Advertisement

ಮಳೆ ಕೊಯ್ಲು ಪದ್ಧತಿ ಅಳವಡಿಸಿ ಬರ ಮುಕ್ತರಾಗಿ

09:45 PM Aug 23, 2019 | Lakshmi GovindaRaj |

ಚಿಕ್ಕಬಳ್ಳಾಪುರ: ಸತತ ಬರಗಾಲಕ್ಕೆ ತುತ್ತಾಗಿರುವ ಜಿಲ್ಲೆಯಲ್ಲಿ ಮಳೆ ನೀರನ್ನು ಸಮರ್ಪಕವಾಗಿ ಬಳಸಿಕೊಳ್ಳಲು ಪ್ರತಿಯೊಂದು ಕಟ್ಟಡಕ್ಕೆ ಮಳೆ ಕೊಯ್ಲು ಪದ್ಧತಿಯನ್ನು ಅಳವಡಿಸಿಕೊಳ್ಳುವ ಮೂಲಕ ಬರಗಾಲಕ್ಕೆ ಸೆಡ್ಡು ಹೊಡೆಯಬೇಕಿದೆ ಎಂದು ಜಿಲ್ಲಾಧಿಕಾರಿ ಅನಿರುದ್ಧ್ ಶ್ರವಣ್‌ ಜಿಲ್ಲೆಯ ಜನತೆಗೆ ಸಲಹೆ ನೀಡಿದರು.

Advertisement

ನಗರದ ಜಿಲ್ಲಾಡಳಿತ ಭವಣದಲ್ಲಿರುವ ಜಿಲ್ಲಾ ಸಭಾಂಗ‌ಣದಲ್ಲಿ ಶುಕ್ರವಾರ ಜಿಲ್ಲಾಡಳಿತ, ಜಿಪಂ ವತಿಯಿಂದ ಸ್ಥಳೀಯ ಸಂಸ್ಥೆಗಳಲ್ಲಿ ಮಳೆ ನೀರು ಕೊಯ್ಲು ಅಳವಡಿಸುವ ಕುರಿತು ರೂಪಿಸಿರುವ ಚಿಲುಮೆ ಯೋಜನೆ ಅನುಷ್ಠಾನಗೊಳಿಸುವ ಕಾರ್ಯಾಗಾರಕ್ಕೆ ಚಾಲನೆ ನೀಡಿ ಮಾತನಾಡಿದ ಅವರು, ಬರಪೀಡಿತ ಜಿಲ್ಲೆಯಲ್ಲಿ ಮಳೆ ನೀರು ಸದ್ಬಳಕೆ ಬಹಳ ಮುಖ್ಯ ಎಂದರು.

92 ಕಲ್ಯಾಣಿ ಪುನಶ್ಚೇತನ: ಜಿಲ್ಲೆಯಲ್ಲಿ ಪ್ರತಿ ಹನಿ ನೀರಿಗೂ ಪರದಾಡುವ ಸ್ಥಿತಿಯಿದ್ದು, ಈ ನಿಟ್ಟಿನಲ್ಲಿ ಪ್ರತಿ ಮನೆ ಮನೆಯಲ್ಲೂ ಮಳೆ ನೀರು ಕೊಯ್ಲು ಯೋಜನೆಯನ್ನು ಕಡ್ಡಾಯವಾಗಿ ಅಳವಡಿಸಿಕೊಳ್ಳಬೇಕು. ಜಿಲ್ಲೆಯ ಸುತ್ತಮುತ್ತ ಇರುವ ಎಲ್ಲಾ ಕೆರೆಗಳು ಇತ್ತೀಚಿಗೆ ಬತ್ತಿ ಹೋಗಿವೆ. ಇದಕ್ಕೆ ಕಾರಣ ಜನರು ನೈಸರ್ಗಿಕ‌‌ ಸಂಪನ್ಮೂಲಗಳನ್ನು ಸರಿಯಾದ ಕ್ರಮದಲ್ಲಿ ಉಪಯೋಗಿಸುತ್ತಿಲ್ಲ.

