Advertisement

ರುದ್ರಭೂಮಿಗೆ ಸೌಕರ್ಯ ಕಲ್ಪಿಸಿದ ಮಿತ್ರ ಮಂಡಲ

11:30 AM Aug 11, 2018 | |

ಬೆಂಗಳೂರು: ಬದುಕಿನ ಅಂತಿಮ ಯಾತ್ರೆ ಮುಗಿಸಿದ ಮಾನವನ ದೇಹ ಪ್ರಕೃತಿ ಸೇರುವುದು ಸ್ಮಶಾನದಲ್ಲಿ. ಇಲ್ಲಿ ಮೃತದೇಹ ಸುಡುವುದು ಅಥವಾ ಮಣ್ಣು ಮಾಡುವುದು ಮಾತ್ರವಲ್ಲದೆ, ವರ್ಷಕ್ಕೊಮ್ಮೆ ಬಂದು ಧಾರ್ಮಿಕ ವಿಧಿ-ವಿಧಾನಗಳನ್ನೂ ನಡೆಸುತ್ತಾರೆ. ಆದರೆ, ಅಂತಹ ಜಾಗದಲ್ಲಿ ಸ್ವತ್ಛತೆ ಇಲ್ಲದಿದ್ದರೆ?

Advertisement

ಹೌದು, ಸ್ಮಶಾನಗಳಲ್ಲೂ ಸ್ವತ್ಛತೆ ಕಾಪಾಡಬೇಕು. ಮೂಲ ಸೌಕರ್ಯ ಒದಗಿಸಬೇಕು ಎಂದು ರಾಜಸ್ಥಾನ ಮೂಲದವರು ಮುಂದೆ ಬಂದಿದ್ದಾರೆ. ವಿಶೇಷವೆಂದರೆ ಅವರು ಈ ಕೆಲಸ ಮಾಡುತ್ತಿರುವುದು ಚಾಮರಾಜಪೇಟೆ ಟಿ.ಆರ್‌.ಮಿಲ್‌ನ ಹಿಂದೂ ರುದ್ರಭೂಮಿಯಲ್ಲಿ. ಬೆಂಗಳೂರಿನ ವಿಜಯನಗರದ ರಾಜಸ್ಥಾನಿ ಮಿತ್ರ ಮಂಡಲದವರು ಈ ಕಾರ್ಯ ಕೈಗೊಂಡಿದ್ದಾರೆ.

ಸುಮಾರು 8ರಿಂದ 10 ಲಕ್ಷ ರೂ. ವೆಚ್ಚದಲ್ಲಿ ಸ್ಮಶಾನದಲ್ಲಿ ನಾಲ್ಕು ಶೌಚಾಲಯ ನಿರ್ಮಿಸಿದ್ದಾರೆ. ಜತೆಗೆ 100 ಮಂದಿ ಕುಳಿತುಕೊಳ್ಳುವ ವ್ಯವಸ್ಥೆಯನ್ನೂ ಮಾಡಿದ್ದಾರೆ. ಕುಳಿತುಕೊಳ್ಳಲು ಕಲ್ಲು ಬೆಂಚು ಮಾತ್ರವಲ್ಲದೆ ಅದಕ್ಕೆ ಚಾವಣಿ ಹಾಗೂ ಟೈಲ್ಸ್‌ಗಳನ್ನು ಹಾಕಿ ಉತ್ತಮ ರೀತಿಯಲ್ಲಿ ವ್ಯವಸ್ಥೆ ಮಾಡಿದ್ದಾರೆ.

