Advertisement

ಮರೆತೇ ಬಿಟ್ಟರೇ ಮೊಟ್ಟೆತ್ತಡ್ಕದ ಹೆಲಿಪ್ಯಾಡ್‌?

03:07 PM Jan 17, 2018 | |

ಪುತ್ತೂರು: ಹೆಲಿಪ್ಯಾಡ್‌ಗೆ ಮೊಟ್ಟೆತ್ತಡ್ಕದಲ್ಲಿ ಜಾಗವಿದೆ. ಆದರೆ ಅಭಿವೃದ್ಧಿ ಮಾಡಲು ಇದುವರೆಗೆ ಸಾಧ್ಯವಾಗಿಲ್ಲ. ಬದಲಿಗೆ ಪರ್ಯಾಯ ಜಾಗ ಹುಡುಕುವ ಕೆಲಸ ನಡೆಯುತ್ತಿದೆ. ಒಂದು ರೀತಿಯಲ್ಲಿ ಪುತ್ತೂರಿಗೆ ಹೆಲಿಪ್ಯಾಡ್‌ ಇದ್ದೂ ಇಲ್ಲದಂತಾಗಿದೆ.

Advertisement

ಮೊಟ್ಟೆತ್ತಡ್ಕ ಗೇರು ಸಂಶೋಧನ ನಿರ್ದೇಶನಾಲಯದ ಮುಂಭಾಗ ಸುಮಾರು 3 ಎಕ್ರೆ ಜಾಗವನ್ನು ಹೆಲಿಪ್ಯಾಡ್‌ಗೆಂದು ನಿಗದಿ ಮಾಡಲಾಗಿದೆ. ಹೆಲಿಪ್ಯಾಡ್‌ಗೆ ಮೀಸಲಿಡುವ ಮೊದಲು ಗೇರು ಸಂಶೋಧನ ನಿರ್ದೇಶನಾಲಯಕ್ಕೆ ಇದೇ ಜಾಗವನ್ನು ಮಂಜೂರು ಮಾಡಲಾಗಿತ್ತು. ಆದ್ದರಿಂದ ಸದ್ಯ ಜಾಗ ಯಾರ ಸ್ವಾಧೀನದಲ್ಲಿದೆ, ದಾಖಲೆ ಯಾರ ಹೆಸರಿನಲ್ಲಿವೆ ಎನ್ನುವುದೇ ದೊಡ್ಡ ಗೊಂದಲ.

1986ರಲ್ಲಿ ಗೇರು ಸಂಶೋಧನ ನಿರ್ದೇಶನಾಲಯಕ್ಕೆ ರಾಜ್ಯ ಸರಕಾರ ಈ ಜಾಗವನ್ನು ಮಂಜೂರು ಮಾಡಿತ್ತು. ಇದಕ್ಕೆ
ನಿಗದಿ ಪಡಿಸಿದ್ದ ಮೊತ್ತ ವನ್ನು ಪಾವತಿಸಿಯೂ ಆಗಿತ್ತು. ಇದಾಗಿ ಸ್ವಲ್ಪ ದಿನದಲ್ಲೇ, ಮಂಜೂರು ಮಾಡಿದ ಜಾಗ ಹೆಲಿಪ್ಯಾಡ್‌ಗೆ ಬೇಕೆಂದು ಜಿಲ್ಲಾಡಳಿತ ತಿಳಿಸಿತು. 

ಈ ಹಿನ್ನೆಲೆಯಲ್ಲಿ ಡಿಸಿಆರ್‌ ನಿರ್ದೇಶಕ ಹಾಗೂ ಜಿಲ್ಲಾಧಿಕಾರಿ ನಡುವೆ ಒಪ್ಪಂದ ನಡೆಸಲಾಯಿತು. ಪರ್ಯಾಯ ಜಾಗ
ನೀಡುವ ಷರತ್ತಿನ ಮೇಲೆ ಡಿಸಿಆರ್‌, ಜಿಲ್ಲಾಧಿಕಾರಿ ಮಾತಿಗೆ ಒಪ್ಪಿಗೆಯನ್ನು ಸೂಚಿಸಿತು. ಅಲ್ಲಿಂದ ಇಲ್ಲಿವರೆಗೆ ಕಂದಾಯ ಇಲಾಖೆ ಡಿಸಿಆರ್‌ಗಾಗಿ ಜಾಗ ಹುಡುಕುವ ಕೆಲಸದಲ್ಲೇ ನಿರತವಾಗಿದೆ. ಇದುವರೆಗೆ ಜಾಗ ದೊರಕಿಸಲು ಸಫಲವಾಗಿಲ್ಲ. ಆದ್ದರಿಂದ ಹೆಲಿಪ್ಯಾಡ್‌ ಜಾಗಕ್ಕೆ ಕನಿಷ್ಠ ಒಂದು ಬೇಲಿ ಹಾಕಿ ರಕ್ಷಿಸುವ ಕೆಲಸವೂ ನಡೆದಿಲ್ಲ. ಕೆಲ ವರ್ಷಗಳ ಹಿಂದೆ ಹೆಲಿಪ್ಯಾಡ್‌ನ‌ ಜಾಗ ಎಂಬ ನಾಮಫಲಕವಾದರೂ ಇತ್ತು. ಈಗ ಇಲ್ಲ.

