Advertisement

ಒಂದೇ ಕುಟುಂಬದ ನಾಲ್ವರೂ ಯೋಗ ಶಿಕ್ಷಕರು!

04:21 PM Jun 21, 2023 | Team Udayavani |

ಕೋಲಾರ: ತಂದೆ, ತಾಯಿ, ಮಕ್ಕಳಿಬ್ಬರೂ ಸೇರಿದಂತೆ ಒಂದೇ ಕುಟುಂಬದ ನಾಲ್ವರೂ ಯೋಗ ಶಿಕ್ಷಕರಾಗಿ ಯೋಗಾಭ್ಯಾಸವನ್ನು ಕಲಿಸುವಲ್ಲಿ ಪೂರ್ಣ ಪ್ರಮಾಣದಲ್ಲಿ ತೊಡಗಿಸಿಕೊಂಡಿರುವ ಕುಟುಂಬ ಕೋಲಾರ ನಗರದಲ್ಲಿದೆ.

Advertisement

ಇತ್ತೀಚಿನ ದಿನಗಳಲ್ಲಿ ಭಾರತೀಯ ಯೋಗ ವಿಶ್ವದ ಗಮನ ಸೆಳೆಯುತ್ತಿದೆ. ಜಗತ್ತಿನಾದ್ಯಂತ ಕೋಟ್ಯಾಂತರ ಮಂದಿ ನಿರಂತರ ಅಭ್ಯಾಸದಲ್ಲಿ ತೊಡಗಿ ಆರೋಗ್ಯವಂತರಾಗುತ್ತಿದ್ದಾರೆ. ಕರ್ನಾಟಕದಲ್ಲಿ ಯೋಗಶಿಕ್ಷಣವನ್ನು ಪಸರಿಸಲು ತುಮಕೂರು ಮೂಲದ ಯೋಗ ಶಿಕ್ಷಣ ಪತಂಜಲಿ ಯೋಗ ಶಿಕ್ಷಣ ಸಮಿತಿ ದೊಡ್ಡ ಮಟ್ಟದ ಕೆಲಸ ಮಾಡುತ್ತಿದೆ.

ಶ್ರೀಪತಂಜಲಿ ಯೋಗ ಶಿಕ್ಷಣ ಸಮಿತಿಯಲ್ಲಿ ಕೋಲಾರ, ಚಿಕ್ಕಬಳ್ಳಾಪುರ ಹಾಗೂ ಬೆಂಗಳೂರು ಗ್ರಾಮಾಂತರ ಮೂರು ಜಿಲ್ಲೆಗಳನ್ನೊಳಗೊಂಡ ಸೌಪರ್ಣಿಕಾ ವಲಯದ ಸಂಚಾಲಕರಾಗಿರುವ ಭಕ್ತ ಮಾರ್ಕಂಡಯ್ಯ ಕುಟುಂಬ ಪೂರ್ಣ ಪ್ರಮಾಣದಲ್ಲಿ ಯೋಗ ಶಿಕ್ಷಣ ಶಿಕ್ಷಕರಾಗಿ ನೂರಾರು ಮಂದಿಗೆ ಯೋಗ ಕಲಿಸುತ್ತಿದ್ದಾರೆ. ಹೀಗೆ ಒಂದೇ ಕುಟುಂಬದ ನಾಲ್ವರು ಯೋಗಕ್ಕಾಗಿ ತಮ್ಮ ಜೀವನವನ್ನೇ ಮೀಸಲಿಡುವ ಹಾದಿಯಲ್ಲಿ ಸುಮಾರು ಇಪ್ಪತ್ತು ವರ್ಷಗಳ ಹಾದಿ ಶ್ರಮಿಸಿದ್ದಾರೆ.

