Advertisement
ಉತ್ತರ ಕರ್ನಾಟಕ ಬಯಲು ಸೀಮೆಯಲ್ಲಿ ವಿಶೇಷವಾಗಿ ಪಂಚ (ಐದು) ದಿನಗಳು ಆಚರಿಸುವ, ಮಹಿಳೆಯರು ಹೇಗೆ ಸಂಭ್ರಮಿಸುತ್ತಾರೆ ಎಂಬುದನ್ನು ಜನಪದ ಕಲಾವಿದರು ಅಕ್ಷರಗಳಿಂದ ಬಣ್ಣಿಸುವ ಹಬ್ಬವಿದು. ನಾಗದೇವ ಅಪಾಯ ತರದಿರಲಿ, ಮಳೆ-ಬೆಳೆ ಸಮೃದ್ಧವಾಗಲಿ ಎಂದು ರೈತರು ಪ್ರಾರ್ಥಿಸುವ ನಾಗರಪಂಚಮಿ ಬರ ಇರಲಿ, ಬೆಳೆ ಇರಲಿ ವೈಭವದಿಂದ ಆಚರಣೆಗೊಳ್ಳುತ್ತದೆ.
Related Articles
Advertisement
ಸಸಿ ಮುಡಿಯುವುದು: ಆ.14ರಂದು ಹಾಲೆರೆಯುವ ದಿನ. ಮಹಿಳೆಯರು ತಲೆಯಲ್ಲಿ ಗೋಧಿ ಸಸಿ ಮುಡಿಯುವದು ವಾಡಿಕೆ. ವಾರ ಮೊದಲೇ ಬುಟ್ಟಿಯಲ್ಲಿ ಮಣ್ಣಿನಲ್ಲಿ ಗೋಧಿ, ಗೋವಿನಜೋಳ ಬೀಜ ಹಾಕಿ ಕತ್ತಲು ಕೋಣೆಯಲ್ಲಿ ಇರಿಸಿ, ವಾರದ ಬಳಿಕ ಗಾಳಿ ಬೆಳಕು ಸೋಕದೇ ಹಳದಿ ವರ್ಣಕ್ಕೆ ಚಿಗುರೊಡೆಯುವ ಸಸಿಗಳನ್ನು ಹಾಲೆರೆಯುವ ಸಂದರ್ಭದಲ್ಲಿ ದೇವರಿಗೆ ನೈವೇದ್ಯ ಮಾಡಿ ಮಹಿಳೆಯರು, ಯುವತಿಯರು ಸಸಿ ಮುಡಿಯುವ ಪದ್ಧತಿ ಇಂದಿಗೂ ಆಚರಣೆಯಲ್ಲಿದೆ.
ವರ್ಷ ತೊಡಕು: ಆ.15ರಂದು ಹುತ್ತ ಮುರಿಯುವುದು. ಇನ್ನು ಆ.19ರಂದು ಕರೆ ಕಟಮ್ಲ ದಿನ. ಯಾವುದೇ ಕರಿದ ತಿಂಡಿ ತಯಾರಿಸುವುದಿಲ್ಲ. ಆ.17ರ ಕೊನೆಯ ದಿನ ವಿಶಿಷ್ಟವಾದುದು ವರ್ಷ ತೊಡಕು!. ಆ ದಿನ ಮಾಡಿದ ಕಾರ್ಯ ವರ್ಷಪೂರ್ತಿ ಮಾಡುವಂತಾಗುತ್ತದೆಂಬ ನಂಬಿಕೆಯಿಂದ ಅಂದು ಹೆಚ್ಚಾಗಿ ಒಳ್ಳೆ ಕೆಲಸ, ದೇವರ ಧ್ಯಾನ ರೂಢಿಯಲ್ಲಿದೆ. ಯುವತಿಯರು, ಯುವಕರು ಜೋಕಾಲಿಯಾಡಿ ಹಬ್ಬವನ್ನು ಸಂಭ್ರಮಿಸುತ್ತಾರೆ.
ಗಂಡನ ಮನೆಗೆ ಹೋದವರು ಯಾವುದೇ ಹಬ್ಬ ಕೈಬಿಟ್ಟರೂ ನಾಗರ ಪಂಚಮಿಗೆ ವಾರಗಟ್ಟಲೇ ತವರಿಗೆ ಹೋಗುವುದರಿಂದ ಇದು ಮಹಿಳೆಯರ ಹಬ್ಬವಾಗಿ ಗುರುತಿಸಿಕೊಂಡಿದೆ. ಉತ್ತರ ಕರ್ನಾಟಕ ಭಾಗದ ಗ್ರಾಮೀಣ ಪ್ರದೇಶದಲ್ಲಿ ಐದು ದಿನಗಳವರೆಗೆ ಸಾಮಾಜಿಕ ಸಾಮರಸ್ಯ ಪ್ರತಿಬಿಂಬಿಸಿದ ನಾಗರ ಪಂಚಮಿ ಸಂಭ್ರಮದಿಂದ ಆಚರಿಸಲ್ಪಡುತ್ತದೆ.
ಸಿದ್ಧಲಿಂಗಯ್ಯ ಮಣ್ಣೂರಮಠ