Advertisement

ಕಾಡುಕೋಣದಿಂದಾದ ಅವಘಡ: ದೊರೆಯದ ಪರಿಹಾರ

08:45 AM Jul 31, 2017 | Team Udayavani |

ಸುಳ್ಯ: ನಾಲ್ಕು ತಿಂಗಳುಗಳ ಹಿಂದೆ ಬೇಂಗಮಲೆ ಮೀಸಲು ಅರಣ್ಯದ ರಸ್ತೆಯಲ್ಲಿ ಕಾಡುಕೋಣ ಎದುರಾಗಿ ಅಪಘಾತಕ್ಕೀಡಾದ ಬೈಕ್‌ ಸವಾರ ಜಯದೀಪ್‌ ಕೋಮಾವಸ್ಥೆಯಲ್ಲಿದ್ದು, ತುರ್ತು ಚಿಕಿತ್ಸೆಯ ನೆರವು ಬಿಟ್ಟರೆ ಸರಕಾರದಿಂದ ಚಿಕ್ಕಾಸೂ ಇದುವರೆಗೂ ಸಿಕ್ಕಿಲ್ಲ.

Advertisement

ತುರ್ತುಚಿಕಿತ್ಸೆಗೆಂದು ಸಿಗುವ ಮುಖ್ಯ ಮಂತ್ರಿಗಳ ಹರೀಶ್‌ ಸಾಂತ್ವನ ಯೋಜನೆಯಡಿ ದೊರೆತ ಪರಿಹಾರದ ಹೊರತಾಗಿ ಬೇರಾವ  ಸಹಾಯ ಸಿಕ್ಕಿಲ್ಲ. ಮೂರು ತಿಂಗಳುಗಳ ಆಸ್ಪತ್ರೆ ಖರ್ಚು ಸೇರಿ ಈಗಾಗಲೇ 4 ಲಕ್ಷ ರೂ. ಖರ್ಚಾ ಗಿದೆ. ಅವೆಲ್ಲವನ್ನೂ ತಮ್ಮಲ್ಲಿರುವ ಹಣ ವನ್ನೇ ಹೊಂದಿಸಿದ್ದಾರೆ. ಅದರೆ, ಇನಷ್ಟು ಹಣ ಬೇಕಿದ್ದು, ಎಲ್ಲಿಂದ ಪಡೆಯುವುದೆಂಬ ಆತಂಕ ಜಯದೀಪರ ಹೆತ್ತವರಿಗೆ ಎದುರಾಗಿದೆ.

ಆಹಾರ ನೀಡುವ ಡ್ರಿಪ್‌ ಪೈಪ್‌ನ್ನು 15 ದಿನಗಳಿಗೊಮ್ಮೆ ಬದಲಾಯಿಸ ಬೇಕಾದ್ದರಿಂದ ತಾಲೂಕು ಆರೋಗ್ಯ ಕೇಂದ್ರಕ್ಕೆ ಕರೆತರಲೇಬೇಕು. ಇದರೊಂದಿಗೆ ಇತರೆ ಚಿಕಿತ್ಸೆ ಖರ್ಚುಗಳೆಲ್ಲವನ್ನೂ ಲೆಕ್ಕ ಹಾಕಿದರೆ ತಿಂಗಳಿಗೆ ಸಾವಿರಾರು ರೂ. ಅಗತ್ಯವಿದೆ. ಆರ್ಥಿಕವಾಗಿ ಬಹಳಷ್ಟು ಅನುಕೂಲಸ್ಥ ರಲ್ಲದ ಜಯದೀಪರ ಕುಟುಂಬಕ್ಕೆ ಬೇರೆ ದಾರಿ ತೋರುತ್ತಿಲ್ಲ.

