Advertisement

ವೇತನ ಮೂರ್‍ನಾಲ್ಕು ತಿಂಗಳು ವಿಳಂಬ; ಜೀವನಕ್ಕೆ ಪರದಾಡುವ ಸ್ಥಿತಿ

03:29 AM Oct 27, 2021 | Team Udayavani |

ಬಂಟ್ವಾಳ: ಕೋವಿಡ್‌ ಸಂದರ್ಭ ಗ್ರಾಮೀಣ ಭಾಗದಲ್ಲಿ ಆರೋಗ್ಯ ರಕ್ಷಣೆ, ಕೋವಿಡ್‌ ಲಸಿಕೆ ನೀಡುವ ಕಾರ್ಯ ನಿರ್ವಹಿಸಿದ ರಾಜ್ಯದ ಪ್ರಾಥಮಿಕ ಆರೋಗ್ಯ ಸುರಕ್ಷಾ ಅಧಿಕಾರಿಗಳಿಗೆ ಸರಕಾರ ಮೂರ್‍ನಾಲ್ಕು ತಿಂಗಳಿಗೊಮ್ಮೆ ವೇತನ ನೀಡುತ್ತಿರುವುದರಿಂದ ಅವರ ಜೀವನಕ್ಕೆ ಈಗ ರಕ್ಷೆ ಇಲ್ಲದಾಗಿದೆ.

Advertisement

ಪ್ರಾಥಮಿಕ ಆರೋಗ್ಯ ಕೇಂದ್ರ (ಪಿಎಚ್‌ಸಿ)ಗಳಲ್ಲಿರುವ ಪ್ರಾಥಮಿಕ ಆರೋಗ್ಯ ಸುರಕ್ಷಾ ಅಧಿಕಾರಿ ಫೀಲ್ಡ್‌ ಅಧಿಕಾರಿಯಾಗಿ ಕೆಲಸ ನಿರ್ವಹಿಸುತ್ತಾರೆ. ರಾಜ್ಯದಲ್ಲಿ ಸುಮಾರು 13 ಸಾವಿರ ಸಿಬಂದಿ ಇದ್ದು, 0 ಟು 3 ಹೆಡ್‌ಗಳಲ್ಲಿ ವೇತನ ಸಮಸ್ಯೆ ಇದೆ. ಅವರದು ಕೇಂದ್ರ ಸರಕಾರಿ ಪ್ರಾಯೋಜಿತ ಹುದ್ದೆ ಎಂಬ ಕಾರಣ ನೀಡಿ ವೇತನ ವಿಳಂಬವಾಗುತ್ತಿದೆ ಎನ್ನಲಾಗಿದೆ.

3 ಸಾವಿರ ಮಂದಿಗೆ ಒಬ್ಬರು ಸಿಬಂದಿ
ಪ್ರತೀ ಪಿಎಚ್‌ಸಿಯಲ್ಲಿ ಗ್ರಾಮಕ್ಕೆ ಒಬ್ಬರಂತೆ ಪ್ರಾ.ಆ.ಸು. ಅಧಿಕಾರಿ ಇದ್ದಾರೆ. ಸರಕಾರದ ನಿಯಮದ ಪ್ರಕಾರ 3 ಸಾವಿರ ಜನಸಂಖ್ಯೆಗೆ ಒಬ್ಬರು ಸಿಬಂದಿ ಇರಬೇಕು. ಆದರೆ 10 ಸಾವಿರ ಮಂದಿಗೆ ಒಬ್ಬರೇ ಕಾರ್ಯನಿರ್ವಹಿಸಬೇಕಾದ ಸ್ಥಿತಿ ಇದೆ.

ಆರೋಗ್ಯ ಇಲಾಖೆಯ ಕಾರ್ಯಕ್ರಮಗಳನ್ನು ಗ್ರಾಮೀಣ ಜನತೆಗೆ ತಲುಪಿಸುವ ಜವಾಬ್ದಾರಿ ಇವರದು. ಕೋವಿಡ್‌ ಲಸಿಕೆಯನ್ನೂ ಇವರ ಮೂಲಕ ನೀಡಲಾಗುತ್ತಿದೆ. ವಿತರಣೆ ಸ್ಥಳ ನಿಗದಿಯಿಂದ ಹಿಡಿದು ಎಲ್ಲವೂ ಇವರ ಮೂಲಕ ನಡೆದು ಆಯಾ ದಿನ ಸಂಜೆ ವಿತರಣೆಯಾದ ಲಸಿಕೆ ಸಂಖ್ಯೆಯನ್ನು ಇವರೇ ವರದಿ ಮಾಡಬೇಕು. ಲಸಿಕೆಯ ಪ್ರಗತಿ ಇಳಿಕೆಯಾದರೆ ಅದಕ್ಕೂ ಇವರೇ ಜವಾಬ್ದಾರಿ.

