Advertisement

ಚಾರ್ಮಾಡಿ ಘಾಟಿಯಲ್ಲಿ ಕಾಳ್ಗಿಚ್ಚು ,ಅರಣ್ಯ ನಾಶ

01:21 AM Dec 29, 2022 | Team Udayavani |

ಬೆಳ್ತಂಗಡಿ: ಚಾರ್ಮಾಡಿ ಘಾಟಿಯ ಬಾಳೂರು ಮೀಸಲು ಅರಣ್ಯದ ಸೋಮನ ಕಾಡು ಪ್ರದೇಶದಲ್ಲಿ ಮಂಗಳವಾರ ಸಂಜೆ ಕಿಡಿಗೇಡಿಗಳ ಕೃತ್ಯದಿಂದ ಬೆಂಕಿ ಹತ್ತಿಕೊಂಡು ಹತ್ತಾರು ಎಕ್ರೆ ಅರಣ್ಯ ಸುಟ್ಟು ಕರಕಲಾಗಿದೆ.

Advertisement

ಘಾಟಿ ಪರಿಸರದಲ್ಲಿ ಧೂಮಪಾನ, ಅಡುಗೆ ಅಥವಾ ಶಿಕಾರಿ ಮಾಡುವವರಿಂದ ಬೆಂಕಿ ಉಂಟಾಗಿರುವ ಶಂಕೆ ವ್ಯಕ್ತವಾಗಿದೆ.

ಮಂಗಳೂರು-ವಿಲ್ಲುಪುರಂ ರಾಷ್ಟ್ರೀಯ ಹೆದ್ದಾರಿಯಲ್ಲಿ ಸಂಚರಿಸುವ ಪ್ರವಾಸಿಗರು ಕಾಳ್ಗಿಚ್ಚಿಗೆ ಕಾರಣವಾಗಿರುವ ಸಾಧ್ಯತೆ ಇದೆ.

ವಿಷಯ ತಿಳಿಯುತ್ತಿದ್ದಂತೆ ಚಿಕ್ಕಮಗಳೂರು ವಿಭಾಗದ ಅರಣ್ಯ ಇಲಾಖೆಯ ಸಿಬಂದಿ ಸ್ಥಳಕ್ಕೆ ಧಾವಿಸಿ ಬೆಂಕಿಯನ್ನು ಹತೋಟಿಗೆ ತರಲು ಹರಸಾಹಸ ಪಟ್ಟರು. ಅಷ್ಟರಲ್ಲಿ ಹತ್ತಾರು ಎಕ್ರೆ ಅರಣ್ಯ ಬೆಂಕಿಗೆ ಆಹುತಿ ಯಾಗಿತ್ತು.

ಅರಣ್ಯ ಇಲಾಖೆ ವತಿಯಿಂದ ನಡೆಯುತ್ತಿರುವ ಬೆಂಕಿ ರೇಖೆ ನಿರ್ಮಾಣದ ವೇಳೆ ಅಚಾತುರ್ಯ
ದಿಂದ ಕಾಳ್ಗಿಚ್ಚು ಉಂಟಾಗಿದೆ ಎಂಬ ವದಂತಿ ಹಬ್ಬಿತ್ತು. ಆದರೆ ಇಲಾಖೆ ವತಿಯಿಂದ ಈ ಸ್ಥಳಗಳಲ್ಲಿ ಬೆಂಕಿ ರೇಖೆ ನಿರ್ಮಾಣ ಕಾರ್ಯ ನಡೆಯುತ್ತಿಲ್ಲ ಹಾಗೂ ಇದು ಬೆಳ್ತಂಗಡಿ ಕಡೆಯ ವನ್ಯಜೀವಿ ವಿಭಾಗದ ಅರಣ್ಯ ವ್ಯಾಪ್ತಿಯಿಂದ ಹಬ್ಬಿರುವ ಸಾಧ್ಯತೆ ಇದೆ ಎಂದು ಚಿಕ್ಕಮಗಳೂರು ವಿಭಾಗದ ಅರಣ್ಯ ಇಲಾಖೆಯ ಹಿರಿಯ ಅಧಿಕಾರಿಗಳು ಶಂಕೆ ವ್ಯಕ್ತಪಡಿಸಿದ್ದಾರೆ.

Advertisement

ಚಾರ್ಮಾಡಿ ಘಾಟಿಯ ರಸ್ತೆ ಹಾಗೂ ಅರಣ್ಯ ಪ್ರದೇಶ ದ.ಕ. ಹಾಗೂ ಚಿಕ್ಕಮಗಳೂರು ಜಿಲ್ಲೆ ಗಳ ವ್ಯಾಪ್ತಿಯಲ್ಲಿದೆ. ಈ ಬಾರಿಯ ಕಾಳ್ಗಿಚ್ಚಿನಿಂದ ಚಿಕ್ಕಮಗಳೂರು ವಿಭಾಗದ ಅರಣ್ಯದಲ್ಲಿರುವ ಅಪಾರ ಪ್ರಮಾಣದ ಸಸ್ಯ ಸಂಕುಲ ನಾಶವಾಗಿರುವ ಸಾಧ್ಯತೆ ಇದೆ.

ಚಾರ್ಮಾಡಿ ಘಾಟಿ ಪರಿಸರದಲ್ಲಿ ಉಂಟಾಗಿರುವ ಕಾಳ್ಗಿಚ್ಚನ್ನು ಹತೋಟಿಗೆ ತರಲಾಗಿದೆ. ಸ್ಥಳೀಯರು ಹಾಗೂ ಇಲಾಖೆ ಸಿಬಂದಿ ತತ್‌ಕ್ಷಣ ಕಾರ್ಯಪ್ರವೃತ್ತರಾಗಿ ಬೆಂಕಿ ನಂದಿಸಿದ್ದರಿಂದ ಹೆಚ್ಚಿನ
ಹಾನಿ ತಪ್ಪಿದೆ.
– ಕ್ರಾಂತಿ, ಡಿಎಫ್ಒ, ಚಿಕ್ಕಮಗಳೂರು ವಿಭಾಗ

ಬೆಳ್ತಂಗಡಿ ವನ್ಯಜೀವಿ ವಿಭಾಗದ ಅರಣ್ಯದಿಂದ ಬೆಂಕಿ ಉಂಟಾಗಿರುವ ಸಾಧ್ಯತೆ ಇಲ್ಲ. ಚಾರ್ಮಾಡಿ ಘಾಟಿ ಭಾಗದಲ್ಲಿ ಕಾಳ್ಗಿಚ್ಚು ಉಂಟಾಗದಂತೆ ಮುಂಜಾಗ್ರತ ಕ್ರಮವಾಗಿ ಮುಂದಿನ ಕೆಲವೇ ದಿನಗಳಲ್ಲಿ ಬೆಂಕಿ ರೇಖೆಯ ನಿರ್ಮಾಣ ಕೆಲಸ ಆರಂಭಿಸಲಾಗುತ್ತದೆ.
– ಸ್ವಾತಿ, ಆರ್‌ಎಫ್ಒ, ವನ್ಯಜೀವಿ ವಿಭಾಗ, ಬೆಳ್ತಂಗಡಿ

Advertisement

Udayavani is now on Telegram. Click here to join our channel and stay updated with the latest news.

Next