ಪರಿಹಾರ ಸಿಗಬೇಕಿತ್ತು
ಜಯದೀಪರಿಗೆ ಅರಣ್ಯ ಇಲಾಖೆ ಯಿಂದ ಪರಿಹಾರ ದೊರೆಯಬೇಕಿತ್ತು. ಪೊಲೀಸರು ಸ್ವೀಕರಿಸಿದ ದೂರಿನಲ್ಲಿ ಕಾಡು ಕೋಣ ಎದು ರಾಗಿ ಅಪಘಾತವಾಗಿದೆ ಎಂದು ಪ್ರತ್ಯಕ್ಷ ದರ್ಶಿಯೋರ್ವರು ದಾಖಲಿಸಿದ್ದಾರೆ. ಕುಟುಂಬ ಸ್ಥರು ಪರಿಹಾರ ಕೋರಿ ವನ್ಯಜೀವಿ ಸಂರಕ್ಷಣೆ ಘಟಕಕ್ಕೆ ಅರ್ಜಿ ಸಲ್ಲಿಸಿದ್ದರು. ಬಳಿಕ ಇದು ಮಂಗಳೂರಿನ ಡಿ.ಎಫ್.ಒ. (ಅರಣ್ಯ ಇಲಾಖೆ)ಗೆ ವರ್ಗಾ ವಣೆಗೊಂಡಿತ್ತು. ಅಲ್ಲಿಂದ ಪುತ್ತೂರು ಅರಣ್ಯ ಇಲಾಖೆ ಕಚೇರಿಗೆ ಅರ್ಜಿ ಕಳುಹಿಸ ಲಾಗಿತ್ತಾದರೂ ತಿಂಗಳ ಕಾಲ ಅಲ್ಲಿನ ಅಧಿಕಾರಿ ಗಮನಿಸಿಯೇ ಇರಲಿಲ್ಲ. ಕೊನೆಗೂ ಅರಣ್ಯ ಇಲಾಖೆ ಸಚಿವರನ್ನು ಖುದ್ದಾಗಿ ಕಂಡು ಮೌಖೀಕ ದೂರು ಸಲ್ಲಿಸಿದ ಬಳಿಕ ಇಲಾಖೆ ಅಧಿಕಾರಿಗಳನ್ನು ತರಾಟೆಗೆ ತೆಗೆದು ಕೊಂಡರು. ಪರಿಣಾಮ ಪುತ್ತೂ ರಿನ ವಲಯ ಅರಣ್ಯಾಧಿಕಾರಿ ಆಗಮಿಸಿ ತನಿಖೆ ಕೈಗೊಂಡರು ಎಂದು ಸಂಬಂಧಿಕರು ತಿಳಿಸಿದ್ದಾರೆ.

ಬಳಿಕ ದಾಖಲೆ ನೀಡುವ ವೇಳೆ ಅಗತ್ಯ ವೈದ್ಯಕೀಯ ಪ್ರಮಾಣ ಪತ್ರಕ್ಕಾಗಿ ಸರಕಾರಿ ವೈದ್ಯರು ಹಿಂದೇಟು ಹಾಕತೊಡಗಿದರು. ಬೈಕ್‌ ಕಾಡುಕೋಣಕ್ಕೆ ಢಿಕ್ಕಿ ಹೊಡೆದಿದ್ದಲ್ಲವೇ ಎಂದು ಪ್ರಮಾಣ ಪತ್ರ ನೀಡುವಾಗ ಸತಾಯಿಸಿದರು. ಕೊನೆಗೂ ದಾಖಲೆಯಲ್ಲಿ ಬಫೆಲೋ ಎಂದಷ್ಟೇ ನಮೂದಿಸಲಾಗಿತ್ತು. ಹಾಗೆಂದರೆ ಕೋಣ ಎಂದಷ್ಟೇ. ಇದರಿಂದ ಪರಿಹಾರ ದೊರೆಯು ವುದಿಲ್ಲ ಎಂದು ಅರಣ್ಯ ಇಲಾಖೆ ಹಿರಿಯ ಅಧಿಕಾರಿಗಳು ದಾಖಲೆಗಳನ್ನು ಸರಿಪಡಿಸುವಂತೆ ಸೂಚಿಸಿದರು. ಬಳಿಕ ಮತ್ತೆ ಜಿಲ್ಲಾಸ್ಪತ್ರೆಗೆ ದಾಖಲಿಸಲಾಯಿತು. ವೈದ್ಯರು ಪರಿಶೀಲಿಸಿ 15 ದಿನಗಳ ಹಿಂದೆ ಸಮರ್ಪಕವಾದ ಪ್ರಮಾಣ ಪತ್ರ ನೀಡಿದ್ದಾರೆ. ಪೊಲೀಸ್‌ ಇಲಾಖೆ, ಹಿರಿಯ ಅರಣ್ಯಾಧಿಕಾರಿಗಳು ಸ್ಪಂದಿಸಿದರು ಎನ್ನುತ್ತಾರೆ ಜಯದೀಪರ ತಾಯಿ.