ಸಮಸ್ಯೆ ಅರಿತು ಸ್ಪಂದಿಸಿದರು: ಟಿ.ಆರ್‌.ಮಿಲ್‌ನಲ್ಲಿರುವ ಹಿಂದೂ ರುದ್ರಭೂಮಿಯಲ್ಲಿ ಹಲವು ವರ್ಷಗಳಿಂದ ಶೌಚಾಲಯ ಹಾಗೂ ಕುಳಿತುಕೊಳ್ಳಲು ಸೂಕ್ತ ವ್ಯವಸ್ಥೆ ಇರಲಿಲ್ಲ. ಮೂರ್ನಾಲ್ಕು ತಿಂಗಳ ಹಿಂದೆ ರಾಜಸ್ಥಾನ ಮೂಲದ ವ್ಯಕ್ತಿಯೊಬ್ಬರು ನಿಧನರಾಗಿದ್ದು, ಅವರ ಅಂತ್ಯ ಸಂಸ್ಕಾರ ಟಿ.ಆರ್‌.ಮಿಲ್‌ನ ರುದ್ರಭೂಮಿಯಲ್ಲಿ ನಡೆದಿತ್ತು. ಆ ವೇಳೆ ಅಲ್ಲಿಗೆ ಬಂದಿದ್ದ ವಿಜಯನಗರ ರಾಜಸ್ಥಾನಿ ಮಿತ್ರ ಮಂಡಲ್‌ ಸದಸ್ಯರಿಗೆ ಅಂತ್ಯ ಸಂಸ್ಕಾರಕ್ಕೆ ಬಂದವರು ಸರಿಯಾದ ವ್ಯವಸ್ಥೆ ಇಲ್ಲದೆ ತೊಂದರೆ ಅನುಭವಿಸುತ್ತಿರುವುದು ಗೊತ್ತಾಯಿತು.

ಈ ಸಮಸ್ಯೆಗಳನ್ನು ಸ್ಥಳೀಯ ಆಡಳಿತ ಸಂಸ್ಥೆಗಳ ಗಮನಕ್ಕೆ ಅಥವಾ ಶಾಸಕರ ಗಮನಕ್ಕೆ ತಂದರೆ ಭರವಸೆ ಸಿಗಬಹುದೇ ಹೊರತು ಪ್ರಯೋಜನ ಆಗುವುದಿಲ್ಲ ಎಂದರಿತ ಮಿತ್ರ ಮಂಡಲ್‌ ಪದಾಧಿಕಾರಿಗಳು, ಮಂಡಲ್‌ ವತಿಯಿಂದಲೇ ಸ್ಮಶಾನದಲ್ಲಿ ಶೌಚಾಲಯ ಮತ್ತು ಕುಳಿತುಕೊಳ್ಳುವ ವ್ಯವಸ್ಥೆ ಮಾಡಲು ತೀರ್ಮಾನಿಸಿದರು.

Advertisement

ಅದರಂತೆ ಚಾಮರಾಜಪೇಟೆ ವಾರ್ಡ್‌ನ ಪಾಲಿಕೆ ಸದಸ್ಯೆ ಕೊಕಿಲಾ ಚಂದ್ರಶೇಖರ್‌ ಅವರನ್ನು ಭೇಟಿಯಾಗಿ ತಮ್ಮ ಯೋಜನೆ ಬಗ್ಗೆ ವಿವರಿಸಿದರು. ಇದಕ್ಕೆ ಸದಸ್ಯೆ ಸಮ್ಮತಿಸಿದ ಕೂಡಲೇ ಕಾರ್ಯಪ್ರವೃತ್ತರಾದ ಪದಾಧಿಕಾರಿಗಳು, ಕೆಲವೇ ತಿಂಗಳಲ್ಲಿ ನಾಲ್ಕು ಶೌಚಾಲಯ ಹಾಗೂ 100 ಜನ ಕುಳಿತುಕೊಳ್ಳುವ ವ್ಯವಸ್ಥೆ ಮಾಡಿದ್ದಾರೆ. ಇದು ಸ್ಮಶಾನದಲ್ಲಿ ಕಾರ್ಯ ನಿರ್ವಹಿಸುವ ಸಿಬ್ಬಂದಿ ಮಾತ್ರವಲ್ಲದೆ ಅಲ್ಲಿ ಬರುವವರ ಮೆಚ್ಚುಗೆಗೆ ಪಾತ್ರವಾಗಿದೆ.

