Advertisement

ಕೃಷ್ಣನಾ ಕೊಳಲಿನಾ ಕರೆ…

12:17 PM May 12, 2018 | |

 ಕೊಳಲು ತಯಾರಿಸಲು ಹಳ್ಳಿಗಳ ಪಕ್ಕದಲ್ಲಿ ಬೆಳೆಯುವ ಬಿದಿರಿನ ಜಾತಿಗೆ ಸೇರಿದ ವಾಟೆ ಬೇಕು. ಅದನ್ನು ತರಲು ಕುದುರೆ ಮುಖ ಅಥವಾ ಪುತ್ತೂರಿನ ಸಮೀಪದ ಪಂಜಕ್ಕೆ ಹೋಗಬೇಕು. ಕನಿಷ್ಠ ಏಳು ದಿನ ಕೆಲಸ ಮಾಡಿದರೆ, ಒಂದು ಕೊಳಲು ತಯಾರಿಸಬಹುದು. 

Advertisement

 ಬೆಳ್ತಂಗಡಿ ತಾಲೂಕಿನ ಅಂಡಿಂಜೆ ಗ್ರಾಮದ ಪಿಲಿಯೂರಿನಲ್ಲಿ ಅಡಿಕೆ ತೋಟದ ನಡುವೆ ಮನೆ ಇದೆ. ಅಲ್ಲಿ ಸಣ್ಣದೊಂದು ಕೊಳಲ ನಿನಾದ ನಿಮ್ಮ ಕಿವಿಗೆ ಬಿದ್ದರೆ, ಖರೆ. ಅದೇ ಸುರೇಶ್‌ ಗೋರೆ ಅವರ ಕಾರ್ಯಕ್ಷೇತ್ರ.  ಇವರ ವಿಶೇಷ ಎಂದರೆ-ಕೈಯಲ್ಲಿ ಪದವಿ ಇತ್ತು, ನೌಕರಿ ಹುಡುಕಬಹುದಿತ್ತು. ಸುರೇಶ್‌ ಇವ್ಯಾವುದರ ಗೊಡವೆಗೆ ಹೋಗದೆ ಕೊಳಲು ತಯಾರಿಕೆ ಕಡೆ ಹೊರಳಿದರು.  ಪ್ರೌಢಶಾಲೆಯಲ್ಲಿ ಕಲಿಯುವಾಗ ಮರಗಳ ಬೇರಿನಲ್ಲಿ ಕಲಾಕೃತಿ ರಚಿಸುವ ಹವ್ಯಾಸ ಕೈಗೆಟುಕಿತು. ಈಗ ಹವ್ಯಾಸವೇ ಅವರ ಜೀವನ ಸಂಗಾತಿ. ಕೊಳಲುಗಳ ತಯಾರಿಕೆಯಂತೆಯೇ,  ದೇವಾಲಯಗಳಿಗೆ ಬೇಕಾಗುವ ಮಂಟಪ, ಪಲ್ಲಕ್ಕಿ ಇತ್ಯಾದಿಗಳಿಗೆ ಬೇಕಾಗುವ ಬೆಳ್ಳಿ ಮತ್ತು ಹಿತ್ತಾಳೆಯ ಕವಚಗಳನ್ನು ತಯಾರಿಸಿಕೊಡುತ್ತಾರೆ.  
 ಗೋರೆಯವರ ಸೋದರ ಮಾವ ಮಾಳದ ಮುಕುಂದ ಡೋಂಗ್ರೆ ನಿಷ್ಣಾತ ವೇಣುವಾದಕರು. ಅಷ್ಟೇ ಅಲ್ಲ, ವೈವಿಧ್ಯಮಯವಾದ ಕೊಳಲುಗಳ ತಯಾರಿಕೆಯಲ್ಲಿ ಪರಿಣತರು. ಅದನ್ನು ನೋಡಿಯೇ ಸುರೇಶ್‌ಗೋರೆಯೂ ಕೊಳಲು ತಯಾರಿಕೆಯನ್ನು ಕಲಿತರು. ನಂತರ, ಕೊಳಲಿನಲ್ಲಿ ಶಾಸ್ತ್ರೀಯ ಸಂಗೀತದ ನಾದ ಹೊರ ಹೊಮ್ಮಬೇಕಿದ್ದರೆ ಸಂಗೀತದ ಆಳವಾದ ಅರಿವೂ ಅಗತ್ಯವಿದೆ ಎಂಬ ಸತ್ಯವನ್ನು ತಿಳಿದುಕೊಂಡರು. ಹೀಗಾಗಿ, ನಾಯಕ ಸಾಟೆಯವರಿಂದ ಕರ್ನಾಟಕಿ ಮತ್ತು ವೆಂಕಟೇಶ ಗೋಡಿRಂಡಿಯವರಿಂದ ಹಿಂದುಸ್ಥಾನಿ ಸಂಗೀತದ ಪಾಠ ಕಲಿತುಕೊಂಡರು. “ಕೊಳಲು ತಯಾರಿಸಬೇಕಾದರೆ ಅದನ್ನು ನುಡಿಸುವ ಕಲಾವಿದನನ್ನೂ ಅಧ್ಯಯನ ಮಾಡಬೇಕಾಗಿ ಬಂತು. ಪ್ರತಿಯೊಬ್ಬ ಕಲಾವಿದನಿಗೂ ಅವನದೇ ಆದ ಶೈಲಿ ಇರುತ್ತದೆ. ಹೀಗಾಗಿ ಒಬ್ಬನಿಗಾಗಿ ಕೊಳಲು ತಯಾರಿಸುವ ಹಂತದಲ್ಲಿ ಶೇ. ತೊಂಭತ್ತರಷ್ಟು  ವ್ಯರ್ಥವಾಗುತ್ತವೆ. ಸರಿಯಾಗಿ ಅಧ್ಯಯನ ಮಾಡಿ ತಯಾರಿಸುತ್ತ ಹೋದಾಗ ಅವನಿಗೆ ಹೊಂದುವ ಕೊಳಲು ತಯಾರಾಗುತ್ತದೆ ‘ ಎನ್ನುತ್ತಾರೆ ಗೋರೆ.