ಬಾಲ್ಯದಲ್ಲೇ ಯೋಗ ಆಸಕ್ತಿ: ಕೋಲಾರ ತಾಲೂಕಿನ ಪಚ್ಚಾರ್ಲಹಳ್ಳಿಯ ಮಾರಪ್ಪ, ವೆಂಕಟಮ್ಮ ದಂಪತಿಗಳ ಐವರು ಮಕ್ಕಳಲ್ಲಿ ಕೊನೆಯರಾದ ಭಕ್ತಮಾರ್ಕಂಡ ಯ್ಯರಿಗೆ ಪ್ರಾಥಮಿಕ ಶಾಲಾ ಹಂತದಲ್ಲೇ ಯೋಗಾಭ್ಯಾಸ ಕುರಿತು ಕುತೂಹಲ ಮೂಡಿತ್ತು. ಪ್ರೌಢಶಾಲಾ ವ್ಯಾಸಾಂಗಕ್ಕೆ ಮದನಹಳ್ಳಿ ಶಾಲೆಗೆ ಬಂದ ಮೇಲೆ ಅಲ್ಲಿ ದೈಹಿಕ ಶಿಕ್ಷಕರಾಗಿದ್ದ ಮುನಿರೆಡ್ಡಿಯವರು ಯುವಕ ಭಕ್ತ ಮಾರ್ಕಂಡಯ್ಯರ ಯೋಗಾಸಕ್ತಿಯನ್ನು ಗಮನಿಸಿ ಕ್ರಮಬದ್ಧವಾಗಿ ಆಸನಗಳನ್ನು ಕಲಿಸಿಕೊಟ್ಟಿದ್ದರು. ಈ ಆಸನೆಗಳನ್ನೇ ಆಸಕ್ತಿಯಿಂದ ಸಾಧನೆ ಮಾಡಿದ್ದ ಬಾಲಕ ಭಕ್ತಮಾರ್ಕಂಡಯ್ಯ ತಾಲೂಕು, ಜಿಲ್ಲಾ ಹಂತ ದಾಟಿ ರಾಜ್ಯ ಮಟ್ಟದ ಸ್ಪರ್ಧೆಗಳಲ್ಲಿ ಭಾಗವಹಿಸಿ ಪ್ರಶಸ್ತಿ ಗೆದ್ದಿದ್ದರು.

ಶಾಂತಿನಿಕೇತನ ಶಾಲೆಯಲ್ಲಿ ಶಿಕ್ಷಕ ವೃತ್ತಿ: ವಿದ್ಯಾಭ್ಯಾಸ ಮಾಡಿ ತೊಟ್ಲಿ ಶಾಂತಿನಿಕೇತನ ಶಾಲೆಯಲ್ಲಿ ಶಿಕ್ಷಕರಾಗಿ ವೃತ್ತಿಯನ್ನು ಆರಂಭಿಸಿದ ಮಾರ್ಕಂಡಯ್ಯ ಮದುವೆ ಯಾಗಿ ಕೋಲಾರದಲ್ಲಿ ನೆಲೆಸಿದರು. ಕೋಲಾರದಲ್ಲಿ ಯೋಗವನ್ನು ಕಲಿಸುವ ಕೇಂದ್ರವಾಗಿದ್ದ ಶ್ರೀಪತಂಜಲಿ ಯೋಗ ಶಿಕ್ಷಣ ಸಮಿತಿ 74ನೇ ಯೋಗ ತಂಡಕ್ಕೆ 2006 ರಲ್ಲಿ ಸೇರ್ಪಡೆಯಾದರು. ಮಾರ್ಕಂಡಯ್ಯರ ಯೋಗಾ ಸಕ್ತಿಗೆ ಇಲ್ಲಿ ಸಾಧನೆಯ ಸನ್ಮಾರ್ಗ ಸಿಕ್ಕಂತಾಗಿತ್ತು. ಒಂದೇ ವರ್ಷದಲ್ಲಿ ಯೋಗ ಶಿಕ್ಷಣ ಶಿಕ್ಷಕರಾಗಿ ಮಾರ್ಪಟ್ಟಿದ್ದರು. 2008 ರಲ್ಲಿ ಬೆಂಗಳೂರಿನಲ್ಲಿ ನಡೆದ ಜಿಲ್ಲಾ ಪ್ರಶಿಕ್ಷಣ ಯೋಗ ಶಿಬಿರವನ್ನು ಪೂರ್ಣಗೊಳಿಸಿದರು. ಇದೇ ವರ್ಷ ಪ್ರಾಂತ ಮಟ್ಟದ ಶಿಬಿರ ಪೂರ್ಣಗೊಳಿಸಿ ಪ್ರಾಂತ ಸಂಚಾಲಕರಾಗಿ ಹೊರ ಹೊಮ್ಮಿದ್ದರು. ತುಮಕೂರಿನ ಸಿದ್ಧರ ಬೆಟ್ಟದಲ್ಲಿ 5 ದಿನ ಉಪವಾಸ, 5 ದಿನ ಮೌನವಾಗಿರುವ ಆತ್ಮಾನುಸಂಧಾನ ಶಿಬಿರ ಯಶಸ್ವಿಯಾಗಿ ಮುಗಿಸಿದ್ದರು. ಈ ಶಿಬಿರ ಪೂರ್ಣಗೊಂಡ ನಂತರ 2010 ರಿಂದ 12ರ ಅವಧಿಗೆ ಕೋಲಾರ ಜಿಲ್ಲಾ ಯೋಗ ಸಂಚಾಲಕರಾಗುವ ಜವಾಬ್ದಾರಿ ಹೊತ್ತುಕೊಂಡಿದ್ದರು.

