Advertisement

4 ಕೋಟಿ ಕುಟುಂಬಗಳಿಗೆ ಉಚಿತ ವಿದ್ಯುತ್‌: ಮೋದಿ

06:00 AM Sep 26, 2017 | |

ನವದೆಹಲಿ: ದೇಶದ ಪ್ರತಿಯೊಂದು ಮನೆಗೂ ವಿದ್ಯುತ್‌ ಬೆಳಕು ನೀಡುವ ಮಹತ್ವಾಕಾಂಕ್ಷಿ  “ಸೌಭಾಗ್ಯ’ ಯೋಜನೆಗೆ ಪ್ರಧಾನಿ ನರೇಂದ್ರ ಮೋದಿ ಸೋಮವಾರ ಚಾಲನೆ ನೀಡಿದರು. ಇದೇ ವೇಳೆ, ದೇಶದ 25 ಕೋಟಿ ಕುಟುಂಬದ ಪೈಕಿ ನಾಲ್ಕು ಕೋಟಿ ಕುಟುಂಬಗಳಿಗೆ ಕೇಂದ್ರದ ವತಿಯಿಂದಲೇ ಉಚಿತ ವಿದ್ಯುತ್‌ ನೀಡಲಾಗುತ್ತದೆ ಎಂದು ಘೋಷಿಸಿದರು.

Advertisement

ನವದೆಹಲಿಯಲ್ಲಿ ಪಂಡಿತ್‌ ದೀನ್‌ದಯಾಳ್‌ ಉಪಾಧ್ಯ ಅವರ ಜನ್ಮಶತಮಾನೋತ್ಸವ ನಿಮಿತ್ತ ಹಮ್ಮಿಕೊಂಡಿದ್ದ ಕಾರ್ಯಕ್ರಮದಲ್ಲಿ, ಪ್ರಧಾನ ಮಂತ್ರಿ ಸಹಜ್‌ ಬಿಜಿಲಿ ಹರ್‌ ಘರ್‌ ಯೋಜನೆ (ಸೌಭಾಗ್ಯ)ಯನ್ನು ಉದ್ಘಾಟಿಸಿ ಮಾತನಾಡಿದ ಅವರು, 16 ಸಾವಿರ ಕೋಟಿ ರೂ. ವೆಚ್ಚದಲ್ಲಿ ನಗರ ಮತ್ತು ಗ್ರಾಮೀಣ ಪ್ರದೇಶದಲ್ಲಿರುವ ಕುಟುಂಬಗಳಿಗೆ ಬೆಳಕು ನೀಡುವುದು ಸರ್ಕಾರದ ಉದ್ದೇಶ. 2018ರ ಡಿಸೆಂಬರ್‌ ಒಳಗಾಗಿ ಈ ಗುರಿ ಪೂರ್ತಿ ಮಾಡಲಾಗುತ್ತಿದೆ ಎಂದರು.

ಕೇಂದ್ರ ಸರ್ಕಾರ ಹೂಡಿಕೆ ಮಾಡುವ ಯೋಜನೆಯ ಮೊತ್ತವನ್ನು ಬಡವರ ಮೇಲೆ ವರ್ಗಾವಣೆ ಮಾಡಲಾಗುವುದಿಲ್ಲ ಎಂದು ಹೇಳಿದ ಪ್ರಧಾನಿ ನರೇಂದ್ರ ಮೋದಿ, ವಿದ್ಯುತ್‌ ಸಂಪರ್ಕಕ್ಕಾಗಿ ಅಧಿಕಾರಿಗಳತ್ತ ತೆರಳುವ ಬದಲು ಅವರೇ ಗ್ರಾಮಗಳಿಗೆ ಬರಲಿದ್ದಾರೆ ಎಂದು ಹೇಳಿದರು.

