Advertisement

ಸಂಪುಟದಿಂದ ಸಚಿವ ಡಾ.ಸುಧಾಕರ್‌ ವಜಾಗೊಳಿಸಿ

04:40 PM Nov 28, 2022 | Team Udayavani |

ಚಿಕ್ಕಬಳ್ಳಾಪುರ: ಬಿಜೆಪಿ ವರಿಷ್ಠರು, ಆರ್‌ಎಸ್‌ಎಸ್‌ ಮುಖಂಡರಿಗೆ ನೈತಿಕತೆ ಇದ್ದರೆ ನರ್ಸಿಂಗ್‌ ಪರೀಕ್ಷೆಯಲ್ಲಿ ಅಕ್ರಮ ನಡೆಸಿ, ವಿದ್ಯಾರ್ಥಿಗಳ ಜೀವನದೊಂದಿಗೆ ಚೆಲ್ಲಾಟ ಆಡುತ್ತಿರುವ ಆರೋಗ್ಯ ಸಚಿವ ಡಾ.ಕೆ. ಸುಧಾಕರ್‌ ರಾಜೀನಾಮೆ ಪಡೆಯಬೇಕು, ತಪ್ಪಿತಸ್ಥ ಅಧಿ ಕಾರಿಗಳನ್ನು ಸೇವೆಯಿಂದ ವಜಾಗೊಳಿಸಿ, ಕೂಡಲೇ ಪ್ರಕರಣ ನ್ಯಾಯಾಂಗ ತನಿಖೆ ನಡೆಸಿ ಎಂದು ಕೆಪಿಸಿಸಿ ಉಪಾಧ್ಯಕ್ಷ, ಮಾಜಿ ಸಂಸದ ವಿ.ಎಸ್‌.ಉಗ್ರಪ್ಪ ಆಗ್ರಹಿಸಿದರು.

Advertisement

ನಗರದ ಜಿಲ್ಲಾ ಪತ್ರಕರ್ತರ ಭವನದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ರಾಜ್ಯ ಬಿಜೆಪಿ ಸರ್ಕಾರದಲ್ಲಿ ಭ್ರಷ್ಟಾಚಾರದ ಗಂಗೋತ್ರಿ ಹರಿಯುತ್ತಿದೆ. ಎಲ್ಲಾ ರಂಗಗಳಲ್ಲೂ ನಿರ್ಜೀವವಾಗಿದೆ. ಏನಾದರೂ ಸಕ್ರಿಯವಾಗಿದ್ದರೇ ಅದು ಹಣ ಲೂಟಿ ಮಾಡುವುದಲ್ಲಿ ಮಾತ್ರ ಎಂದು ಹೇಳಿದರು.

ರಾಜ್ಯದಲ್ಲಿ 1.5 ಲಕ್ಷ ನರ್ಸಿಂಗ್‌ ವಿದ್ಯಾರ್ಥಿಗಳು ಪರೀಕ್ಷೆ ಬರೆಯುತ್ತಿದ್ದ ಕೆಲ ಕೇಂದ್ರಗಳಲ್ಲಿ, ಸಾಮೂಹಿಕ ನಕಲು ಪ್ರಕರಣ ಬೆಳಕಿಗೆ ಬಂದ ಕಾರಣ, ಸರ್ಕಾರ ಪರೀಕ್ಷೆ ವಜಾ ಮಾಡಿದೆ. ಈ ಬಗ್ಗೆ ಆರೋಗ್ಯ ಸಚಿವ ಸುಧಾಕರ್‌ ಪ್ರತಿಕ್ರಿಯೆ ಕೇಳಿ ಆಘಾತವಾಯಿತು. “ನನಗೆ ಮೊದಲೇ ಕೆಲವು ಕಾಲೇಜುಗಳ ಬಗ್ಗೆ ಗುಮಾನಿ ಇತ್ತು.’ ಆದರೆ, ಅವುಗಳು ಹೈಕೋರ್ಟ್‌ ಮೂಲಕ ಪರೀಕ್ಷೆ ನಡೆಸಲು ಅನುಮತಿ ಪಡೆದುಕೊಂಡಿದ್ದವು ಎಂದಿದ್ದಾರೆ. ಅಕ್ರಮ ನಡೆಸಿ ಪರೀಕ್ಷೆಯಲ್ಲಿ ಪಾಸಾದವರು ಗ್ರಾಮೀಣ ಜನರ ಆರೋಗ್ಯದ ಜತೆ ಚೆಲ್ಲಾಟ ಆಡಲು ನೇಮಕವಾಗುತ್ತಾರೆ. ಅವರ ಆರೋಗ್ಯದ ಗತಿ ದೇವರೇ ಬಲ್ಲ ಎಂದು ಆತಂಕ ವ್ಯಕ್ತಪಡಿಸಿದರು.

