Advertisement

Safety: ಸುರಕ್ಷ ಕ್ರಮಗಳನ್ನು ಪಾಲಿಸಿ, ಅಮಾಯಕರ ಜೀವ ಉಳಿಸಿ

12:12 AM Oct 11, 2023 | Team Udayavani |

ದೀಪಾವಳಿ ಹಬ್ಬದ ಸಂಭ್ರಮಕ್ಕೆ ತಿಂಗಳಷ್ಟೇ ಬಾಕಿ ಉಳಿದಿದೆ. ದೀಪಾವಳಿ ಸಮೀಪಿಸಿತೆಂದರೆ ಸಾಕು ದೇಶದ ಅಲ್ಲಲ್ಲಿ ಪಟಾಕಿ ದುರಂತಗಳು ಸಂಭವಿಸಿ ಪ್ರಾಣ ಹಾನಿ, ಆಸ್ತಿಪಾಸ್ತಿ ನಷ್ಟ ಸಂಭವಿಸುವುದು ಸರ್ವೇ­ಸಾಮಾನ್ಯ ಎಂಬಂ­ತಾಗಿದೆ. ಇದನ್ನು ತಪ್ಪಿಸುವ ನಿಟ್ಟಿನಲ್ಲಿ ಕಳೆದ ಹಲವಾರು ವರ್ಷಗಳಿಂದ ಸರಕಾರ ಪ್ರಯತ್ನಿಸುತ್ತಲೇ ಬಂದಿದ್ದರೂ ನಿರೀಕ್ಷಿತ ಯಶಸ್ಸು ಲಭಿಸಿಲ್ಲ. ಈ ಬಾರಿ ತಿಂಗಳಿಗೂ ಮುನ್ನವೇ ಪಟಾಕಿ ಗೋದಾಮುಗಳು, ಉತ್ಪಾದನ ಘಟಕ­ಗಳಲ್ಲಿ ದುರಂತಗಳು ಸಂಭವಿಸಿ ಅಮಾಯಕರ ಸಾವಿಗೆ ಕಾರಣವಾಗಿವೆ.

Advertisement

ಆಗಸ್ಟ್‌ ಕೊನೆಯಲ್ಲಿ ಹಾವೇರಿಯ ಗ್ರಾಮವೊಂದರ ಪಟಾಕಿ ಗೋದಾಮಿ ನಲ್ಲಿ ಸ್ಫೋಟ ಸಂಭವಿಸಿ ನಾಲ್ವರು ಕಾರ್ಮಿಕರು ಸಾವನ್ನಪ್ಪಿದ್ದರು. ಶನಿವಾರ ಸಂಜೆ ಬೆಂಗಳೂರು ಹೊರವಲಯದ ಆನೇಕಲ್‌ ತಾಲೂಕಿನ ಅತ್ತಿಬೆಲೆ ಗೋದಾಮಿನಲ್ಲಿ ಪಟಾಕಿ ದುರಂತ ಸಂಭವಿಸಿ 14 ಮಂದಿ ಮೃತಪಟ್ಟಿದ್ದರು. ಸೋಮವಾರ ಬೆಳಗ್ಗೆ ತಮಿಳುನಾಡಿನ ಅರಿಯಲೂರಿನಲ್ಲಿನ ಪಟಾಕಿ ತಯಾರಿಕ ಘಟಕದಲ್ಲಿ ಸಂಭವಿಸಿದ ಬೆಂಕಿ ಆಕಸ್ಮಿಕದಲ್ಲಿ 9 ಮಂದಿ ಸಾವಿಗೀಡಾಗಿದ್ದಾರೆ. ಈ ಎಲ್ಲ ಘಟನೆಗಳು ಪಟಾಕಿ ತಯಾರಿಕ ಘಟಕಗಳು, ಸಂಗ್ರಹಿಸಿಡಲಾಗುವ ಗೋದಾಮುಗಳು, ಮಾರಾಟ ಮಳಿಗೆಗಳ ಸುರಕ್ಷೆಯ ಕುರಿತಂತೆ ಜನರಲ್ಲಿ ಅನುಮಾನ ಮೂಡಿಸಿವೆ.

