Advertisement

ಕೆಪಿಎಸ್‌ಸಿ ಕೆಲಸ ಕೊಡಿಸುವುದಾಗಿ ನಂಬಿಸಿ 28 ಸಾವಿರ ರೂ. ವಂಚನೆ

10:30 AM Dec 10, 2019 | Suhan S |

ಬೆಂಗಳೂರು: ಕರ್ನಾಟಕ ಲೋಕಸೇವಾ ಆಯೋಗದ (ಕೆಪಿಎಸ್‌ಸಿ) ಕೆಲಸ ಕೊಡಿಸುವುದಾಗಿ ನಂಬಿಸಿ ಪದವೀಧರ ಯುವಕನನ್ನು ವಂಚಿಸಿರುವ ಆರೋಪ ಸಂಬಂಧ ಅನಿಲ್‌ ಕುಮಾರ್‌ ಎಂಬಾತನ ವಿರುದ್ಧ ವಿಧಾನಸೌಧ ಪೊಲೀಸ್‌ ಠಾಣೆಯಲ್ಲಿ ಎಫ್ಐಆರ್‌ ದಾಖಲಾಗಿದೆ.

Advertisement

ವಿಜಯನಗರದ ಗಿರೀಶ್‌ ಎಂಬವರು ನೀಡಿದ ದೂರಿನ ಅನ್ವಯ ಅನಿಲ್‌ಕುಮಾರ್‌ ವಿರುದ್ಧ ಪ್ರಕರಣ ದಾಖಲಿಸಿಕೊಂಡಿದ್ದು, ಆರೋಪಿ ಇನ್ನೂ ಹಲವರಿಗೆ ವಂಚಿಸಿರುವ ಸಾಧ್ಯತೆಯಿದೆ. ಈ ಕುರಿತು ತನಿಖೆ ಮುಂದುವರಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ. .29ರಂದು ಬಿಸಿಎ ಪದವೀಧರ ಗಿರೀಶ್‌ ಅವರ ತಾಯಿಗೆ ದೂರವಾಣಿ ಕರೆ ಮಾಡಿದ್ದ ಅನಿಲ್‌ ಕುಮಾರ್‌ ಎಂಬಾತ, ತಾನು ಕೆಪಿಎಸ್‌ ಸಿಯಲ್ಲಿ ಕೆಲಸ ಮಾಡುತ್ತಿರುವುದಾಗಿ ಹೇಳಿದ್ದಾನೆ. ಬಳಿಕ ಆಯೋಗದಲ್ಲಿ ಟೈಪಿಸ್ಟ್‌ ಹುದ್ದೆಗಳು ಖಾಲಿಯಿದ್ದು, ಹಣ ನೀಡಿದರೆ ನಿಮ್ಮ ಮಗನಿಗೆ ಕೆಲಸ ಕೊಡಿಸುತ್ತೇನೆ ಎಂದು ನಂಬಿಸಿ, 28 ಸಾವಿರ ರೂ. ಕೇಳಿದ್ದಾನೆ. ಆತನ ಮಾತು ನಂಬಿದ ಫೋನ್‌ಪೇ ಮೂಲಕ ಎಂಟು ಸಾವಿರ ರೂ.ಗಳನ್ನು ಅನಿಲ್‌ಗೆ ಕಳುಹಿಸಿದ್ದಾರೆ.

ಇದಾದ ಬಳಿಕ ಡಿ.2ರಂದು ಬಹುಮಹಡಿ ಕಟ್ಟಡ (ಎಂ.ಎಸ್‌. ಬಿಲ್ಡಿಂಗ್‌) ಬಳಿ ಗಿರೀಶ್‌ ಅವರಿಂದ 20 ಸಾವಿರ ರೂ. ಪಡೆದು ಕೆಲ ಹೊತ್ತಿನಲ್ಲಿ ಬರುತ್ತೇನೆ ಎಂದು ಹೇಳಿ ಹೋದವ ಮತ್ತೆ ಬಂದಿಲ್ಲ. ಆತನ ಪೋನ್‌ ಕೂಡ ಸ್ವಿಚ್‌ ಆಫ್ ಆಗಿದೆ. ಇದರಿಂದ ಅನುಮಾನಗೊಂಡ ಅವರು, ಲೋಕಸೇವಾ ಆಯೋಗಕ್ಕೆ ತೆರಳಿ ಅನಿಲ್‌ ಎಂಬಾತನ ಬಗ್ಗೆ ವಿಚಾರಿಸಿದಾಗ, ಅಂತಹ ಹೆಸರಿನ ವ್ಯಕ್ತಿ ಇಲ್ಲಿ ಕೆಲಸ ಮಾಡುತ್ತಿಲ್ಲ. ಹಣ ಪಡೆದು ಕೆಲಸ ನೀಡುವುದೂ ಇಲ್ಲ ಎಂದು ಹೇಳಿದ್ದಾರೆ. ಕಡೆಗೆ ಮೋಸ ಹೋಗಿರುವುದು ಗೊತ್ತಾಗಿ ದೂರು ನೀಡಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next