Advertisement

ನಾಡದೋಣಿ ಮೀನುಗಾರಿಕೆ ಚುರುಕು: ನಿತ್ಯದ ಬದುಕಿಗೆ ನೆರವಾಗುವ ನಿರೀಕ್ಷೆ

11:54 AM Jun 25, 2020 | mahesh |

ಮಹಾನಗರ: ಮಳೆಗಾಲದ ಹಿನ್ನೆಲೆಯಲ್ಲಿ ಯಾಂತ್ರೀಕೃತ ಮೀನುಗಾರಿಕೆ ಸ್ಥಗಿತಗೊಂಡಿದ್ದು ನಾಡದೋಣಿ ಮೀನುಗಾರಿಕೆ ಚುರುಕಾಗಿದೆ. ಆರಂಭದ ಒಂದು ವಾರ ಕಡಲಿನ ಅಬ್ಬರದಿಂದಾಗಿ ಮೀನುಗಾರಿಕೆ ಅಸಾಧ್ಯವಾಗಿದ್ದರೂ ಇದೀಗ 1,000ಕ್ಕೂ ಅಧಿಕ ನಾಡದೋಣಿಗಳು ಮೀನುಗಾರಿಕೆಯಲ್ಲಿ ತೊಡಗಿವೆ. ಚಂಡಮಾರುತ, ಲಾಕ್‌ಡೌನ್‌ ಹೊಡೆತಕ್ಕೆ ಸಿಲುಕಿದ ಈ ಬಾರಿಯ ಮೀನುಗಾರಿಕಾ ಋತು ಮೀನುಗಾರರ ನಿರೀಕ್ಷೆಯನ್ನು ಹುಸಿ ಮಾಡಿತ್ತು. ಮೀನಿನ ಬೆಲೆ ಅಧಿಕವಾದರೂ ಮೀನುಗಾರರಿಗೆ ಅದರ ಪ್ರಯೋಜನ ದೊರೆಯಲಿಲ್ಲ. ಲಾಕ್‌ಡೌನ್‌ ಸಂದರ್ಭದಲ್ಲಿ ಯಾಂತ್ರೀಕೃತ ಮೀನುಗಾರಿಕೆ ನಿಷೇಧಿಸಲಾಗಿತ್ತು. ನಾಡದೋಣಿ ಮೀನುಗಾರಿಕೆಗೆ ಅವಕಾಶ ನೀಡಲಾಗಿತ್ತು. ಆದರೆ ಆ ಅವಧಿಯಲ್ಲಿ ನಾಡದೋಣಿ ಮೀನುಗಾರರ ನಿರೀಕ್ಷೆಯಂತೆ ಮೀನುಗಳು ದೊರೆತಿರಲಿಲ್ಲ. ಇದೀಗ ಮಳೆಗಾಲದ ಅವಧಿಯ ನಾಡದೋಣಿ ಮೀನುಗಾರಿಕೆ ಚಟುವಟಿಕೆ ಚುರುಕಾಗಿದೆ.

Advertisement

ನಿತ್ಯ ಬದುಕಿಗೆ ಆಸರೆ
“ನಾಡದೋಣಿ ಮೀನುಗಾರಿಕೆಯಿಂದ ತುಂಬಾ ಲಾಭವೇನೂ ಆಗುವುದಿಲ್ಲ. ಆದರೆ ನಿತ್ಯ ಬದುಕಿಗೆ ಆಸರೆಯಾಗುತ್ತದೆ. ಹಿಂದೆ ನಾಡದೋಣಿ ಮೀನು ಗಾರಿಕೆಯೇ ಇತ್ತು. ಬೇಕಾದಷ್ಟು ಮೀನುಗಳು ದಡದ ಸಮೀಪದಲ್ಲಿಯೂ ದೊರೆಯುತ್ತಿದ್ದವು. ಅನಂತರ ಮೀನುಗಳನ್ನು ಹುಡುಕಿಕೊಂಡು ಆಳಸಮುದ್ರಕ್ಕೆ ಹೋಗಬೇಕಾಯಿತು. ಮಳೆಗಾಲದಲ್ಲಿ ಆಳ ಸಮುದ್ರಕ್ಕೆ ತೆರಳುವುದು ಅಸಾಧ್ಯವಾಗಿರುವುದರಿಂದ ನಾಡದೋಣಿ ಮೀನುಗಾರಿಕೆಯನ್ನೇ ನಂಬಿಕೊಂಡಿದ್ದೇವೆ’ ಎನ್ನುತ್ತಾರೆ ತೋಟಬೆಂಗ್ರೆಯ ಮೀನುಗಾರರಾದ ಸುಭಾಷ್‌ ಸಾಲ್ಯಾನ್‌ ಮತ್ತು ಸುರೇಶ್‌ ಬೆಂಗ್ರೆ ಅವರು.

