Advertisement

ಕಾಂಗ್ರೆಸ್ ಅಧಿಕಾರದಲ್ಲಿದ್ದಾಗಲೇ ರೈತ ವಿರೋಧಿ ಕಾನೂನುಗಳ ಸೃಷ್ಟಿ; ಕಣ್ಣೂರು ಆರೋಪ

04:12 PM Jun 30, 2022 | Suhan S |

ಸಾಗರ: ರಾಜ್ಯದಲ್ಲಿ ರೈತ ವಿರುದ್ಧವಾದ ಎಲ್ಲ ಕಾನೂನುಗಳು ಬಂದಿದ್ದು ಕಾಂಗ್ರೆಸ್ ಅಧಿಕಾರದಲ್ಲಿದ್ದ  ಕಾಂಗ್ರೆಸ್ ಇದೀಗ ತನ್ನ ತಪ್ಪುಗಳನ್ನು ಬಿಜೆಪಿ ಮೇಲೆ ಎತ್ತಿ ಹಾಕುವ ಪ್ರಯತ್ನ ನಡೆಸುತ್ತಿದೆ ಎಂದು ಎಪಿಎಂಸಿ ಮಾಜಿ ಅಧ್ಯಕ್ಷ ಚೇತನರಾಜ್ ಕಣ್ಣೂರು ಆರೋಪಿಸಿದರು.

Advertisement

ಗುರುವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಲಿಂಗನಮಕ್ಕಿ ಆಣೆಕಟ್ಟು ನಿರ್ಮಾಣ ಸಂದರ್ಭದಲ್ಲಿ ಅಧಿಕಾರದಲ್ಲಿ ಇದ್ದದ್ದು ಕಾಂಗ್ರೆಸ್ ಪಕ್ಷ. ಅರಣ್ಯ ಹಕ್ಕು ಕಾಯ್ದೆ ಜಾರಿಗೆ ಬಂದಿದ್ದು ಕಾಂಗ್ರೆಸ್ ಅವಧಿಯಲ್ಲಿ. ಬಗರ್‌ಹುಕುಂ ಕಾಯ್ದೆ ಜಾರಿಗೆ ಬರಲು ಹೋರಾಟ ಮಾಡಿದ್ದು ಬಿ.ಎಸ್.ಯಡಿಯೂರಪ್ಪನವರಾದರೆ ಕಾಯ್ದೆ ಜಾರಿಗೆ ತಂದಿದ್ದು ಮಾತ್ರ ಎಸ್.ಬಂಗಾರಪ್ಪ. ಕರೂರು ಭಾರಂಗಿ ಹೋಬಳಿಯಲ್ಲಿ ಅಭಯಾರಣ್ಯ ಕಾಯ್ದೆ ಜಾರಿಗೆ ತಂದಾಗ ಸಹ ಕಾಂಗ್ರೆಸ್ ಪಕ್ಷ ಮತ್ತು ಕಾಗೋಡು ತಿಮ್ಮಪ್ಪ ಅಧಿಕಾರದಲ್ಲಿದ್ದರು. ಇನಾಂ ಜಮೀನು ಸಮಸ್ಯೆ ಬಗೆಹರಿಸುವಲ್ಲಿ ಕಾಗೋಡು ತಿಮ್ಮಪ್ಪ ಅವರು ಕಂದಾಯ ಸಚಿವರಾಗಿದ್ದಾಗ್ಯೂ ವಿಫಲವಾಗಿದ್ದಾರೆ. ಈ ರೀತಿ ರೈತ ವಿರೋಧಿಯಾದ ಎಲ್ಲ ಕಾಯ್ದೆ ಜಾರಿಗೆ ಬರುವಾಗ ಮೌನವಾಗಿದ್ದ ಕಾಗೋಡು ತಿಮ್ಮಪ್ಪ ಮತ್ತು ಕಾಂಗ್ರೆಸ್ ಪ್ರಮುಖರಾದ ಮಲ್ಲಿಕಾರ್ಜುನ ಹಕ್ರೆ, ತೀ.ನ.ಶ್ರೀನಿವಾಸ್, ಬಿ.ಆರ್.ಜಯಂತ್ ಈಗ ರೈತರ ಪರವಾಗಿ ತಾವಿದ್ದೇವೆ ಎಂದು ಮೊಸಳೆ ಕಣ್ಣೀರು ಸುರಿಸುತ್ತಿದ್ದಾರೆ. ಕಾಂಗ್ರೆಸ್‌ನವರಿಗೆ ತಾಕತ್ತಿದ್ದರೆ ಚರ್ಚೆಗೆ ಬರಲಿ. ಕಾಂಗ್ರೆಸ್ ಕಾಲಕಾಲಕ್ಕೆ ಜಾರಿಗೆ ತಂದಿರುವ ರೈತ ವಿರೋಧಿ ಎಲ್ಲ ಕಾಯ್ದೆಗಳ ದಾಖಲೆ ಸಹಿತ ನಾನು ಚರ್ಚೆಗೆ ಬರುತ್ತೇನೆ ಎಂದು ಸವಾಲು ಎಸೆದರು.