ಸೇಡಿನ ರಾಜಕಾರಣ: ಜಿಲ್ಲೆಯಲ್ಲಿ ಶಾಸಕ, ಸಚಿವ, ಸಕಲ ಕಲಾ ವಲ್ಲಭ ಡಾ.ಸುಧಾಕರ್‌ ಒಂದೊದು ಕಾಲಕ್ಕೆ ಒಂದೊಂದು ಬಣ್ಣ ಹಾಕುತ್ತಾ ಸೇಡಿನ ರಾಜಕಾರಣಕ್ಕೆ ಹೆಸರುವಾಸಿಯಾಗಿದ್ದಾರೆ. ಈ ಮೂಲಕ ಕ್ಷೇತ್ರವನ್ನು ತನ್ನ ಕಲಿಮುಷ್ಠಿಯಲ್ಲಿಟ್ಟುಕೊಳ್ಳಲು ಹೊರಟಿದ್ದಾರೆ. ದೇಶದಲ್ಲಿ ಮೋದಿ ಹಿಟ್ಲರ್‌ ಪ್ರವೃತ್ತಿ ಅನುಸರಿಸುತ್ತಿದ್ದರೆ, ರಾಜ್ಯದಲ್ಲಿ ಸಿಎಂ ಆದಿಯಾಗಿ ಸಚಿವರು, ಬಿಜೆಪಿ ಶಾಸಕರು, ಕಾರ್ಯಕರ್ತರವರೆಗೆ ಎಲ್ಲರೂ ಸುಳ್ಳನ್ನು ಸತ್ಯ ಮಾಡಲು ಹೊರಟಿರುವುದನ್ನು ಕಾಣಬಹುದು ಎಂದು ಹೇಳಿದರು. ಹಿಟ್ಲರ್‌ ಪ್ರವೃತ್ತಿಯ ಮೋದಿಯ ಗುಣ ಬಿಜೆಪಿ ಎಲ್ಲಾ ಸದಸ್ಯರು, ಕಾರ್ಯಕರ್ತರಿಗೆ ಬಂದಿದೆ. ಇವರೆಲ್ಲಾ ಗೋಬೆಲ್ಸ್‌ ಥಿಯರಿಯನ್ನು ಜನತೆಗೆ ಉಣಬಡಿಲು ಹೊರಟಿದ್ದಾರೆ. ಇವೆಲ್ಲಾ ಬಹಳ ದಿನ ನಡೆಯಲ್ಲ ಎಂದು ಹೇಳಿದರು.

ಕೇಸು ಹಾಕಿ ಬಾಯಿ ಮುಚ್ಚಿಸುತ್ತಾರೆ: ಚಿಕ್ಕಬಳ್ಳಾಪುರ ಕ್ಷೇತ್ರದಲ್ಲಿ ಸೇಡಿನ ರಾಜಕಾರಣ ಮೇರೆ ಮೀರಿದೆ. ಸಚಿವ ಡಾ.ಕೆ.ಸುಧಾಕರ್‌ ಅಣತಿಯಂತೆ ನಡೆದುಕೊಳ್ಳದ ಅ ಧಿಕಾರಿಗಳಿಗೆ ಉಳಿಗಾಲ ಇಲ್ಲ. ವರ್ಗಾವಣೆ ಅಥವಾ ಅಮಾನತು ಮಾಡಿಸುತ್ತಾರೆ. ಇನ್ನು ಜನಸಾಮಾನ್ಯರ ಮೇಲೆ ಕೇಸುಗಳನ್ನು ಹಾಕಿಸಿ ಅವರ ಬಾಯಿ ಮುಚ್ಚಿಸುತ್ತಾರೆ ಎಂದು ಹೇಳಿದರು.

