Advertisement

ಪೆರ್ಮುದೆಯಲ್ಲಿ ಜಿಲ್ಲೆಯ ಪ್ರಥಮ ಬೀಕನ್‌ ಲೈಬ್ರೆರಿ

09:51 AM May 26, 2022 | Team Udayavani |

ಬಜಪೆ: ಅಂಧರ ಶಿಕ್ಷಣಕ್ಕೆ ಒತ್ತು ನೀಡುವ ಉದ್ದೇಶದಿಂದ ಪ್ರತೀ ತಾಲೂಕಿನ ಒಂದು ಗ್ರಾಮ ಪಂಚಾಯತ್‌ನ ಗ್ರಂಥಾಲಯವನ್ನು ಡಿಜಿಟಲ್‌ ಆಧಾರಿತ ‘ಬೀಕನ್‌ ಗ್ರಂಥಾಲಯ’ವನ್ನಾಗಿ ಅಭಿವೃದ್ಧಿ ಪಡಿಸುವುದಾಗಿ 2021-22ರ ಆಯವ್ಯಯದಲ್ಲಿ ಮುಖ್ಯಮಂತ್ರಿ ಘೋಷಿಸಿದ್ದರು. ಅದರಂತೆ ಮಂಗ ಳೂರು ತಾಲೂಕಿನ ಪೆರ್ಮುದೆ ಗ್ರಾ.ಪಂ.ನ ಗ್ರಂಥಾಲಯವನ್ನು ಬೀಕನ್‌ ಗ್ರಂಥಾಲಯವನ್ನಾಗಿ ಅಭಿವೃ ದ್ಧಿ ಪಡಿಸಿದ್ದು, ಇದು ಜಿಲ್ಲೆಯ ಪ್ರಥಮ ಬೀಕನ್‌ ಗ್ರಂಥಾಲಯ ಎನಿಸಿದೆ.

Advertisement

ಪೆರ್ಮುದೆ ಗ್ರಾ.ಪಂ. ತನ್ನ ಶೇ. 5ರ ಅಂಗವಿಕಲರ ಕಲ್ಯಾಣ ಅನುದಾನದಿಂದ 54 ಸಾವಿರ ರೂ.ಗಳನ್ನು ಮೂಲಸೌಕರ್ಯಕ್ಕೆ ವಿನಿಯೋಗಿಸಿ ಪುಸ್ತಕಗಳ ರ್ಯಾಕ್‌, ಶ್ರವಣ ಸಾಧನಗಳನ್ನು ಖರೀದಿಸಿದೆ. ಕೆನರಾ ಬ್ಯಾಂಕ್‌ ಪೆರ್ಮುದೆ ಶಾಖೆ 2 ಕಂಪ್ಯೂಟರ್‌, ಟೇಬಲ್‌ಗ‌ಳನ್ನು ನೀಡಿದೆ.

ಆರು ಮಂದಿಗೆ ಆಸನ ವ್ಯವಸ್ಥೆ, ಬ್ರೈಲ್‌ ಲಿಪಿಯ ಪುಸ್ತಕಗಳು ಹಾಗೂ ಸಿಡಿಗಳು ಪ್ರಸ್ತುತ ಲಭ್ಯವಿವೆ. ಸಾಮಾನ್ಯ ವಿಜ್ಞಾನ, ಇತಿಹಾಸ, ಆರೋಗ್ಯ, ಸಂವಿಧಾನ, ಕನ್ನಡ ಸಾಹಿತ್ಯ ಸಮೀಕ್ಷೆ, ಕವನಗಳು, ಕಾದಂಬರಿ, ಮೂಲ ಭೂತ ಹಕ್ಕು/ ಕರ್ತವ್ಯಗಳು, ಜ್ಞಾನಪೀಠ, ನೊಬೆಲ್‌ ಪ್ರಶಸ್ತಿ ಪುರಸ್ಕೃತರ ವ್ಯಕ್ತಿಚಿತ್ರಗಳು, ನೀತಿ ಕಥೆಗಳು, ಅರ್ಥಶಾಸ್ತ್ರ, ಪೌರಾಣಿಕ ಪುಸ್ತಕಗಳು, ಪಂಚತಂತ್ರ ಕಥೆಗಳು, ಕುವೆಂಪು, ಬಸವಣ್ಣ, ಸರ್‌.ಎಂ. ವಿಶ್ವೇಶ್ವರಯ್ಯ ಮೊದಲಾದವರ ಕುರಿತ ಪುಸ್ತಕಗಳು ಇಲ್ಲಿವೆ. ಸಿಡಿ ರೂಪದಲ್ಲಿರುವ ಶ್ರಾವ್ಯ ಪುಸ್ತಕಗಳೂ ಇವೆ. ಜಿಲ್ಲಾ ಕೇಂದ್ರ ಗ್ರಂಥಾಲಯದ ಮುಖ್ಯ ಅಧಿಕಾರಿ ಗ್ರಾಯತ್ರಿ ಅವರ ಮಾರ್ಗದರ್ಶನದಲ್ಲಿ ಗ್ರಾಮೀ ಣಾಭಿವೃದ್ಧಿ ಮತ್ತು ಪಂಚಾಯತ್‌ ರಾಜ್‌ ಇಲಾಖೆ ಗ್ರಂಥಾಲಯವನ್ನು ಸಿದ್ಧಪಡಿಸಿದೆ. ಜನಸಾಮಾನ್ಯರ ಜ್ಞಾನ ದಾಹ ಇಂಗಿಸಲು ಅಲ್ಲಲ್ಲಿ ಗ್ರಂಥಾಲಯಗಳಿವೆ. ಆದರೆ ಅಲ್ಲಿರುವ ಪುಸ್ತಕ, ಪತ್ರಿಕೆಗಳನ್ನು ಓದಲು ಅಸಮರ್ಥರಾಗಿರುವ ಅಂಧರಿಗಾಗಿಯೇ ವಿಶೇಷ ಗ್ರಂಥಾಲಯ ನಮ್ಮ ಪಂಚಾಯತ್‌ನಲ್ಲಿ ಆಗುತ್ತಿರುವುದು ವಿಶೇಷ ಎಂದು ಪೆರ್ಮುದೆ ಗ್ರಾಮ ಪಂಚಾಯತ್‌ನ ಅಧ್ಯಕ್ಷ ಪ್ರಸಾದ್‌ ಎನ್‌. ಅಂಚನ್‌ ತಿಳಿಸಿದ್ದಾರೆ.