Advertisement

ಪ್ರಸ್ತುತ ಕೋಲಾರ, ಚಿಕ್ಕಬಳ್ಳಾಪುರ, ಬೆಂಗಳೂರು ಗ್ರಾಮಾಂತರ ಸೇರಿರುವ ಸೌಪರ್ಣಿಕಾ ವಲಯದ ಸಂಚಾಲಕರಾಗಿ ಮೂರು ಜಿಲ್ಲೆಗಳಲ್ಲಿ ನಡೆಯುತ್ತಿರುವ 156 ಶಿಬಿರಗಳ ಮೇಲುಸ್ತುವಾರಿಯನ್ನು ಹೊತ್ತುಕೊಂಡಿದ್ದಾರೆ.

ಇಡೀ ಕುಟುಂಬ ಯೋಗಕ್ಕೆ ಮೀಸಲು: ಭಕ್ತಮಾರ್ಕಂಡಯ್ಯ ಈಗ ಅತಿ ಇಷ್ಟ ಶಿಶಾìಸನ ಮತ್ತು ಕಷ್ಟವಾದ ಮಯೂರಾಸನ ಸೇರಿದಂತೆ ಸುಮಾರು 84 ಆಸನಗಳನ್ನು ಲೀಲಾಜಾಲವಾಗಿ ಮಾಡುತ್ತಿದ್ದಾರೆ. ತಾವಷ್ಟೇ ಯೋಗ ಮಾಡಿದರೆ ಸಾಲದು ಎಂಬುದನ್ನು ಅರಿತು ಗೃಹಿಣಿಯಾಗಿರುವ ಪತ್ನಿ ಭಾರತಿಗೂ ಯೋಗ ಕಲಿಸಿದ್ದಾರೆ. ಮಹಿಳಾ ವಲಯಕ್ಕೆ ಭಾರತಿ ಯೋಗ ಶಿಕ್ಷಕರಾಗಿದ್ದಾರೆ. ಪಿಯುಸಿ ಹಂತದಲ್ಲಿ ವ್ಯಾಸಾಂಗ ಮಾಡುತ್ತಿರುವ ಪುತ್ರಿ ಮಧುಶ್ರೀ ಯೋಗ ಕಲಿತು ಯುವ ಯೋಗ ಶಿಬಿರದ ಶಿಕ್ಷಕರಾಗಿದ್ದಾರೆ. ಹತ್ತನೇ ತರಗತಿಯ ದರ್ಶನ್‌ಬಾಬು ಮಕ್ಕಳ ಶಿಬಿರದ ಯೋಗ ಶಿಕ್ಷಕರಾಗಿ ಹೊರ ಹೊಮ್ಮಿದ್ದಾರೆ.

