Advertisement

ಶಾಲಾ ವಿದ್ಯಾರ್ಥಿಗಳಿಗೆ ಅರಣ್ಯ ಪಾಠ

03:06 PM Jan 26, 2020 | Suhan S |

ಗದಗ: ಸರಕಾರಿ ಶಾಲಾ ಮಕ್ಕಳಲ್ಲಿ ಅರಣ್ಯ ಮತ್ತು ಹಸಿರಿನ ಕುರಿತು ಜಾಗೃತಿ ಮೂಡಿಸುವ ನಿಟ್ಟಿನಲ್ಲಿ ಜಿಲ್ಲಾ ಉಪ ಅರಣ್ಯ ಅಧಿಕಾರಿಗಳು ಮಹತ್ವದ ಹೆಜ್ಜೆ ಇರಿಸಿದ್ದಾರೆ. ಚಿಣ್ಣರ ವನ ದರ್ಶನ ಕಾರ್ಯಕ್ರಮದಡಿ ಜಿಲ್ಲೆಯ ಸುಮಾರು 1,200 ವಿದ್ಯಾರ್ಥಿಗಳನ್ನು ಪಶ್ಚಿಮಘಟ್ಟದ ಅರಣ್ಯಕ್ಕೆ ಪ್ರವಾಸಕ್ಕೆ ಕರೆದೊಯ್ಯುವ ಮೂಲಕ ಶಾಲೆ ಹಾಗೂ ಗ್ರಾಮ ಮಟ್ಟದ ಹಸಿರೀಕರಣದ ರಾಯಭಾರಿಯನ್ನಾಗಿಸುವ ಪ್ರಯತ್ನ ಆರಂಭಿಸಿದ್ದಾರೆ.

Advertisement

ಪ್ರೌಢಶಾಲೆಯ 9ನೇ ತಗರತಿ ವಿದ್ಯಾರ್ಥಿಗಳಲ್ಲಿ ಪರಿಸರ ಜಾಗೃತಿ ಮೂಡಿಸುವುದು, ಅರಣ್ಯ, ವನ್ಯಜೀವಿಗಳ ಸಂರಕ್ಷಣೆ ಕುರಿತು ಜಾಗೃತಗೊಳಿಸಿ ಅವರನ್ನು ನಿಸರ್ಗ ಸ್ನೇಹಿ ನಾಗರಿಕರನ್ನಾಗಿಸುವುದು ಚಿಣ್ಣರ ವನದರ್ಶನದ ಮುಖ್ಯ ಉದ್ದೇಶವಾಗಿದೆ. ಅದಕ್ಕಾಗಿ 2015-16ನೇ ಸಾಲಿನಲ್ಲಿ ಈ ಯೋಜನೆ ಆರಂಭಿಸಿತ್ತಾದರೂ ನಾನಾ ಕಾರಣಗಳಿಂದ ಜಿಲ್ಲೆಯ ನಾಲ್ಕಾರು ವಿದ್ಯಾರ್ಥಿಗಳಿಗೆ ಇದು ಸೀಮಿತವಾಗಿತ್ತು. ಆದರೆ, ಈಗ ಜಿಲ್ಲಾ ಉಸ್ತುವಾರಿ ಸಚಿವ ಸಿ.ಸಿ. ಪಾಟೀಲ ಅವರೇ ಅರಣ್ಯ ಮತ್ತು ಪರಿಸರ ಸಚಿವರಾಗಿರುವುದು  ಹಾಗೂ ಜಿಲ್ಲೆಯ ನೂತನ ಉಪ ಅರಣ್ಯ ಸಂರಕ್ಷಣಾಧಿಕಾರಿ ಸೂರ್ಯಸೇನ್‌ ಅವರ ಕಾಳಜಿಯಿಂದಾಗಿ ಜಿಲ್ಲೆಯ ಚಿಣ್ಣರ ವನದರ್ಶನಕ್ಕೆ ಸರಕಾರ ಹೆಚ್ಚಿನ ಒತ್ತು ನೀಡಿದೆ. ಪರಿಣಾಮ ಜನವರಿ 1ರಿಂದ ಈವರೆಗೆ ಜಿಲ್ಲೆಯ ಒಟ್ಟು 1200 ವಿದ್ಯಾರ್ಥಿಗಳು ಇದರ ಲಾಭ ಪಡೆದುಕೊಂಡಿದ್ದಾರೆ ಎಂದು ಹೇಳಲಾಗಿದೆ.