Advertisement

ಸಂವಿಧಾನಕ್ಕೆ ನೀಡಿಲ್ಲ ಬೆಲೆ: ಮಾಲಿನ್ಯ ನಿಯಂತ್ರಣ ಮಂಡಳಿ ಅಧ್ಯಕ್ಷ ಸ್ಥಾನಕ್ಕೆ ರಾಜೀನಾಮೆ ನೀಡುವಂತೆ ಮಾಡಿದ ನೀರಾವರಿ ಹೋರಾಟಗಾರ ಆಂಜನೇಯರೆಡ್ಡಿ ಅವರ ಮೇಲಿನ ಸೇಡಿಗಾಗಿ ಅಸಂಸದೀಯ ಪದ ಬಳಕೆ ಮಾಡಿ, ಕ್ರಿಮಿನಲ್‌ ಕೇಸು ಹಾಕಿಸಿಕೊಂಡಿದ್ದಾರೆ. ಕರ್ನಾಟಕದ ರಾಜಕೀಯ ಇತಿಹಾಸದಲ್ಲಿ ಗಂಭೀರ ಆರೋಪವಿದ್ದರೂ ಸಂವಿಧಾನಕ್ಕೆ ಬೆಲೆ ನೀಡದೆ, ಸಾರ್ವಜನಿಕರ ನಂಬಿಕೆಗೆ ಬೆಲೆ ನೀಡದೆ, ಆರೋಪ ಬಂದ ತಕ್ಷಣ ರಾಜೀನಾಮೆ ನೀಡದೆ, ಅಧಿಕಾರದಲ್ಲಿ ಮುಂದುವರಿದಿರುವ ಏಕೈಕ ರಾಜಕಾರಣಿ ಎಂದರೆ ಸುಧಾಕರ್‌ ಎಂದು ವ್ಯಂಗ್ಯವಾಡಿದರು.

ಎಚ್‌ಡಿಕೆಯಿಂದ ದ್ವಂದ್ವ ಹೇಳಿಕೆ: ಮಾಜಿ ಪ್ರಧಾನಿ ದೇವೇಗೌಡರ ಕಾಲದಿಂದ ಕುಮಾರಸ್ವಾಮಿಯನ್ನು ನಾನು ಬಲ್ಲೆ. ಸಮ್ಮಿಶ್ರ ಸರ್ಕಾರ ಪತನವಾಗಲು ಬಿಜೆಪಿ, ಯಡಿಯೂರಪ್ಪ ಕಾರಣ ಎಂದು ವಿಧಾನಸಭೆಯಲ್ಲಿ ಕುಮಾರಸ್ವಾಮಿ ಹೇಳಿಕೆ ಕಡತದಲ್ಲಿ ದಾಖಲಾಗಿದೆ. ಈಗ ಇದನ್ನು ಸಿದ್ದರಾಮಯ್ಯ ಕಾರಣ, ಕಾಂಗ್ರೆಸ್‌ ಬಿಜೆಪಿಯ ಬಿ ಟೀಂ ಎಂದು ದೂರುವುದು ಎಷ್ಟು ಸರಿ. ಹಾಗಾದರೆ, ಕುಮಾರಸ್ವಾಮಿ ಅವರ ಎರಡೂ ಹೇಳಿಕೆಗಳಲ್ಲಿ ಯಾವುದು ಸರಿ ಎಂದು ಪ್ರಶ್ನಿಸಿದರು. ತೇಜೋವಧೆ ತಪ್ಪು: ರಾಜಕಾರಣಕ್ಕಾಗಿ ರಾಜಕಾರಣಿಗಳ ತೇಜೋವಧೆ ತಪ್ಪು. ನಿಮ್ಮ ಕುಟುಂಬಕ್ಕೆ ಒಂದು ಇತಿಹಾಸ ಇದೆ. ಅದನ್ನು ಹಾಳು ಮಾಡಬೇಡಿ, ಗೂಬೆ ಕೂರಿಸುವ ಸಮಯ ಸಾಧಕತನ ಬಿಡಬೇಕು, ದೇವೇಗೌಡರ ಕುಟಂಬದ ಮೇಲೆ ಗೌರವವಿದೆ. ಅದಕ್ಕೆ ಧಕ್ಕೆ ಬರದಂತೆ ನಡೆಯಿರಿ ಸಲಹೆ ನೀಡಿದರು.