ಯಾರಿಗೆ ಪ್ರಯೋಜನ?

ಮಂಗಳೂರು ತಾಲೂಕು ವ್ಯಾಪ್ತಿಯ ಎಲ್ಲ ಪಂಚಾಯತ್‌ಗಳ ಅಂಧ ನಾಗರಿಕರು ಗ್ರಂಥಾಲಯದ ಉಪಯೋಗ ಪಡೆಯಬಹುದು. ಪೆರ್ಮುದೆ ಗ್ರಾ.ಪಂ. ವ್ಯಾಪ್ತಿಯಲ್ಲಿ ಇಬ್ಬರು ಅಂಧರು ಹಾಗೂ ಐವರು ದೃಷ್ಟಿ ದೋಷವುಳ್ಳವರ ಸಹಿತ ಮಂಗಳೂರು ತಾಲೂಕಿನಲ್ಲಿ 203 ಮಂದಿ ಅಂಧರು, 224 ಮಂದಿ ದೃಷ್ಟಿದೋಷ ಉಳ್ಳವರು ಇದ್ದಾರೆ. ಎಲ್ಲ ಅಂಧರಿಗೆ ಬ್ರೈಲ್‌ ಲಿಪಿಯ ತರಬೇತಿ ನೀಡಿದರೆ ಈ ಗ್ರಂಥಾಲಯದಿಂದ ಅವರಿಗೆ ಹೆಚ್ಚು ಪ್ರಯೋಜನವಾಗಬಹುದು.

Advertisement

ಜ್ಞಾನಾರ್ಜನೆಗೆ ವಿಶೇಷ ವ್ಯವಸ್ಥೆ

ಗ್ರಾ.ಪಂ. ಗ್ರಂಥಾಲಯದ ಒಂದು ಕೊಠಡಿಯನ್ನು ಬೀಕನ್‌ ಗ್ರಂಥಾಲಯವನ್ನಾಗಿ ಮಾರ್ಪಡಿಸಲಾಗಿದೆ. 150ಕ್ಕೂ ಹೆಚ್ಚು ಬ್ರೈಲ್ ಲಿಪಿಯ ಗ್ರಂಥಗಳಿವೆ. ಲಿಪಿಯ ಜ್ಞಾನವಿಲ್ಲದವರಿಗಾಗಿ ಸಿಡಿ ರೂಪಕ್ಕೆ ಪರಿವರ್ತಿಸಿರುವ 170ಕ್ಕೂ ಹೆಚ್ಚು ಗ್ರಂಥಗಳಿದ್ದು, ಅವುಗಳನ್ನು ಹೆಡ್‌ಫೋನ್‌ ಧರಿಸಿಕೊಂಡು ಆಲಿಸಬಹುದಾಗಿದೆ. ಈ ಮೂಲಕ ಮಂಗಳೂರು ತಾಲೂಕಿನ ಅಂಧರು ಮತ್ತು ದೃಷ್ಟಿ ದೋಷವುಳ್ಳವರಿಗೂ ಜ್ಞಾನಾರ್ಜನೆಗೆ ವಿಶೇಷ ವ್ಯವಸ್ಥೆ ಕಲ್ಪಿಸಲಾಗಿದೆ. -ಡಾ| ಕುಮಾರ್‌, ದ.ಕ. ಜಿ.ಪಂ. ಸಿಇಒ

Advertisement

Udayavani is now on Telegram. Click here to join our channel and stay updated with the latest news.

Next