ಜೈಪುರ: ಪ್ರಿಯಕರನನ್ನು ಮದುವೆಯಾದ ಮಗಳನ್ನು ಬಲವಂತವಾಗಿ ಗಂಡನಿಂದ ದೂರವಿಟ್ಟು, ಆಕೆಗೆ ಮತ್ತೊಂದು ಮದುವೆ ಮಾಡಿಸಿರುವ ಘಟನೆ ರಾಜಸ್ಥಾನದ ಜೈಪುರದಲ್ಲಿ ನಡೆದಿದೆ.
ತರುಣಾ ಶರ್ಮಾ ಎಂಬಾಕೆ ತನ್ನ ಸಹಪಾಠಿಯಾಗಿದ್ದ ಸುರೇಂದ್ರ ಸಂಖ್ಲಾಎಂಬವರನ್ನು ವಿವಾಹವಾಗಿದ್ದಾರೆ. ಬಾಲ್ಯದಿಂದಲೇ ಒಟ್ಟಾಗಿ ಬೆಳೆದ ಇಬ್ಬರು, ಪರಸ್ಪರ ಪ್ರೀತಿಸಿ ಮದುವೆಯಾಗಿದ್ದಾರೆ. ಆದರೆ ಹುಡುಗ ತನ್ನ ಸಮುದಾಯಕ್ಕೆ ಸೇರದ ಕಾರಣ ಈ ಮದುವೆ ತರುಣಾಳ ತಂದೆಗೆ ಇಷ್ಟವಿರಲಿಲ್ಲ. ಮದುವೆಯಾದ 10 ದಿನಗಳ ಬಳಿಕ ಯುವತಿ ಮನೆಯವರು ಇಬ್ಬರನ್ನು ಹುಡುಕಿಕೊಂಡು ಬಂದಿದ್ದಾರೆ. ಆ ಬಳಿಕ ಬಲೇಸರ್ ಪೊಲೀಸ್ ಠಾಣೆಗೆ ಕರೆತಂದು ಗಂಡನಿಂದ ದೂರವಾಗುವಂತೆ ಮಾಡಿದ್ದಾರೆ.
ತರುಣಾ ಅವರನ್ನು ಮನೆಯವರು ರಾಜಸ್ಥಾನ ಹಾಗೂ ಗುಜರಾತ್ ನಲ್ಲಿ ಕಳೆದ 5 ತಿಂಗಳಿನಿಂದ ಸೆರೆಯಲ್ಲಿ ಇಟ್ಟ ಹಾಗೆ ಇಟ್ಟಿದ್ದಾರೆ. ಫೋನ್ ಬಳಕೆಯಿಲ್ಲದೆ, ಯಾರ ಜೊತೆ ಮಾತುಗಳನ್ನು ಆಡದಂತೆ ಮಾಡಿಟ್ಟಿದ್ದಾರೆ. ಇದೇ ವೇಳೆ ಯುವತಿಯ ತಂದೆ ಆಕೆಗೆ ಎರಡನೇ ಮದುವೆ ಮಾಡಲು ಹೊರಟಿದ್ದಾರೆ. ಮೇ. 1 ರಂದು ಜಿತೇಂದ್ರ ಜೋಶಿ ಎಂಬಾತನೊಂದಿಗೆ ಬಲವಂತವಾಗಿ ಮದುವೆ ಮಾಡಿಸಿದ್ದಾರೆ. ಮದುವೆಯಾದ ಬಳಿಕ ತನ್ನ ಎರಡನೇ ಗಂಡನಿಗೆ ಮೊದಲ ಗಂಡನ ಬಗ್ಗೆ ಹೇಳಿ ಆತನ ಕೈಗೆ ರಾಖಿಯನ್ನು ಕಟ್ಟಿದ್ದಾಳೆ. ಮೊದಲ ಗಂಡನ ಬಳಿ ಹೋಗಲು ಬಿಡುವಂತೆ ಹೇಳಿದ್ದಾಳೆ. ಇತ್ತೀಚೆಗೆ ತರುಣಾ ಆಸ್ಪತ್ರೆಗೆ ಬಂದಾಗ ಅಲ್ಲಿ ಬೇರೊಬ್ಬರ ಪೋನ್ ಬಳಸಿ ಮೊದಲ ಗಂಡನಿಗೆ ಕರೆ ಮಾಡಿದ್ದಾಳೆ. ಅದೇ ವೇಳೆ ಟ್ವಿಟರ್ ನಲ್ಲಿ ತನ್ನ ಕಷ್ಟದ ಬಗ್ಗೆ ಬರೆದುಕೊಂಡು ಪೋಸ್ಟ್ ಮಾಡಿದ್ದಾಳೆ. ಈ ಪೋಸ್ಟ್ ವೈರಲ್ ಆಗಿ ಎಲ್ಲೆಡೆ ಶೇರ್ ಆಗಿತ್ತು. ಕೆಲವೊಂದು ಪೋಸ್ಟ್ ನಲ್ಲಿ ತರುಣಾ ಬಾಲಿವುಡ್ ನಟ ಸೋನು ಸೂದ್ ಅವರನ್ನು ಟ್ಯಾಗ್ ಮಾಡಿದ್ದರು ಎಂದು ವರದಿ ತಿಳಿಸಿದೆ.