Advertisement

ಇದಾದ ಬಳಿಕ ಸ್ಥಳೀಯ ಉಪವಲಯ ಅರಣ್ಯಾಧಿಕಾರಿ ಯೋಗೇಶ್‌ ಪೂರಕವಾಗಿ ಸ್ಪಂದಿಸಿ ವರದಿ ಕಳುಹಿಸಿದ್ದಾರೆ. ಈ ಸಂಬಂಧ ಪತ್ರಿಕೆಗೆ ತಿಳಿಸಿರುವ ಅವರು, ಪರಿಹಾರ ಮೊತ್ತ ದೊರೆಯಲಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದ್ದಾರೆ.
ತಲೆಯ ಭಾಗದ ಬೆನ್ನಿಗೆ ತೀವ್ರವಾದ ಗಾಯ ವಾಗಿದ್ದರಿಂದ ಎರಡು ನರಗಳಿಗೆ ಹಾನಿಯಾಗಿದೆ. ಕಾಲಿಗೂ ತೀವ್ರ ಗಾಯವಾಗಿದೆ. ಮೂರು ತಿಂಗಳ ಕಾಲ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಿದ ವೈದ್ಯರು, 22ರ ವಯಸ್ಸಿನವನಾಗಿದ್ದರಿಂದ ಗುಣಮುಖ ನಾಗಬಹುದೆಂದು ಹೇಳಿದ್ದಾರೆ. ಕಾಲಿನ ಗಾಯ ವಾಸಿಯಾಗಿದ್ದು, ಈಗ ಪರವಾಗಿಲ್ಲ. ಆದರೆ ಕೋಮಾ ಸ್ಥಿತಿಯಿಂದ ಇನ್ನೂ ಹೊರ ಬಂದಿಲ್ಲ.  ತಾಯಿ ಹಾಗೂ ಹಿರಿಯ ಸಹೋದರ ವಿಜಿತ್‌ಕುಮಾರ್‌ ಆರೈಕೆ ಮಾಡುತ್ತಿದ್ದಾರೆ. ತಂದೆ ಸ್ಥಳೀಯ ಫ್ಯಾಕ್ಟರಿಯೊಂದರಲ್ಲಿ ಉದ್ಯೋಗಿ. ಕಿರಿಯ ಸಹೋದರ ದುಬಾೖಯಲ್ಲಿ ಉದ್ಯೋಗಿಯಾ ಗಿದ್ದು, 8 ತಿಂಗಳುಗಳ ಹಿಂದೆಯಷ್ಟೇ ತೆರಳಿದ್ದ.

ಘಟನೆ ಏನಾಗಿತ್ತು ?
ಐವರ್ನಾಡು ಕೊಯಿಲ ದೊಡ್ಡಮನೆ ನಿವಾಸಿ ಜಯದೀಪ್‌ ವೃತ್ತಿಯಲ್ಲಿ ಎಲೆಕ್ಟ್ರಿಷನ್‌. ಮಾ.16 ರಂದು ಬೆಳಗ್ಗೆ ಸುಳ್ಯಕ್ಕೆ ಹೊರಟಿದ್ದಾಗ ಬೇಂಗಮಲೆ ಮೀಸಲು ಅರಣ್ಯ ವ್ಯಾಪ್ತಿಯಲ್ಲಿ ಕಾಡುಕೋಣ ಢಿಕ್ಕಿ ಹೊಡೆಯಿತು. ಹಿಂದಿನಿಂದ ಕಾರಿನಲ್ಲಿ ಆಗಮಿಸುತ್ತಿದ್ದ ಚಂದ್ರಶೇಖರ ಭಟ್‌ ಪ್ರತ್ಯಕ್ಷದರ್ಶಿಯಾಗಿದ್ದರು. ಕೂಡಲೇ ಭಟ್‌ ಅವರೇ ಜಯದೀಪ್‌ನನ್ನು ಆಸ್ಪತ್ರೆಗೆ ದಾಖಲಿಸಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next