ಗೇಣಿದಾರರ ಪರ ಹೋರಾಟ ಮಾಡಿ ಉಳುವವನೆ ಹೊಲದೊಡೆಯ ಕಾಯ್ದೆಯಡಿ ರೈತರಿಗೆ ಜಮೀನು ಕೊಡಿಸಿದ್ದೇವೆ ಎಂದು ಕಾಗೋಡು ತಿಮ್ಮಪ್ಪ ಹೇಳುತ್ತಿರುವುದು ಸುಳ್ಳು. ಅಂದು ಹೋರಾಟ ಮಾಡಿದ್ದು ಸಮಾಜವಾದಿ ಪಕ್ಷ. ಆಗ ಕಾಂಗ್ರೆಸ್ ಸಮಾಜವಾದಿ ಪಕ್ಷದ ವಿರುದ್ಧವಾಗಿತ್ತು ಎಂದು ಕುಟುಕಿದ ಕಣ್ಣೂರು, ಬಿಜೆಪಿ ಸರ್ಕಾರದ ಅವಧಿಯಲ್ಲಿ ರೈತರನ್ನು ಒಕ್ಕಲೆಬ್ಬಿಸುವ, ಜೈಲಿಗೆ ಕಳಿಸುವ ಯಾವ ಪ್ರಕರಣವೂ ನಡೆದಿಲ್ಲ. ಶಾಸಕ ಹಾಲಪ್ಪ ಇಂತಹ ಅನೇಕ ಸಂದರ್ಭದಲ್ಲಿ ರೈತಪರ ನಿಂತು ಸರ್ಕಾರದ ವಿರುದ್ಧ ಧ್ವನಿ ಎತ್ತಿದ್ದಾರೆ. ಶಾಸಕ ಹಾಲಪ್ಪ, ಕುಮಾರ ಬಂಗಾರಪ್ಪ ಮತ್ತು ಗೃಹ ಸಚಿವ ಅರಗ ಜ್ಞಾನೇಂದ್ರ ಅವರು ಬೆಂಗಳೂರಿನಲ್ಲಿ ಗುರುವಾರ ಅಥವಾ ಶುಕ್ರವಾರ ಮುಖ್ಯಮಂತ್ರಿಗಳನ್ನು ಭೇಟಿಯಾಗಿ ಶರಾವತಿ ಮುಳುಗಡೆ ಸಂತ್ರಸ್ತರ ಸಮಸ್ಯೆ, ಅರಣ್ಯಹಕ್ಕು ಸಾಗುವಳಿದಾರರು, 192 ಎ ಇನ್ನಿತರ ಪ್ರಕರಣ ಕುರಿತು ಚರ್ಚೆ ನಡೆಸಿ, ಅದಕ್ಕೆ ತಾರ್ಕಿಕ ಅಂತ್ಯ ಕಲ್ಪಿಸುವ ಸಿದ್ದತೆಯಲ್ಲಿದ್ದಾರೆ ಎಂದರು.

