Advertisement

ಸತ್ಯನಾರಾಯಣರಾವ್‌ ವಿರುದ್ಧ ಎಫ್ಐಆರ್‌ ದಾಖಲು

06:20 AM Mar 04, 2018 | |

ಬೆಂಗಳೂರು: ಕಾರಾಗೃಹ ನಿಯಮ ಉಲ್ಲಂಘಿಸಿ ಪರಪ್ಪನ ಅಗ್ರಹಾರ ಜೈಲಿನಲ್ಲಿ ತಮಿಳುನಾಡಿನ ಎಐಎಡಿಎಂಕೆ ಮಾಜಿ ನಾಯಕಿ ಶಶಿಕಲಾ ನಟರಾಜನ್‌ ಹಾಗೂ ಛಾಪಾ ಕಾಗದ ಹಗರಣದ ರೂವಾರಿ ಕರೀಂ ಲಾಲ್‌ ತೆಲಗಿಗೆ ಐಷಾರಾಮಿ ಜೀವನ ನಡೆಸಲು ಅವಕಾಶ ಕೊಟ್ಟಿದ್ದಾರೆಂಬ ಆರೋಪದ ಮೇಲೆ ನಿವೃತ್ತ ಪೊಲೀಸ್‌ ಮಹಾನಿರ್ದೇಶಕ ಎಚ್‌.ಎನ್‌.ಸತ್ಯನಾರಾಯಣರಾವ್‌ ವಿರುದ್ಧ ಎಸಿಬಿ ಎಫ್ಐಆರ್‌ ದಾಖಲಿಸಿದೆ.

Advertisement

ನಿವೃತ್ತ ಐಎಸ್‌ ಅಧಿಕಾರಿ ವಿನಯಕುಮಾರ್‌ ನೀಡಿದ ವರದಿಯನ್ನು ಸರ್ಕಾರ ಅಂಗೀಕರಿಸಿದ ಬೆನ್ನಲ್ಲೇ ನಿವೃತ್ತ ಹಿರಿಯ ಐಪಿಎಸ್‌ ಅಧಿಕಾರಿ ಸತ್ಯನಾರಾಯಣರಾವ್‌ ವಿರುದ್ಧ ಎಫ್ಐಆರ್‌ ದಾಖಲಾಗಿದ್ದು ತನಿಖೆ ಚುರುಕುಗೊಂಡಿದೆ. ಡಿ.ರೂಪಾ ವಿರುದ್ಧವೂ ಡಿಪಿಎಆರ್‌ ತನಿಖೆ ಸದ್ಯದಲ್ಲೇ ಆರಂಭವಾಗಲಿದೆ ಎಂದು ಹೇಳಲಾಗಿದೆ.

ಬಂದೀಖಾನೆಯ ಅವ್ಯವಹಾರ ಸಂಬಂಧ ಕಳೆದ ವರ್ಷ ಆ. 19ರಂದು ಆಗ ಕಾರಾಗೃಹದ ಡಿಐಜಿಯಾಗಿದ್ದ ಡಿ.ರೂಪಾ ಅಕ್ರಮ ಕುರಿತು ಆಗಿನ ಹಿರಿಯ ಅಧಿಕಾರಿ ಆಗಿದ್ದ ಸತ್ಯನಾರಾಯಣರಾವ್‌ ಮತ್ತು ಇತರೆ ಅಧಿಕಾರಿಗಳ ವಿರುದ್ಧ ಎಸಿಬಿಗೆ ದೂರು ನೀಡಿದ್ದರು.

ಜೈಲಿನಲ್ಲಿನ ಎಲ್ಲ ಅವ್ಯವಹಾರಗಳ ಬಗ್ಗೆ ತನಿಖೆ ನಡೆಸಲು ಸರ್ಕಾರ ನಿವೃತ್ತ ಐಎಎಸ್‌ ಅಧಿಕಾರಿ ವಿನಯ್‌ ಕುಮಾರ್‌ ನೇತೃತ್ವದಲ್ಲಿ ಸಮಿತಿ ರಚಿಸಿದ್ದರಿಂದ ಎಸಿಬಿ ಅಧಿಕಾರಿಗಳು ಎಫ್ಐಆರ್‌ ದಾಖಲಿಸಿರಲಿಲ್ಲ. ವಿನಯ್‌ ಕುಮಾರ್‌ ಅ. 21 ರಂದು ಸರ್ಕಾರಕ್ಕೆ ವರದಿ ಸಲ್ಲಿಸಿದ್ದು, ಅದರಲ್ಲಿನ ಕೆಲ ಶಿಫಾರಸುಗಳನ್ನು ಸರ್ಕಾರ ಅಂಗೀಕರಿಸಿದೆ. ವರದಿಯ ಶಿಫಾರಸಿನಂತೆ ಕಾರಾಗೃಹದ ಭ್ರಷ್ಟಾಚಾರ ಕುರಿತು ಸತ್ಯನಾರಾಯಣರಾವ್‌ ವಿರುದ್ಧ ಎಫ್ಐಆರ್‌ ದಾಖಲಿಸಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಕಾರಾಗೃಹ ಇಲಾಖೆ ಡಿಐಜಿಯಾಗಿದ್ದ ಡಿ. ರೂಪಾ, ಕಳೆದ ವರ್ಷ ಜುಲೈ 12ರಂದು ಪರಪ್ಪನ ಅಗ್ರಹಾರ ಕಾರಾಗೃಹದಲ್ಲಿ ನಡೆಯುತ್ತಿದ್ದ ಹಗರಣಗಳ ಬಗ್ಗೆ ಕಾರಾಗೃಹದ ಅಂದಿನ ಡಿಜಿ ಸತ್ಯನಾರಾಯಣರಾವ್‌ ಅವರಿಗೆ ವರದಿ ಸಲ್ಲಿಸಿದ್ದರು. ಈ ವರದಿಗಳಲ್ಲಿ ಸತ್ಯನಾರಾಯಣರಾವ್‌ ಶಶಿಕಲಾ ನಟರಾಜನ್‌ಗೆ ಐಷಾರಾಮಿ ಸೌಲಭ್ಯ ಒದಗಿಸಲು ಎರಡು ಕೋಟಿ ಲಂಚ ಪಡೆದಿದ್ದಾರೆ ಎಂದು ಗಂಭೀರವಾಗಿ ಆರೋಪಿಸಿದ್ದರು.

Advertisement

ದೂರು ನೀಡಿ ಬಹಳ ತಿಂಗಳು ಆಗಿವೆ. ತಡವಾಗಿಯಾದರೂ ಎಫ್ಐಆರ್‌ ದಾಖಲಿಸಿರುವುದಕ್ಕೆ ಸ್ವಾಗತಿಸುತ್ತೇನೆ. ಪ್ರಕರಣದ ತನಿಖೆಯಲ್ಲಿ ಸತ್ಯಾಂಶ ಬೆಳಕಿಗೆ ಬರಲಿದೆ ಎಂಬ ವಿಶ್ವಾಸವಿದೆ.
– ರೂಪಾ ಐಜಿಪಿ

Advertisement

Udayavani is now on Telegram. Click here to join our channel and stay updated with the latest news.

Next