ಅಫಜಲಪುರ: ತಾಲೂಕಿನಲ್ಲಿ ಮುಸಲ್ಮಾನ ಸಮಾಜವನ್ನು ಸಂಘಟಿಸಿ, ಒಗ್ಗೂಡಿಸಿ ಮುನ್ನಡೆಸುವ ಉದ್ದೇಶದಿಂದ ಕಟ್ಟಿರುವ ಮುಸ್ಲಿಂ ಸಮಾಜ ಜಾಗೃತಿ ಸಮಿತಿ ರಚನೆ ಮಾಡಲಾಗಿದೆ ಎಂದು ಹಿರಿಯ ಮುಖಂಡ ಮಕೂಲ್ ಪಟೇಲ್ ತಿಳಿಸಿದರು.
ಪಟ್ಟಣದ ನ್ಯಾಷನಲ್ ಫಂಕ್ಷನ್ ಹಾಲ್ನಲ್ಲಿ ನಡೆದ ಮುಸ್ಲಿಂ ಸಮಾಜದ ಜಾಗೃತಿ ಸಮಿತಿ ಸಭೆಯಲ್ಲಿ ಮಾತನಾಡಿದ ಅವರು, ಕಳೆದ ನಾಲ್ಕು ದಶಕಗಳಿಂದ ತಾಲೂಕಿನಲ್ಲಿ ಮುಸ್ಲಿಂ ಸಮಾಜ ಎಲ್ಲ ರೀತಿಯಲ್ಲೂ ಹಿಂದುಳಿದಿದೆ. ತಾಲೂಕಿನಲ್ಲಿರುವ ಕಾಂಗ್ರೆಸ್, ಬಿಜೆಪಿ ಮುಖಂಡರು ನಮ್ಮ ಸಮಾಜದವರನ್ನು ಬಳಸಿಕೊಂಡು ನಿರ್ಲಕ್ಷಿಸಿದ್ದಾರೆ ಎಂದು ಆಪಾದಿಸಿದರು.
ತಾಲೂಕಿನ ಹಾಲಿ, ಮಾಜಿ ಶಾಸಕರಿಗೆ ಸಿದ್ಧಾಂತಗಳಿಲ್ಲ, ನೈತಿಕತೆ ಇಲ್ಲ ಅವರು ಬೇಕಾದ ಪಕ್ಷಗಳಿಗೆ ಪಲಾಯನ ಮಾಡಿ ಟಿಕೆಟ್ ಪಡೆದು ಗೆಲ್ಲುತ್ತಾರೆ. ಆದರೆ ನಾವು ಹಾಗಲ್ಲ, ಪಕ್ಷದ ಸಿದ್ಧಾಂತಕ್ಕಾಗಿ ಇಲ್ಲೇ ಉಳಿದಿದ್ದೇವೆ. ನಮಗೆ ಎಲ್ಲರೂ ಮೋಸ ಮಾಡಿದ್ದಾರೆ. ಆದರೂ ನಾವು ಅವರಿಗೆ ಕೆಟ್ಟದ್ದು ಬಯಸಿಲ್ಲ ಎಂದರು.
ಲೋಕಸಭೆ ಚುನಾವಣೆಯಲ್ಲಿ ಕಾಂಗ್ರೆಸ್ ಶಾಸಕರಿದ್ದರೂ ಡಾ| ಮಲ್ಲಿಕಾರ್ಜುನ ಖರ್ಗೆಗೆ 36 ಸಾವಿರ ಮತಗಳ ಕೊರತೆ ಆಯ್ತು. ಇದಕ್ಕೆ ಏನೇನ್ನಬೇಕು? ಖರ್ಗೆ ಅವರ ಅಬಿವೃದ್ಧಿ ಕೆಲಸ ಯಾರಿಗೂ ಕಾಣಲಿಲ್ಲವೇ? ಧೀಮಂತ ನಾಯಕನನ್ನು ಸೋಲಿಸಿ ಈಗ ಜಿಲ್ಲೆಯ ಜನ ಕಷ್ಟ ಅನುಭವಿಸುವಂತಾಗಿದೆ. ಯಾರಿಗೂ ಗೊತ್ತಿಲ್ಲದ ಡಾ| ಉಮೇಶ ಜಾಧವ ಸಂಸದರಾಗಿದ್ದಾರೆ. ಅವರಿಂದ ನಯಾ ಪೈಸೆ ಕೆಲಸವಾಗುತ್ತಿಲ್ಲ ಎಂದರು.
ಫಿರೋಜ್ ಅಫಜಲ್ ಜಾಗಿರದಾರ, ಖಾಲಿದ್ ಅಫಜಲ್ ಜಾಗಿರದಾರ, ಪಪ್ಪು ಪಟೇಲ್, ಮತೀನ್ ಪಟೇಲ್, ಮಂಜೂರ್ ಅಹ್ಮದ ಅಗರಖೇಡ ಮಾತನಾಡಿ, ಸಮಿತಿ ರಚನೆ ಯಾವುದೇ ಸಮುದಾಯಗಳ ವಿರುದ್ದವಲ್ಲ, ಬದಲಾಗಿ ನಮ್ಮ ಸಮಾಜದ ರಕ್ಷಣೆಗಾಗಿ ಮಾತ್ರವಿರುತ್ತದೆ ಎಂದು ಹೇಳಿದರು. ಭಾಷಾ ಪಟೇಲ್ ಹಸರಗುಂಡಗಿ, ಲತೀಪ್ ಭೋಗನಳ್ಳಿ, ಮೈಬೂಸಾಬ್ ಮಣೂರ, ಬಿಲಾಲ್ ಪೀರವಾಲೆ, ಮಹಿಬೂಬ್ ಮುಲ್ಲಾ, ಸದ್ದಾಂ ನಾಕೇದಾರ, ಜಾಫರಸಾಬ್ ಉಡಚಣ ಇತರರು ಇದ್ದರು.