ಉಳಿತಾಯ ಸಾಧ್ಯ: ಎಲ್‌ಇಡಿ ಬಲ್ಬ್ಗಳನ್ನು ಬಳಕೆ ಮಾಡಿದರೆ ಮನೆಗಳಿಂದಲೇ ವಾರ್ಷಿಕವಾಗಿ ವಿದ್ಯುತ್‌ ಜತೆಗೆ 13,700 ಕೋಟಿ ರೂ.ಉಳಿತಾಯ ಮಾಡಬಹುದು. ಈ ವರ್ಷದ ಫೆಬ್ರವರಿಯಲ್ಲಿ ಎಲ್‌ಇಡಿ ಬಲ್ಬ್ ಬೆಲೆ 310 ರೂ. ಇತ್ತು. ಈಗ ಅದರ ಬೆಲೆ 40 ರೂ. ಆಗಿದೆ ಎಂದ ಪ್ರಧಾನಿ ನರೇಂದ್ರ ಮೋದಿ, “ಉಜಾಲಾ’ ಯೋಜನೆಯಡಿ ಸರ್ಕಾರದ ವತಿಯಿಂದ 26 ಕೋಟಿ ಎಲ್‌ಇಡಿ ಬಲ್ಬ್ಗಳನ್ನು ವಿತರಿಸಲಾಗಿದೆ ಎಂದರು.

ದೇಶದಲ್ಲಿನ್ನು ವಿದ್ಯುತ್‌ ಕೊರತೆ ಉಂಟಾಗದು. ಅದು ಹೆಚ್ಚಿನ ಪ್ರಮಾಣದಲ್ಲಿ ವೃದ್ಧಿಯಾಗಲಿದೆ ಎಂದು ಅವರು ಹೇಳಿದ್ದಾರೆ. ಮೂರು ವರ್ಷಗಳ ಹಿಂದೆ 18 ಸಾವಿರ ಗ್ರಾಮಗಳಿಗೆ ವಿದ್ಯುತ್‌ ಸಂಪರ್ಕ ಇರಲಿಲ್ಲ. ಇದೀಗ ಅದರ ಪ್ರಮಾಣ 3 ಸಾವಿರಕ್ಕೆ ಇಳಿದಿದೆ. ನಮ್ಮ ಸರ್ಕಾರ ಅಧಿಕಾರಕ್ಕೆ ಬಂದ ಬಳಿಕ ಗ್ರಾಮಗಳಿಗೆ ವಿದ್ಯುತ್‌ ನೀಡಿಕೆಯ ಪ್ರಮಾಣವನ್ನು ದ್ವಿಗುಣಗೊಳಿಸಲಾಗಿದೆ ಎಂದರು. ದೇಶಕ್ಕೆ ಸ್ವಾತಂತ್ರ್ಯ ಬಂದು 70 ವರ್ಷಗಳಾದರೂ 25 ಕೋಟಿ ಕುಟುಂಬಗಳ ಪೈಕಿ ಇನ್ನೂ ನಾಲ್ಕು ಕೋಟಿ ಕುಟುಂಬಗಳಿಗೆ ವಿದ್ಯುತ್‌ ಸಂಪರ್ಕ ಇಲ್ಲದೇ ಇರುವುದು ವಿಷಾದದ ಸಂಗತಿಯಾಗಿದೆ ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದರು.

Advertisement

ಆರ್‌ಇಸಿ ನೋಡಲ್‌ ಏಜೆನ್ಸಿ: ಗ್ರಾಮೀಣ ವಿದ್ಯುದೀಕರಣ ನಿಗಮ ನಿಯಮಿತ (ಆರ್‌ಇಸಿ) ಯೋಜನೆ ಜಾರಿಗೊಳಿಸುವ ನೋಡಲ್‌ ಏಜೆನ್ಸಿಯಾಗಿದೆ.

ಊರ್ಜಾ ಭವನ ಉದ್ಘಾಟನೆ
ಬಿಜೆಪಿ ಸಂಸ್ಥಾಪಕ ದೀನ್‌ದಯಾಳ್‌ ಉಪಾಧ್ಯಾಯ ಅವರ ಜನ್ಮ ಶತಮಾನೋತ್ಸವ ದಿನವಾಗಿರುವ ಸೋಮವಾರ ಪಿಎಂ ಮೋದಿ 600 ಕೋಟಿ ರೂ. ವೆಚ್ಚದಲ್ಲಿ ನಿರ್ಮಿಸಲಾಗಿರುವ ದೀನ್‌ದಯಾಳ್‌ ಊರ್ಜಾ ಭವನವನ್ನು ಉದ್ಘಾಟಿಸಿದರು. ಅದರಲ್ಲಿ ತೈಲ ಮತ್ತು ಅನಿಲ ಸಂಸ್ಥೆ ನೈಸರ್ಗಿಕ ಮತ್ತು ಅನಿಲ ಸಂಸ್ಥೆ (ಒಎನ್‌ಜಿಸಿ), ಅದರ ವಿದೇಶಿ ಅಂಗ ಒಎನ್‌ಜಿಸಿ ವಿದೇಶ್‌ ಲಿಮಿಟೆಡ್‌ ಕಚೇರಿಗಳು ಇವೆ. ಒಂದು ವರ್ಷದ ಹಿಂದೆಯೇ ಕಟ್ಟಡ ನಿರ್ಮಾಣ ಪೂರ್ತಿಯಾಗಿತ್ತು. ಗಮನಾರ್ಹ ಅಂಶವೆಂದರೆ ಇದು ಪರಿಸರ ಸ್ನೇಹಿ ಕಟ್ಟಡ.