ಆರೋಗ್ಯ ಇಲಾಖೆಯ 42 ರಾಷ್ಟ್ರೀಯ ಕಾರ್ಯಕ್ರಮಗಳನ್ನು ಜನರಿಗೆ ತಲುಪಿಸುತ್ತೇವೆ; ಆದರೆ ನಮ್ಮ ವೇತನ ಸಮಸ್ಯೆಯನ್ನು ಜನಪ್ರತಿನಿಧಿಗಳಾಗಲಿ, ಅಧಿಕಾರಿ ವರ್ಗವಾಗಲಿ ಗಂಭೀರವಾಗಿ ತೆಗೆದುಕೊಂಡಿಲ್ಲ ಎಂಬುದು ಇವರ ಅಳಲು.

Advertisement

ಪ್ರಾರಂಭದಲ್ಲಿ ಈ ಹುದ್ದೆಯವರನ್ನು ವಿಲೇಜ್‌ ನರ್ಸ್‌ಗಳೆಂದು ಕರೆಯಲಾಗುತ್ತಿತ್ತು. ಬಳಿಕ ಆರೋಗ್ಯ ಕಾರ್ಯಕರ್ತರು, ಆನಂತರ ಆರೋಗ್ಯ ಸಹಾಯಕರು ಎಂದು ಕರೆಯಲಾಗುತ್ತಿತ್ತು. ಕಳೆದ ಮೇ ತಿಂಗಳಲ್ಲಿ ಮಹಿಳೆಯರನ್ನು ಪ್ರಾಥಮಿಕ ಆರೋಗ್ಯ ಸುರಕ್ಷಾ ಅಧಿಕಾರಿಗಳು, ಪುರುಷರಿಗೆ ಆರೋಗ್ಯ ನಿರೀಕ್ಷಣಾಧಿಕಾರಿಗಳು ಎಂಬ ಪದನಾಮ ನೀಡಲಾಗಿದೆ.

ಇದನ್ನೂ ಓದಿ:2 ಡೋಸ್‌ ಲಸಿಕೆ ಪಡೆದವರಿಗೆ ಹೊಸ ತಳಿ ಪರಿಣಾಮ ಬೀರದು

ಸಿಎಂಗೆ ಮನವಿ
ಪ್ರಾ.ಆ.ಸು. ಅಧಿಕಾರಿಗಳು ಸೇರಿ ಕಳೆದ ಜೂನ್‌ ತಿಂಗಳಲ್ಲಿ ರಾಜ್ಯ ಮಟ್ಟದಲ್ಲಿ ತಮ್ಮ ವೇತನ ಮತ್ತಿತರ ಸಮಸ್ಯೆಯನ್ನು ಪರಿಹರಿಸಿಕೊಳ್ಳಲು ಸಂಘಟನೆಯನ್ನು ಹುಟ್ಟುಹಾಕಿದ್ದಾರೆ. ಸಂಘದ ಅಧ್ಯಕ್ಷರು, ಉಪಾಧ್ಯಕ್ಷರು ಸಿಎಂ ಬಸವರಾಜ ಬೊಮ್ಮಾಯಿ ಅವರನ್ನು ಭೇಟಿಯಾಗಿ ಮನವಿ ಮಾಡಿದ್ದಾರೆ.

ಆರೋಗ್ಯ ಸುರಕ್ಷಾ ಅಧಿಕಾರಿ ಹುದ್ದೆ
ದಕ್ಷಿಣ ಕನ್ನಡ ಮತ್ತು ಉಡುಪಿ ಜಿಲ್ಲೆಯಲ್ಲಿ ಒಟ್ಟು 764 ಮಂಜೂರಾದ ಆರೋಗ್ಯ ಸುರಕ್ಷಾ ಅಧಿಕಾರಿ ಹುದ್ದೆಗಳಿವೆ. ಇದರಲ್ಲಿ 538 ಹುದ್ದೆ ಭರ್ತಿಯಾಗಿದ್ದು 236 ಖಾಲಿ ಹುದ್ದೆಗಳಿವೆ.