ಇದನ್ನೂ ಓದಿ: Strong winds: ಚಲಿಸುತ್ತಿದ್ದ ಬೈಕ್ ಮೇಲೆ ಬಿದ್ದ ಬೃಹತ್ ಮರ: ಪತ್ನಿ ಸಾವು, ಪತಿಗೆ ಗಾಯ
ಈ ಬಗ್ಗೆ ಮಾತನಾಡುವ ತರುಣಾಳ ಎರಡನೇ ಪತಿ ಜೋಶಿ, ಬೇರೆ ಬೇರೆ ರೀತಿಯಲ್ಲಿ ತನ್ನನ್ನು ಬ್ಲಾಕ್ಮೇಲ್ ಮಾಡಲು ಪತ್ನಿ ಪ್ರಯತ್ನಿಸುತ್ತಿದ್ದಳು. ಆಕೆಯನ್ನು ತಡೆಯಲು ರಾಖಿ ಕಟ್ಟಿದ್ದೇನೆ ಎಂದಿದ್ದಾರೆ. ನಾನು ಅವಳನ್ನು ಆಕೆ ಹೇಳುವಂತೆ ಸಹೋದರಿ ಎಂದು ಕರೆಯಲಿಲ್ಲ. ಒಂದು ವೇಳೆ ಅವಳೊಂದಿಗೆ ಮದುವೆಯಾಗದಿದ್ದರೆ ಹಾಗೆ ಕರೆಯಬಹುದಿತ್ತು.ನಾನು ಅವಳನ್ನು ಬಲವಂತವಾಗಿ ಮದುವೆಯಾಗುತ್ತಿರಲಿಲ್ಲ. ನನಗೆ ಚೌಕಟ್ಟು ಹಾಕಲಾಗುತ್ತಿದೆ. ಆಕೆಯ ಕುಟುಂಬದ ಸದಸ್ಯರು ನನ್ನನ್ನು ನೋಡಲು ಬಂದಿದ್ದರು. ನಾನು ಹೋಗಲಿಲ್ಲ ಎಂದು ಹೇಳಿದ್ದಾರೆ.
ತರುಣಾ ನನ್ನ ಬಾಲ್ಯದ ಪ್ರೀತಿ. ಈ ಬಗ್ಗೆ ನಾನು ಹೆಚ್ಚೇನು ಹೇಳಲ್ಲ. ಈ ಪ್ರಕರಣ ಸಖಿ ಕೇಂದ್ರದಲ್ಲಿದೆ. ನನ್ನ ಪತ್ನಿಯನ್ನು ರಕ್ಷಣೆ ಮಾಡಲು ಪೊಲೀಸರು ಸಹಾಯ ಮಾಡಿದ್ದಾರೆ ಎಂದು ತರುಣಾಳ ಮೊದಲ ಪತಿ ಸುರೇಂದ್ರ ಹೇಳುತ್ತಾರೆ.
ಈ ಮೊದಲು ತರುಣಾಳಿಗೆ ಎಂಗೇಜ್ ಮೆಂಟ್ ಆಗಿತ್ತು. ಆದರೆ ಆ ಯುವಕ ಕ್ರಿಮಿನಲ್ ಕೃತ್ಯದಲ್ಲಿ ಭಾಗಿಯಾದ ಕಾರಣ ಆ ಸಂಬಂಧ ಮುರಿದಿತ್ತು ಎಂದು ವರದ ತಿಳಿಸಿದೆ.
ತರುಣಾಳನ್ನು ಛತ್ತೀಸ್ಗಢದ ಕಂಕೇರ್ನಲ್ಲಿರುವ ಸಖಿ ಕೇಂದ್ರಕ್ಕೆ ಹಸ್ತಾಂತರಿಸಲಾಗಿದೆ ಎಂದು ಅಂತಗಢ ಪೊಲೀಸ್ ಠಾಣೆಯ ಉಸ್ತುವಾರಿ ರೋಷನ್ ಕೌಶಿಕ್ ಹೇಳಿದ್ದಾರೆ.