ಬರಲಿದೆ ಪ್ರಿ-ಪೈಡ್‌ ವಿದ್ಯುತ್‌ ವ್ಯವಸ್ಥೆ: ಆರ್‌.ಕೆ.ಸಿಂಗ್‌
ಮೊಬೈಲ್‌ ಸಂಪರ್ಕದಲ್ಲಿ ಪ್ರಿ-ಪೈಡ್‌ ವ್ಯವಸ್ಥೆ ಇರುವಂತೆ ವಿದ್ಯುತ್‌ ಸಂಪರ್ಕ ವ್ಯವಸ್ಥೆಯಲ್ಲಿಯೂ ಇಂಥ ವ್ಯವಸ್ಥೆ ಬರಲಿದೆ. ಕೇಂದ್ರ ಇಂಧನ ಸಚಿವ ಆರ್‌.ಕೆ.ಸಿಂಗ್‌ ಈ ಮಾಹಿತಿ ನೀಡಿದ್ದಾರೆ. ಸರ್ಕಾರದ ಯೋಜನೆ ಪ್ರಕಾರ ಗ್ರಾಮೀಣ ಪ್ರದೇಶದಲ್ಲಿ ಅದನ್ನು ಜಾರಿಗೊಳಿಸಲಾಗುತ್ತದೆ ಎಂದು ಹೇಳಿದ್ದಾರೆ. ಮುಂದಿನ ವರ್ಷದ ಕೊನೆಯ ಭಾಗದಲ್ಲಿ ಎಲ್ಲಾ ಗ್ರಾಮಗಳಿಗೆ ವಿದ್ಯುತ್‌ ಸಂಪರ್ಕ ನೀಡಲಾಗುತ್ತದೆ. ಮಾರ್ಚ್‌ 2019ರ ಒಳಗಾಗಿ ದಿನದ 24 ಗಂಟೆ ವಿದ್ಯುತ್‌ ಒದಗಿಸುವ ಗುರಿ ಹಾಕಿಕೊಳ್ಳಲಾಗಿದೆ ಎಂದು ಸಿಂಗ್‌ ಹೇಳಿದ್ದಾರೆ. 

ಕೈಗಾರಿಕಾ ವಲಯ ವಿದ್ಯುತ್‌ ಕ್ಷೇತ್ರದಲ್ಲಿ ಹೂಡಿಕೆ ಮಾಡಬೇಕು ಎಂದು ಅವರು ಇದೇ ಸಂದರ್ಭದಲ್ಲಿ ಒತ್ತಾಯಿಸಿದರು. ಏಕೆಂದರೆ ವಿದ್ಯುತ್‌ಗೆ ಬೇಡಿಕೆ ಹೆಚ್ಚಿರುವುದರಿಂದ ಈ ಕ್ಷೇತ್ರ ಲಾಭದಾಯಕವಾಗಿದೆ ಎಂದರು.