ಕೊಳಲು ತಯಾರಿಸಲು ಹಳ್ಳಗಳ ಪಕ್ಕದಲ್ಲಿ ಬೆಳೆಯುವ ಬಿದಿರಿನ ಜಾತಿಗೆ ಸೇರಿದ ವಾಟೆ ಬೇಕು. ಇದನ್ನು ತರಲು ದೂರದ ಕುದುರೆಮುಖ ಅಥವಾ ಪುತ್ತೂರಿನ ಪಂಜಕ್ಕೆ ಹೋಗಬೇಕು. ಬೇರೆ ಕಡೆಯಲ್ಲಿ ಸಿಗುವ ವಾಟೆಯಲ್ಲಿ ಸೂಕ್ತವಾದ ದಪ್ಪ ಮತ್ತು ಮಾಧುರ್ಯ ಬರುವುದಿಲ್ಲವಂತೆ. ಇದು ಸಿಗದಿದ್ದರೆ ದುಬಾರಿ ಬೆಲೆ ತೆತ್ತು ತಂಜಾವೂರಿನ ವಾಟೆ ತರಬೇಕಾಗುತ್ತದೆ. ಕರ್ನಾಟಕ ಸಂಗೀತ ನುಡಿಸುವ ಕೊಳಲಿಗೆ, ಮುಕ್ಕಾಲು ಇಂಚು ಸುತ್ತಳತೆ, ಒಂದರಿಂದ ಒಂದೂವರೆ ಅಡಿ ಉದ್ದದ,  ಎಂಟು ತೂತುಗಳಿರುತ್ತವೆ. ಹಿಂದೂಸ್ತಾನಿ ಸಂಗೀತಕ್ಕೆ ಬಳಸುವ ಒಂದೂವರೆಯಿಂದ ಎರಡೂವರೆ ಅಡಿ ಉದ್ದವಿರುವ ಬಾನ್ಸುರಿಗೆ ಆರು ತೂತುಗಳು ಸಾಕಾಗುತ್ತವೆ. ವಾಟೆಯನ್ನು ಅಳತೆ ಮಾಡಿ ಕತ್ತರಿಸಿ ಕಾದ ಕಬ್ಬಿಣದ ಸರಳಿನಿಂದ ಒಂದೊಂದೇ ತೂತು ತೆಗೆಯುವಾಗಲೂ ಸ್ವರದ ಸ್ಥಾಪನೆ ಮಾಡುವ ಶ್ರಮವಿರುತ್ತದೆ. ಸ್ವರ ತಪ್ಪಿದರೆ ಅದನ್ನು ಬಳಸದೆ ಇನ್ನೊಂದನ್ನು ಕೈಗೆತ್ತಿಕೊಳ್ಳಬೇಕು.  ಹೀಗಾಗಿ, ಕನಿಷ್ಠ ಏಳು ದಿನ ದುಡಿಮೆ ಮಾಡಿದರೆ ಒಂದು ಕೊಳಲು ತಯಾರಾಗುತ್ತದೆ. ಸಿದ್ಧವಾದ ಬಳಿಕ ಪಾಲಿಷ್‌ ಮಾಡಿ ಸಾಸಿವೆಯೆಣ್ಣೆ ಹಚ್ಚುತ್ತಾರೆ. ಹದಿನೈದು ವೈವಿದ್ಯಮಯ ಕೊಳಲುಗಳನ್ನು ತಯಾರಿಸುವ ಗೋರೆ ಅವರು,  ವೇಣುವಿಶಾರದ ಪ್ರಪಂಚಂ ಬಾಲಚಂದ್ರಮ್‌, . ಕೆ. ರಾಮನ್‌ ಮೊದಲಾದವರಿಗೂ  ಕೊಳಲು ತಯಾರಿಸಿ ಕೊಟ್ಟಿದ್ದಾರೆ.
ಸುರೇಶ್‌ ಗೋರೆ ತಾಯಿಯ ತಂದೆ ಕಾರ್ಕಳದ ದುರ್ಗದ ಡಿ. ಪಿ. ನಾರಾಯಣ ಭಟ್ಟರು ಬೆಳ್ಳಿ ಮತ್ತು ಶಿಲೆಯ ಕಲಾ ಕೌಶಲಕ್ಕಾಗಿ ರಾಷ್ಟ್ರಪ್ರಶಸ್ತಿ ಗಳಿಸಿದ್ದವರು. ಆರನೆಯ ತರಗತಿಯಲ್ಲಿರುವಾಗಲೇ ಅಜ್ಜನ ಕಲೆಯ ಕೌಶಲವನ್ನು ಸನಿಹದಿಂದ ನೋಡುತ್ತ ಬಂದ ಗೋರೆಯವರಿಗೆ ಅದು ಸುಲಭವಾಗಿ ಕರಗತವಾಗಿದೆ. ಹಾಗಾಗಿ ಬೆಳ್ಳಿ ಮತ್ತು ಹಿತ್ತಾಳೆಯ ಕುಸುರಿ ಕೆಲಸ ಗೋರೆಯವರ ಮತ್ತೂಂದು ಸಾಧನೆ. ದೇವಾಲಯ ಮತ್ತು ದೈವಗಳ ಗುಡಿಗಳಿಗೆ ಬೇಕಾಗುವ ಮಂಟಪಗಳು, ದ್ವಾರಬಂಧಗಳು, ಪ್ರಭಾವಳಿಗಳು, ಮುಖವಾಡಗಳು, ಕವಚಗಳು, ಆಭರಣಗಳು ಇವೆಲ್ಲದರಲ್ಲೂ ಅವರ ಕಲಾ ಪ್ರತಿಭೆ ಮೆರೆಯುತ್ತದೆ. ಅಪರೂಪಕ್ಕೆ ಬಂಗಾರದ ಕುಸುರಿಯೂ ಸಿಗುವುದುಂಟು.