ದೀಪಾವಳಿ ಹಬ್ಬದ ಸಂದರ್ಭದಲ್ಲಿ ಪಟಾಕಿಗಳಿಗೆ ಭಾರೀ ಬೇಡಿಕೆ ಇರುವುದರಿಂದ ಸಹಜವಾಗಿಯೇ ಪಟಾಕಿ ಉತ್ಪಾದನ ಘಟಕಗಳು ಪಟಾಕಿ ತಯಾರಿಯಲ್ಲಿ ಬಿರುಸಿನಿಂದ ತೊಡಗಿಕೊಳ್ಳುತ್ತವೆ. ಅಷ್ಟು ಮಾತ್ರವಲ್ಲದೆ ಹೀಗೆ ಉತ್ಪಾದನೆಯಾದ ಪಟಾಕಿಗಳನ್ನು ವಿವಿಧ ಸ್ಥಳಗಳಿಗೆ ರವಾನಿಸಿ ಅಲ್ಲಿನ ಗೋದಾಮುಗಳಲ್ಲಿ ದಾಸ್ತಾನು ಇರಿಸಲಾಗುತ್ತದೆ. ಹಬ್ಬ ಸಮೀಪಿಸುತ್ತಿದ್ದಂತೆಯೇ ಪಟಾಕಿಗಳನ್ನು ಮಾರಾಟ ಮಳಿಗೆಗಳಿಗೆ ಪೂರೈಸಲಾಗುತ್ತದೆ. ನಿಯಮಾವಳಿಗಳಿಗನುಸಾರವಾಗಿಯೇ ಇವೆಲ್ಲವೂ ನಡೆಯುತ್ತವೆ. ಇಷ್ಟೆಲ್ಲ ಆಗಿಯೂ ಪಟಾಕಿ ದುರಂತಗಳು ಸಂಭವಿಸಿ ಬಡ ಕಾರ್ಮಿಕರ ಮತ್ತು ಅಮಾಯಕರ ಪ್ರಾಣಕ್ಕೆ ಸಂಚಕಾರ ತಂದೊ ಡ್ಡುತ್ತಿರುವುದು ನಿಜಕ್ಕೂ ತೀರಾ ಕಳವಳಕಾರಿ ಸಂಗತಿ.

ಸರಕಾರಗಳೇನೋ ಪಟಾಕಿ ದುರಂತ ಸಂಭವಿಸಿದಾಗಲೆಲ್ಲ ಸಾವನ್ನಪ್ಪಿದ­ವರ ಕುಟುಂಬಗಳಿಗೆ ಪರಿಹಾರವನ್ನು ನೀಡಿ, ಘಟನೆ ಸಂಬಂಧ ಉನ್ನತ ಮಟ್ಟದ ತನಿಖೆ ನಡೆಸಿ ತಪ್ಪಿತಸ್ಥರನ್ನು ಕಾನೂನಿನ ಕಟಕಟೆಗೆ ತಂದು ನಿಲ್ಲಿಸು ವುದರೊಂದಿಗೆ ತನ್ನ ಹೊಣೆಗಾರಿಕೆ ಮುಗಿಯಿತು ಎಂದು ಕೈತೊಳೆದು ಕೊಳ್ಳುತ್ತವೆ.

ಪಟಾಕಿ, ಸುಡುಮದ್ದು ತಯಾರಿಕ ಘಟಕಗಳು, ಗೋದಾಮುಗಳ ಸುರಕ್ಷೆ, ಕಾರ್ಮಿಕರ ರಕ್ಷಣೆಯಂಥ ಸೂಕ್ಷ್ಮ ವಿಷಯಗಳಲ್ಲಿ ಕಾನೂನು ನಿಯಮಾವಳಿಗಳಲ್ಲಿ ಎಲ್ಲೂ ರಾಜಿಯಾಗದಂತೆ ಸರಕಾರಗಳು ಕಟ್ಟೆಚ್ಚರ ವಹಿಸಬೇಕು. ಕಾನೂನು, ನಿಯಮಾವಳಿಗಳನ್ನು ಉಲ್ಲಂ ಸಿ ಕಾರ್ಯಾ ಚರಿಸುತ್ತಿರುವ ಪಟಾಕಿ ಘಟಕಗಳು ಅಥವಾ ಗೋದಾಮುಗಳ ಮಾಲಕರು, ನಿರ್ವಾಹಕರ ಮೇಲೆ ಕ್ರಮ ಕೈಗೊಳ್ಳುವುದರ ಜತೆಯಲ್ಲಿ ಕಣ್ಣಿದ್ದೂ ಕುರುಡರಂತೆ ವರ್ತಿಸುವ ಸಂಬಂಧಿತ ಇಲಾಖೆಗಳ ಅಧಿಕಾರಿಗಳ ವಿರುದ್ಧವೂ ನಿರ್ದಾಕ್ಷಿಣ್ಯ ಕ್ರಮ ಕೈಗೊಳ್ಳಬೇಕು. ಪಟಾಕಿಗಳ ಉತ್ಪಾದನೆ, ದಾಸ್ತಾನು, ಸಾಗಾಟ, ಸಾಗಾಟ ವ್ಯವಸ್ಥೆ… ಹೀಗೆ ಪ್ರತೀ ಹಂತದಲ್ಲಿಯೂ ಸೂಕ್ತ ಮುಂಜಾಗ್ರತ ಮತ್ತು ಸುರಕ್ಷ ನಿಯಮಗಳ ಪಾಲನೆಯನ್ನು ಖಾತರಿಪಡಿಸಿಕೊಳ್ಳುವ ಹೊಣೆಗಾರಿಕೆ ಸರಕಾರದ ಸಂಬಂಧಪಟ್ಟ ಇಲಾಖೆಗಳದ್ದಾಗಿದೆ. ಹೀಗಾದಲ್ಲಿ ಮಾತ್ರವೇ ಇಂಥ ದುರಂತಗಳನ್ನು ತಪ್ಪಿಸಿ ನೂರಾರು ಅಮಾಯಕ ಜೀವಗಳನ್ನು ಉಳಿಸಲು ಸಾಧ್ಯ.

Advertisement
Advertisement

Udayavani is now on Telegram. Click here to join our channel and stay updated with the latest news.

Next