ಕೇಂದ್ರ ಮಧ್ಯಪ್ರವೇಶ ಮಾಡಲಿ: ಗಡಿ ವಿಚಾರದಲ್ಲಿ ಮಹಾರಾಷ್ಟ್ರ ಸರ್ಕಾರವು ಸುಮ್ಮನೆ ಮೂಗು ತೂರಿಸುವುದನ್ನು ಬಿಡಬೇಕು. ಕರ್ನಾಟಕದ ಸಿಎಂ ನಮ್ಮದು ಡಬಲ್‌ ಎಂಜಿನ್‌ ಸರ್ಕಾರ ಎನ್ನುತ್ತಾರೆ. ಪ್ರಧಾನಿಗಳಿಂದ ಮಹಾರಾಷ್ಟ್ರದವರಿಗೆ ತಿಳಿ ಹೇಳಿಸಬೇಕು, ಸರ್ವಪಕ್ಷ ಸಭೆ ಕರೆದು ಚರ್ಚಿಸಬೇಕು, ನೆಲ, ಜಲ, ಭಾಷೆ, ಸಂಸ್ಕೃತಿ ಮೇಲೆ ಯಾರು ದಾಳಿ ಮಾಡಿದರೂ, ಕಾಂಗ್ರೆಸ್‌ ಅದನ್ನು ಖಂಡಿಸುತ್ತದೆ ಎಂದರು.

ಸುದ್ದಿಗೋಷ್ಠಿಯಲ್ಲಿ ಜಿಲ್ಲಾಧ್ಯಕ್ಷ ಕೆ.ಎನ್‌. ಕೇಶವರೆಡ್ಡಿ, ಮಾಜಿ ಶಾಸಕರಾದ ಎಸ್‌ಎಂ.ಮುನಿಯಪ್ಪ, ಶಿವಾನಂದ, ಕೆಪಿಸಿಸಿ ಸದಸ್ಯ ವಿನಯ್‌ ಶ್ಯಾಮ್‌, ನದಿ ಆಂಜಿನಪ್ಪ, ಯಲುವಹಳ್ಳಿ ರಮೇಶ್‌, ಗಂಗರೇಕಾಲುವೆ ನಾರಾಯಣಸ್ವಾಮಿ, ಲಾಯರ್‌ ನಾರಾಯಣಸ್ವಾಮಿ, ಜಯರಾಂ, ಕೃಷ್ಣಪ್ಪ, ಮಂಚೇನಹಳ್ಳಿ ಪ್ರಕಾಶ್‌ ಉಪಸ್ಥಿತರಿದ್ದರು.

ಅಡ್ಡಮತದಾನ ಮಾಡಿದವರ ಸೇರ್ಪಡೆ ಬಗ್ಗೆ ಪರಿಶೀಲಿಸುತ್ತೇವೆ : ಚಿಕ್ಕಬಳ್ಳಾಪುರ ನಗರಸಭೆ ಅಧ್ಯಕ್ಷ ಹಾಗೂ ಉಪಾಧ್ಯಕ್ಷರ ಚುನಾವಣೆಯಲ್ಲಿ ಅಡ್ಡಮತದಾನ ಮಾಡಿದ ಸದಸ್ಯರನ್ನು ಕಾಂಗ್ರೆಸ್‌ ಸೇರ್ಪಡೆ ಮಾಡಿಕೊಂಡಿರುವ ಬಗ್ಗೆ ಪಕ್ಷದ ಶಿಸ್ತು ಸಮಿತಿ ಪರಿಶೀಲಿಸುತ್ತದೆ. ನಗರಸಭಾ ಸದಸ್ಯರಿಂದ ಸೂಕ್ತ ಉತ್ತರ ಬಂದಿಲ್ಲ ಎಂದರೇ ಕ್ರಮ ಜರುಗಿಸಲಾಗುತ್ತದೆ ಎಂದು ಕೆಪಿಸಿಸಿ ಉಪಾಧ್ಯಕ್ಷ ಉಗ್ರಪ್ಪ ಸ್ಪಷ್ಟಪಡಿಸಿದರು.

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

Advertisement

Udayavani is now on Telegram. Click here to join our channel and stay updated with the latest news.

Next