    ಮೊದಲು ಕಾಗದದ ಮೇಲೆ ಚಿತ್ರ ಬರೆದು ಕೊಂಡು ಆಕಾರ ರೂಪಿಸುತ್ತಾರೆ.  ಮರದ ಹಲಗೆಯ ಮೇಲೆ ಬಿಸಿ ಮಾಡಿದ ಅರಗಿನ ಹಾಸಿನ ಮೇಲೆ ಸೂಕ್ತ ಅಳತೆಯ ಬೆಳ್ಳಿ ಅಥವಾ ಹಿತ್ತಾಳೆ ತಗಡನ್ನಿರಿಸಿ, ಅದರ ಮೇಲೆ ಚಿತ್ರವನ್ನಿಡುತ್ತಾರೆ. 150ಕ್ಕಿಂತ ಹೆಚ್ಚು ಬಗೆಯ ಚಾಣಗಳನ್ನು ಬಳಸಿ, ಸುತ್ತಿಗೆಯಿಂದ ಹೊಡೆಯುತ್ತ ಬಂದಾಗ ತಗಡಿನಲ್ಲಿ ಪ್ರತಿಕೃತಿ ಮೂಡುತ್ತದೆ. 
ಮರದ ಚೌಕಟ್ಟಿಗೆ ಈ ತಗಡನ್ನು ಜೋಡಿಸಿದಾಗ ಶೋಭಾಯಮಾನವಾಗಿ ಕಾಣುತ್ತದೆ. ನಾಲ್ಕು ಮಂದಿ ಸಹಾಯಕರೊಂದಿಗೆ ದಿನಕ್ಕೆ ಎಂಟು ತಾಸು ದುಡಿದರೂ ಒಂದು ಪಲ್ಲಕ್ಕಿ ಪೂರ್ಣವಾಗಲು ಮೂರು ತಿಂಗಳು ಹಿಡಿಯುತ್ತದಂತೆ. 

ಪ. ರಾಮಕೃಷ್ಣ ಶಾಸ್ತ್ರಿ 

Advertisement
Advertisement

Udayavani is now on Telegram. Click here to join our channel and stay updated with the latest news.

Next