್ರಕಾಂತ್‌ ಜಾಧವ್‌ ಬಹ್ರೇನ್‌ನಿಂದ ಆಗಮಿಸಿ ಗುರುವಂದನಾ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಗಮನ ಸೆಳೆದರು. ಇವರು ಬಹ್ರೇನ್‌ ದೇಶದಲ್ಲಿ ಮಾರುಕಟ್ಟೆ ವಿಭಾಗದಲ್ಲಿ ಉನ್ನತ ಹುದ್ದೆಯಲ್ಲಿದ್ದು, 25 ವರ್ಷಗಳ ಬಳಿಕ ತಾನು ಕಲಿತ ಶಾಲೆಗೆ ಮರಳಿ ಭೇಟಿ ನೀಡಿದ ಕುರಿತು ಪ್ರಸ್ತಾಪಿಸಿದರು. ಇನ್ನೂ ಜರ್ಮನಿ ದೇಶದಲ್ಲಿ ನೆಲೆಸಿದ ಸಾಫ್ಟವೇರ್‌ ಇಂಜನಿಯರ್‌ ಪ್ರಶಾಂತ ಮಾದಿನೂರು ವೀಡಿಯೋ ಮೂಲಕ ತಮ್ಮ ಸಂದೇಶ ಕಳಿಸಿ ಅಂದಿನ ನೆನಪು ಮೆಲುಕು ಹಾಕಿದರು.
ಸಹಾಯ ಹಸ್ತ:

ಹಳೆಯ ವಿದ್ಯಾರ್ಥಿಗಳು ಬ್ಯಾಂಕ್‌ ಖಾತೆ ತೆರೆದಿದ್ದು, ಖಾತೆಗೆ ಹಳೆಯ ವಿದ್ಯಾರ್ಥಿಗಳು ಪ್ರತಿ ತಿಂಗಳು ಸಾಧ್ಯವಾದಷ್ಟು ಹಣ ಹಾಕಿದರೆ ಆ ಖಾತೆಯಲ್ಲಿ ಜಮೆಯಾಗುವ ಹಣದಲ್ಲಿ ಪ್ರತಿ ವರ್ಷ ಸ್ನೇಹಿತರ ಕುಟುಂಬದ ಆರ್ಥಿಕ ಸಂಕಷ್ಟಗಳಿಗೆ ಸಹಾಯ ಹಸ್ತ ಚಾಚುವ ಯೋಜನೆಗೆ ಚಾಲನೆ ನೀಡಲಾಯಿತು. ಗುರುವಂದನೆ ಸಲ್ಲಿಸಿದ ವಿದ್ಯಾರ್ಥಿಗಳು ಕಾರ್ಯಕ್ರಮದ ಸ್ಮರಣಾರ್ಥ ಭಾಗ್ಯನಗರ ಪ್ರೌಢಶಾಲೆಗೆ ಊಟದ ತಟ್ಟೆ-ಲೋಟ್ ದೇಣಿಗೆ ನೀಡಿದರು.
Advertisement

Udayavani is now on Telegram. Click here to join our channel and stay updated with the latest news.

Next