ಮಕ್ಕಳಿಗೆ ಎರಡು ದಿನಗಳ ಪ್ರವಾಸ: ಚಿಣ್ಣರ ವನ ದರ್ಶನ ಎರಡು ದಿನಗಳ ಪ್ರವಾಸವಾಗಿದ್ದು, ಮೊದಲ ದಿನ ಜಿಲ್ಲೆಯ ಮಾಗಡಿ ಪಕ್ಷಿಧಾಮ, ಬಿಂಕದಕಟ್ಟಿ ಸಣ್ಣ ಮೃಗಾಲಯ, ಸಾಲು ಮರದ ತಿಮ್ಮಕ್ಕ ಸಸ್ಯೋದ್ಯಾನ, ಅರಣ್ಯ ಇಲಾಖೆ ಕಚೇರಿ, ನರ್ಸರಿ ಹಾಗೂ ಟಿಂಬರ್‌ ಡಿಪೋಗಳಿಗೆ ಕರೆದೊಯ್ಯಲಾಗುತ್ತದೆ. ಬಳಿಕ ಅಂದು ರಾತ್ರಿ ಉತ್ತರ ಕನ್ನಡ ಜಿಲ್ಲೆಯ ಕಾಳಿ ಹುಲಿ ಸಂರಕ್ಷಿತ ಪ್ರದೇಶದಕ್ಕೆ ಕರೆದೊಯ್ಯಲಾಗುತ್ತದೆ. ರಾತ್ರಿ ಅಲ್ಲಿನ ನೇಚರ್‌ ಕ್ಯಾಂಪ್‌ನಲ್ಲಿ ವಾಸ್ತವ್ಯ ಕಲ್ಪಿಸಲಾಗುತ್ತದೆ. ರಾತ್ರಿ ಊಟದ ಬಳಿಕ ವನ್ಯ ಜೀವಿಗಳು ಹಾಗೂ ಸರಿಸೃಪಗಳ ಬಗ್ಗೆ ಸಾಕ್ಷ್ಯ ಚಿತ್ರಗಳನ್ನು ಪ್ರದರ್ಶಿಸಲಾಗುತ್ತದೆ. ಮರು ದಿನ ಬೆಳಗ್ಗೆ ಟ್ರಕ್ಕಿಂಗ್‌, ವಿಷಯ ತಜ್ಞರಿಂದ ವನ್ಯ ಜೀವಿಗಳ ಜೀವನ ಚಕ್ರ, ವಿಷಪೂರಿತ ಹಾವುಗಳು ಹಾಗೂ ವಿಷ ಇಲ್ಲದ ಹಾವುಗಳು, ಅಳಿವಿನಂಚಿನಲ್ಲಿರುವ ವನ್ಯಜೀವಿಗಳ ಕುರಿತು ಉಪನ್ಯಾಸ ಹಾಗೂ ಸಂವಾದ ನಡೆಸಲಾಗುತ್ತದೆ.

ಆ ನಂತರ ಎರಡು ದಿನಗಳ ಅರಣ್ಯ ಪ್ರವಾಸಕ್ಕೆ ಸಂಬಂಧಿಸಿ ಪ್ರಬಂಧ, ಘೋಷವಾಕ್ಯಗಳ ರಚನೆ ಕುರಿತು ವಿದ್ಯಾರ್ಥಿಗಳಿಗೆ ಸ್ಪರ್ಧೆ ಏರ್ಪಡಿಸಲಾಗುತ್ತದೆ. ಸಂಜೆ ವೇಳೆಗೆ ಅಲ್ಲಿಂದ ಸ್ವಗ್ರಾಮದತ್ತ ಪ್ರಯಾಣ ಆರಂಭಿಸಲಾಗುತ್ತದೆ ಎಂದು ಅರಣ್ಯ ಅಧಿಕಾರಿಗಳು ಮಾಹಿತಿ ನೀಡಿದರು.