ಹೀಗಿದೆ ಹೆಲಿಪ್ಯಾಡ್‌
ಪುತ್ತೂರು- ಸುಳ್ಯ ರಾಜ್ಯ ಹೆದ್ದಾರಿಯ ಮುಕ್ರಂಪಾಡಿಯಿಂದ ಕೇವಲ ಒಂದು ಕಿ.ಮೀ. ದೂರದಲ್ಲಿದೆ ಹೆಲಿಪ್ಯಾಡ್‌. ಜಾಗ
ತಮ್ಮ ಸ್ವಾಧೀನಕ್ಕೆ ಸಿಗದ ಕಾರಣ, ಡಿಸಿಆರ್‌ ಬೇಲಿ ಹಾಕಿಲ್ಲ. ಬೇರೆ ಜಾಗ ಇನ್ನೂ ನೀಡದ ಕಾರಣ ಕಂದಾಯ ಇಲಾಖೆ
ಅಭಿವೃದ್ಧಿಯನ್ನೂ ನಡೆಸಿಲ್ಲ. ಆದ್ದರಿಂದ ಕಾರು ಕಲಿಕೆಗೆ, ಆಟದ ಮೈದಾನವಾಗಿ, ವೇದಿಕೆಯಾಗಿ ಅದು ಬಳಕೆಯಾಗುತ್ತಿದೆ.

Advertisement

ಮಿನಿ ಏರ್‌ಪೋರ್ಟ್‌
ಇರುವ ಹೆಲಿಪ್ಯಾಡನ್ನು ಅಭಿವೃದ್ಧಿಪಡಿಸಲು ಇದುವರೆಗೆ ಸಾಧ್ಯವಾಗಿಲ್ಲ. ಹೀಗಿರುವಾಗ ಹೊಸ ಮಿನಿ ಏರ್‌ಪೋರ್ಟ್‌ಗೆ ಜಾಗ ಹುಡುಕುವ ಕೆಲಸಗಳು ನಡೆಯುತ್ತಿವೆ. ಪುತ್ತೂರಿಗೆ ಮಿನಿ ಏರ್‌ಪೋರ್ಟ್‌ ನೀಡುವಂತೆ ಶಾಸಕಿ ಶಕುಂತಳಾ ಶೆಟ್ಟಿ, ಪುತೂರಿಗೆ ಬಂದಿದ್ದ ಮುಖ್ಯಮಂತ್ರಿಗಳಿಗೆ ಮನವಿ ಮಾಡಿದ್ದರು. ಆದರೆ ಪುತ್ತೂರು ಪೇಟೆಯಲ್ಲೇ ಇರುವ ಹೆಲಿಪ್ಯಾಡ್‌ನ‌ಲ್ಲಿ ಮುಖ್ಯಮಂತ್ರಿಗಳು ಇಳಿಯಲು ವ್ಯವಸ್ಥೆ ಮಾಡಲಾಗಿಲ್ಲ. ಮುಖ್ಯಮಂತ್ರಿಯನ್ನು ಸ್ವಾಗತಿಸುವ ಭರದಲ್ಲಿ
ಎಲ್ಲರೂ ಈ ವಿಷಯವನ್ನು ಮರೆತೇ ಬಿಟ್ಟರು.

ಬದಲಿ ಜಾಗ
ಇತ್ತೀಚಿನ ಬೆಳವಣಿಗೆಗಳನ್ನು ಗಮನಿಸಿದಾಗ ಮೊಟ್ಟೆತ್ತಡ್ಕ ಹೆಲಿಪ್ಯಾಡ್‌ನ್ನು ಅಧಿಕಾರಿಗಳು, ಜನಪ್ರತಿನಿಧಿಗಳು ಮರೆತು
ಬಿಟ್ಟಂತಿದೆ. ಅಭಿವೃದ್ಧಿ ಕಾರ್ಯ ಹಾಗಿರಲಿ, ಮುಖ್ಯಮಂತ್ರಿಗಳನ್ನು ಹೆಲಿಕಾಪ್ಟರ್‌ನಿಂದ ಇಳಿಸಿದ್ದು ಫಿಲೋಮಿನಾ ಕಾಲೇಜಿನ ಆಟದ ಮೈದಾನದಲ್ಲಿ. ಇದಕ್ಕೆ ಪೂರಕವಾಗಿ, ಅಂತಾರಾಷ್ಟ್ರೀಯ ಮೈದಾನಕ್ಕೆ ಮೀಸಲಿಟ್ಟ
ಜಾಗದಲ್ಲಿ ಮಿನಿ ಏರ್‌ಪೋರ್ಟ್‌ಗಾಗಿ ಜಾಗ ಹುಡುಕುವ ಕೆಲಸ ನಡೆಯುತ್ತಿದೆ. ಆದರೆ ಈ ಬಗ್ಗೆ ಯಾವುದೇ ಅಧಿಕೃತ ಮಾಹಿತಿ ಅಧಿಕಾರಿ ವಲಯದಿಂದ ಸಿಗುತ್ತಿಲ್ಲ.