ವಿಜಯನಗರದ ರಾಜಸ್ಥಾನಿ ಮಿತ್ರ ಮಂಡಳಿ ಟಿ.ಆರ್‌.ಮಿಲ್‌ ಸ್ಮಶಾನದಲ್ಲಿ ಕಲ್ಪಿಸಿರುವ ಸೌಲಭ್ಯಗಳಿಗೆ ಪಾಲಿಕೆ ಸದಸ್ಯೆ ಕೊಕಿಲಾ ಚಂದ್ರಶೇಖರ್‌ ಶುಕ್ರವಾರ ಚಾಲನೆ ನೀಡಿದರು. ಈ ವೇಳೆ ಮಾತನಾಡಿದ ಅವರು, ಅನ್ಯ ರಾಜ್ಯದವರು ಇಲ್ಲಿಗೆ ಬಂದು ನೆಲೆಸಿ ನಮ್ಮ ನಾಡಿಗೆ ಮೂಲ ಸೌಕರ್ಯ ಕಲ್ಪಿಸುತ್ತಿರುವುದು ಸಂತಸದ ವಿಚಾರ ಎಂದರು. ರಾಜಸ್ಥಾನಿ ಮಿತ್ರ ಮಂಡಳಿ ಪದಾಧಿಕಾರಿಗಳು, ಸದಸ್ಯರು ಹಾಜರಿದ್ದರು.

ಮುಂದಿನ ಯೋಜನೆ?: ಇಷ್ಟಕ್ಕೇ ಮಿತ್ರ ಮಂಡಲದವರು ಸುಮ್ಮನಾಗಿಲ್ಲ. ರಾಜಸ್ಥಾನಿ ಮಿತ್ರ ಮಂಡಲ್‌ 25ನೇ ವರ್ಷಕ್ಕೆ ಕಾಲಿಡುತ್ತಿದ್ದು, ಬೆಳ್ಳಿ ಹಬ್ಬ ಆಚರಣೆ ಅಂಗವಾಗಿ ಮುಂದೆ ಮರಿಯಪ್ಪನ ಪಾಳ್ಯದಲ್ಲಿರುವ ಸ್ಮಶಾನದಲ್ಲಿ ಕುಳಿತುಕೊಳ್ಳುವ ವ್ಯವಸ್ಥೆ ಕಲ್ಪಿಸುವ ಯೋಜನೆ ಹಾಕಿಕೊಳ್ಳಲಾಗಿದೆ.

ಇತರೆ ಸ್ಮಶಾನಗಳಲ್ಲೂ ಮೂಲ ಸೌಕರ್ಯ ಕಲ್ಪಿಸುವ ಚಿಂತನೆ ಇದೆ ಎನ್ನುತ್ತಾರೆ ಮಂಡಲ್‌ ಉಪಾಧ್ಯಕ್ಷ ನೇಮಿಚಂದ್‌ ದಲಾಲ್‌. ಈಗಾಗಲೇ ವಿಜಯನಗರದ ಸುತ್ತಮುತ್ತ ಇರುವ ಸರ್ಕಾರಿ ಶಾಲೆಗಳಲ್ಲಿ ಶುದ್ಧ ಕುಡಿಯುವ ನೀರಿನ ವ್ಯವಸ್ಥೆ ಮಾಡಲಾಗಿದ್ದು, ಅದನ್ನು ಮುಂದುವರಿಸಲಾಗುವುದು. ಜತೆಗೆ ಬೆಳ್ಳಿ ಹಬ್ಬದ ಅಂಗವಾಗಿ ಒಂದು ವರ್ಷ ವಿವಿಧ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗುವುದು ಎಂದೂ ಅವರು ಹೇಳಿದ್ದಾರೆ.

* ಶ್ರುತಿ ಮಲೆನಾಡತಿ

Advertisement

Udayavani is now on Telegram. Click here to join our channel and stay updated with the latest news.

Next