ಪ್ರಾಕೃತಿಕ ಸಂಪನ್ಮೂಲಗಳ ಬಗ್ಗೆ ಕಾಳಜಿ ಇಲ್ಲ. ಎಲ್ಲೆಂದರಲ್ಲಿ ಕೊಳವೆ ಬಾವಿ ಕೊರೆಸುತ್ತಿರುವ ಕಾರಣದಿಂದ ಅಂತರ್ಜಲದ ಮಟ್ಟ ಕುಸಿದಿದೆ. ಆದ್ದರಿಂದ ಪುರಾತನ ಕಲ್ಯಾಣಿಗಳು, ಕೆರೆಗಳು, ಬಾವಿಗಳು, ಹಳ್ಳಗಳು ಹಾಗೂ ನದಿಗಳು ಬತ್ತಿ ಹೋಗಿವೆ. ಹಾಗಾಗಿ ಜಿಲ್ಲಾದ್ಯಂತ ನೀರಿನ ಸಮಸ್ಯೆ ತಲೆದೋರಿದೆ ಎಂದರು.

ಶೇ.50 ಅಳವಡಿಕೆಯಾಗಲಿ: ಜಿಲ್ಲೆಯು ನೀರಿನ ಸಂಕಷ್ಟದಿಂದ ಪಾರಾಗಲು ಮಳೆ ನೀರು ಕೊಯ್ಲು ಯೋಜನೆ ಅಳವಡಿಕೆ ಮಾಡಿಕೊಳ್ಳುವುದು ಮುಖ್ಯವಾಗಿದೆ. ಪ್ರತಿ ಮನೆಯಲ್ಲೂ, ಬೀದಿ, ವಾರ್ಡ್‌ಗಳಲ್ಲಿ ಶೇ. 50 ರಷ್ಟು ಮಳೆ ನೀರು ಕೊಯ್ಲು ಅಳವಡಿಕೆಯಾಗಬೇಕು ಎಂದು ಹೇಳಿದರು. ಜಿಲ್ಲೆಯಲ್ಲಿದ್ದ ಕಲ್ಯಾಣಿಗಳು ಕಸ, ಬಾಟಲ್‌ಗ‌ಳಿಂದ ತುಂಬಿಕೊಂಡಿದ್ದು, ಇಲ್ಲಿಯವರೆಗೂ 92 ಕಲ್ಯಾಣಿಗಳನ್ನು ಪುನಶ್ಚೇತನಗೊಳಿಸಲಾಗಿದೆ. ಇದರಿಂದ ಹೆಚ್ಚಿನ ಪ್ರಮಾಣದಲ್ಲಿ ಮಳೆ ನೀರು ಸಂಗ್ರಹವಾಗುತ್ತದೆ ಎಂದರು.

Advertisement

ಜಿಲ್ಲಾಧಿಕಾರಿ ಎಚ್ಚರಿಕೆ: ಗೌರಿಬಿದನೂರು ತಾಲೂಕಿನ ಪಿನಾಕಿನಿ ನದಿ, ಚಿಂತಾಮಣಿಯ ರಾಮಕುಂಟೆ, ಶಿಡ್ಲಘ‌ಟ್ಟದ ಗೌಡನ ಕೆರೆ, ಚಿಕ್ಕಬಳ್ಳಾಪುರದ ಅಮಾನಿ ಗೋಪಾಲಕೃಷ್ಣ ಕೆರೆ ಬಹುದೊಡ್ಡ ಕೆರೆಗಳಾಗಿದ್ದು ಹೂಳು ತುಂಬಿಕೊಂಡಿದೆ.  ಜಿಲ್ಲೆಯಲ್ಲಿ ಮಳೆಯಾದರೂ ಮಳೆ ನೀರು ಸಂಗ್ರಹ ಮಾಡಲಿಕ್ಕೆ ಸರಿಯಾದ ವೈಜ್ಞಾನಿಕ ಯೋಜನೆ ಅಳವಡಿಕೆ ಮಾಡಿಕೊಳ್ಳಲು ಜನರು ಮುಂದೆ ಬರುತ್ತಿಲ್ಲ.

ಇದರಿಂದ ಮುಂದಿನ ದಿನಗಳಲ್ಲಿ ನೀರಿನ ಸಮಸ್ಯೆಯು ಆತಂಕಕಾರಿ ಮಟ್ಟಕ್ಕೆ ತಲುಪುತ್ತದೆ ಎಂದು ಜಿಲ್ಲಾಧಿಕಾರಿ ಅನಿರುದ್ಧ್ ಶ್ರವಣ್‌ ಎಚ್ಚರಿಸಿದರು. ಕಾರ್ಯಾಗಾರದಲ್ಲಿ ಜಿಪಂ ಸಿಇಒ ಬಿ. ಫೌಜಿಯಾ ತರನ್ನುಮ್‌, ಜಿಲ್ಲಾ ನಗರಾಭಿವೃದ್ಧಿ ಕೋಶ ಯೋಜನಾಧಿಕಾರಿ ರೇಣುಕಾ ಹಾಗೂ ಜಿಲ್ಲಾ ಮತ್ತು ತಾಲೂಕು ಮಟ್ಟದ ಅಧಿಕಾರಿಗಳು ಕಾರ್ಯಾಗಾರದಲ್ಲಿ ಭಾಗವಹಿಸಿದ್ದರು.