ಆರ್ಥಿಕ ಸಲಹಾ ಮಂಡಳಿ ಸ್ಥಾಪಿಸಿದ ಪ್ರಧಾನಿ
ದೇಶದ ಅರ್ಥ ವ್ಯವಸ್ಥೆ ಮತ್ತು ಹಣಕಾಸಿನ ಇತರ ವಿಚಾರಗಳ ಬಗ್ಗೆ ಸಲಹೆ ನೀಡಲು ಐವರು ಸದಸ್ಯರ ಸಮಿತಿಯನ್ನು ಪ್ರಧಾನಿ ನರೇಂದ್ರ ಮೋದಿ ರಚಿಸಿದ್ದಾರೆ. ನೀತಿ ಆಯೋಗದ ಸದಸ್ಯ ವಿವೇಕ್‌ ದೇವ್‌ರಾಯ್‌ ಅದರ ಅಧ್ಯಕ್ಷ. ನೀತಿ ಆಯೋಗದ ಪ್ರಧಾನ ಸಲಹೆಗಾರ ರತನ್‌ ವಟಾಲ್‌, ಆರ್ಥಿಕ ತಜ್ಞರಾದ ಸುರ್ಜಿತ್‌ ಭಲ್ಲಾ, ಅಶಿಮಾ ಗೋಯಲ್‌ರನ್ನು ಅರೆಕಾಲಿಕ ಸದಸ್ಯರನ್ನಾಗಿ ನೇಮಿಸಲಾಗಿದೆ.ನ್ಯಾಷನಲ್‌ ಇನಿrಟ್ಯೂಟ್‌ ಆಫ್ ಪಬ್ಲಿಕ್‌ ಫೈನಾನ್ಸ್‌ ಆ್ಯಂಡ್‌ ಪಾಲಿಸಿ ಸಂಸ್ಥೆಯ ನಿರ್ದೇಶಕ ರತಿನ್‌ ರಾಯ್‌ರನ್ನು ಸದಸ್ಯರನ್ನಾಗಿ ನೇಮಿಸಲಾಗಿದೆ.

ಈ ರೀತಿಯ ಸಮಿತಿ ಡಾ.ಮನಮೋಹನ್‌ ಸಿಂಗ್‌ ನೇತೃತ್ವದ ಯುಪಿಎ ಸರ್ಕಾರ ಇರುವಾಗಲೂ ಅಸ್ತಿತ್ವದಲ್ಲಿತ್ತು. ಆ ಸಂದರ್ಭದಲ್ಲಿ ಆರ್‌ಬಿಐನ ನಿವೃತ್ತ ಗವರ್ನರ್‌ ಡಾ.ಸಿ.ರಂಗರಾಜನ್‌ ಅದರ ನೇತೃತ್ವ ವಹಿಸಿದ್ದರು. 2014ರಲ್ಲಿ ಯೋಜನಾ ಆಯೋಗ ಮತ್ತು ಇತರ ಸಂಸ್ಥೆಗಳನ್ನು ವಿಸರ್ಜಿಸಿದಂತೆ ಈ ಸಮಿತಿಯನ್ನೂ ಬರ್ಖಾಸ್ತು ಮಾಡಲಾಗಿತ್ತು.

16,320 ಕೋಟಿ ರೂ. – ಸೌಭಾಗ್ಯ ಯೋಜನೆಗೆ ನಿಗದಿ ಮಾಡಿರುವ ಮೊತ್ತ
14,025 ಕೋಟಿ ರೂ.- ಗ್ರಾಮೀಣ ಭಾಗಕ್ಕೆ ವಿದ್ಯುತ್‌ ಒದಗಿಸಲು ನಿಗದಿಯಾಗಿರುವುದು
02,295 ಕೋಟಿ ರೂ.- ನಗರ ಪ್ರದೇಶಕ್ಕೆ ಮೀಸಲಾಗಿರುವ ಮೊತ್ತ
ಶೇ.60- ರಷ್ಟು ಮೊತ್ತ ಸರ್ಕಾರದ ಅನುದಾನ
ಶೇ.10- ರಷ್ಟು ಮೊತ್ತ ರಾಜ್ಯಗಳ ಭಾಗಿದಾರಿಕೆ
ಶೇ.30- ಬ್ಯಾಂಕ್‌ ಮತ್ತು ಹಣಕಾಸು ಸಂಸ್ಥೆಗಳಿಂದ ಸಾಲ
ಉಳಿದ ಮೊತ್ತ ಸಾಲಗಳ ಮೂಲಕ ಭರಿಸಲಾಗುತ್ತದೆ.
ಶೇ.85- ವಿಶೇಷ ಪ್ರಾಧಾನ್ಯತೆ ಇರುವ ರಾಜ್ಯಗಳಿಗೆ ನೀಡಲಾಗುವ ಮೊತ್ತ
ಶೇ.05- ಆ ರಾಜ್ಯಗಳು ನೀಡಬೇಕಾಗಿರುವ ಪಾಲು
ಗುರಿ ಏನು?- 2019ರ ಮಾ.31ರ ಒಳಗಾಗಿ ದೇಶದ ಎಲ್ಲ ಮನೆಗಳಿಗೆ ವಿದ್ಯುತ್‌ ಸಂಪರ್ಕ.