ಮಧುಮೇಹಿಗಳಿಗೆ ಯೋಗಾಭ್ಯಾಸ ಶಿಬಿರ: ಕೇವಲ ಯೋಗಭ್ಯಾಸ ಧ್ಯಾನಕ್ಕೆ ಮಾತ್ರವೇ ಯೋಗ ಕಲಿಕೆಯನ್ನು ಮೀಸಲಿಡದೆ ಭಕ್ತಮಾರ್ಕಂಡಯ್ಯ ತಮ್ಮ ಸಮಿತಿಯ ನೇತೃತ್ವದಲ್ಲಿ ಇದುವರೆವಿಗೂ ಹತ್ತು ಮಧುಮೇಹಿಗಳ ಯೋಗಾಭ್ಯಾಸ ಶಿಬಿರ ನಡೆಸಿದ್ದಾರೆ. ಈ ಶಿಬಿರದಲ್ಲಿ ಭಾಗವಹಿಸಿದ್ದ ಶಿಬಿರಾರ್ಥಿಗಳು 21 ದಿನಗಳ ಶಿಬಿರ ಮುಕ್ತಾಯಗೊಳ್ಳುವುದರೊಳಗಾಗಿ ದೇಹದ ಸಕ್ಕರೆ ಪ್ರಮಾಣವನ್ನು ಸಾಮಾನ್ಯ ಮಟ್ಟಕ್ಕೆ ತಂದಿದ್ದನ್ನು ವೈದ್ಯಕೀಯ ದಾಖಲೆಗಳ ಮೂಲಕ ದೃಢಪಡಿಸಿದ್ದಾರೆ.ಈ ಮಧುಮೇಹ ಶಿಬಿರದಲ್ಲಿ 15 ನಿಮಿಷ ಕ್ರಿಯಾತ್ಮಕ ಚಟುವಟಿಕೆ, 16 ಆಸನಗಳನ್ನು ಶಿಬಿರಾರ್ಥಿಗಳು ಮಾಡಬೇಕಾಗುತ್ತದೆ.

ಪ್ರತಿಯೊಬ್ಬರಿಗೂ ಆರೋಗ್ಯ ವಂತ ದೇಹ ಮತ್ತು ಸಂಸ್ಕಾರಯುತ ಜೀವನ ನಡೆಸುವಂತೆ ಪ್ರೇರೇಪಿಸುವುದೇ ಯೋಗದ ಮುಖ್ಯ ಉದ್ದೇಶ ಎಂದು ವಿವರಿಸುವ ಭಕ್ತಮಾರ್ಕಂಡಯ್ಯ, ಸಮಾಜದಲ್ಲಿ ಯುವ ಪೀಳಿಗೆಯಲ್ಲಿ ಸಂಸ್ಕಾರದ ಕೊರತೆಯಾಗುತ್ತಿರುವ ಕುರಿತು ವಿಷಾದಿಸುತ್ತಾರೆ. ಹೆಚ್ಚುತ್ತಿರುವ ಕೌಟುಂಬಿಕ ಕಲಹಗಳನ್ನು ಕಡಿಮೆ ಮಾಡಿ ಪ್ರತಿ ಮನೆಯಲ್ಲಿಯೂ ಶಾಂತಿ ನೆಮ್ಮದಿ ಮೂಡಿಸುವ ಗುರಿಯನ್ನು ಶಿಬಿರಗಳ ಉದ್ದೇಶವಾಗಿಸಿಕೊಂಡಿದ್ದಾರೆ.

ಸಮಾಜದ ಪರಿವರ್ತನೆಗಾಗಿ ಯೋಗವನ್ನು ಇಡೀ ಕುಟುಂಬದ ಮೂಲಕ ಶ್ರಮಿಸುತ್ತಿರುವ ಭಕ್ತಮಾರ್ಕಂಡಯ್ಯ ಕುಟುಂಬ ಯೋಗ ದಿನಾಚರಣೆಯ ಸಂದರ್ಭದಲ್ಲಿ ಪ್ರಮುಖ ಯೋಗ ಕುಟುಂಬವಾಗಿ ಗಮನ ಸೆಳೆದಿದ್ದಾರೆ.

ಕೆ.ಎಸ್‌.ಗಣೇಶ್‌

Advertisement

Udayavani is now on Telegram. Click here to join our channel and stay updated with the latest news.

Next