ಮಳೆ ನೀರು ಕೊಯ್ಲು ಯೋಜನೆಗೆ 10ರಿಂದ 15 ಸಾವಿರ ರೂ. ವೆಚ್ಚ:  ಕಾರ್ಯಾಗಾರದಲ್ಲಿ ಮಳೆ ನೀರು ಕೊಯ್ಲು ಪದ್ಧತಿ ಅಳವಡಿಕೆಗೆ ಬಗ್ಗೆ ವಿಶೇಷ ತರಬೇತಿ ನೀಡಿದ ಭಾರತೀಯ ವಿಜ್ಞಾನ ಸಂಸ್ಥೆಯ ನಿವೃತ್ತ ಹಿರಿಯ ವಿಜ್ಞಾನಿ ಎ.ಆರ್‌.ಶಿವಕುಮಾರ್‌ ಮಾತನಾಡಿ, ಸುಮಾರು 24 ವರ್ಷಗಳಿಂದ ಮಳೆ ನೀರು ಶುದ್ಧೀಕರಿಸಿಕೊಂಡು ನಮ್ಮ ಇಡೀ ಕುಟುಂಬ ಮಳೆ ನೀರನ್ನೇ ಉಪಯೋಗಿಸುತ್ತಿದ್ದೇವೆ. ಮನೆಯ ನಿರ್ಮಾಣ ಹಂತದಲ್ಲಿ ಮಳೆ ನೀರಿನ ಕೊಯ್ಲು ಯೋಜನೆಯನ್ನು ಸುಲಭವಾಗಿ ಅಳವಡಿಕೆ ಮಾಡಿಕೊಳ್ಳಬಹುದು.

ಇದಕ್ಕೆ ಕನಿಷ್ಠ 10,000 ದಿಂದ ಗರಿಷ್ಠ 15,000 ರೂ.ವರೆಗೂ ವೆಚ್ಚ ತಗಲುತ್ತದೆ. ಈಗಾಗಲೇ ಬೆಂಗಳೂರಿನಲ್ಲಿ 1.25 ಲಕ್ಷ ಜನರು ಮಳೆ ನೀರು ಕೊಯ್ಲು ಅಳವಡಿಕೆ ಮಾಡಿಕೊಂಡಿದ್ದಾರೆ. 100 ಚದರ ಅಡಿಗೆ ಮಳೆ ನೀರು ಕೊಯ್ಲು ಅಳವಡಿಸಿದರೆ ವಾರ್ಷಿಕವಾಗಿ 715 ಲೀ. ನೀರು ಸಂಗ್ರಹ ಆಗುತ್ತದೆ ಎಂದರು.

ನಗರ ಸ್ಥಳೀಯ ಸಂಸ್ಥೆಗಳ ಜನ ಪ್ರತಿನಿಧಿಗಳು, ಸ್ವಯಂಸೇವಕರು ಪ್ರತಿ ಮನೆಗೂ ಭೇಟಿ ನೀಡಿ ಮಳೆ ನೀರು ಕೊಯ್ಲು ಯೋಜನೆಯ ಬಗ್ಗೆ ಮಾಹಿತಿ ನೀಡಿ ಹಾಗೂ ಯೋಜನೆಯ ಉಪಯೋಗಗಳನ್ನು ಮನವರಿಕೆ ಮಾಡಬೇಕು. ಸೆ.15 ರೊಳಗಾಗಿ ಚಿಲುಮೆ ಯೋಜನೆ ಅಳವಡಿಸಿಕೊಳ್ಳುವ ಮನೆಯ ಮಾಲೀಕರಿಗೆ ಜಿಲ್ಲಾಡಳಿತದಿಂದ ಐದು ಸಾವಿರ ರೂ. ಪ್ರೋತ್ಸಾಹಧನ ನೀಡಲಾಗುತ್ತದೆ.
-ಅನಿರುದ್ಧ್ ಶ್ರವಣ್‌, ಜಿಲ್ಲಾಧಿಕಾರಿ

Advertisement

Udayavani is now on Telegram. Click here to join our channel and stay updated with the latest news.

Next