14,483  ಗ್ರಾಮಗಳಿಗೆ ವಿದ್ಯುತ್‌ ಸೌಲಭ್ಯ
2,981 ಗ್ರಾಮಗಳಲ್ಲಿ ವಿದ್ಯುತ್‌ ಕಾಮಗಾರಿ ಪ್ರಗತಿಯಲ್ಲಿ
988  ಗ್ರಾಮಗಳಲ್ಲಿ ಜನವಸತಿ ಇಲ್ಲ
17.92 ಕೋಟಿ – ಒಟ್ಟು ಮನೆಗಳು
13.87 ಕೋಟಿ- ವಿದ್ಯುತ್‌ ಸಂಪರ್ಕ ಪಡೆದ ಮನೆಗಳು
04.05 ಕೋಟಿ- ಮನೆಗಳಿಗೆ ಇನ್ನೂ ವಿದ್ಯುತ್‌ ಸಂಪರ್ಕವಿಲ್ಲ
(ಮಾಹಿತಿ ಆಧಾರ-https://garv.gov.in)

ವಿಶೇಷತೆ ಏನು?
– 2011ರ ಜನಸಂಖ್ಯೆ ಆಧಾರದ ಅನ್ವಯ ಆಧಾರದ ಮೇಲೆ ಯಾರಿಗೆ ಸೌಲಭ್ಯ ನೀಡಬೇಕು ಎನ್ನುವುದರ ಬಗ್ಗೆ ನಿರ್ಧಾರ
– ಬಡತನ ರೇಖೆಗಿಂತ ಮೇಲಿನ (ಎಪಿಎಲ್‌) ಕುಟುಂಬಗಳಿಗೆ 500 ರೂ. ವಿದ್ಯುತ್‌ ಸಂಪರ್ಕ. ಈ ಮೊತ್ತವನ್ನು ಹತ್ತು ಸಮಾನ ಕಂತುಗಳಲ್ಲಿ ಪಾವತಿಸಲು ಅವಕಾಶ.
 - ವಿದ್ಯುತ್‌ ವಿತರಣಾ ಕಂಪನಿಗಳು ಈ ಮೊತ್ತವನ್ನು ಪಡೆದುಕೊಳ್ಳಲಿವೆ.
– ಬಡತನ ರೇಖೆಗಿಂತ ಕೆಳಗಿನ (ಬಿಪಿಎಲ್‌) ಕುಟುಂಬಗಳಿಗೆ ಉಚಿತ ಸಂಪರ್ಕ
– ಗ್ರಾಮೀಣ ಪ್ರದೇಶದಲ್ಲಿ ಗ್ರಾ.ಪಂ.ಗಳು ಮತ್ತು ಇತರ ಸಾರ್ವಜನಿಕ ಸಂಸ್ಥೆಗಳು ಅರ್ಜಿಗಳ ಸ್ವೀಕಾರಕ್ಕೆ, ಬಿಲ್‌ಗ‌ಳ ವಿತರಣೆ ಮತ್ತು ಪಾವತಿ ಸ್ವೀಕಾರಕ್ಕೆ ನೆರವು.
– ಎಲ್ಲ ಮನೆಗಳಿಗೆ ವಿದ್ಯುತ್‌
– ಸೀಮೆ ಎಣ್ಣೆಯ ಮೇಲಿನ ಅವಲಂಬನೆ ಇಲ್ಲದಂತೆ ಮಾಡುವುದು
– ಆರೋಗ್ಯ ಮತ್ತು ಶಿಕ್ಷಣ ಸೇವೆಗಳಲ್ಲಿ ಅಭಿವೃದ್ಧಿ
– ಸಾರ್ವಜನಿಕ ಸುರಕ್ಷತೆ ಮತ್ತು ಸಂಪರ್ಕದಲ್ಲಿ ಸುಧಾರಣೆ
– ಹೆಚ್ಚಿನ ಉದ್ಯೋಗಾವಕಾಶ ಸೃಷ್ಟಿಸಲು ಅವಕಾಶ ಮತ್ತು ಉತ್ತಮ ಜೀವನ
– ವಿಶೇಷವಾಗಿ ಮಹಿಳೆಯರ ದೈನಂದಿನ ಜೀವನ ಸುಧಾರಣೆಗೆ ಒತ್ತು

Advertisement

Udayavani is now on Telegram. Click here to join our channel and stay updated with the latest news.

Next