ಪ್ರಾ. ಆ. ಸು. ಅಧಿಕಾರಿ ದ.ಕ. ಉಡುಪಿ
ಮಂಜೂರಾದ ಹುದ್ದೆ 450 324
ಭರ್ತಿ ಹುದ್ದೆ 310 228
ಖಾಲಿ ಹುದ್ದೆ 140 96

ಮೈಸೂರಿನಲ್ಲಿ ಬಜೆಟ್‌ ಸಭೆ
ಆರೋಗ್ಯ ಇಲಾಖೆಯ ವೇತನ ಮತ್ತಿತರ ಬಜೆಟ್‌ ವಿಚಾರಕ್ಕೆ ಸಂಬಂಧಿಸಿ ಅ. 21ರಂದು ಮೈಸೂರಿನಲ್ಲಿ ವಿಭಾಗದ ಮಟ್ಟದ ಸಭೆ ನಡೆದಿದ್ದು, ಅದರಲ್ಲಿ ವಿಭಾಗ ವ್ಯಾಪ್ತಿಯ ಎಲ್ಲ ಜಿಲ್ಲೆಗಳ ಸಂಬಂಧಪಟ್ಟ ಅಧಿಕಾರಿಗಳು ಪಾಲ್ಗೊಂಡಿದ್ದಾರೆ. ಅದರಲ್ಲಿ ಇವರ ವೇತನದ ವಿಚಾರವೂ ಚರ್ಚೆಯಾಗಿದೆ ಎಂದು ಆರೋಗ್ಯ ಇಲಾಖೆ ಮೂಲಗಳು ತಿಳಿಸಿವೆ.

ರಾಜ್ಯದ ಸಮಸ್ಯೆ, ಬಜೆಟ್‌ ಸಮಸ್ಯೆ ಎಂದು ಸಬೂಬು ಹೇಳಿಕೊಂಡು ನಮ್ಮ ವೇತನವನ್ನು ಮೂರ್‍ನಾಲ್ಕು ತಿಂಗಳು ವಿಳಂಬ ಮಾಡುತ್ತಿದ್ದಾರೆ. ಇಲಾಖೆಯ ಎಲ್ಲ ಕೆಟಗರಿಯವರಿಗೂ ವೇತನ ಸಮಯಕ್ಕೆ ಸರಿಯಾಗಿ ಆಗುತ್ತದೆ. ಜನರ ಜತೆ ನಿಂತು ತಳಮಟ್ಟದಲ್ಲಿ ಅವರ ಆರೋಗ್ಯ ಕಾಪಾಡುವ ಕೆಲಸವನ್ನು ನಾವು ಮಾಡುತ್ತಿದ್ದರೂ ನಮ್ಮ ಸಮಸ್ಯೆಯನ್ನು ಯಾರೂ ಕೇಳುತ್ತಿಲ್ಲ.
– ಸುಮನಾ ಕ್ರಾಸ್ತಾ,
ರಾಜ್ಯ ಉಪಾಧ್ಯಕ್ಷೆ-ದ.ಕ. ಜಿಲ್ಲಾಧ್ಯಕ್ಷೆ, ಪ್ರಾ.ಆ.ಸು. ಅಧಿಕಾರಿಗಳ ಸಂಘ, ಬೆಂಗಳೂರು

ಸಮಸ್ಯೆ ಪರಿಶೀಲನೆ
ಪ್ರಾಥಮಿಕ ಆರೋಗ್ಯ ಸುರಕ್ಷಾ ಅಧಿಕಾರಿಗಳ ವೇತನ ಸಮಸ್ಯೆಯ ಕುರಿತು ಪರಿಶೀಲನೆ ನಡೆಸಿ, ಸಮಸ್ಯೆ ಬಗೆಹರಿಸುವ ಕುರಿತು ಗಮನ ಹರಿಸಲಾಗುವುದು.
– ಡಿ. ರಣದೀಪ್‌, ಆಯುಕ್ತರು, ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ, ಬೆಂಗಳೂರು

-ಕಿರಣ್‌ ಸರಪಾಡಿ

Advertisement

Udayavani is now on Telegram. Click here to join our channel and stay updated with the latest news.

Next