ವಿದ್ಯಾರ್ಥಿಗಳ ಆಯ್ಕೆ ಹೇಗೆ?: ಸಾರ್ವಜನಿಕ ಶಿಕ್ಷಣ ಇಲಾಖೆ ಕ್ಷೇತ್ರ ಶಿಕ್ಷಣಾಧಿಕಾರಿಗಳ ಮೂಲಕ ವಿವಿಧ ಶಾಲೆಗಳಿಂದ ಒಟ್ಟು 50 ವಿದ್ಯಾರ್ಥಿಗಳನ್ನು ಆಯ್ಕೆ ಮಾಡಿ, ಚಿಣ್ಣರ ವನದರ್ಶನಕ್ಕೆ ಕರೆದೊಯ್ಯಲಾಗುತ್ತಿದೆ. ಅದರಂತೆ ಈ ವರೆಗೆ ನರಗುಂದ,  ರೋಣ ತಾಲೂಕಿನಿಂದ 3, ಗದಗ 10, ಶಿರಹಟ್ಟಿ 8, ಮುಂಡರಗಿಯಿಂದ 6 ಸೇರಿದಂತೆ ಒಟ್ಟು 24 ಕ್ಯಾಂಪ್‌ ಮಾಡಲಾಗಿದೆ. ಪ್ರತೀ ಕ್ಯಾಂಪ್‌ಗೆ 50 ವಿದ್ಯಾರ್ಥಿಗಳೊಂದಿಗೆ ಇಬ್ಬರು ಶಿಕ್ಷಕರು, ಓರ್ವ ಅರಣ್ಯ ಅಧಿಕಾರಿಗಳ ಪ್ರವಾಸ ಕೈಗೊಳ್ಳುತ್ತಾರೆ.

Advertisement

9ನೇ ತರಗತಿ ವಿದ್ಯಾರ್ಥಿಗಳಲ್ಲಿ ಪ್ರಬುದ್ಧತೆ ಮೂಡಿರುತ್ತದೆ. ಜೊತೆಗೆ ಪರಿಸರ ವಿಜ್ಞಾನ, ಜೀವ ವಿಜ್ಞಾನದ ಅಧ್ಯಯನಕ್ಕೆ ವನ ದರ್ಶನ ಪೂರಕವಾಗಿರಲಿದೆ. ಜೊತೆಗೆ ಗ್ರಾಮ ಹಾಗೂ ಶಾಲೆಯಲ್ಲಿ ಹಸಿರು ರಾಯಭಾರಿಗಳಂತೆ ಕಾರ್ಯನಿರ್ವಹಿಸಬೇಕು. ಇತರೆ ವಿದ್ಯಾರ್ಥಿಗಳು ಹಾಗೂ ಮನೆಯ ಸುತ್ತಮುತ್ತಲಿನ ಪರಿಸರದಲ್ಲಿ ಹಸಿರು ಗಿಡಗಳನ್ನು ಬೆಳೆಸಲು ಜನರನ್ನು ಪ್ರೇರೇಪಿಸುವಂತೆ ಮಾಡುವುದು ಇದರ ಮೂಲ ಆಶಯ ಎನ್ನುತ್ತಾರೆ ಅರಣ್ಯ ಇಲಾಖೆ ಅಧಿಕಾರಿಗಳು

ಚಿಣ್ಣರ ವನ ದರ್ಶನ ಈ ಹಿಂದಿಗಿಂತ ಈ ಬಾರಿ ಪರಿಣಾಮಕಾರಿಯಾಗಿ ಅನುಷ್ಠಾನಕ್ಕೆ ಬಂದಿದೆ. 50 ವಿದ್ಯಾರ್ಥಿಗಳ ಒಂದು ಕ್ಯಾಂಪ್‌ನಂತೆ ಈವರೆಗೆ 24 ಕ್ಯಾಂಪ್‌ ಗಳು ನಡೆದಿದ್ದು, 1,200 ವಿದ್ಯಾರ್ಥಿಗಳಿಗೆ ಇದರ ಲಾಭವಾಗಿದೆ. ಈ ಮೂಲಕ ಮಕ್ಕಳಲ್ಲಿ ಪರಿಸರ ಸಂರಕ್ಷಣೆ ಕುರಿತು ಆಸಕ್ತಿ ಬೆಳೆಸಿ ಪರಿಸರ ಸ್ನೇಹಿ ವ್ಯಕ್ತಿಯನ್ನಾಗಿ ರೂಪಿಸುವುದು ಇದರ ಉದ್ದೇಶವಾಗಿದೆ. ಪ್ರವಾಸದ ಎಲ್ಲ ಖರ್ಚು ವೆಚ್ಚವನ್ನು ಇಲಾಖೆ ಭರಿಸುತ್ತದೆ. ಕಿರಣ್‌ ಅಂಗಡಿ, ಗದಗ ಆರ್‌ಎಫ್‌

 

-ವೀರೇಂದ್ರ ನಾಗಲದಿನ್ನಿ

Advertisement

Udayavani is now on Telegram. Click here to join our channel and stay updated with the latest news.

Next