ಹೆಲಿಪ್ಯಾಡ್‌ ಏಕೆ ಬೇಕು?
ಐದು ತಾಲೂಕುಗಳನ್ನು ಒಂದುಗೂಡಿಸಿ ಪುತ್ತೂರನ್ನು ಜಿಲ್ಲಾ ಕೇಂದ್ರವಾಗಿ ಘೋಷಣೆ ಮಾಡಲು ಒತ್ತಾಯ ಕೇಳಿಬರುತ್ತಿದೆ. ಉಪವಿಭಾಗ ಕೇಂದ್ರವಾಗಿಯೇ ವರ್ಷಕ್ಕೆ 3-4 ಬಾರಿ ಮುಖ್ಯಮಂತ್ರಿಯಾದಿಯಾಗಿ ಗಣ್ಯರು ಹೆಲಿಕಾಪ್ಟರ್‌ನಲ್ಲಿ ಬರುತ್ತಿದ್ದಾರೆ. ಜಿಲ್ಲಾ ಕೇಂದ್ರವಾದರೆ ಇದರ ಸಂಖ್ಯೆ ಹೆಚ್ಚಬಹುದು. ಪ್ರತಿ ಬಾರಿಯೂ ಆಟದ ಮೈದಾನವನ್ನು ಬಳಸಿಕೊಳ್ಳುವುದು ಅಭಿವೃದ್ಧಿ ದೃಷ್ಟಿಯಿಂದ ಉತ್ತಮ ಬೆಳವಣಿಗೆಯಲ್ಲ. ಹೀಗಾಗಿ, ಹೆಲಿಪ್ಯಾಡ್‌ ನಿರ್ಮಿಸಿದರೆ ಅನುಕೂಲ ಎಂಬ ಅಭಿಪ್ರಾಯವ್ಯಕ್ತವಾಗಿದೆ.

ಮನವಿ ನೀಡಲಾಗಿದೆ
ಹೆಲಿಪ್ಯಾಡ್‌ನ‌ ಜಾಗವನ್ನು ಮೊದಲು ಡಿಸಿಆರ್‌ಗೆ ಮಂಜೂರು ಮಾಡಲಾಗಿತ್ತು. ಬಳಿಕದ ಬೆಳವಣಿಗೆಯಲ್ಲಿ ಜಾಗವನ್ನು ಪುನಃ ಜಿಲ್ಲಾಧಿಕಾರಿ ಹಿಂದೆ ಕೇಳಿದರು. ಇದಕ್ಕೆ ನಮ್ಮದೇನೂ ಅಭ್ಯಂತರವಿಲ್ಲ. ಆದರೆ ನಮಗೆ ಪರ್ಯಾಯ ಜಾಗ ನೀಡಬೇಕು. ಬೇಕಿದ್ದರೆ ಈಗ ಮಂಜೂರಾಗಿರುವ ಜಾಗವನ್ನು ನಮಗೇ ನೀಡಲಿ. ಹೆಲಿಪ್ಯಾಡನ್ನು ನಾವೇ ನಿರ್ವಹಣೆ ಮಾಡುತ್ತೇವೆ. ಅಗತ್ಯಬಿದ್ದಾಗ ಬಳಕೆಗೆ ನೀಡಲಾಗುವುದು. ಈ ಬಗ್ಗೆ ಹಿಂದಿನ ಡಿಸಿಗೆ ಮನವಿ ನೀಡಲಾಗಿದೆ. ಇನ್ನೊಮ್ಮೆ ಈಗಿನ ಡಿಸಿ ಅವರ ಗಮನ ಸೆಳೆಯಲಾಗುವುದು.
ಡಾ| ಎಂ.ಜಿ. ನಾಯಕ್‌,
 ಪ್ರಭಾರ ನಿರ್ದೇಶಕ, ಗೇರು ಸಂಶೋಧನ
 ನಿರ್ದೇಶನಾಲಯ, ಮೊಟ್ಟೆತ್ತಡ್ಕ

ಗಣೇಶ್‌ ಎನ್‌. ಕಲ್ಲರ್ಪೆ 

Advertisement

Udayavani is now on Telegram. Click here to join our channel and stay updated with the latest news.

Next