ಗೋಷ್ಠಿಯಲ್ಲಿ ನಗರ ಬಿಜೆಪಿ ಅಧ್ಯಕ್ಷ ಕೆ.ಆರ್.ಗಣೇಶಪ್ರಸಾದ್, ನಗರಸಭೆ ಸದಸ್ಯರಾದ ಆರ್.ಶ್ರೀನಿವಾಸ್, ಪುರುಷೋತ್ತಮ್, ಪ್ರಮುಖರಾದ ಕೆ.ವಿ.ಪ್ರವೀಣಕುಮಾರ್, ದೇವೇಂದ್ರಪ್ಪ, ಗೌತಮ್ ಕೆ.ಎಸ್., ಲಕ್ಷ್ಮೀನಾರಾಯಣ, ರಾಜಶೇಖರ ಹಂದಿಗೋಡು ಹಾಜರಿದ್ದರು.

ನ್ಯಾಯಾಲಯಕ್ಕೆ ರಾಜ್ಯಪತ್ರ; ಪ್ರಕರಣ ವಜಾ! :

Advertisement

ಅರಣ್ಯ ಭೂಮಿಯಲ್ಲಿ ಸಾಗುವಳಿ ಮಾಡುತ್ತಿರುವ ಯಾವೊಬ್ಬ ರೈತರನ್ನು ಒಕ್ಕಲೆಬ್ಬಿಸಲು ಬಿಡುವುದಿಲ್ಲ. ರಾಜ್ಯ ಸರ್ಕಾರ 2020 ರ ಏಪ್ರಿಲ್ 10 ರಂದು ಭೂಕಬಳಿಕೆ ನಿಷೇದ ಕಾಯ್ದೆಗೆ ತಿದ್ದುಪಡಿ ತಂದಿದ್ದು, ನೋಟಿಸ್ ಬಂದ ರೈತರು ಈ ರಾಜ್ಯಪತ್ರವನ್ನು ನ್ಯಾಯವಾದಿಗಳ ಮೂಲಕ ಭೂಕಬಳಿಕೆ ನಿಷೇಧ ನ್ಯಾಯಾಲಯಕ್ಕೆ ಸಲ್ಲಿಸಿದರೆ ಪ್ರಕರಣ ವಜಾಗೊಳಿಸಲಾಗುತ್ತದೆ ಎಂದು ಕಣ್ಣೂರು ಸಲಹೆ ನೀಡಿದ್ದಾರೆ.

ಭೂಕಬಳಿಕೆ ನಿಷೇದ ಕಾಯ್ದೆಯಡಿ ಅರಣ್ಯ ಇಲಾಖೆಯಿಂದ ನೋಟಿಸ್ ಪಡೆದ ರೈತರು ರಾಜ್ಯಪತ್ರವನ್ನು ನ್ಯಾಯವಾದಿಗಳ ಮೂಲಕ ನ್ಯಾಯಾಲಯಕ್ಕೆ ಅಫಿಡವಿಟ್ ಸಲ್ಲಿಸಿದರೆ ಪ್ರಕರಣದಿಂದ ಮುಕ್ತಿ ಪಡೆಯಬಹುದು. ಅಲ್ಲದೆ ಶಾಸಕ ಹಾಲಪ್ಪ ಹರತಾಳು ತಾಲೂಕಿನ ರೈತರಿಗೆ ಅರಣ್ಯ ಇಲಾಖೆ ನೀಡಿದ 400 ಕ್ಕೂ ಹೆಚ್ಚು ನೋಟಿಸ್ ಸಂಗ್ರಹಿಸಿದ್ದು, ಮುಖ್ಯಮಂತ್ರಿಗಳಿಗೆ ಇದನ್ನು ಸಲ್ಲಿಸಲಿದ್ದಾರೆ ಎಂದು ಮಾಹಿತಿ ನೀಡಿದರು.

Advertisement

Udayavani is now on Telegram. Click here to join our channel and stay updated with the latest news.

Next