ಬೀಸುಬಲೆ ಹೆಚ್ಚು
ಮಳೆಗಾಲ ಆರಂಭವಾಗುವ ಸಮಯದಲ್ಲಿ ಬೀಸುಬಲೆ ಮೀನುಗಾರಿಕೆ ಹೆಚ್ಚಿನ ಪ್ರಮಾಣದಲ್ಲಿ ನಡೆಯುತ್ತದೆ. ಈಗಲೂ ಪ್ರತಿದಿನ ಬೆಳಗ್ಗೆ ಮತ್ತು ಸಂಜೆ ಅನೇಕ ಮಂದಿ ಬೀಸುಬಲೆ ಮೀನುಗಾರಿಕೆ ನಡೆಸುತ್ತಾರೆ. ನಾಡದೋಣಿಯಲ್ಲಿ ತೆರಳಿ ಬೀಸುಬಲೆಯಲ್ಲಿ ಮೀನು ಹಿಡಿಯುವವರಲ್ಲದೆ ದಡದಲ್ಲಿದ್ದುಕೊಂಡೇ ಬೀಸುಬಲೆಯಲ್ಲಿ ಮೀನು ಹಿಡಿಯುವವರು ತುಂಬ ಮಂದಿ ಇದ್ದಾರೆ. ಯಾಂತ್ರೀಕೃತ ಮೀನುಗಾರಿಕೆ ನಿಷೇಧ, ಲಾಕ್‌ಡೌನ್‌ ಹಿನ್ನೆಲೆಯಲ್ಲಿ ಬೇರೆ ಉದ್ಯೋಗಗಳ ಕೊರತೆ ಇರುವುದರಿಂದಲೂ ಯುವಜನತೆ ಹೆಚ್ಚಿನ ಸಂಖ್ಯೆಯಲ್ಲಿ ತೋಟಬೆಂಗ್ರೆ ಅಳಿವೆಬಾಗಿಲು ಪ್ರದೇಶದಲ್ಲಿ ಬೀಸುಬಲೆಯಲ್ಲಿ ಮೀನು ಹಿಡಿದು ದಿನದ ಖರ್ಚಿನ ಸಂಪಾದನೆ ಮಾಡುತ್ತಿರುವುದು ಕಂಡುಬಂದಿದೆ. ಪೈಯ್ಯ, ಏರಿ, ನಂಗ್‌, ಬಂಗುಡೆ, ಕೊಡ್ಡೆಯಿ ಮೀನುಗಳು ದೊರೆಯುತ್ತಿವೆ. ಕಾನೆ ಮೀನು ಕೂಡ ಸ್ವಲ್ಪ ಪ್ರಮಾಣದಲ್ಲಿ ಸಿಗುತ್ತಿದೆ.

ನಿತ್ಯ 4,500- 5,000 ಕೆ.ಜಿ. ಮತ್ಸ್ಯ ಬೇಟೆ
ಮಂಗಳೂರಿನಲ್ಲಿ 540 ಪಾತಿ ದೋಣಿಗಳು ಸೇರಿದಂತೆ ಒಟ್ಟು 2,040 ನಾಡದೋಣಿಗಳು ಮೀನುಗಾರಿಕೆ ನಡೆಸುತ್ತವೆ. ದಿನವೊಂದಕ್ಕೆ ಸರಾಸರಿ 4,500ರಿಂದ 5,000 ಕೆಜಿಯಷ್ಟು ಮೀನು ದೊರೆಯುತ್ತಿದೆ. ಜೂನ್‌ ಮೊದಲ ವಾರದಲ್ಲಿ ಕಡಲು ಪ್ರಕ್ಷುಬ್ಧ ಇದ್ದುದರಿಂದ ನಾಡದೋಣಿಗಳು ಮೀನುಗಾರಿಕೆ ನಡೆಸಿರಲಿಲ್ಲ. ಇದೀಗ ಮೀನುಗಾರಿಕೆ ನಡೆಯುತ್ತಿದೆ. 10 ಎಚ್‌ಪಿಗಿಂತ ಹೆಚ್ಚು ಸಾಮರ್ಥ್ಯದ ಮೋಟಾರೀಕೃತ ಬೋಟ್‌ಗಳಿಗೆ ಅವಕಾಶವಿಲ್ಲ. ಸದ್ಯ ಮಂಗಳೂರು ಮೀನು ಮಾರುಕಟ್ಟೆಗೆ ನಾಡದೋಣಿಯಲ್ಲಿ ಸಿಗುವ ಮೀನುಗಳು ಮಾತ್ರವಲ್ಲದೆ ಆಂಧ್ರಪ್ರದೇಶ, ತಮಿಳುನಾಡಿನಿಂದಲೂ ಮೀನುಗಳು ಬರುತ್ತಿವೆ ಎಂದು ಮೀನುಗಾರಿಕೆ ಇಲಾಖೆಯ ಅಧಿಕಾರಿಗಳು ತಿಳಿಸಿದ್ದಾರೆ.

ನಿರೀಕ್ಷಿತ ಮೀನು ಸಿಗುತ್ತಿಲ್ಲ
ನಾಡದೋಣಿ ಮೀನುಗಾರಿಕೆ ನಡೆಸುವವರಿಗೂ ಈ ಹಿಂದಿನ ವರ್ಷಗಳಂತೆ ಮೀನುಗಳು ಲಭ್ಯ ವಾಗುತ್ತಿಲ್ಲ. ಕೆಲವೊಮ್ಮೆ ಉತ್ತಮ ಪ್ರಮಾಣದ ಮೀನು, ಬೆಲೆ ಸಿಗುತ್ತದೆ. ಇನ್ನು ಕೆಲವೊಮ್ಮೆ ನಿರೀಕ್ಷಿದಷ್ಟು ಮೀನು ಸಿಗುವುದಿಲ್ಲ, ಮೀನು ಸಿಕ್ಕಿದರೆ ಬೆಲೆಯೂ ಸಿಗುವುದಿಲ್ಲ. ನಾಡ ದೋಣಿಗೆ ಉತ್ತಮ ಪ್ರಮಾಣದಲ್ಲಿ ಮೀನು ದೊರೆತರೆ ಮೀನುಗಾರರ ಸಂಕಷ್ಟ ದೂರವಾಗುತ್ತದೆ.
– ಸುಭಾಶ್‌ ಸಾಲ್ಯಾನ್‌, ನಾಡದೋಣಿ ಮಾಲಕರು,

Advertisement
Advertisement

Udayavani is now on Telegram. Click here to join our channel and stay updated with the latest news.

Next